'ನನ್ನ ಬಗ್ಗೆ ಯಾರು ಏನೇ ಹೇಳಲಿ ನಾನು ಇರೋದೇ ಹೀಗೆ..' ಅಸಭ್ಯ ವರ್ತನೆ ಸಮರ್ಥಿಸಿಕೊಂಡ ದರ್ಶನ್!

By Kannadaprabha NewsFirst Published Sep 14, 2024, 6:46 AM IST
Highlights

ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅಸಭ್ಯವಾಗಿ ಬೆರಳು ತೋರಿಸಿ ಉದ್ಧಟತನ ತೋರಿಸಿದ ಪ್ರಕರಣ ತೀವ್ರ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ತನ್ನ ವರ್ತನೆಯನ್ನು ಈತ ಸಮರ್ಥಿಸಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

ಬಳ್ಳಾರಿ (ಸೆ.14): ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅಸಭ್ಯವಾಗಿ ಬೆರಳು ತೋರಿಸಿ ಉದ್ಧಟತನ ತೋರಿಸಿದ ಪ್ರಕರಣ ತೀವ್ರ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ತನ್ನ ವರ್ತನೆಯನ್ನು ಈತ ಸಮರ್ಥಿಸಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

"ನನ್ನ ಬಗ್ಗೆ ಯಾರು ಏನೇ ಹೇಳಲಿ; ನಾನು ಇರುವುದೇ ಹೀಗೆ " ಎಂದು ಜೈಲಿನ ಸಿಬ್ಬಂದಿ ಮುಂದೆ ನಟ ಹೇಳಿಕೊಂಡಿದ್ದಾನೆ. ನಾನು ಏನು ಮಾಡಿದರೂ ತಪ್ಪು ಕಂಡು ಹಿಡಿಯುತ್ತಿದ್ದಾರೆ. ಕುಟುಂಬ ಸದಸ್ಯರು ಬಂದಾಗ ವಿಜಿಟಿಂಗ್ ರೂಂಗೆ ಕಳಿಸಿಕೊಡುವ ಬದಲು, ನಾನಿರುವ ಹೈಸೆಕ್ಯುರಿಟಿ ಸೆಲ್‌ಗೆ ಪತ್ನಿ, ವಕೀಲರನ್ನು ಕಳಿಸಿಕೊಡಿ. ಜೈಲು ಅಧಿಕಾರಿಗಳ ಸಮ್ಮುಖದಲ್ಲಿಯೇ ನನ್ನ ಸೆಲ್‌ನಲ್ಲಿಯೇ ಮಾತನಾಡುತ್ತೇನೆ ಎಂದು ದರ್ಶನ್ ಕೋರಿದ್ದಾರೆ. ಜೈಲಿನ ಹೈಸೆಕ್ಯುರಿಟಿ ಸೆಲ್‌ನಿಂದ ವಿಜಿಟಿಂಗ್ ರೂಂ ಕಡೆ ಗುರುವಾರ ತೆರಳುವ ವೇಳೆ ನಟ ದರ್ಶನ್ ಕೈ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು.

Latest Videos

ಪವಿತ್ರ ಮಾತು ಕೇಳಿ ದರ್ಶನ್‌ ಕೆಟ್ಟ, ಜ್ಯೋತಿಷಿ ಮಾತು ಕೇಳಿ ʼದೋಸೆ ಕಿಂಗ್ʼ ಕೆಟ್ಟ!

ಬೇರೆ ಜೈಲಿಗೆ ಶಿಫ್ಟ್ ಮಾಡಿ:

ಬಳ್ಳಾರಿ ಜೈಲಿನಲ್ಲಿರಲು ಕಷ್ಟವಾಗುತ್ತಿದೆ. ಬೆಂಗಳೂರಿನಿಂದ ಕುಟುಂಬ ಸದಸ್ಯರು ಬಳ್ಳಾರಿಗೆ ಬರುವುದು ತೀವ್ರ ಸಮಸ್ಯೆಯಾಗಿದೆ. ನನ್ನ ಆರೋಗ್ಯವೂ ಹದಗೆಡುತ್ತಿದೆ. ಹೀಗಾಗಿ ನನ್ನನ್ನು ಬೆಂಗಳೂರು ಅಥವಾ ಸುತ್ತಮುತ್ತಲಿನ ಜೈಲಿಗೆ ಶಿಫ್ಟ್ ಮಾಡಿ ಎಂದು ಕೋರಿಕೆ ಇಟ್ಟಿದ್ದಾನೆ. ಜೈಲು ಸ್ಥಳಾಂತರ ಕೋರಿ ನ್ಯಾಯಾಲಯಕ್ಕೆ ನಟ ದರ್ಶನ್ ಮೊರೆ ಹೋಗುವ ಸಾಧ್ಯತೆಯಿದೆ.

ಬಳ್ಳಾರಿ ಜೈಲು ಪಾಲಾದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿರುವ ದರ್ಶನ್ ಗೆ ಜೈಲಿನ ನಿಯಮಗಳು ನುಂಗದ ತುತ್ತಾಗಿ ಪರಿಣಮಿಸಿದೆ. ತನ್ನ ಬಟ್ಟೆಯನ್ನು ತಾನೇ ಶುಭ್ರ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಊಟವನ್ನೇ ಸೇವಿಸುವುದು ಕಷ್ಟವಾಗಿದ್ದರೂ ವಿಧಿಯಿಲ್ಲದೆ ಊಟ, ಉಪಹಾರ ಮಾಡುವಂತಾಗಿದೆ.

ಇನ್ನು ಟಿವಿ ನೀಡದಿರುವುದಕ್ಕೆ ನಟ ದರ್ಶನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಚಾರಣಾಧೀನ ಕೈದಿಗಳಿಗೆ ಟಿವಿ ನೀಡಬೇಕು ಎನ್ನುವ ನಿಯಮವಿದ್ದರೂ ಏಕೆ ನೀಡುತ್ತಿಲ್ಲ. ಅದಕ್ಕೂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕಾ ಎಂದು ಪ್ರಶ್ನಿಸಿದ್ದು, ನಾನು ಜೈಲು ಅಧೀಕ್ಷಕರ ಜೊತೆ ಮಾತನಾಡಬೇಕು. ಅವಕಾಶ ಮಾಡಿಕೊಡಿ ಎಂದು ನಟ ದರ್ಶನ್ ಜೈಲು ಸಿಬ್ಬಂದಿಗೆ ಒತ್ತಾಯಿಸಿದ್ದಾನೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ಪವಿತ್ರಾ ಗೌಡ!

3 ದಿನ ಸಂದರ್ಶಕರಿಗೆ ನಿರ್ಬಂಧ:

ನಟನ ಅಸಭ್ಯ ವರ್ತನೆಯಿಂದ ಜೈಲಿನ ಸೌಕರ್ಯಗಳಿಗೂ ಕತ್ತರಿ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ನಾಳೆಯಿಂದ ಮೂರು ದಿನಗಳ ಕಾಲ ರಜೆಯಿದ್ದು ಸಂದರ್ಶಕರಿಗೆ ನಿರ್ಬಂಧವಿದೆ.

click me!