ಮಲೇಷ್ಯಾ ಓಪನ್‌: ಸೆಮೀಸ್‌ಗೆ ಲಗ್ಗೆಯಿಟ್ಟ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿ

By Naveen KodaseFirst Published Jan 14, 2023, 1:06 PM IST
Highlights

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್‌ಸಾಯಿರಾಜ್ ಜೋಡಿ ಸೆಮೀಸ್ ಪ್ರವೇಶ
ಚೀನಾದ ಜೋಡಿ ಎದುರು ಪ್ರಾಬಲ್ಯ ಮೆರೆದ ಭಾರತದ ನಂ.1 ಡಬಲ್ಸ್ ಜೋಡಿ
ಸೆಮೀಸ್‌ನಲ್ಲಿ ಚೀನಾದ ವಾಂಗ್‌ ಚಂಗ್‌-ವೇ ಕೆಂಗ್‌ ವಿರುದ್ಧ ಕಾದಾಟ

ಕೌಲಾಲಂಪುರ(ನ.14): ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ ಫೈನಲ್‌ನಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ.

ಪುರುಷರ ಡಬಲ್ಸ್‌ನ ಅಂತಿಮ 8ರ ಸುತ್ತಿನಲ್ಲಿ ಶುಕ್ರವಾರ ವಿಶ್ವ ನಂ.5 ಭಾರತದ ಜೋಡಿ ಚೀನಾದ ಯು ಚೆನ್‌-ಕ್ಷಾನ್‌ ಯಿ ವಿರುದ್ಧ 17-21, 22-20, 21-9 ಗೇಮ್‌ಗಳಿಂದ ಗೆಲುವು ಸಾಧಿಸಿತು. ಮೊದಲ ಗೇಮ್‌ ಸೋತು, 2ನೇ ಗೇಮ್‌ನ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಪಂದ್ಯ ತನ್ನದಾಗಿಸಿಕೊಳ್ಳಲು ಸಾತ್ವಿಕ್‌-ಚಿರಾಗ್‌ ಯಶಸ್ವಿಯಾದರು. ಸೆಮೀಸ್‌ನಲ್ಲಿ ಚೀನಾದ ವಾಂಗ್‌ ಚಂಗ್‌-ವೇ ಕೆಂಗ್‌ ವಿರುದ್ಧ ಸೆಣಸಲಿದ್ದಾರೆ. 

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.8 ಪ್ರಣಯ್‌ ಜಪಾನ್‌ನ ಕೊಡಾಯಿ ನರೋಕಾ ವಿರುದ್ಧ 16​-21, 21-​19, 10-​21 ಗೇಮ್‌ಗಳಿಂದ ಪರಾಭವಗೊಂಡರು. ನರೋಕಾ ವಿರುದ್ಧದ 3ನೇ ಮುಖಾಮುಖಿಯಲ್ಲೂ ಪ್ರಣಯ್‌ ಗೆಲ್ಲಲು ವಿಫಲರಾದರು.

ಐಎನ್‌ಬಿಎಲ್‌: ಫೈನಲ್‌ಗೆ ಬೆಂಗಳೂರು ಕಿಂಗ್‌್ಸ ಪ್ರವೇಶ

ಬೆಂಗಳೂರು: ಚೊಚ್ಚಲ ಆವೃತ್ತಿಯ ಇಂಡಿಯನ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಲೀಗ್‌(ಐಎನ್‌ಬಿಎಲ್‌) ಫೈನಲ್ಸ್‌ ಟೂರ್ನಿಯಲ್ಲಿ ಬೆಂಗಳೂರು ಕಿಂಗ್‌್ಸ ಫೈನಲ್‌ ಪ್ರವೇಶಿಸಿದೆ. ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಟೈಟಾನ್ಸ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಬೆಂಗಳೂರು 93-72 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪ್ರತ್ಯಾನ್ಶು(30), ಅನಿಲ್‌ ಕುಮಾರ್‌(27) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 

ಹಿಮಾಚಲ ಪ್ರದೇಶ ಯುವ ವೇಗಿ ಸಿದ್ಧಾರ್ಥ್‌ ಶರ್ಮಾ ನಿಧನ..! ಆಘಾತ ವ್ಯಕ್ತಪಡಿಸಿದ ರವಿಚಂದ್ರನ್ ಅಶ್ವಿನ್

ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಡ್ರಿಬ್ಲ​ರ್‍ಸ್ ತಂಡವನ್ನು 72-67 ಅಂಕಗಳಿಂದ ಮಣಿಸಿದ ಚೆನ್ನೈ ಹೀಟ್ಸ್‌ ಕೂಡಾ ಫೈನಲ್‌ಗೆ ಲಗ್ಗೆ ಇಟ್ಟಿತು. ಶನಿವಾರ ಬೆಂಗಳೂರು-ಚೆನ್ನೈ ನಡುವೆ ಮೊದಲ ಫೈನಲ್‌ ಪಂದ್ಯ ನಡೆಯಲಿದ್ದು, ಭಾನುವಾರ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. 2 ಪಂದ್ಯಗಳ ಅಂಕಗಳ ಆಧಾರದ ಮೇಲೆ ವಿಜೇತರನ್ನು ಘೋಷಿಸಲಾಗುತ್ತದೆ.

ಜಾವೆಲಿನ್‌ ಪಟು ಶಿವಪಾಲ್‌ ಸಿಂಗ್‌ ನಿಷೇಧ ಅವಧಿ ಕಡಿತ

ನವದೆಹಲಿ: ಭಾರತದ ತಾರಾ ಜಾವೆಲಿನ್‌ ಎಸೆತಗಾರ ಶಿವ್‌ಪಾಲ್‌ ಸಿಂಗ್‌ರ ಡೋಪಿಂಗ್‌ ಪ್ರಕರಣದ ನಿಷೇಧ ಅವಧಿಯನ್ನು ರಾಷ್ಟ್ರೀಯ ಡೋಪಿಂಗ್‌ ನಿಗ್ರಹ ಘಟಕ(ನಾಡಾ) ಕಡಿತಗೊಳಿಸಿದ್ದು, ಯಾವುದೇ ಕೂಟಗಳಲ್ಲಿ ಆಡಲು ಮುಕ್ತವಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶಿವ್‌ಪಾಲ್‌ 2021ರಲ್ಲಿ ಡೋಪಿಂಗ್‌ ನಿಯಮ ಉಲ್ಲಂಘಿಸಿ ಸಿಕ್ಕಿ ಬಿದ್ದಿದ್ದರು. ಹೀಗಾಗಿ ಅವರಿಗೆ 4 ವರ್ಷ ನಿಷೇಧ ಹೇರಲಾಗಿತ್ತು. ಆದರೆ ನಿಷೇಧ ಅವಧಿಯನ್ನು 1 ವರ್ಷಕ್ಕೆ ಇಳಿಸಿದ್ದರಿಂದ ಅವರು ಸದ್ಯ ಆಡಲು ಮುಕ್ತವಾಗಿದ್ದಾರೆ.

ಅನಾರೋಗ್ಯ: ಬೆಂಗಳೂರಿಗೆ ಮರಳಿದ ಕೋಚ್‌ ದ್ರಾವಿಡ್‌

ಕೋಲ್ಕತಾ: ಭಾರತ ತಂಡದ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕೋಲ್ಕತಾದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ 50 ವರ್ಷದ ದ್ರಾವಿಡ್‌ಗೆ ರಕ್ತದೊತ್ತಡ ಸಮಸ್ಯೆ ಕಂಡುಬಂದಿದೆ. ಕೂಡಲೇ ಬೆಂಗಾಲ್‌ ಕ್ರಿಕೆಟ್‌ ಸಂಸ್ಥೆಯ ವೈದ್ಯರು ತಪಾಸಣೆ ನಡೆಸಿದ್ದಾರೆ. ಬಳಿಕ ಹೆಚ್ಚಿನ ಪರಿಶೀಲನೆಗಾಗಿ ಶುಕ್ರವಾರ ಮುಂಜಾನೆ ಬೆಂಗಳೂರಿಗೆ ಬಂದಿಳಿದಿದ್ದು, ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಭಾನುವಾರದ ತಿರುವನಂತಪುರಂನಲ್ಲಿ ನಡೆಯಲಿರುವ 3ನೇ ಪಂದ್ಯಕ್ಕೂ ಮುನ್ನ ತಂಡ ಕೂಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

click me!