Latest Videos

ಚಿನ್ನ ಕುದಿವ ಕುಲುಮೆಯಲ್ಲಿದೆ, ಅಪರಂಜಿ ಆಗಿ ಬರಲು ಸಮಯ ಬೇಕು: ದರ್ಶನ್​​ ಬಗ್ಗೆ ಗಾಯಕಿ ಶಮಿತಾ ಮಲ್ನಾಡ್ ಪೋಸ್ಟ್‌!

By Govindaraj SFirst Published Jun 28, 2024, 8:38 PM IST
Highlights

ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ, ಶುದ್ಧವಾಗಿ ಬರಲು ಸಮಯ ಬೇಕು ಎಂದು ದರ್ಶನ್ ಪರವಾಗಿ ಗಾಯಕಿ, ಸಂಗೀತ ನಿರ್ದೇಶಕಿ ಡಾ.ಶಮಿತಾ ಮಲ್ನಾಡ್ ಫೇಸ್‌ಬುಕ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಪ್ರಕರಣದಲ್ಲಿ ಹೀರೋ ದರ್ಶನ್, ಅವರ ಗೆಳತಿ ನಟಿ ಪವಿತ್ರಾ ಗೌಡ ಸೇರಿ ಹದಿನೇಳು ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪವಿತ್ರ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ದರ್ಶನ್ ಗ್ಯಾಂಗ್‌ ಜತೆಗೂಡಿ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಚಿತ್ರಹಿಂಸೆ ನೀಡಿ ಕೊಂದು ಕಾಲುವೆಗೆ ಎಸೆದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇನ್ನು ಈ ಪ್ರಕರಣದ ಕುರಿತು ಈಗಾಗಲೇ ಹಲವು ಸಿನಿಮಾ ಸೆಲೆಬ್ರಿಟಿಗಳು ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಇದೀಗ ಎ2 ಆರೋಪಿ ದರ್ಶನ್ ಪರವಾಗಿ ಗಾಯಕಿ, ಸಂಗೀತ ನಿರ್ದೇಶಕಿ ಡಾ.ಶಮಿತಾ ಮಲ್ನಾಡ್ ಅವರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ, ಶುದ್ಧವಾಗಿ ಬರಲು ಸಮಯ ಬೇಕು ಎಂದು ಫೇಸ್‌ಬುಕ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 

ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡ ಶಮಿತಾ ಮಲ್ನಾಡ್ ಅವರು, ಮನಸೇ ಮನಸೇ.. ಸೋಲೋ ಗೆಲುವೋ.. ನೋವೋ ನಲಿವೋ.. ಏಳೋ ಬೀಳೋ.. ಕಲ್ಲೋ ಮುಳ್ಳೋ.. ಜೀವನದ ಹಾದಿ ಸುಲಭವಲ್ಲ. ಯಶಸ್ಸಿನ ಹಾದಿ ಸುಗಮವಲ್ಲ. ಹಸಿವು, ಅವಮಾನ, ನೋವುಂಡು ಯಶಸ್ಸು ಗಳಿಸಿದ ಹೆಸರು ದರ್ಶನ್ ತೂಗುದೀಪ. ಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು. ಒಳ್ಳೆಯ ಕೆಲಸಗಳಿಗೆ ಕೈ ಚಾಚಿದ್ದವರು. ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡ. 

ಅವರ ಅಭಿನಯ, ಭೇದವಿಲ್ಲದ ಪ್ರೀತಿ, ಸರಳತೆ, ಸ್ನೇಹ ಅಭಿಮಾನದ ಸಿಹಿ ಉಂಡವರು ನಾವು, ಅಭಿಮಾನಿಯಾಗಿ ಸಿನಿಮಾ ಅಭಿನಯ ನೋಡಿ ಅತ್ತು, ನಕ್ಕು, ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದವರು ನಾವು. ಆರಡಿ ದೇಹವ ಮೂರಡಿ ಬಗ್ಗಿಸಿ ತಗ್ಗಿ ನಮ್ಮೊಂದಿಗೆ ವಿನಯದಿ ಮಾತಾಡುವಾಗ ಹೆಮ್ಮೆ ಪಟ್ಟವರು ನಾವು. ತಪ್ಪಾಗಿದೆಯೋ ಇಲ್ಲವೋ ಏನಾಗಿದೆ ಎಂದು ಅರಿಯದವರು ನಾವು. ಹಣಕ್ಕೆ ಬಗ್ಗದೆ ಪ್ರೀತಿಗೆ ಬಗ್ಗಿದವರು ಅವರು, ತಪ್ಪಾಗಿದ್ದರೆ ನ್ಯಾಯಾಂಗವಿದೆ. ಕಾನೂನಿದೆ ಶಿಕ್ಷೆ ಇದೇ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಅಕಾಲ ನಿಧನರಾದ ಶ್ರೀ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಹಾಗೂ ಹಲವು ನೊಂದ ಕುಟುಂಬಗಳಿಗೆ ನಮ್ಮೆಲ್ಲರ ಸಾಂತ್ವನ ನೆರವು, ಆಸರೆ, ನ್ಯಾಯ ಬೇಕಿದೆ. ಹಾಗೇ ಸೋಶಿಯಲ್ ಮೀಡಿಯಾವನ್ನು ದಯವಿಟ್ಟು ಒಳಿತಿಗೆ ಉಪಯೋಗಿಸಿ, ಎಲ್ಲರ ಮೇಲೆ ಗೌರವವಿರಲಿ, ಕಾಮೆಂಟ್ಸ್, ಪೋಸ್ಟ್ ಮೇಲೆ ಹಿಡಿತವಿರಲಿ, ದರ್ಶನ್ ಅಣ್ಣಾ, ಕನ್ನಡದ ಕುಟುಂಬ, ಚಲನಚಿತ್ರದ ಕುಟುಂಬ ನಮ್ಮ ಕುಟುಂಬ, ಕಲಾವಿದರ ಕುಟುಂಬ, ಏನೇ ಆದರೂ ನಮ್ಮ ಮನೆಯವರ ಜೊತೆ ನಾವು ಯಾವಾಗಲೂ ಜೊತೆ ಇರುತ್ತೇವೆ, ಅಲ್ಲವೇ??? 

ದರ್ಶನ್​ ಅಭಿಮಾನಿಗಳಿಂದ ಬ್ಯಾಡ್​ ಕಮೆಂಟ್ಸ್ ಟಾರ್ಚರ್: ಗುರು ನಾನ್‌ ಇನ್ನೂ ಚಿಕ್ಕವಳು ಎಂದ ಸೋನು ಗೌಡ!

ಹಾಗೆ ಪ್ರೀತಿ ಅಭಿಮಾನ ಬದಲಾಗದು. ತಪ್ಪು ಯಾರು ಮಾಡಿದ್ದರೂ ಶಿಕ್ಷೆ ಆಗಬೇಕು. ನ್ಯಾಯ ಎಲ್ಲರಿಗೂ ಒಂದೇ. ದರ್ಶನ್ ಅವರನ್ನು ಪ್ರೀತಿಸುವ ಎಲ್ಲರಿಗೂ ನೋವಾಗಿದೆ ಸಂಕಟವಾಗಿದೆ. ಇದು ಸಂಯಮ,ತಾಳ್ಮೆ, ಪ್ರಾರ್ಥನೆಯ ಸಮಯ. ಸಿಟ್ಟು, ಕೋಪ, ಅಸಹನೆ, ಹತಾಶೆ ದರ್ಶನ್ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ತೊಂದರೆ ಒಡ್ಡಬಹುದು, ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ ಶುದ್ಧವಾಗಿ ಬರಲು ಸಮಯ ಬೇಕು, ಕಾಯೋಣ ಸಮಾಧಾನದಿಂದ ದರ್ಶನ್ ಅಣ್ಣಾ ಅವರಿಗಾಗಿ ಪ್ರಾರ್ಥಿಸೋಣ, ಹಾರೈಸೋಣ ಎಂದು ಬರೆದುಕೊಂಡು ದರ್ಶನ್ ಜೊತೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

click me!