ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟ! ಯಪಿಯಲ್ಲಿ ಅಮಾನವೀಯ ಘಟನೆ..! ವಿಡಿಯೋ ವೈರಲ್

By Kannadaprabha NewsFirst Published Sep 21, 2022, 10:20 AM IST
Highlights

ಉತ್ತರ ಪ್ರದೇಶದಲ್ಲಿ ಕಬಡ್ಡಿ ಆಟಗಾರರಿಗೆ ಅಮಾನವೀಯ ಘಟನೆ
ರಾಜ್ಯಮಟ್ಟದ ಅಂಡರ್‌-16 ಕಬಡ್ಡಿ ವೇಳೆ ಆಟಗಾರರಿಗೆ ಶೌಚಾಲಯದಲ್ಲಿ ಊಟ
ಸೆಪ್ಟೆಂಬರ್ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ

ನವದೆಹಲಿ(ಸೆ.21): ರಾಜ್ಯಮಟ್ಟದ ಅಂಡರ್‌-16 ಕಬಡ್ಡಿ ಪಂದ್ಯಾವಳಿ ವೇಳೆ ಆಟಗಾರರಿಗೆ ಶೌಚಾಲಯದಲ್ಲಿ ಊಟ ಬಡಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸೆಪ್ಟೆಂಬರ್ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಅದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಸಹರನ್ಪುರದಲ್ಲಿ ನಡೆದ ಸಬ್‌-ಜೂನಿಯರ್‌ ಟೂರ್ನಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡಿದ್ದರು. ಈ ವೇಳೆ ಅನ್ನ ಹಾಗೂ ಇತರ ಪದಾರ್ಥಗಳಿದ್ದ ಪಾತ್ರೆಗಳನ್ನು ಪುರುಷರ ಶೌಚಾಲಯದ ನೆಲದ ಮೇಲೆ ಇಟ್ಟಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಶೌಚಾಲಯದಲ್ಲೇ ಪೂರಿ ಹಿಟ್ಟು ಕಲಸಿ ಎಣ್ಣೆಯಲ್ಲಿ ಕರೆಯಲಾಯಿತು ಎನ್ನಲಾಗಿದೆ. 

Food served to kabaddi players in kept in toilet. Is this how respects the players? Shameful! pic.twitter.com/SkxZjyQYza

— YSR (@ysathishreddy)

ಈ ಸಂಬಂಧ ಕ್ರೀಡಾ ಅಧಿಕಾರಿ ಅನಿಮೇಶ್‌ ಸಕ್ಸೇನಾ ಅವರನ್ನು ಅಮಾನತುಗೊಳಿಸಲಾಗಿದೆ. ಮಳೆ ಕಾರಣದಿಂದಾಗಿ ಶೌಚಾಲಯದಲ್ಲಿ ಊಟ ಬಡಿಸುವ ವ್ಯವಸ್ಥೆ ಮಾಡಲಾಯಿತು ಎಂದು ಅವರು ನೆಪ ಹೇಳಿದ್ದಾರೆ. ಜಿಲ್ಲಾಧಿಕಾರಿಯು ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, 3 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.

30ರಂದು ಕಬಡ್ಡಿ ಪಂದ್ಯಾವಳಿ

ಗದಗ: ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಗದಗ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೆ. 30ರಂದು ಗದಗ ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಮುನ್ಸಿಪಲ್‌ ಕಾಲೇಜ್‌ ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಬಿಜೆಪಿ ಗದಗ ರೈತ ಮೋರ್ಚಾ ಉಸ್ತುವಾರಿ ಕಾಂತಿಲಾಲ ಬನ್ಸಾಲಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಆರ್‌.ಜಿ. ಪಾಟೀಲ, ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಜಣ್ಣ ಕುಲಕರ್ಣಿ, ಕಾರ್ಯದರ್ಶಿ ರಮೇಶ ಬಳ್ಳಾರಿ, ಕೋಶಾಧ್ಯಕ್ಷ ಶಿವಪ್ಪ ನಾಗರಾಳ, ಗದಗ ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಶಂಕರ ಕರಿಬಿಷ್ಠಿ ಉಪಸ್ಥಿತರಿದ್ದರು.

ಪ್ಯಾರಾ ಬ್ಯಾಡ್ಮಿಂಟನ್‌: ರಾಜ್ಯಕ್ಕೆ 8 ಪದಕ

ಬೆಂಗಳೂರು: ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕರ್ನಾಟಕದ ಪ್ಯಾರಾ ಶಟ್ಲರ್‌ಗಳು 3 ಚಿನ್ನ, 5 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಸೆ.13ರಿಂದ 18ರ ವರೆಗೂ ಉಗಾಂಡದ ಕಂಪಾಲಾದಲ್ಲಿ ಪಂದ್ಯಾವಳಿ ನಡೆಯಿತು. 

ಉದ್ದೀಪನ ಮದ್ದು ಸೇವನೆ ಪ್ರಕರಣ, ಎಂಆರ್‌ ಪೂವಮ್ಮಗೆ ಎರಡು ವರ್ಷ ನಿಷೇಧ ವಿಧಿಸಿದ ನಾಡಾ!

ಕರ್ನಾಟಕದ ಅಮ್ಮು ಮೋಹನ್‌, ಮಂಜುನಾಥ್‌ ಚಿಕ್ಕಯ್ಯ, ಗೌತಮ್‌, ಶರಣಪ್ಪ ಮತ್ತು ಜಮ್ಶಡ್‌ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. 10ಕ್ಕೂ ಹೆಚ್ಚು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 10ಕ್ಕೂ ಅಧಿಕ ರಾಷ್ಟ್ರಗಳ ಸ್ಪರ್ಧಿಗಳಿದ್ದರು. ಭಾರತದ 15ಕ್ಕೂ ಹೆಚ್ಚು ಪ್ಯಾರಾ ಶಟ್ಲರ್‌ಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

click me!