
ಶಿವಮೊಗ್ಗ (ಆ.20): ಜಿಲ್ಲೆಯಲ್ಲಿ ಮಳೆ ಕುಂಠಿತವಾಗಿದೆ. ಆಗಸ್ವ್ ತಿಂಗಳಲ್ಲೂ ಶೇ.82 ಮಳೆ ಕೊರತೆ ಆಗಿದೆ. ಜಿಲ್ಲೆಯಲ್ಲಿ ಬರಗಾಲದ ಛಾಯೆ ತಲೆದೋರಿದೆ. ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಇಡೀ ರಾಜ್ಯವನ್ನು ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ವರ್ಷ ಮಳೆಗಾಲ ವಾಡಿಕೆಗಿಂತ ಕಡಿಮೆಯಾಗಿದೆ. ಒಟ್ಟಾರೆ ತೆಗೆದುಕೊಂಡರೆ ಜಿಲ್ಲೆಯಲ್ಲಿ ಈವರೆಗೆ ಶೇ.40ಕ್ಕಿಂತ ಹೆಚ್ಚು ಕಡಿಮೆ ಮಳೆಯಾಗಿದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಎಲ್ಲ ಬೆಳೆಗಳ ಬಿತ್ತನೆ ಕಡಿಮೆ ಆಗಿದೆ.
ಭತ್ತದ ನಾಟಿ ಇನ್ನೂ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಮೆಕ್ಕೆಜೋಳ ಕೂಡ ಬಿತ್ತನೆಯಲ್ಲೂ 7 ಸಾವಿರ ಹೆಕ್ಟೇರ್ ಕಡಿಮೆಯಾಗಿದೆ ಎಂದರು. ಮಳೆಗಾಲ ಕಡಿಮೆ ಆಗಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆ ಉಂಟಾಗಿವೆ. ಇದರ ನಡುವೆ ಬೆಳೆವಿಮೆ ಕೂಡ ಸರಿಯಾಗಿ ಆಗಿಲ್ಲ. 50 ಸಾವಿರ ಹೆಕ್ಟೇರ್ಗಳಲ್ಲಿ ಭತ್ತ ಬಿತ್ತಿದ್ದರೂ ಕೇವಲ 7250 ಎಕರೆಯಲ್ಲಿ ಮಾತ್ರ 13 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಉಳಿದವರು ಬೆಳೆವಿಮೆ ಮಾಡಿಸಲೇ ಇಲ್ಲ. ಬೆಳೆವಿಮೆ ಮಾಡಿಸದೇ ಪರಿಹಾರವೂ ಸಿಗುವುದಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ರಾಜಕಾರಣದಲ್ಲಿ ಹೊಸ ಸಂಸ್ಕೃತಿ, ಸಂಪ್ರದಾಯ ಬೆಳೆಯಬೇಕು: ಕಾಗೋಡು ತಿಮ್ಮಪ್ಪ
ಮಧ್ಯಂತರ ಬೆಳೆವಿಮೆ: ಈ ಹಿನ್ನೆಲೆ ಜಿಲ್ಲಾಧಿಕಾರಿ ಅವರು ತಕ್ಷಣವೇ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದು ಮಧ್ಯಂತರ ಬೆಳೆವಿಮೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಸಮಸ್ಯೆಯಂತೂ ಗಂಭೀರವಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ರೈತರ ಸಂಕಷ್ಟಗಳು ಅವರಿಗೆ ಅರ್ಥವಾಗುತ್ತಿಲ್ಲ ಎಂದರು.
ಶಾಸಕ ಜ್ಞಾನೇಂದ್ರ ಮಾತನಾಡಿ, ಅಡಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಕೆಲವರು ಅಡಕೆ ಬೆಲೆ ಕುಸಿಯುತ್ತಿದೆ, ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಆತಂಕ ಬೇಡ. ರಾಜ್ಯ ಸರ್ಕಾರ ಕೂಡ ಅಡಕೆ ಬೆಳೆಗಾರರ ನೆರವಿಗೆ ಬರಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ 10 ಕೋಟಿ ನಿಧಿಯನ್ನು ಇಟ್ಟಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಹಣವನ್ನು ವಾಪಸ್ ತೆಗೆದುಕೊಂಡಿದೆ. ಆದ್ದರಿಂದ ಆ ಹಣವನ್ನು ಮತ್ತೆ ಸಂಶೋಧನೆಗಾಗಿ ನೀಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರುದ್ರೇಗೌಡ, ಟಿ.ಡಿ. ಮೇಘರಾಜ್, ಗಿರೀಶ್ ಪಟೇಲ್, ಸಂತೋಷ್ ಬಳ್ಳೇಕೆರೆ, ಶಿವರಾಜ್, ಕೆ.ವಿ.ಅಣ್ಣಪ್ಪ ಮುಂತಾದವರು ಇದ್ದರು.
2004-2014ರವರೆಗೆ 1 ಕ್ವಿಂಟಲ್ ಅಡಕೆಗೆ 15000 ಇತ್ತು. ನಮ್ಮ ಮನವಿ ಮೇರೆಗೆ ಕೇಂದ್ರ ಸರ್ಕಾರ 2020- 2022ರ ನಂತರ 35,000ಗೆ ಕನಿಷ್ಠ ಆಮದು ದರ ನಿಗದಿ ಮಾಡಿದೆ. 26000 ಟನ್ ಹಸಿ ಅಡಕೆ ಆಮದಾಗಿದೆ. ಇದು ನಮ್ಮ ಪ್ರದೇಶದಲ್ಲಿ ಬೆಳೆಯುವ ಪ್ರಮಾಣಕ್ಕಿಂತ ಕೇವಲ ಶೇ.2ರಷ್ಟುಇದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅಡಕೆ ಬೆಳೆಗೆ ಸಂಬಂಧಿಸಿದಂತೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಭೂತಾನ್ನಿಂದ ಅಡಕೆ ಬರುತ್ತಿದೆ. ಅದರಿಂದ ಅಡಕೆ ಬೆಳೆಗಾರರಿಗೆ ತೊಂದರೆ ಆಗುತ್ತಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಅಂತರ ರಾಷ್ಟ್ರೀಯ ಒಪ್ಪಂದದ ಪ್ರಕಾರ ಯಾವುದೇ ಬೆಳೆಯನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ ಆಗುತ್ತದೆ. ಆದರೂ, ಕೇಂದ್ರ ಸರ್ಕಾರ ಭೂತಾನ್ನಿಂದ ಹಸಿ ಅಡಕೆಯನ್ನು ಮಾತ್ರ ಖರೀದಿಸಲು ಒಪ್ಪಿದೆ. ಅದೂ ಹಡಗಿನ ಮೂಲಕ ಮಾತ್ರ. ಭೂತಾನ್ನಿಂದ ಭಾರತಕ್ಕೆ ಅಡಕೆ ಬರುವುದು ಕೂಡ ಕಷ್ಟವಾಗುತ್ತದೆ ಎಂದರು.
ಬೆಂ-ಮೈ ಎಕ್ಸ್ಪ್ರೆಸ್ ಹೈವೇ ನಿರ್ಮಾಣಕ್ಕೆ ಭೂಸ್ವಾಧೀನ: ಪರಿಹಾರ ನೀಡದಿದ್ದರೆ ನಮ್ ಭೂಮಿ ನಮ್ಗೇ
ಯಾರೂ ಬಿಜೆಪಿ ಬಿಡುತ್ತಿಲ್ಲ. ಈ ಕುರಿತು ಕಾಂಗ್ರೆಸ್ ಹುಯಿಲೆಬ್ಬಿಸಿದೆ ಅಷ್ಟೇ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅವರ ಶಾಸಕರೇ ಕೋಪಗೊಂಡಿದ್ದಾರೆ. ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಜನರ ಮನಸ್ಸು ಡೈವರ್ಚ್ ಮಾಡಲು ಅವರೇ ಮಾಡಿದ ಹುನ್ನಾರವಿದು ಈ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭವಿಷ್ಯ ನುಡಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಹೊರೆಯಾಗುತ್ತಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಕೂಡ ಹಣ ಇಲ್ಲದಂತಾಗಿದೆ. ಅದರಲ್ಲೂ ವಿದ್ಯುತ್ ದರವನ್ನು ಏರಿಸಲಾಗಿದೆ. ಇಂಧನ ಸಚಿವರು ಸುಮ್ಮನೆ ಕುಳಿತಿದ್ದಾರೆ. ಲೋಡ್ ಶೆಡ್ಡಿಂಗ್ ಬೇರೆ ಇದೆ. ಇದೆಲ್ಲವೂ ಸರ್ಕಾರದ ಉಚಿತ ಯೋಜನೆಯಿಂದ ಆಗಿರುವ ತೊಂದರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.