ಟಿಬಿ ಡ್ಯಾಂ ಪ್ರಾಧಿಕಾರದಲ್ಲಿ ಆಂಧ್ರದ್ದೇ ಪ್ರಾಬಲ್ಯ, ಕಾಯಂ ಅಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಧ್ವನಿ ಎತ್ತಲಿ

Published : Aug 19, 2024, 06:29 PM IST
ಟಿಬಿ ಡ್ಯಾಂ ಪ್ರಾಧಿಕಾರದಲ್ಲಿ ಆಂಧ್ರದ್ದೇ  ಪ್ರಾಬಲ್ಯ, ಕಾಯಂ ಅಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಧ್ವನಿ ಎತ್ತಲಿ

ಸಾರಾಂಶ

ತುಂಗಭದ್ರಾ ಮಂಡಳಿಯಲ್ಲಿ ಆಂಧ್ರಪ್ರದೇಶದ ಪ್ರಾಬಲ್ಯವನ್ನು ಕಡಿಮೆ ಮಾಡಲು ಮತ್ತು ಕರ್ನಾಟಕದ ಹಿತಗಳನ್ನು ರಕ್ಷಿಸಲು, ರಾಜ್ಯ ಸರ್ಕಾರವು ತನ್ನ ಮುಖ್ಯ ಎಂಜಿನಿಯರ್ ಅನ್ನು ಮಂಡಳಿಯಲ್ಲಿ ಕಾಯಂ ಅಧಿಕಾರಿಯಾಗಿ ನಿಯೋಜಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. 

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಆ.19): ತುಂಗಭದ್ರಾ ಮಂಡಳಿಯಲ್ಲಿ (ಟಿಬಿ ಬೋರ್ಡ್‌) ಆಂಧ್ರಪ್ರದೇಶ ಹಿತ ಕಾಪಾಡುವ ಕಾರ್ಯ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಯಲ್ಲಿ ಕಾಯಂ ಅಧಿಕಾರಿಯನ್ನಾಗಿ ನಿಯೋಜನೆಗೆ ರಾಜ್ಯ ಸರ್ಕಾರ ಬೋರ್ಡ್‌ ಮೇಲೆ ಒತ್ತಡ ಹೇರಲಿ ಎಂಬ ಕೂಗು ಈಗ ಈ ಭಾಗದ ರೈತರ ವಲಯದಲ್ಲಿ ಎದ್ದಿದೆ.

ಜಲಾಶಯದ ಕ್ರಸ್ಟ್‌ ಗೇಟ್ ನಂ.19ರ ಸರಪಳಿ ತುಂಡಾಗಿ ಗೇಟ್‌ ಕಳಚಿ ಬಿದ್ದ ಬಳಿಕ ಜಲಾಶಯದಿಂದ ನದಿಗೆ 40 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಗೇಟ್‌ನಲ್ಲಿ ತುರ್ತಾಗಿ ಕಾಮಗಾರಿ ನಡೆಸಲು ಜಲಾಶಯದ ನೀಲನಕ್ಷೆ ಕೂಡ ಹೊಸಪೇಟೆಯಲ್ಲಿರುವ ಬೋರ್ಡ್‌ನ ಕಚೇರಿಯಲ್ಲಿ ಇರಲಿಲ್ಲ. ಹೈದರಾಬಾದ್‌ನಲ್ಲಿರುವ ಬೋರ್ಡ್‌ನ ಮುಖ್ಯ ಕಚೇರಿಯಲ್ಲಿದ್ದ ಜಲಾಶಯದ ನೀಲನಕ್ಷೆ ತರಿಸಿಕೊಳ್ಳಲಾಯಿತು. ಜಲಾಶಯದಲ್ಲಿ ತುರ್ತಾಗಿ ಕಾಮಗಾರಿ ನಡೆಸಲು ರಾಜ್ಯ ಸರ್ಕಾರ ಮಂಡಳಿಯಿಂದ ಪರವಾನಗಿ ಕೊಡಿಸಲು ಏದುಸಿರು ಬಿಡುವಂತಾಗಿತ್ತು. ಇದರ ಬದಲಿಗೆ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಯಲ್ಲಿ ಕಾಯಂ ಅಧಿಕಾರಿಯನ್ನಾಗಿ ನಿಯೋಜಿಸಿದರೆ ರಾಜ್ಯ ಸರ್ಕಾರ ಕೂಡ ಬೋರ್ಡ್‌ನಲ್ಲಿ ಹಿಡಿತ ಸಾಧಿಸಲಿದೆ ಎಂಬುದು ಜಲಾಶಯ ನೆಚ್ಚಿರುವ ರೈತರ ವಾದವಾಗಿದೆ.

ಗಮನಿಸಿ, ನಾಳೆಯಿಂದ ನಮ್ಮ ಮೆಟ್ರೋ ಈ ಮಾರ್ಗದಲ್ಲಿ ಸೇವೆ ವ್ಯತ್ಯಯ, ಕೆಲವು ನಿಲ್ದಾಣದಲ್ಲಿ ಸಂಚಾರವೇ ರದ್ದು

ಈಗ ಗೌರವ ಅಧಿಕಾರಿ:
ಬಚಾವತ್‌ ಆಯೋಗದ ಪ್ರಕಾರ ತುಂಗಭದ್ರಾ ಮಂಡಳಿ ರಚನೆಯಾಗಿದೆ. ಈ ಮಂಡಳಿ ಜಲಾಶಯದ ಭದ್ರತೆ ಹಾಗೂ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಮುಖ್ಯ ಎಂಜಿನಿಯರ್‌ ಅರ್ಹತೆ ಹೊಂದಿರುವವರನ್ನು ಮಂಡಳಿ ಅಧ್ಯಕ್ಷರನ್ನಾಗಿ ಹಾಗೂ ಕಾರ್ಯದರ್ಶಿಯನ್ನಾಗಿ ನೇಮಿಸುತ್ತದೆ. ಈ ಮಂಡಳಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ನೀರಾವರಿ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.

ಕರ್ನಾಟಕದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಗೌರವ ಅಧಿಕಾರಿಯಾಗಿರುತ್ತಾರೆ. ಆದರೆ, ಈ ಅಧಿಕಾರಿಯನ್ನು ಕಾಯಂ ಅಧಿಕಾರಿಯನ್ನಾಗಿ ನೇಮಿಸಿದರೆ ಮಂಡಳಿಯಲ್ಲಿ ನಡೆಯುವ ಆಗು-ಹೋಗುಗಳು ರಾಜ್ಯಕ್ಕೆ ಸ್ಪಷ್ಟವಾಗಿ ತಿಳಿಯಲಿದೆ. ಜತೆಗೆ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂಬುದು ಜಲಾಶಯ ನೆಚ್ಚಿರುವ ರೈತರು ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.

ನಂದಿಬೆಟ್ಟ ರೋಪ್ ವೇ ಯೋಜನೆಗೆ 2 ಎಕರೆ ಭೂಮಿ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ

ಅನುದಾನ ನೀಡಿಕೆಯಲ್ಲಿ ರಾಜ್ಯದ ಪಾಲು ಹೆಚ್ಚು: ತುಂಗಭದ್ರಾ ಮಂಡಳಿಗೆ ರಾಜ್ಯ ಸರ್ಕಾರ ನಿರ್ವಹಣೆ ಹಾಗೂ ಭದ್ರತೆಗೆ ಶೇ. 65 ಅನುದಾನ ಒದಗಿಸುತ್ತದೆ. ಆಂಧ್ರಪ್ರದೇಶದ ಪಾಲು ಶೇ. 35ರಷ್ಟಿದೆ. ಹೀಗಿದ್ದರೂ ರಾಜ್ಯದ ಹಿಡಿತ ಮಂಡಳಿಯ ಮೇಲಿಲ್ಲ. ಈ ಮಂಡಳಿಗೆ ಆಂಧ್ರಪ್ರದೇಶ ಅಧೀಕ್ಷಕ ಎಂಜಿನಿಯರ್‌ನ್ನು ನಿಯೋಜನೆ ಮಾಡುತ್ತದೆ. ಈ ಅಧೀಕ್ಷಕ ಎಂಜಿನಿಯರ್‌ ಅವರದ್ದೇ ಮಂಡಳಿಯಲ್ಲಿ ಹೆಚ್ಚಿನ ಕಾರುಬಾರು ನಡೆಯುತ್ತದೆ. ತೆಲಂಗಾಣ ಹಾಗೂ ಕರ್ನಾಟಕದ ಅಧೀಕ್ಷಕ ಎಂಜಿನಿಯರ್‌ಗಳು ನೀರಿನ ಹಂಚಿಕೆ ವಿಷಯದಲ್ಲಿ ಚರ್ಚೆ ನಡೆಸಿದರೂ ಆಂಧ್ರಪ್ರದೇಶದ ಅಧೀಕ್ಷಕ ಎಂಜಿನಿಯರ್‌ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ರಾಜ್ಯದ ರೈತರ ಅಳಲು.

ಸಮನಾಂತರ ಜಲಾಶಯ ನಿರ್ಮಾಣಕ್ಕೂ ತೊಡಕು: ಜಲಾಶಯದಲ್ಲಿ 30 ಟಿಎಂಸಿಯಷ್ಟು ಹೂಳು ತುಂಬಿದೆ. ಕೊಪ್ಪಳದ ಗಂಗಾವತಿ ಬಳಿಯ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ದಶಕಗಳ ಕೂಗಾಗಿದೆ. ಆದರೆ, ತುಂಗಭದ್ರಾ ಮಂಡಳಿಯಲ್ಲಿ ಈ ಕಾರ್ಯಕ್ಕೆ ವೇಗ ದೊರೆಯದ್ದರಿಂದ ಕರ್ನಾಟಕ ಸರ್ಕಾರ ಡಿಪಿಆರ್‌ ತಯಾರಿ ಮಾಡಿಕೊಂಡರೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಒಪ್ಪಿಗೆಗೆ ಕಾಯುವಂತಾಗಿದೆ. ಹಾಗಾಗಿ ಕರ್ನಾಟಕದ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಗೆ ಕಾಯಂ ಅಧಿಕಾರಿಯನ್ನಾಗಿ ನಿಯೋಜಿಸಿದರೆ ಕರ್ನಾಟಕದ ಯೋಜನೆಗಳಿಗೆ ಆಗುತ್ತಿರುವ ಅಡ್ಡಿ ನಿವಾರಣೆ ಆಗಲಿದೆ ಎಂಬುದು ಈ ಭಾಗದ ರೈತರ ಅಭಿಪ್ರಾಯವಾಗಿದೆ.

ಕರ್ನಾಟಕದ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಗೆ ಕಾಯಂ ಅಧಿಕಾರಿಯನ್ನಾಗಿ ನಿಯೋಜನೆ ಮಾಡಿದರೆ, ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ಗಳ ಮರು ನಿರ್ಮಾಣ, ಜಲಾಶಯ ಬಲವರ್ಧನೆಗೊಳಿಸುವ ಕಾರ್ಯಗಳು ಸೇರಿದಂತೆ ಇತರ ಯೋಜನೆಗಳಿಗೆ ಮಂಡಳಿಯಲ್ಲಿ ರಾಜ್ಯದ ಪಾತ್ರ ಮಹತ್ವ ಪಡೆಯಲಿದೆ. ಹಾಗಾಗಿ ಈ ಕಾರ್ಯವನ್ನು ರಾಜ್ಯ ಸರ್ಕಾರ ತುರ್ತಾಗಿ ಮಾಡಲಿ ಎಂಬುದು ಜಲಾಶಯ ನೆಚ್ಚಿರುವ ರೈತರ ಆಗ್ರಹವೂ ಆಗಿದೆ.ತುಂಗಭದ್ರಾ ಮಂಡಳಿಗೆ ರಾಜ್ಯ ಸರ್ಕಾರ ಶೇ. 65ರಷ್ಟು ಅನುದಾನ ನೀಡಿದರೂ ರಾಜ್ಯದ ಅಧಿಕಾರ ಮಂಡಳಿಯ ಮೇಲಿಲ್ಲ. ಆಂಧ್ರಪ್ರದೇಶದ ಹಿಡಿತ ತಪ್ಪಿಸಲು ಕರ್ನಾಟಕದ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಗೆ ಕಾಯಂ ಅಧಿಕಾರಿಯನ್ನಾಗಿ ನಿಯೋಜನೆ ಮಾಡಬೇಕಿದೆ. ಈ ಕಾರ್ಯ ತುರ್ತಾಗಿ ಆಗಬೇಕಿದೆ ಎನ್ನುತ್ತಾರೆ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೇಳಗುರ್ಕಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ