ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮ: ಮಧ್ಯವಾರ್ಷಿಕ ವರದಿ

By Kannadaprabha NewsFirst Published Dec 27, 2022, 11:30 AM IST
Highlights

ಕೋವಿಡ್‌ ಬಳಿಕ ಜಿಎಸ್‌ಟಿ ಸಂಗ್ರಹ ಶೇ.30ರಷ್ಟು ಹೆಚ್ಚಳ, ಹಣದುಬ್ಬರ ನಿಯಂತ್ರಣದಿಂದ ಆರ್ಥಿಕ ಪ್ರಗತಿ, ಮಧ್ಯವಾರ್ಷಿಕ ಪರಿಶೀಲನಾ ವರದಿಯಲ್ಲಿ ಧನಾತ್ಮಕ ಅಂಶ, ಆದರೆ ರಾಜ್ಯದ ಸಾಲದ ಹೊರೆ 5.18 ಲಕ್ಷ ಕೋಟಿ ರು.ಗೆ ಹೆಚ್ಚಳ.  

ವಿಧಾನಮಂಡಲ(ಡಿ.27): ಕೊರೋನಾ ಅವಧಿ ಬಳಿಕ ರಾಜ್ಯದ ಜಿಎಸ್‌ಟಿ ಸಂಗ್ರಹ ಶೇ.30 ರಷ್ಟು ಹೆಚ್ಚಳವಾಗಿದೆ. ಹಣದುಬ್ಬರ ಕಡಿಮೆಯಾಗಿ ರಾಜ್ಯದ ಒಟ್ಟಾರೆ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ರಾಜ್ಯ ಸರ್ಕಾರದ 2022-23ನೇ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯಲ್ಲಿ ಹೇಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ವಿಧಾನಸಭೆಯಲ್ಲಿ ಸಚಿವ ಮಾಧುಸ್ವಾಮಿ ಹಾಗೂ ಪರಿಷತ್‌ನಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರ ವರದಿ ಮಂಡಿಸಿದರು.

ಕೊರೋನಾ ಅವಧಿಯಲ್ಲೂ (2021-22) ರಾಜ್ಯದ ಜಿಎಸ್‌ಟಿ ಸಂಗ್ರಹ ಶೇ.10 ರಷ್ಟುಹೆಚ್ಚಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022-23ರ ಪ್ರಥಮ ಅರ್ಧ ವಾರ್ಷಿಕದಲ್ಲಿ ಶೇ.30 ರಷ್ಟುಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿದೆ. ಅಲ್ಲದೆ 2022-23ರ ಮೊದಲ ತ್ರೈಮಾಸಿಕದಲ್ಲೇ 21,480 ಕೋಟಿ ರು. ವಿದೇಶಿ ನೇರ ಬಂಡವಾಳ ಹರಿದುಬಂದಿದೆ. 2022ರ ಏಪ್ರಿಲ್‌ನಲ್ಲಿದ್ದ ಶೇ.6.39 ರಷ್ಟಿದ್ದ ಹಣದುಬ್ಬರ 2022ರ ಸೆಪ್ಟೆಂಬರ್‌ ವೇಳೆಗೆ 5.81 ಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ದೇಶದ ಹಣದುಬ್ಬರ 7.4 ರಷ್ಟಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

NEWS HOUR | ಅಧಿವೇಶನದಲ್ಲಿ ಸದ್ದು ಮಾಡಿದ ಮೀಸಲಾತಿ & ಸುರತ್ಕಲ್ ಮರ್ಡರ್!

5.18 ಲಕ್ಷ ಕೋಟಿ ರು. ಸಾಲ:

ಪ್ರಸಕ್ತ ಸಾಲಿನಲ್ಲಿ 2.65 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಿದ್ದು, ಬಜೆಟ್‌ನಲ್ಲಿ ಜಿಎಸ್‌ಡಿಪಿಯನ್ನು ಪ್ರಸಕ್ತ ಬೆಲೆಗಳಲ್ಲಿ 18,85,750 ಕೋಟಿ ರು. ಎಂದು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರ 2022-23ರಲ್ಲಿ ರಾಜ್ಯದ ಜಿಎಸ್‌ಡಿಪಿ 21,81,217 ಕೋಟಿ ರು. ಎಂದು ಹೇಳಿದೆ. ಇದರಂತೆ ಜಿಎಸ್‌ಡಿಪಿ ಪರಿಷ್ಕರಿಸಿದ್ದು, ಜಿಎಸ್‌ಡಿಪಿಯ ಶೇ.2.82 ರಷ್ಟುವಿತ್ತೀಯ ಹಾಗೂ ಶೇ.0.67 ರಷ್ಟುರಾಜಸ್ವ ಕೊರತೆ ಉಂಟಾಗುವುದಾಗಿ ವರದಿಯಲ್ಲಿ ಹೇಳಲಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಒಟ್ಟು ಬಾಕಿ ಇರುವ 4.57 ಲಕ್ಷ ಕೋಟಿ ರು. ಸಾಲಕ್ಕೆ ಪ್ರಸಕ್ತ ಸಾಲಿನ 67,911 ಕೋಟಿ ರು. ಸಾಲ ಸೇರಿ ರಾಜ್ಯದ ಒಟ್ಟು ಸಾಲದ ಹೊರೆ 5,18,366 ಕೋಟಿ ರು.ಗೆ ಹೆಚ್ಚಳವಾಗಿದೆ.

SC ST Reservation: ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಮಸೂದೆ ಪಾಸ್‌

ಉಳಿದಂತೆ 1.31 ಲಕ್ಷ ಕೋಟಿ ರು. ಸ್ವಂತ ತೆರಿಗೆ ಮೂಲಗಳಿಂದ ಆದಾಯ ನಿರೀಕ್ಷಿಸಿದ್ದು, ಈ ಪೈಕಿ ವಾಣಿಜ್ಯ ತೆರಿಗೆ 47,568 ಕೋಟಿ ರು. (ಶೇ.62 ಸಂಗ್ರಹ), ಅಬಕಾರಿ 14,711 ಕೋಟಿ ರು. (ಶೇ.51), ನೋಂದಣಿ ಮತ್ತು ಮುದ್ರಾಂಕ ಶುಲ್ಕ 8,229 (ಶೇ.55), ಮೋಟಾರು ವಾಹನ ತೆರಿಗೆ 8007 ಕೋಟಿ ರು. ಪೈಕಿ ಶೇ.56 ರಷ್ಟುಸಂಗ್ರಹವಾಗಿದೆ.

33,192 ಕೋಟಿ ರು.ಗೆ ಖಾತರಿ:

ಮಾರ್ಚ್‌ 2022ರ ಅಂತ್ಯದ ವೇಳೆಗೆ 33,192 ಕೋಟಿ ರು.ಗೆ ರಾಜ್ಯ ಸರ್ಕಾರ ಖಾತರಿ ನೀಡಿದೆ. ಎಸ್ಕಾಂಗಳ ವಿದ್ಯುತ್‌ ಖರೀದಿ ಶುಲ್ಕ ಬಾಕಿ ಸೆ.30ರ ವೇಳೆಗೆ 17,017 ಕೋಟಿ ರು. ಆಗಿದೆ. ಎಸ್ಕಾಂಗಳು ಕೆಪಿಸಿಎಲ್‌, ಆರ್‌ಪಿಸಿಎಲ್‌, ಕೆಪಿಟಿಸಿಎಲ್‌ಗೆ 13,384 ಕೋಟಿ ರು. ನೀಡಬೇಕು. ಈ ಬಿಕ್ಕಟ್ಟು ಬಗೆಹರಿಸಲು 14 ಸಾವಿರ ಕೋಟಿ ರು. ಖಾತರಿಯನ್ನು ಸರ್ಕಾರ ನೀಡಿದೆ ಎಂದು ವರದಿಯಲ್ಲಿ ತಿಳಿಸಿದೆ.

click me!