ಈವರೆಗಿನ ಎಲ್ಲ ಕೋಮುಗಲಭೆ, ಹತ್ಯೆ ನ್ಯಾಯಾಂಗ ತನಿಖೆ ನಡೆಸಿ: ಪ್ರಿಯಾಂಕ್‌ ಖರ್ಗೆ

By Govindaraj SFirst Published Jul 29, 2022, 5:00 AM IST
Highlights

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ಮಾಡಬೇಕು. ಇದುವರೆಗಿನ ಎಲ್ಲ ಕೋಮುಗಲಭೆ ಹಾಗೂ ಕೋಮು ಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. 

ಬೆಂಗಳೂರು (ಜು.29): ‘ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ಮಾಡಬೇಕು. ಇದುವರೆಗಿನ ಎಲ್ಲ ಕೋಮುಗಲಭೆ ಹಾಗೂ ಕೋಮು ಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲಾ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ರಾಜ್ಯ ಕಾಂಗ್ರೆಸ್‌ ಒತ್ತಾಯಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ, ‘ರಾಜ್ಯದಲ್ಲಿ ಭ್ರಷ್ಟೋತ್ಸವ ನಿಲ್ಲಬೇಕಾದರೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. 

ಗೃಹ ಸಚಿವರು ಇಷ್ಟೆಲ್ಲಾ ಆದ ನಂತರ ರಾಜಕೀಯದಿಂದಲೇ ಸ್ವಯಂ ನಿವೃತ್ತಿ ಪಡೆಯುವುದು ಉತ್ತಮ’ ಎಂದು ಆಗ್ರಹಿಸಿದರು. ‘ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಬಿಜೆಪಿಗೆ ತಿರುಗುಬಾಣವಾಗಿದೆ. ಬಿಜೆಪಿ ಈ ಪ್ರಕರಣದಲ್ಲೂ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರಿಗೆ ಸತ್ಯದ ಅರಿವಾಗಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಕಾರು ಅಲುಗಾಡಿಸಿದ್ದಾರೆ. ಇವರು ಕೇವಲ ಕಾರಲ್ಲ. ರಾಜ್ಯ ಸರ್ಕಾರವನ್ನೇ ಅಲುಗಾಡಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕು’ ಎಂದು ಹೇಳಿದರು.

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು: ಪ್ರಿಯಾಂಕ್‌ ಚಾಟಿ

ಜನರ ರಕ್ಷಿಸದ ಸರ್ಕಾರ ಏಕೆ ಬೇಕು?: ಬಿಜೆಪಿಯ ಪ್ರವೀಣ್‌ ನೆಟ್ಟಾರು ಸಾವನ್ನು ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳದೆ ಮುಕ್ತ ತನಿಖೆ ನಡೆಸಬೇಕು. ಪ್ರತಿ ಬಾರಿಯೂ ಸಂತ್ರಸ್ತರು ಅಥವಾ ವಿರೋಧಪಕ್ಷಗಳನ್ನೇ ಹೊಣೆ ಮಾಡಿ ಪಲಾಯನವಾದ ಮಾಡಬಾರದು. ಜನರಿಗೆ ರಕ್ಷಣೆ ನೀಡಲಾಗದಿದ್ದರೆ ಈ ಸರ್ಕಾರ ಯಾಕೆ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು

ಕಾರ್ಯಕರ್ತರನ್ನು ಬಳಸಿ ಬಿಸಾಕುವ ಬಿಜೆಪಿ: ಬಿಜೆಪಿಯವರು ತಮ್ಮ ಕಾರ್ಯಕರ್ತರ ಬಗ್ಗೆ ಯಾವ ರೀತಿ ಕಾಳಜಿ ಇದೆ ಎಂದು ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಅವರ ಸಹೋದರಿ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕಾರ್ಯಕರ್ತರನ್ನು ಬಳಸಿ ಬಿಸಾಡುವ ಪದ್ಧತಿ ಬಿಜೆಪಿಯಲ್ಲಿದೆ. ಹರ್ಷ ಹಂತಕರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ. ಹರ್ಷ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಿಲ್ಲ. ಬದಲಿಗೆ ಕೊರೋನಾದಿಂದ ಮೃತಪಟ್ಟವರಿಗೆ ನೀಡಬೇಕಿದ್ದ ನಿಧಿಯಿಂದ ನೀಡಲಾಗಿದೆ. ಇದು ಸರ್ಕಾರಕ್ಕೆ ಕಾರ್ಯಕರ್ತರ ಬಗ್ಗೆ ಇರುವ ಬದ್ಧತೆ ಎಂದರು.

ದಲಿತ ನಾಯಕ ಖರ್ಗೆ ಸಿಎಂ ಎಂದು ಸಿದ್ದರಾಮಯ್ಯ ಘೋಷಿಸಲಿ: ಎನ್‌.ಮಹೇಶ

ಕಾರ್ಯಕರ್ತರ ಆಕ್ರೋಶಕ್ಕೆ ಹೆದರಿ ಜನೋತ್ಸವ ರದ್ದು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನೋತ್ಸವ ರದ್ದು ಮಾಡಿದ್ದು ಪ್ರವೀಣ್‌ ಸಾವಿನಿಂದ ಮನನೊಂದು ಅಲ್ಲ. ಕಾರ್ಯಕರ್ತರ ಆಕ್ರೋಶಕ್ಕೆ ಹೆದರಿ ರದ್ದು ಮಾಡಿದ್ದಾರೆ’ ಎಂದು ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು. ‘ಪ್ರವೀಣ ಅವರ ಹತ್ಯೆಯಾಗಿದ್ದು ಜುಲೈ 26ರಂದು. ಮುಖ್ಯಮಂತ್ರಿಗಳ ಮನಸ್ಸು ಕರಗಿದ್ದು ಜುಲೈ 27ರ ಮಧ್ಯರಾತ್ರಿ 12.30 ಗಂಟೆಗೆ. ಹೀಗಾಗಿ ಇದು ಜನಾಕ್ರೋಶದಿಂದ ಜನೋತ್ಸವ ರದ್ದಾಗಿದೆಯೇ ಹೊರತು ಇವರಿಗೆ ತಮ್ಮ ಕಾರ್ಯಕರ್ತನ ಹತ್ಯೆ ಬಗ್ಗೆ ಯಾವುದೇ ಕಾಳಜಿ ಇಲ್ಲ. ಗುಪ್ತಚರ ಇಲಾಖೆ ಜು.27 ರಂದು ಕಾರ್ಯಕ್ರಮ ರದ್ದು ಮಾಡಬೇಕು ಎಂದು ವರದಿ ನೀಡಿದರು. ಅಲ್ಲದೆ ಸಚಿವ ಸುನಿಲ್ ಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದಿಗ್ಬಂಧನ ಮಾಡಿದಾಗ ಸರ್ಕಾರಕ್ಕೆ ಈ ಜ್ಞಾನೋದಯವಾಗಿದೆ’ ಎಂದರು.

click me!