
ಕಲಬುರಗಿ (ಜೂ.04): ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ವಿಭಾಗೀಯ ಕೇಂದ್ರ ಕಲಬುರಗಿ (ಪಜಾ ಮೀಸಲು) ಲೋಕಸಭೆ ಮತಕ್ಷೇತ್ರ ಕೈವಶವಾಗಿದೆ. ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಮನಿ ಅವರು ಇಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಪಕ್ಷದ ರಾಧಾಕೃಷ್ಣ ದೊಡ್ಮನಿಯವರು6, 52, 321 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಉಮೇದುವಾರ, ಇಲ್ಲಿಂದ ಪುನರಾಯ್ಕೆ ಬಯಸಿದ್ದ ಡಾ. ಉಮೇಶ ಜಾಧವ್ ಅವರನ್ನ 27, 205 ಮತಗಳ ಅಂತರಿಂದ ಮಣಿಸಿದ್ದಾರೆ. ಇಲ್ಲಿ ಬಿಜೆಪಿಯ ಉಮೇಶ ಜಾಧವ್ ಅವರಿಗೆ 6, 25, 116 ಮತಗಳು ಬಂದಿವೆ.
ಎಐಸಿಸಿ ಅಧ್ಯಕ್ಷರಾದ ಖರ್ಗೆಯವರ ತವರು, ಮೇಲಾಗಿ ಅವರ ಅಳಿಯ ರಾಧಾಕೃಷ್ಣ ಅವರೇ ಸ್ಪರ್ಧಾ ಅಖಾಡದಲ್ಲಿದ್ದ ಕಾರಣದಿಂದಾಗಿ ಜಿದ್ದಾಜಿದ್ದಿ ಹಾಗೂ ರಣರೋಚಕ ಕಣವಾಗಿ ದೇಶಾದ್ಯಂತ ಕಲಬುರಗಿ ಗಮನ ಸೆಳೆದಿತ್ತು.ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ , ರಾಜ್ಯದ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಇಬ್ಬರೂ ಈ ಕ್ಷೇತ್ರದಲ್ಲಿನ ರಾಧಾಕೃಷ್ಣ ಅವರ ಗೆಲುವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು.
ಕೊಪ್ಪಳ ಲೋಕಸಭಾ ಕ್ಷೇತ್ರ ಫಲಿತಾಂಶ: ಸತತ ಮೂರು ಸೋಲಿನ ಸೇಡು ತೀರಿಸಿಕೊಂಡ ಕಾಂಗ್ರೆಸ್, ಫಲ ನೀಡದ ಬಿಜೆಪಿ ತಂತ್ರ!
ರಾಧಾಕೃಷ್ಣ ಜನತಾ ಜನಾರ್ಧನರ ಆಶಿರ್ವಾವದ ಪಡೆದು ವಿಜಯದ ನಗೆ ಬೀರಿ ಕಳೆದ ಲೋಕ ಸಮರದಲ್ಲಿನ ಮಾವನ ಸೋಲಿನ ಸೇಡು ತೀರೀಸಿಕೊಂಡರೆ, ಇತ್ತ ಎಐಸಿಸಿ ಅಧ್ಯಕ್ಷರಾದ ಡಾ. ಖರ್ಗೆವರು ಈ ಚುನಾವಣೆಯನ್ನು ತುಂಬ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ತಮ್ಮ ಅಳಿಯ ರಾಧಾಕೃಷ್ಣರನ್ನ ಇಲ್ಲಿಂದ ಗೆಲ್ಲಿಸುವ ಮೂಲಕ ತಮ್ಮ 2019 ರ ಲೋಕ ಸಮರದಲ್ಲಿನ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಲಬುರಗಿ ವಿಜಯವನ್ನ ವಿಶ್ಲೇಷಿಸಲಾಗುತ್ತಿದೆ.
2019 ರಲ್ಲಿ ಕಲಬುರಗಿ ಕ್ಷೇತ್ರದಿಂದ ಕಣದಲ್ಲಿದ್ದ ಡಾ. ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿಯ ಡಾ. ಉಮೇಶ ಜಾಧವ್ ಅವರ ಮುಂದೆ 95 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲುಂಡಿದ್ದರು. ಆದರೆ ಈ ಬಾರಿ ಕಳೆದ ಚುನಾವಣೆಯ ಸೋಲಿನ ಕಹಿಗೆ ಮದ್ದರೆಯುವ ತವಕದಲ್ಲಿದ್ದ ಡಾ. ಖರ್ಗೆಯವರು ಈ ಚುನಾವಣೆಯಲ್ಲಿ ತುಂಬ ಬಾವುಕರಾಗಿ ಮತ ಹಾಕದೆ ಹೋದಲ್ಲಿ ತಮ್ಮ ಮಣ್ಣಿಗಾದರೂ ಬನ್ನಿ ಎಂದು ಕ್ಷೇತ್ರದ ಜನತೆಗೆ ಕರೆ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮಂಡ್ಯದಲ್ಲಿ ಭರ್ಜರಿ ಗೆಲವು: ಪ್ರಮಾಣಪತ್ರ ಸ್ವೀಕರಿಸುವ ಮುನ್ನ ಜ್ಯೋತಿಷ್ಯದ ಮೊರೆ ಹೋದ ಎಚ್ಡಿಕೆ!
ಕಲಬುರಗಿ ಮೀಸಲು ಲೋಕಸಭೆ ಕ್ಷೇತ್ರ- ಕಣದಲ್ಲಿದ್ದ 14 ಅಭ್ಯರ್ಥಿಗಳು ಪಡೆದ ಮತಗಳು
1) ರಾಧಾಕೃಷ್ಣ ದೊಡ್ಮನಿ- ಕಾಂಗ್ರೆಸ್ ಪಕ್ಷ- 6, 52, 321 (ಗೆಲುವು, ಅಂತರ- 27, 205)
2) ಡಾ. ಉಮೇಶ ಜಾಧವ- ಬಿಜೆಪಿ ಪಕ್ಷ- 6, 25, 116 (ಸೋಲು)
3) ಹುಚ್ಚೇಶ್ವರ ವಠಾರ- ಬಿಎಸ್ಪಿ- 7888
4) ಸುಂದರ- ಪಕ್ಷೇತರ- 3677
5) ಜ್ಯೋತಿ ರಮೇಶ ಚವ್ಹಾಣ್- ಪಕ್ಷೇತರ- 2805
6) ಶರಣಪ್ಪ (ಪಿಂಟು)- ಪಕ್ಷೇತರ- 1884
7) ತಾರಾಬಾಯಿ ಭೋವಿ- ಪಕ್ಷೇತರ- 1550
8) ರಮೇಶ ಭೀಮಸಿಂಗ್ ಚವ್ಹಾಣ್- ಪಕ್ಷೇತರ- 1334
9) ಆನಂದ ಸಿನ್ನೂರ್- ಪಕ್ಷೇತರ- 1290
10) ನಾಗೇಂದ್ರ ರಾವ್- ಉತ್ತಮ ಪ್ರಜಾಕೀಯ ಪಾರ್ಟಿ- 1226
11) ಎಸ್. ಎಂ. ಶರ್ಮಾ- ಎಸ್ಯೂಸಿಐ- 1144
12) ರಾಜಕುಮಾರ್- ಭಾರತೀಯ ಬಹುಜನ ಕ್ರಾಂತಿ ದಳ- 709
13) ವಿಜಯ ಜಾಧವ- ಕರ್ನಾಟಕ ರಾಷ್ಟ್ರ ಸಮೀತಿ- 560
14) ವಿ ವಿಜಯಕುಮಾರ್ ಚಿಂಚನ್ಸೂರ್- ಪ್ರಹಾರ ಜನಶಕ್ತಿ ಪಾರ್ಟಿ- 554
ನೋಟಾ ಮತಗಳು- 8, 429
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.