Latest Videos

ರಾಷ್ಟ್ರೀಯ ಅಂತರ್‌-ರಾಜ್ಯ ಅಥ್ಲೆಟಿಕ್ಸ್‌: ಡೋಪ್ ಟೆಸ್ಟ್‌ಗೆ 30 ನಾಡಾ ಆಧಿಕಾರಿಗಳು

By Kannadaprabha NewsFirst Published Jun 28, 2024, 11:42 AM IST
Highlights

ಇದು ಒಲಿಂಪಿಕ್ಸ್‌ ಅರ್ಹತೆಗೆ ಕೊನೆಯ ಕೂಟವಾಗಿರುವುದರಿಂದ ಡೋಪಿಂಗ್ ವಿಚಾರದಲ್ಲಿ ನಾಡಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳಿಗೆ ಡೋಪ್ ಪರೀಕ್ಷೆಗೆ ಗುರಿ ನಿಗದಿಪಡಿಸಲಾಗಿದ್ದು, ಅಥ್ಲೀಟ್‌ಗಳ ಮೇಲೆ ನಿಗಾ ಇಟ್ಟಿದೆ.

ಪಂಚಕುಲಾ(ಹರ್ಯಾಣ): ಇಲ್ಲಿ ಗುರುವಾರ ಆರಂಭಗೊಂಡಿರುವ ರಾಷ್ಟ್ರೀಯ ಅಂತರ್‌-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ 30 ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಇದು ಒಲಿಂಪಿಕ್ಸ್‌ ಅರ್ಹತೆಗೆ ಕೊನೆಯ ಕೂಟವಾಗಿರುವುದರಿಂದ ಡೋಪಿಂಗ್ ವಿಚಾರದಲ್ಲಿ ನಾಡಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳಿಗೆ ಡೋಪ್ ಪರೀಕ್ಷೆಗೆ ಗುರಿ ನಿಗದಿಪಡಿಸಲಾಗಿದ್ದು, ಅಥ್ಲೀಟ್‌ಗಳ ಮೇಲೆ ನಿಗಾ ಇಟ್ಟಿದೆ.

ಭಾರತೀಯ ಅಥ್ಲೀಟ್ಸ್‌ಗಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇಂಡಿಯಾ ಹೌಸ್ ನಿರ್ಮಾಣ

ಅಂತರ್‌-ರಾಜ್ಯ ಅಥ್ಲೆಟಿಕ್ಸ್‌: ರಾಜ್ಯದ ಜೆಸ್ಸಿ, ಸ್ನೇಹಾ ಫೈನಲ್‌ ಸುತ್ತಿಗೆ ಪ್ರವೇಶ

ಪಂಚಕುಲಾ(ಹರ್ಯಾಣ): 63ನೇ ರಾಷ್ಟ್ರೀಯ ಅಂತರ್‌-ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ಕರ್ನಾಟಕದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಪುರುಷರ ಹೈಜಂಪ್‌ನಲ್ಲಿ ಜೆಸ್ಸಿ ಸಂದೇಶ್‌ ಹಾಗೂ ಸುದೀಪ್‌ ಫೈನಲ್‌ ಪ್ರವೇಶಿಸಿದರು. ಅರ್ಹತಾ ಸುತ್ತಿನಲ್ಲಿ ಇಬ್ಬರೂ 2.05 ಮೀ. ಎತ್ತರಕ್ಕೆ ಜಿಗಿದು ಫೈನಲ್‌ಗೆ ಅರ್ಹತೆ ಪಡೆದರು.

ಇನ್ನು ಮಹಿಳೆಯರ 100 ಮೀ. ಓಟದಲ್ಲಿ ರಾಜ್ಯದ ಸ್ನೇಹಾ ಎಸ್‌.ಎಸ್‌. ಹಾಗೂ ದಾನೇಶ್ವರಿ ಫೈನಲ್‌ ಪ್ರವೇಶಿಸಿದರು. ಹೀಟ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಈ ಇಬ್ಬರೂ ಸೆಮಿಫೈನಲ್‌ನಲ್ಲಿ ಲಯ ಕಾಯ್ದುಕೊಂಡರು. ಮೊದಲ ಸೆಮೀಸ್‌ನಲ್ಲಿ ಸ್ನೇಹಾ, 11.58 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಸೆಮೀಸ್‌ನ 2ನೇ ಹೀಟ್ಸ್‌ನಲ್ಲಿ ದಾನೇಶ್ವರಿ 12 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ 3ನೇ ಸ್ಥಾನದೊಂದಿಗೆ ಫೈನಲ್‌ಗೇರಿದರು.

ಪುರುಷರ 100 ಮೀ. ಓಟದ ಹೀಟ್ಸ್‌ನಲ್ಲಿ ಓಡಿದ್ದ ರಾಜ್ಯದ ಮಣಿಕಂಠ, ಸೆಮಿಫೈನಲ್‌ಗೆ ಅರ್ಹತೆ ಪಡೆದರೂ ಓಟದಲ್ಲಿ ಪಾಲ್ಗೊಳ್ಳಲಿಲ್ಲ. 2ನೇ ದಿನವಾದ ಶುಕ್ರವಾರ ರಾಜ್ಯಕ್ಕೆ ಮೊದಲ ಪದಕ ದೊರೆಯುವ ನಿರೀಕ್ಷೆ ಇದೆ.

ಜುಲೈ 1ರಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕಪ್‌ ಫುಟ್ಬಾಲ್‌

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ) ಹಾಗೂ ಬೆಂಗಳೂರು ಜಿಲ್ಲಾ ಫುಟ್ಬಾಲ್‌ ಸಂಸ್ಥೆ(ಬಿಡಿಎಫ್‌ಎ)ಯು ಇದೇ ಮೊದಲ ಬಾರಿ ಮುಖ್ಯಮಂತ್ರಿ ಕಪ್‌ ಫುಟ್ಬಾಲ್‌ ಟೂರ್ನಿ ಆಯೋಜಿಸಲಿದ್ದು, ಜು.1ರಿಂದ ಜು.21ರ ವರೆಗೆ ಬೆಂಗಳೂರಲ್ಲಿ ಟೂರ್ನಿ ನಡೆಯಲಿದೆ.

ಗುರುವಾರ ಈ ಬಗ್ಗೆ ಕೆಎಸ್‌ಎಫ್‌ಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಟೂರ್ನಿಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಭಾಗದಿಂದ ಒಟ್ಟು 17 ತಂಡಗಳು ಪಾಲ್ಗೊಳ್ಳಲಿವೆ. ಲೀಗ್‌ ಹಾಗೂ ನಾಕೌಟ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. 21 ದಿನಗಳ ಕಾಲ ನಡೆಯಲಿರುವ ಟೂರ್ನಿಗೆ ಅಶೋಕ್‌ ನಗರದ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಸೆಮಿಫೈನಲ್‌ ಜು.19ಕ್ಕೆ, ಫೈನಲ್‌ ಜು.21ಕ್ಕೆ ನಡೆಯಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಎಸ್‌ಎಫ್‌ಎ ಗೌರವ ಕಾರ್ಯದರ್ಶಿ ಎಂ.ಕುಮಾರ್‌, ಬಿಡಿಎಫ್‌ಎ ಮುಖ್ಯಸ್ಥ ಎಸ್‌.ಎಂ.ಬಾಲು ಸೇರಿ ಪ್ರಮುಖರು ಉಪಸ್ಥಿತರಿದ್ದರು.
 

click me!