99 ಅಡಿಗೆ ಕುಸಿದ ಕೆಆರ್‌ಎಸ್‌ ಡ್ಯಾಂ ನೀರು: ಸರ್ಕಾರಕ್ಕೆ ಸೆಡ್ಡು ಹೊಡೆದು ಸುಪ್ರೀಂ ಕೋರ್ಟ್‌ ಮೊರೆ ಹೋದ ರೈತ ಸಂಘ

By Sathish Kumar KHFirst Published Sep 4, 2023, 11:28 AM IST
Highlights

ಕರ್ನಾಟಕದ ಜೀವನಾಡಿ ಆಗಿರುವ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಮಳೆಗಾಲದಲ್ಲಿಯೇ 99 ಅಡಿಗೆ ಕುಸಿತವಾಗಿದೆ. ಈ ಮೂಲಕ ಕೃಷಿಗಿರಲಿ, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಲಿದೆ.

ಬೆಂಗಳೂರು (ಆ.04): ರಾಜ್ಯದಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿದೆ. ಈ ಬಾರಿ ಮುಂಗಾರು ವಿಳಂಬವಾಗಿ ಆರಂಭವಾಗಿದ್ದು ಮಾತ್ರವಲ್ಲದೇ, ಆಗಸ್ಟ್‌ ನಲ್ಲಿ ಸಂಪೂರ್ಣವಾಗಿ ಮಳೆ ಕೈಕೊಟ್ಟಿದೆ. ಆದರೆ, ಈಗ ಕಳೆದೆರಡು ದಿನಗಳಿಂದ ಉತ್ತರ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗುತ್ತಿದ್ದರೂ ದಕ್ಷಿಣ ಒಳನಾಡಿನಲ್ಲಿ ಮಳೆ ಆಗುತ್ತಿಲ್ಲ. ಆದರೆ, ಕನ್ನಡ ನಾಡಿನ ಜೀವನದಿ ಆಗಿರುವ ಕಾವೇರಿ ನದಿಗೆ ನಿರ್ಮಿಸಲಾದ ಕೆಆರ್‌ಎಸ್‌ ಜಲಾಶಯದಲ್ಲಿ ಸೋಮವಾರ ಬೆಳಗ್ಗೆಗೆ ನೀರಿನ ಪ್ರಮಾಣ 99 ಅಡಿಗೆ ಕುಸಿತವಾಗಿದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆಯಿಂದಾಗಿ ನೀರಿಲ್ಲದೆ ಜನರು ಪರದಾಡುವಂತಾಗಿದೆ. ಜಲಾಶಯಗಳಲ್ಲೂ ನೀರಿನ ಮಟ್ಟ ಕಡಿಮೆಯಾಗಿದೆ. ಕೆಆರ್​ಎಸ್ ಜಲಾಶಯ, ಹಾರಂಗಿ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತವಾಗಿದ್ದು, ಜಲಾಶಯಗಳ ನೀರನ್ನು ಅವಲಂಬಿಸಿ ಕೃಷಿ ಕಾರ್ಯ ಮಾಡುವ ರೈತರ ಮೊಗದಲ್ಲಿ ಆತಂಕ ಶುರುವಾಗಿದೆ. ಇನ್ನು ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ಸ್‌ ನೀರನ್ನು ಹರಿಸುತ್ತಿದ್ದು, ಕೆಎಆರ್‌ಎಸ್‌ ಡ್ಯಾಂನಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕುಸಿತ ಆಗಿವ ಭೀತಿ ಎದುರಾಗಿದೆ.

ತಮಿಳುನಾಡಿಗೆ ನೀರು: 100 ಅಡಿಗೆ ಕುಸಿದ ಕೆಆರ್‌ಎಸ್‌ ಸಂಗ್ರಹ, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿ

ಕಾವೇರಿಗಾಗಿ ಕಾನೂನು ಕದ ತಟ್ಟಿದ ರೈತರು! ಕಾವೇರಿ ವಿಚಾರಕ್ಕೆ ಕಾನೂನು ಹೋರಾಟಕ್ಕೆ ರೈತ ಸಂಘ ಮುಂದಾಗಿದೆ. ಸರ್ಕಾರ ಹೊರತು ಪಡಿಸಿ ಪ್ರತ್ಯೇಕವಾಗಿ ಇಂದು ರೈತ ಸಂಘದಿಂದ ಸುಪ್ರೀಂಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಕೆಆರ್‌ಎಸ್‌‌ ಜಲಾಶಯದ ಬಳಿ ಪ್ರತಿಭಟನಾ ನಿರತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ ನೀಡಿದ್ದಾರೆ. ಸರ್ಕಾರ ಹಾಕಿರುವ ಅರ್ಜಿ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಮಾಜಿ ಅಡ್ವಕೇಟ್ ಜನರಲ್ ರವಿಕುಮಾರ್ ವರ್ಮ ಅವರಿಂದ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಇಂದು ಅಥವಾ ನಾಳೆ ಬೆಂಗಳೂರಿನಲ್ಲಿ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಕಾವೇರಿ ಪ್ರಾಧಿಕಾರವೇ ಬಂದು ವಾಸ್ತವ ಸ್ಥಿತಿ ಅರಿಯಲಿ: ಕಾವೇರಿ ನೀರು ಹರಿವಿನ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದರೂ ಅದನ್ನು ಬುಧವಾರ ವಿಚಾರಣೆಗೆ ಬರುವ ಹಾಗೆ ನಾವು ಅರ್ಜಿ ಸಲ್ಲಿಸುತ್ತೇವೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ನಾವು ಉಲ್ಲೇಖ ಮಾಡುತ್ತೇವೆ. ವಾಸ್ತವ ಸ್ಥಿತಿಯನ್ನ ದಾಖಲೆ ಸಮೇತ ಮನವರಿಕೆ ಮಾಡ್ತೇವೆ. ಪ್ರಾಧಿಕಾರ ಸ್ಥಳಕ್ಕೆ ಬಂದು ವಸ್ತುಸ್ಥಿತಿ ತಿಳಿಯಬೇಕು. ಇರುವ ನೀರಿನ ಲೆಕ್ಕಾಚಾರವನ್ನು ಅವರೇ ಹಾಕಬೇಕು. ಮುಂದೆ ಮಳೆ ಬೀಳಲಿಲ್ಲ ಎಂದರೆ 12 ಟಿಎಂಸಿ ಹೇಗೆ ಸಾಲುತ್ತೆ ಎನ್ನೋದು ಅವರೆ ತಿಳಿಯಬೇಕು ಎಂದು ಮಾಹಿತಿ ನೀಡಿದರು.

ಸಕ್ಕರೆನಾಡು ಮಂಡ್ಯಕ್ಕೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ

ಭತ್ತ ನಾಟಿ ಮಾಡಲು ಹೇಳಿದವರು, ನೀರು ಕೊಡುತ್ತಿಲ್ಲ: ಬೆಂಗಳೂರಿಗೆ 30 ಟಿಎಂಸಿ ನೀರು ಬೇಕು. ಈಗಾಗಲೇ ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳಿಗೆ ನೀರು ಕೊಡ್ತಾ ಇದ್ದಾರೆ. ಮುಂದೆ ಕುಡಿಯೋ ನೀರು ಕೋಡೋಕು ಆಗಲ್ಲ. ಐಸಿಸಿ ಸಭೆಯಲ್ಲಿ ಭತತವನ್ನು ನಾಟಿ ಮಾಡಿ ಎಂದು ಹೇಳಿದ್ದರು. ಈಗಾಗಲೇ ಬಹುತೇಕ ರೈತರು ಭತ್ತವನ್ನು ನಾಟಿ ಮಾಡಿದ್ದಾರೆ. ಆದರೆ, ನೀರನ್ನು ಹರಿಸದ ಹಿನ್ನೆಲೆಯಲ್ಲಿ ಬೆಳೆ ಒಣಗುತ್ತಿದೆ. ಇನ್ನು ಹಾನಿಗೊಳಗಾದ ಬೆಳೆಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಪ್ಯಾಕೇಜ್ ಮಾಡಿ, ಎಲ್ಲ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

  • ಕೆಆರ್‌ಎಸ್ ಅಣೆಕಟ್ಟೆಯ ಇಂದಿನ (ಸೆ.04) ನೀರಿನ ಮಟ್ಟ
  • ಗರಿಷ್ಟ ಮಟ್ಟ : 124.80 ಅಡಿಗಳು
  • ಇಂದಿನ ಮಟ್ಟ : 99.32 ಅಡಿಗಳು
  • ಗರಿಷ್ಠ ಸಂಗ್ರಹ : 49.452
  • ಇಂದಿನ ಸಂಗ್ರಹ  : 22.283
  • ಒಳಹರಿವು    : 4199 ಕ್ಯೂಸೆಕ್
  • ಹೊರಹರಿವು : 6214 ಕ್ಯೂಸೆಕ್
click me!