ಆಸ್ಟ್ರೇಲಿಯನ್ ಓಪನ್: ಮುಖ್ಯ ಸುತ್ತಿಗೆ ಸುಮಿತ್ ನಗಾಲ್

By Kannadaprabha NewsFirst Published Jan 13, 2024, 11:47 AM IST
Highlights

ವಿಶ್ವ ಶ್ರೇಯಾಂಕದಲ್ಲಿ 139ನೇ ಸ್ಥಾನದಲ್ಲಿರುವ ನಗಾಲ್, ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ವಿಶ್ವ ನಂ.31, ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್‌ರನ್ನು ಎದುರಿಸಲಿದ್ದಾರೆ. 2021ರಲ್ಲೂ ಆಸ್ಟ್ರೇಲಿಯನ್ ಓಪನ್‌ನ ಪ್ರಧಾನ ಸುತ್ತಿನಲ್ಲಿ ಆಡಿದ್ದ ಸುಮಿತ್, ಮೊದಲ ಸುತ್ತಿನಲ್ಲೇ ಸೋತಿದ್ದರು.

ಮೆಲ್ಬೊರ್ನ್‌(ಜ.13): ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಸುತ್ತಿಗೇರಿದ್ದಾರೆ. ಶುಕ್ರವಾರ ನಡೆದ ಅರ್ಹತಾ ಸುತ್ತಿನ ಅಂತಿಮ ಹಣಾಹಣಿಯಲ್ಲಿ ಸ್ಲೋವೇಕಿಯಾದ ಅಲೆಕ್ಸ್‌  ಮಾಲ್ಕನ್ ವಿರುದ್ದ 6-4, 6-4 ನೇರ ಸೆಟ್‌ಗಳಿಂದ ಗೆದ್ದು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟರು.

ವಿಶ್ವ ಶ್ರೇಯಾಂಕದಲ್ಲಿ 139ನೇ ಸ್ಥಾನದಲ್ಲಿರುವ ನಗಾಲ್, ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ವಿಶ್ವ ನಂ.31, ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್‌ರನ್ನು ಎದುರಿಸಲಿದ್ದಾರೆ. 2021ರಲ್ಲೂ ಆಸ್ಟ್ರೇಲಿಯನ್ ಓಪನ್‌ನ ಪ್ರಧಾನ ಸುತ್ತಿನಲ್ಲಿ ಆಡಿದ್ದ ಸುಮಿತ್, ಮೊದಲ ಸುತ್ತಿನಲ್ಲೇ ಸೋತಿದ್ದರು.

ಬೀಚ್‌ ಗೇಮ್ಸ್‌: ರಾಜ್ಯದ ಕಿಶನ್‌ಗೆ ಬಾಕ್ಸಿಂಗ್‌ ಚಿನ್ನ

ಡಿಯು ದಾಮನ್‌: ಇಲ್ಲಿ ನಡೆದ ಚೊಚ್ಚಲ ಆವೃತ್ತಿಯ ರಾಷ್ಟ್ರೀಯ ಬೀಚ್‌ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕಿಶನ್‌ ರಾಜ್‌ ಬಾಕ್ಸಿಂಗ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಯಲಹಂಕದ ರೆವಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಕಿಶಾನ್‌, ಗುರುವಾರ ನಡೆದ ಅಂಡರ್‌-21 ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದರು.

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸೆಮಿಗೆ ಸಾತ್ವಿಕ್‌-ಚಿರಾಗ್‌ ಲಗ್ಗೆ

ಕ್ರೀಡಾಕೂಟದಲ್ಲಿ ಕರ್ನಾಟಕದ 10 ಮಂದಿ ಕ್ರೀಡಾಪಟುಗಳು ಭಾಗಿಯಾಗಿದ್ದರು. ಈ ಪೈಕಿ ಕಿಶನ್‌ ಪದಕಕ್ಕೆ ಕೊರಳೊಡ್ಡಿದ್ದಾರೆ. ಅವರು ಇತ್ತೀಚೆಗಷ್ಟೇ ಚಂಡೀಗಢದಲ್ಲಿ ನಡೆದ ನೈಋುತ್ಯ ವಲಯ ಅಂತರ್‌ ವಿವಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು.

ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ರಾಜ್ಯಕ್ಕೆ ಐದು ಪದಕ

ಪಣಜಿ: ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 22ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಗುರುವಾರ ರಾಜ್ಯದ ಅಥ್ಲೀಟ್‌ಗಳು 6 ಪದಕಗಳನ್ನು ಗೆದ್ದಿದ್ದಾರೆ. ರಾಜ್ಯಕ್ಕೆ 2 ಚಿನ್ನ, 3 ಬೆಳ್ಳಿ, 1 ಕಂಚು ಲಭಿಸಿತು. ಮಹಿಳೆಯರ 1500 ಓಟದಲ್ಲಿ ರಾಧಾ ವೆಂಕಟೇಶ್‌ 5 ನಿಮಿಷ 27.19 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ರಕ್ಷಿತಾ ರಾಜು 5 ನಿಮಿಷ 37.45 ಸೆಕೆಂಡ್‌ನಲ್ಲಿ ತಲುಪಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ವಮಿಕಾಗೆ ಅಂಥದ್ದೇನಾಗಿದೆ..? ಮಗಳ ಮುಖ ತೋರಿಸಲು ವಿರಾಟ್ ಕೊಹ್ಲಿಗೆ ಅಂಜಿಕೆಯೇಕೆ..? ಇಲ್ಲಿದೆ ಕಾರಣ!

ಶಾಟ್‌ಪುಟ್‌ನಲ್ಲಿ ವಿಶಾಲ್‌ 10.17 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರು. ಪುರುಷರ 1500 ಓಟದ ಟಿ11 ವಿಭಾಗದಲ್ಲಿ ಕೇಶವಮೂರ್ತಿ 4 ನಿಮಿಷ 55.45 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರೆ, ಭೀಮಪ್ಪ ಪೂಜಾರಿ 5 ನಿಮಿಷ 17.70 ಸೆಕೆಂಡ್‌ನಲ್ಲಿ ತಲುಪಿ ಕಂಚು ಗೆದ್ದರು. ಜಾವೆಲಿನ್‌ ಥ್ರೋನಲ್ಲಿ ಲೋಹಿತ್‌ ಗೌಡ 17.20 ಮೀ ದೂರ ಎಸೆದು ಬೆಳ್ಳಿ ಜಯಿಸಿದರು.

ದಕ್ಷಿಣ ಭಾರತ ಕುಸ್ತಿ: ಕರ್ನಾಟಕಕ್ಕೆ ಪ್ರಶಸ್ತಿ

ಈರೋಡ್‌(ತಮಿಳುನಾಡು): ಇಲ್ಲಿ ನಡೆದ ದಕ್ಷಿಣ ಭಾರತ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಫ್ರೀಸ್ಟೈಲ್ ಪುರುಷರ ವಿಭಾಗದಲ್ಲಿ ರಾಜ್ಯಕ್ಕೆ 8 ಚಿನ್ನ ಹಾಗೂ 2 ಬೆಳ್ಳಿ ಪದಕ ಲಭಿಸಿತು.

ಪದಕ ವಿಜೇತ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಬಿ.ಗಣರಂಜನ್ ಶೆಟ್ಟಿ ಅವರು ಪದಕ ತೊಡಿಸಿ, ಸಮಗ್ರ ಚಾಂಪಿಯನ್‌ ಪ್ರಶಸ್ತಿಯನ್ನು ನೀಡುವ ಮೂಲಕ ಅಭಿನಂದಿಸಿದರು. ಈ ವೇಳೆ ಕರ್ನಾಟಕ ಕುಸ್ತಿ ಸಂಘದ ಕಾರ್ಯದರ್ಶಿ ಜೆ.ಶ್ರೀನಿವಾಸ್‌, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಜಂಟಿ ಕಾರ್ಯಧರ್ಶಿ ಕೆ.ಕುಮಾರ್, ತಾಂತ್ರಿಕ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಉಪಸ್ಥಿತರಿದ್ದರು.
 

click me!