ದೇಶದ ಮೊದಲ ಕೋವಿಡ್‌ ಮರಣಕ್ಕೆ ಇಂದಿಗೆ 2 ವರ್ಷ: ಕೊರೋನಾ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಕಲಬುರಗಿ

Published : Mar 10, 2022, 04:47 AM IST
ದೇಶದ ಮೊದಲ ಕೋವಿಡ್‌ ಮರಣಕ್ಕೆ ಇಂದಿಗೆ 2 ವರ್ಷ: ಕೊರೋನಾ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಕಲಬುರಗಿ

ಸಾರಾಂಶ

*  ಹಜ್‌ನಿಂದ ಮರಳಿದ್ದ ವೃದ್ಧನ ಸಾವಿನಿಂದ ಸೃಷ್ಟಿಯಾಗಿತ್ತು ಆತಂಕ *  ‘10 ಮಾರ್ಚ್ 2020’ *  ಪ್ರಥಮ ಲಾಕ್‌ಡೌನ್‌ ಇಲ್ಲೇ  

ಶೇಷಮೂರ್ತಿ ಅವಧಾನಿ

ಕಲಬುರಗಿ(ಮಾ.10):  ದೇಶದ ಮೊದಲ ಕೋವಿಡ್‌-19 ಸಾವಿಗೆ ಕಲಬುರಗಿ(Kalaburagi) ನಗರ ಸಾಕ್ಷಿಯಾಗಿದ್ದು ಇದೇ ದಿನ. ದೇಶದಲ್ಲಿ(India) ಬಹುದೊಡ್ಡ ಮಟ್ಟದ ಆತಂಕ ಹುಟ್ಟುಹಾಕಿದ್ದ ಈ ಸಾವು ಸಂಭವಿಸಿ ಇಂದಿಗೆ 2 ವರ್ಷ ಪೂರೈಸುತ್ತಿದೆ. ಹಜ್‌ ಯಾತ್ರೆಯಿಂದ ಭಾರತಕ್ಕೆ ಮರಳಿದ್ದ ಖಾಜಿ ಕೆಲಸ ಮಾಡುತ್ತಿದ್ದ ವೃದ್ಧರೊಬ್ಬರು ಕೋವಿಡ್‌ಗೆ(Covid-19) ಮೃತಪಟ್ಟದ್ದು  ಭಾರತ ಮಾತ್ರವಲ್ಲದೆ ದಕ್ಷಿಣ ಏಷಿಯಾ(South Asia) ಭಾಗದಲ್ಲೇ ಆತಂಕದ ಅಲೆಗಳನ್ನೇ ಹುಟ್ಟುಹಾಕಿತ್ತು. ವಿಶ್ವಸಂಸ್ಥೆ ಸಹ ಕಲಬುರಗಿಯತ್ತ ತನ್ನ ಚಿತ್ತ ನೆಡುವಂತೆ ಮಾಡಿತ್ತು.

ಖಾಜಿ ಕೆಲಸ ಮಾಡುತ್ತಿದ್ದ ಕಲಬುರಗಿಯ 76 ವರ್ಷದ ವೃದ್ಧ ಹಜ್‌ ಯಾತ್ರೆಗೆಂದು ಸೌದಿಗೆ ಹೋಗಿದ್ದರು. ಯಾತ್ರೆ ಮುಗಿಸಿ ಕಲಬುರಗಿಗೆ ಮರಳಿದವರು ಕೆಮ್ಮು, ನೆಗಡಿ ಎಂದು ವೈದ್ಯರಿಗೆ ತೋರಿಸಿದ್ದರು. ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆ ಸೇರಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಹೈದ್ರಾಬಾದ್‌ಗೆ(Hyderabad) ತೆರಳಿದವರು ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಗೆ ಮರಳುವ ದಾರಿಯಲ್ಲೇ ಮಾ.10ರ ರಾತ್ರಿ ಮೃತಪಟ್ಟಿದ್ದರು. ಮಾ.12 ರಂದು ಇದು ಕೋವಿಡ್‌ ಸಾವು ಎಂಬುದು ದೃಢಪಟ್ಟಿತ್ತು.

Covid-19 Crisis: ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ..!

ಇದಾದ ಬಳಿಕ ಕೋವಿಡ್‌- 19 ಸೋಂಕಿನಿಂದ ದೇಶಾದ್ಯಂತ ಮಾ.9ರವರೆಗೂ 1,57,966 ಮಂದಿ ಮೃತಪಟ್ಟಿದ್ದರೆ, ಕಲಬುರಗಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣ 330 ಆಗಿದೆ. 1,12,447,89 ಮಂದಿ ದೇಶಾದ್ಯಂತ ಸೋಂಕಿನಿಂದ ಬಳಲಿದರೆ, ಕಲಬುರಗಿಯಲ್ಲಿ ಸೋಂಕಿನಿಂದ ಬಳಲಿದವರು 22, 183 ಮಂದಿ.

ಪ್ರಥಮ ಲಾಕ್‌ಡೌನ್‌ ಇಲ್ಲೇ:

ಕೋವಿಡ್‌ ಸೋಂಕಿನ ಸರಣಿ ತುಂಡರಿಸಲು ಕೈಗೊಳ್ಳಲಾದಂತಹ ಲಾಕ್ಡೌನ್‌(Lockdown) ಕಲಬುರಗಿಯಲ್ಲೇ ಮೊದಲು ಜಾರಿಯಾಗಿತ್ತು. ಪ್ರಧಾನಿ ಮೋದಿ ದೇಶಾದ್ಯಂತ ಮಾ.24ರಿಂದ 21 ದಿನಗಳ ಮೊದಲ ಲಾಕ್ಡೌನ್‌ ಘೋಷಿಸಿದ್ದರೆ, ಇದಕ್ಕೂ ಮೊದಲೇ ಮಾ.12 ರಿಂದಲೇ ಕಲಬುರಗಿಯಲ್ಲಿ ದಿಗ್ಭಂಧನ ವಿಧಿಸಲಾಗಿತ್ತು.

ಫಜೀತಿ ಉಂಟು ಮಾಡಿದ್ದ ಪ್ರಕರಣ:

ಖಾಜಿ ಕೆಲಸ ಮಾಡುತ್ತಿದ್ದ ಕಲಬುರಗಿಯ 76 ವರ್ಷದ ವೃದ್ಧನನ್ನು ಕೋವಿಡ್‌ ಸೋಂಕು ಬಲಿ ಪಡೆದಾಗ ದೇಶದ ಮೊದಲ ಸಾವಾಗಿ ದಾಖಲಾಯ್ತು. ಹಜ್‌ ಯಾತ್ರೆಗೆ ಸೌದಿಗೆ ಹೋಗಿದ್ದ ಈತ ಕಲಬುರಗಿಗೆ ಮರಳಿ ಕೆಮ್ಮು, ನೆಗಡಿ ಎಂದು ವೈದ್ಯರಿಗೆ ತೋರಿಸಿದ್ದರು. ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆ ಸೇರಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಹೈದ್ರಾಬಾದ್‌ಗೆ ತೆರಳಿದವರು, ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಗೆ ಮರಳುವ ದಾರಿಯಲ್ಲೇ ಮಾ.10ರ ರಾತ್ರಿ ಸಾವನ್ನಪ್ಪಿದ್ದರು.
ಈತನ ಸಾವಿಗೆ ಕೋವಿಡ್‌ ಸೋಂಕು ಕಾರಣವೆಂದು ಅದೇ ದಿನ ನಿಖರವಾಗಿ ಗೊತ್ತಾಗದೆ ಹೋದರೂ ಕೋವಿಡ್‌ ಸಾವೆಂದೇ ತಜ್ಞರು ಶಂಕಿಸಿ, ಗಂಟಲು ದ್ರವ ಪರೀಕ್ಷೆಗೂ ರವಾನಿಸಿದ್ದರು. ಸಾವಿಗೆ ಕೊರೋನಾ ಸೋಂಕು ಕಾರಣವೆಂಬ ವರದಿ ಮಾ.12 ರಂದು ಹೊರಬಿದ್ದಾಗ ಕಲಬುರಗಿ ಅಕ್ಷರಶಃ ನಲುಗಿತ್ತು. ಇಡೀ ದೇಶವೇ ಆತಂಕದಲ್ಲಿ ಮುಳುಗಿತ್ತು.

ಇಕ್ಕಟ್ಟಿಗೆ ಸಿಲುಕಿದ ಜಿಲ್ಲಾಡಳಿತ:

ವೃದ್ಧನ ಶವ ಜಿಮ್ಸ್‌ ಶವಾಗಾರದಲ್ಲಿ ಬೇಕಾಬಿಟ್ಟಿಇಡಲಾಗಿತ್ತಲ್ಲದೆ, ಅನೇಕರು ಶವದ ಸಂಪರ್ಕಕ್ಕೂ ಬಂದಾಗಿತ್ತು. ಕೋವಿಡ್‌ ಸಾವೆಂಬುದು ಖಚಿತವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕುವಂತಾಯ್ತು. ಕೋವಿಡ್‌ ಶಂಕೆಯ ಸಾವಾಗಿದ್ದರೂ ಯಾವುದೇ ಮುಂಜಾಗ್ರತೆ ವಹಿಸದೆ ಈ ಪ್ರಕರಣದಲ್ಲಿ ತೋರಲಾಗಿದ್ದ ಅಲಕ್ಷತನ ತೀವ್ರ ಟೀಕಿಗೆ ಗುರಿಯಾಗಿತ್ತು. ರಾಜ್ಯ ಸರ್ಕಾರವೂ ಇಲ್ಲಿನ ಆರೋಗ್ಯ ಇಲಾಖೆ ನಡಾವಳಿಗೆ ಗರಂ ಆಗಿತ್ತು.
ಹಾಗೂ ಜಿಲ್ಲೆಯಾದ್ಯಂತ 3,067ರಷ್ಟುಕಂಟೈನ್ಮೆಂಟ್‌ ಝೋನ್‌ಗಳು ಹುಟ್ಟಿಕೊಂಡಿದ್ದವು.

ಕೋವಿಡ್‌ ಸೋಂಕಿನಿಂದ ದೇಶಾದ್ಯಂತ ಮಾ.9ರವರೆಗೂ 1,57,966 ಮಂದಿ ಸಾವನ್ನಪ್ಪಿದ್ದರೆ, ಕಲಬುರಗಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣ 330 ಆಗಿದೆ. 1,12, 447,89 ಮಂದಿ ದೇಶಾದ್ಯಂತ ಸೋಂಕಿನಿಂದ ಬಳಲಿದರೆ, ಕಲಬುರಗಿಯಲ್ಲಿ ಸೋಂಕಿನಿಂದ ಬಳಲಿದವರು 22,183 ಮಂದಿ. ಕಲಬುರಗಿಯಲ್ಲಿ ಮೊದಲ ಸಾವು ಸಂಭವಿಸಿದಾಗ ಗಂಟಲು ದ್ರವ ಪರೀಕ್ಷಿಸಿ ಕೋವಿಡ್‌ ಸೋಂಕು ಪತ್ತೆ ಹಚ್ಚುವ ಸಾಧನ-ಸಲಕರಣೆಗಳೇ ಇರಲಿಲ್ಲ. ವರ್ಷದಲ್ಲೇ ಕಲಬುರಗಿಯಲ್ಲಿ ಸರ್ಕಾರದ 1 ಲ್ಯಾಬೋರೇಟರಿ ಸೇರಿದಂತೆ ಒಟ್ಟು 4 ಆರ್‌ಟಿಪಿಸಿಆರ್‌(RTPCR) ಪ್ರಯೋಗಾಲಯಗಳು ಬಂದಿವೆ. ಜಿಲ್ಲಾಡಳಿತದಿಂದಲೇ ಇದುವರೆಗೂ 4.58 ಲಕ್ಷ ಮಂದಿಯ ಗಂಟಲು ದ್ರವ ಸಂಗ್ರಹಿಸಿ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 4.34 ಸಾವಿರ ಮಂದಿಯ ಕೋವಿಡ್‌ ಫಲಿತಾಂಶ ನೆಗೆಟಿವ್‌ ಬಂದಿದೆ.

ಇನ್ನೂ ಕಾಡುತ್ತಿದೆ ’ಮಹಾ’ ಆತಂಕ

ಲಾಕ್ಡೌನ್‌ ಇದ್ದಾಗಲೇ ಕಲಬುರಗಿಗೆ ಮಹಾರಾಷ್ಟ್ರದ(Maharashtra) ವಲಸೆ ಕಾರ್ಮಿಕರೇ ಹೆಚ್ಚಿನ ಕಂಟಕವಾಗಿ ಕೋವಿಡ್‌ ಹೆಚ್ಚಾಗುವಂತೆ ಮಾಡಿತ್ತು. ಇಲ್ಲಿಂದ ಕೆಲಸ ಅರಸಿ ವಲಸೆ ಹೋದವರು ಲಾಕ್ಡೌನ್‌ ಅವಧಿಯಲ್ಲಿ ಊರಿಗೆ ಮರಳಿದಾಗ ಹೆಚ್ಚಿನ ಸೋಂಕು ಕಂಡು ಬಂದದ್ದಲ್ಲದೆ, ಹಳ್ಳಿಗಾಡಿಗೂ ಸೋಂಕು ಹರಡುವ ಆತಂಕ ಹೆಚ್ಚಾಗಿತ್ತು. ಈ ಹಂತದಲ್ಲಿ ಜಿಲ್ಲಾಡಳಿತ ಸೋಂಕು ನಿಯಂತ್ರಿಸುವ, ವಲಸೆ ಕಾರ್ಮಿಕರಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸುವ, ಅವರನ್ನೆಲ್ಲ ಕ್ವಾರಂಟೈನ್‌ ಮಾಡುವಂತಾಗಿತ್ತು. ಕೊರೋನಾ ಪರಾಕಾಷ್ಟೆಹಂತದಲ್ಲಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ 40 ಸಾವಿರ ಮಂದಿ ಕ್ವಾರಂಟೈನ್‌ ಆಗಿದ್ದರು.

Covid 19 Crisis: ಕೊರೋನಾ ಸೋಂಕು ತಗ್ಗಿದೆ, ಕೆಲಸ ಆರಂಭಿಸಿ: ಕೇಂದ್ರ

ಈಗಲೂ ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ(Coronavirus) ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಲಿದ್ದು, ಇದು ನೇರವಾಗಿ ಕಲಬುರಗಿಗೂ ಆತಂಕ ಕಾಡುತ್ತಿದೆ. ಜಿಲ್ಲೆಯ ಅಫಜಲ್ಪುರ, ಆಳಂದ ತಾಲೂಕುಗಳು ಮಹಾ ಸೆರಗಿನಲ್ಲೇ ಇವೆ. ಇಲ್ಲಿನ ಸುಪ್ರಸಿದ್ಧ ದೇವಸ್ಥಾನಗಳಿಗೆ ಹರಿದು ಬರುವ ಭಕ್ತರಲ್ಲಿ ಮಹಾರಾಷ್ಟ್ರದವರದ್ದೇ ಸಿಂಹಪಾಲು. ವ್ಯಾಪಾರ-ವಹಿವಾಟಿಗೆ ಪಕ್ಕದ ಸೊಲ್ಲಾಪುರ, ಲಾತೂರ್‌, ಅಕ್ಕಲಕೋಟೆಯಂತಹ ಮಹಾ ನಗರಗಳದ್ದೇ ನಂಟು. ಹೀಗಾಗಿ ಸೋಂಕು ಮತ್ತೆಲ್ಲಿ ಕಲಬುರಗಿ ಮಂದಿಗೆ ಗಂಟು ಬೀಳುವುದೋ ಎಂಬ ಆತಂಕ ಮತ್ತೆ ಕಾಡಲಾರಂಭಿಸಿದೆ.

ಕೊರೋನಾ ಸೋಂಕಿನಿಂದ ದೇಶದಲ್ಲೇ ಮೊದಲ ಸಾವು ಕಂಡ ಕಲಬುರಗಿಯಲ್ಲಿ ಈಗಿನ ಪರಿಸ್ಥಿತಿ ಹೀಗಿದೆ. ಕೊರೋನಾ ಸುರಕ್ಷತೆಯ ಸಾಮಾಜಿಕ ಅಂತರ, ಮಾಸ್ಕ್‌(Mask) ಬಳಕೆ ಮರೆತಿರುವ ಜನ ಹೇಗೆ ಬೇಕೋ ಹಾಗೆ ನುಗ್ಗಿಕೊಂಡು ಬಸ್‌ ಹತ್ತುತ್ತಿದ್ದಾರೆ, ಸೂಪರ್‌ ಮಾರ್ಕೆಟ್‌, ತರಕಾರಿ ಮಾರುಕಟ್ಟೆ, ಬಸ್‌- ರೈಲು ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲೆಲ್ಲಾ ಕೊರೋನಾ ಸುರಕ್ಷತೆಗೆ ವರ್ಷ ತುಂಬುವುದರೊಳಗೇ ಜನ ಎಳ್ಳು- ನೀರು ಬಿಟ್ಟಿದ್ದಾರೆ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!