ಕನ್ನಡ ಕಲಿಯಲು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿವೆ ಮಕ್ಕಳು!

By Kannadaprabha NewsFirst Published Oct 23, 2023, 6:10 AM IST
Highlights

ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಸಮರ್ಪಕ ಮೂಲ ಸೌಕರ್ಯಗಳು ಇಲ್ಲದ್ದರಿಂದ ಮಹಾರಾಷ್ಟ್ರದಲ್ಲಿನ ಕನ್ನಡಿಗರು ಕರ್ನಾಟಕದ ಗಡಿ ತಾಲೂಕು ಅಥಣಿ, ತಿಕೋಟಾ, ವಿಜಯಪುರಗಳತ್ತ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

ಸಿ.ಎ.ಇಟ್ನಾಳಮಠ

ಅಥಣಿ (ಅ.23) :  ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಸಮರ್ಪಕ ಮೂಲ ಸೌಕರ್ಯಗಳು ಇಲ್ಲದ್ದರಿಂದ ಮಹಾರಾಷ್ಟ್ರದಲ್ಲಿನ ಕನ್ನಡಿಗರು ಕರ್ನಾಟಕದ ಗಡಿ ತಾಲೂಕು ಅಥಣಿ, ತಿಕೋಟಾ, ವಿಜಯಪುರಗಳತ್ತ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

ಗಡಿಭಾಗದ ಜತ್ತ ತಾಲೂಕಿನಲ್ಲಿ ಸುಮಾರು 100ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ. ಈ ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ ಕಲಿಯುವ ಅವಕಾಶ ಇದೆ. ಆದರೆ, ಇಲ್ಲಿ ಶಿಕ್ಷಕರ ಕೊರತೆ ಇದೆ. ಒಂದು ಶಾಲೆಗೆ ಕೇವಲ ಇಬ್ಬರು ಅಥವಾ ಮೂವರು ಶಿಕ್ಷಕರು ಇದ್ದಾರೆ. ಈ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಸರ್ಕಾರ ನೀಡುತಿಲ್ಲ. ಇದರಿಂದ ಕೆಲವರು ತಮ್ಮ ಮಕ್ಕಳನ್ನು ಹತ್ತಿರದ ಕರ್ನಾಟಕದಲ್ಲಿನ ಶಾಲೆಗಳಿಗೆ ಕಳಿಸುತ್ತಿದ್ದಾರೆ.

ನಾಳೆ ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿ; ಅಂಬಾರಿ ಕಣ್ತುಂಬಿಕೊಳ್ಳಲು ಮೈಸೂರಿನತ್ತ ಪ್ರವಾಸಿಗರು

‘ಕನ್ನಡಪ್ರಭ’ ಜೊತೆ ಮಾತನಾಡಿದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ರಮ್ಜಾನ್‌ ಮುಲ್ಲಾ, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಇಲ್ಲಿನ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಇದರ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಕನ್ನಡಿಗರ ಕೂಗನ್ನು ಕೇಳುವವರು ಯಾರೂ ಇಲ್ಲ. ಜತ್ತ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಗ್ರಾಮದ ಅಣ್ಣಪ್ಪ ಚಂದಪ್ಪ ಅಂದಾಣಿ ಎಂಬುವರು ಮಾತನಾಡಿ, ಶ್ರೀಮಂತರು ತಮ್ಮ ಮಕ್ಕಳನ್ನು ಕರ್ನಾಟಕದ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ, ಬಡವರಿಗೆ ಇದು ಸಾಧ್ಯವಿಲ್ಲ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮೆ ಈ ಭಾಗಕ್ಕೆ ಭೇಟಿ ನೀಡಬೇಕು. ಇಲ್ಲಿನ ಕನ್ನಡಿಗರ ಸಮಸ್ಯೆ ಆಲಿಸಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಜೊತೆ ಮಾತನಾಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಗ್ರಾಮದ ರಾಮು ಮುಡ್ಸಿ ಎಂಬುವರು ಮಾತನಾಡಿ, ಭಾಷಾವಾರು ಪ್ರಾಂತ ರಚನೆ ನಂತರ ನಾವು ಕನ್ನಡಿಗರು ಉಸಿರು ಕಟ್ಟಿದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಆದರೂ ಇದುವರಿಗೆ ಕನ್ನಡ ಅಭಿಮಾನ ಬಿಟ್ಟಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಿಗಬೇಕಾದ ಅವಕಾಶಗಳು ಸರ್ಕಾರದಿಂದ ಸಿಗುತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಡಹಬ್ಬ ದಸರಾ: ಸಂಭ್ರಮದ ಆಯುಧಪೂಜೆಗೆ ನಗರ ಸಜ್ಜು!

ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಶಿಕ್ಷಕರ ಕೊರತೆ ಇದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಸರ್ಕಾರ ಶೀಘ್ರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಬಹುದು.

- ಅನ್ಸಾರಿ ಶೇಖ, ಜತ್ತ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ.

click me!