Latest Videos

ನಟ ದರ್ಶನ್‌ಗಾಗಿ ಜೈಲು ಸೇರಿದ ಅಭಿಮಾನಿ ಜಗದೀಶನ ಕುಟುಂಬಕ್ಕೆ ತುತ್ತು ಅನ್ನಕ್ಕೂ ತತ್ವಾರ!

By Sathish Kumar KHFirst Published Jun 29, 2024, 8:23 PM IST
Highlights

ನಟ ದರ್ಶನ್‌ಗೆ ಅಭಿಮಾನ ಕೊಡುವುದಲ್ಲಿ ಶ್ರೀಮಂತನಾಗಿದ್ದ ಜಗದೀಶ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾನೆ. ಆದರೆ, ಆತನ ಕುಟುಂಬಕ್ಕೆ ಒಂದು ತುತ್ತಿನ ಅನ್ನಕ್ಕೂ ಪರದಾಡುವ ಮೂಲಕ ಕಡುಬಡತನ ಅನುಭವಿಸುತ್ತಿದೆ.

ಚಿತ್ರದುರ್ಗ (ಜೂ.29): ನಟ ದರ್ಶನ್ ಅಭಿಮಾನ ನೀಡುವುದರಲ್ಲಿ ಶ್ರೀಮಂತಿಕೆಯಿಂದ ಮೆರೆಯುತ್ತಿದ್ದ ಜಗದೀಶ್ ಅಲಿಯಾಸ್ ಜಗ್ಗ ಜೀವನದಲ್ಲಿ ಮಾತ್ರ ಕಡುಬಡುವ. ಆಟೋ ಓಡಿಸಿಕೊಂಡು ವೃದ್ಧ ಅನಾರೋಗ್ಯಪೀಡಿತ ಅಪ್ಪ-ಅಮ್ಮ, ಹೆಂಡತಿ ಮತ್ತಿ ಇಬ್ಬರು ಮಕ್ಕಳೊಂದಿಗೆ ಕುಟುಂಬ ನಿರ್ವಹಣೆ ಮಾಡುತ್ತಿದ್ದವನು ಈಗ ಜೈಲು ಸೇರಿದ್ದಾನೆ. ಕುಟುಂಬಕ್ಕೆ ಆರ್ಥಿಕ ಬಲವಾಗಿದ್ದ ಮಗನೇ ಜೈಲು ಸೇರಿದ್ದರಿಂದ ಮನೆಯ ಸದಸ್ಯರು ಒಂದು ಹೊತ್ತಿನ ತುತ್ತು ಅನ್ನಕ್ಕೂ ಬೇರೊಬ್ಬರನ್ನು ಕೈಯೊಡ್ಡಿ ಬೇಡಿಕೊಂಡು ತಿನ್ನುವ ಪರಿಸ್ಥಿತಿಗೆ ಬಂದಿದ್ದಾರೆ.

ನಟ ದರ್ಶನ್ 2ನೇ ಪತ್ನಿ ಪವಿತ್ರಾಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಂಡ್‌ ಗ್ಯಾಂಗ್‌ನಲ್ಲಿ ಎ6 ರೋಪಿ ಜಗದೀಶ್ ಕೂಡ ಒಬ್ಬ. ಚಿತ್ರದುರ್ಗದ ನಟ ದರ್ಶನ್ ಅಭಿಮಾನಿಗಳ ಸಂಘದ ಮಾಜಿ ಜಿಲ್ಲಾಧ್ಯಕ್ಷನೂ ಆಗಿರುವ ಜಗದೀಶ್ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದನು. ಈತನ ದುಡಮೆಯನ್ನು ನಂಬಿಕೊಂಡು ಅರ್ಧ ಡಜನ್ ಜರು ವಾಸ ಮಾಡುತ್ತೊದ್ದಾರೆ. ಅಂದರೆ, ಆತನ ವೃದ್ಧ ತಂದೆ-ತಾಯಿ, ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈಗ ದುಡಿಮೆಗೆ ಆಸರೆಯಾಗಿದ್ದ ಜಗದೀಶ್ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದರಿಂದ ಕುಟುಂಬಕ್ಕೆ ಭಾರಿ ಸಂಕಷ್ಟ ಎದುರಾಗಿದೆ. ತುತ್ತು ಅನ್ನವನ್ನು ಸಂಪಾದಿಸಲೂ ಕುಟುಂಬ ಕಡು ಕಷ್ಟವನ್ನು ಅನುಭವಿಸುತ್ತಿದೆ. ಇವರ ಜೀವನವನ್ನು ನೋಡಿದರೆ ಯಾರದ್ದೋ ಮೇಲಿನ ಅಭಿಮಾನಕ್ಕಾಗಿ ನಿಮ್ಮನ್ನು ನಂಬಿಕೊಂಡವರ ಜೀವನವನ್ನು ಬೀದಿ ಪಾಲು ಮಾಡುವುದಕ್ಕೆ ಮುಂಚೆ ಒಮ್ಮೆ ಆಲೋಚನೆ ಮಾಡಬೇಕು ಎನ್ನಿಸದೇ ಇರದು... 

ಒಂದೇ ವೇದಿಕೆಯಲ್ಲಿ 60 ಜನರನ್ನು ಮದುವೆಯಾದ ಮಹಿಳೆ; ಮತ್ತೆ ಅದು ಹೇಗೆ ಅಂತಾ ಕೇಳಿದ ನೆಟ್ಟಿಗರು!

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ ನಟ ದರ್ಶನ್ ಅಭಿಮಾನಿ ಜಗದೀಶ್ ಅವರ ತಾಯಿ ಸುಲೋಚನಮ್ಮ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಅಳಲು ತೋಡಿಕೊಂಡಿದ್ದಾರೆ. 'ನನ್ನ ಮಗ ಅವತ್ತು ದುಡಿದುಕೊಂಡು ಬಂದ ಹಣವನ್ನು ಮನೆಗೆ ಕೊಟ್ಟು ಜೀವನ ನಡೆಸುತ್ತಿದ್ದನು. ಇದರಿಂದ ನಮ್ಮ ಗಂಜಿ ನಾವು ಕುಡಿದು ಚೆನ್ನಾಗಿಯೇ ಜೀವನ ಸಾಗಿಸ್ತಿದ್ವಿ. ತಂದೆ ತಾಯಿ ಮಕ್ಕಳೊಂದಿಗೆ ಚೆನ್ನಾಗಿಯೇ ದುಡಿದು ಜೀವನ ಸಾಗಿಸ್ತಿದ್ದನು. ದರ್ಶನ್ ಸಿನಿಮಾ ಬಂದಾಗ ಪೋಸ್ಟರ್ ಹಚ್ಚೋಕೆ, ಸಿನಿಮಾ ನೋಡೋಕೆ ಹೋಗ್ತಿದ್ದ. ಆಟೋಗೆ ಹೋದಾಗ ಯಾರೋ ಕರೆದಿದ್ದಾರೆ ಅಂತ ಹೋಗಿದಾನೆ. ಅವನ ಹೆಸರು ಬಂದಾಗಲೇ ಗೊತ್ತಾಗಿದ್ದು, ಅಲ್ಲಿವರೆಗೂ ಗೊತ್ತಾಗಿಲ್ಲ. ನಮ್ಮ ಹುಡುಗ ಅಂತವನು ಅಲ್ಲ. ದರ್ಶನ್ ಸಿನಿಮಾ‌ ನೋಡ್ತಾನೆ ಪಿಕ್ಚರ್ಸ್ ಪೋಸ್ಟರ್ ಹಂಚಿ ಬರ್ತಾನೆ ಅಷ್ಟೆ ಗೊತ್ತಿರೋದು. ಅವನಿಲ್ಲದೇ ನಮ್ಮದು ಜೀವನ ತುಂಬಾ ಕಷ್ಟ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. 

ಜೀವನದಲ್ಲಿ ಒಮ್ಮೆಯೂ ಪೊಲೀಸ್ ಠಾಣೆ ಮೆಟ್ಟಿಲನ್ನೂ ಹತ್ತದ ನಮಗೆ ಪೊಲೀಸರನ್ನು ನೋಡಿದ್ರೆ ನಡುಕ ಬರ್ತದೆ. ನಮ್ಮ ಮನೇಲಿ ಚಟ್ನಿ, ಮುದ್ದೆ ತಿನ್ಕೊಂಡ್ ನೆಮ್ಮದಿಯಾಗಿ ಇದ್ದೆವು. ಈಗ ಒಂದು ತುತ್ತು ಹಿಟ್ಟಿಗೂ ಕಷ್ಟವಾಗಿದೆ. ನನ್ನ ಮಗನನ್ನು ಬೇಗ ಬಿಡಿಸಿ ಮನೆಗೆ ಕಳಿಸಿಕೊಡಿ. ನನಗೆ ನನ್ನ ಗಂಡನಿಗೆ ಆರೋಗ್ಯದಲ್ಲಿ ಸಮಸ್ಯೆ ಆಗಿದೆ. ನಮ್ಮ ಸೊಸೆಗೆ ಸಿಗುವ 4 ಸಾವಿರ ಹಣದಲ್ಲಿ ನಾವು ಹೇಗೆ ಜೀವನ ಮಾಡೋದು. ಓದುವ ಮಕ್ಕಳಿಗೆ ಫೀಸ್ ಕಟ್ಟಿಲ್ಲ ನಾವು, ಮಕ್ಕಳು ಹಠ ಮಾಡ್ತಾವೆ ಏನು ಮಾಡಬೇಕೋ ಗೊತ್ತಾಗ್ತಿಲ್ಲ ಎಂದು ಕಣ್ಣಂಚಿನಲ್ಲಿ ನೀರು ತಂದುಕೊಂಡು ಸುಮ್ಮನಾದರು.

ಮಗನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರುವುದಕ್ಕೆ ಇರ್ಲಿ ಅವನನ್ನು ಜೈಲಿಗೆ ಹೋಗಿ ನೋಡಲಿಕ್ಕೂ ದುಡ್ಡಿಲ್ಲ. ನನ್ನ ಸೊಸೆ ಬಸ್ಸಲ್ಲಿ ಫ್ರೀ ಇದೆ ಅಂತಾ ಹೇಳಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಆಧಾರ್ ಕಾರ್ಡ್ ಇಟ್ಕೊಂಡ್ ಹೋಗಿ ಗಂಡನನ್ನು ನೋಡ್ಕೊಂಡ್ ಬಂದಿದಾಳೆ. ನಮ್ಮವರನ್ನ‌ ನೋಡಿ ತುಂಬಾ ಅಳ್ತಿದಾನಂತೆ. ನನಗೆ ಗೊತ್ತಿಲ್ಲದೇ ಇಲ್ಲಿದೆ ಬಂದಿದ್ದೀನಿ, ಹೀಗೆ ಆಗುತ್ತೆ ಅಂದ್ರೆ ಬರ್ತಿರಲಿಲ್ಲ ಎಂದು ಕಣ್ಣೀರು ಹಾಕ್ತಿದಾನೆ. ನನ್ನ ಮೊಮ್ಮಕ್ಕಳು ಅಪ್ಪ ಟಿವಿಯಲ್ಲಿ ಬರ್ತಿದ್ದಾನೆ, ಈಗ ಅಪ್ಪ ಎಲ್ಲಿದ್ದಾನೆ, ಯಾಕೆ ಮನೆಗೆ ಬರ್ತಿಲ್ಲ ಅಂತಾ ಕೇಳ್ತಿದ್ದಾರೆ. ನಮ್ಮ ಮನೆಯಲ್ಲಿ ಕಿತ್ತು ತಿನ್ನುವ ಬಡತನ ನಮ್ಮನ್ನ ಕಾಡ್ತಿದೆ ಎಂದು ಜಗದೀಶ್ ತಾಯಿ ಕಣ್ಣೀರು ಹಾಕಿದರು.

ಬುಸುಗುಡುತ್ತಾ ಕಚ್ಚಲು ಬಂದ ವಿಷಕಾರಿ ಹಾವನ್ನು ಮಕಾಡೆ ಮಲಗಿಸಿದ ಮುಸ್ಲಿಂ ಬಾಬಾ!

ನಮ್ಮ ಕಷ್ಟದ ಜೋವನ ನೋಡಲಾಗದೇ ಅಕ್ಕ ಪಕ್ಕದವರು ಒಂದಿನ ರೇಷನ್, ತರಕಾರಿ ಕೊಟ್ಟಿದಾರೆ. ಆದ್ರೂ ಎಷ್ಟು ದಿನ ಅಂತ ಹೀಗೆ ಜೀವನ ನಡೆಸೋದು ಹೇಳಿ. ವಾರ, ಹದಿನೈದು ದಿನ ಮಾತ್ರ ಬೇರೆಯವರು ಕೊಟ್ಟಿದ್ದನ್ನು ತಿನ್ನೋಕೆ ಸಾಧ್ಯ. ಅದಾದ ಮೇಲೆ ನಮ್ಮ ಕುಟುಂಬ ಬೀದಿಗೆ ಬರುತ್ತದೆ ಎನ್ನುವ ಭಯ ಕಾಡ್ತಿದೆ. ನನಗೆ ಹುಷಾರಿಲ್ಲ, ನಮ್ಮ ಕಷ್ಟ ಡಾಕ್ಟರ್‌ಗೆ ಹೇಳಿಕೊಂಡಿದ್ದಕ್ಕೆ ಅವರು ಒಂದು ರೂಪಾಯಿ ಕೂಡ ತೆಗೆದುಕೊಳ್ಳದೇ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಕೊಡಬೇಕಾದ ಹಣದಲ್ಲಿಯೇ ಔಷಧಿ ತೆಗೆದುಕೊಂಡು ಬಂದಿದ್ದೀನಿ. ಇನ್ನು ನನ್ನ ಮಗ ದರ್ಶನ್ ಅಭಿಮಾನಿ, ಆದರೆ ಈಗ ಯಾವುದೇ ಅಭಿಮಾನಿಗಳು ನಮ್ಮ ಕುಟುಂಬದ ಸಹಾಯಕ್ಕೂ ಬರ್ತಿಲ್ಲ. ಪೊಲೀಸರು ಕೂಡ ಎಂದೂ ನಮ್ಮ ಮನೆ ಬಾಗಿಲಿಗೆ ಬಂದಿಲ್ಲ. ನನ್ನ ಗಂಡನನ್ನ ಬಿಟ್ರೆ ಸಾಕು ಗಂಜಿ ಕುಡ್ಕೊಂಡ್ ಜೀವನ ಮಾಡ್ತಿದ್ವಿ ಎಂದು ನನ್ನ ಸೊಸೆ ಹೇಳ್ತಿದ್ದಾಳೆ. ನನ್ನ ಮಗನನ್ನ ಬಿಡಿಸಿದ್ರೆ ಪುಣ್ಯ ಬರುತ್ತೆ ಎಂದು ಜಗದೀಶನ ತಾಯಿ ಸುಲೋಚನಮ್ಮ ಹೇಳಿಕೊಂಡಿದ್ದಾರೆ.

click me!