ಜಾತಿಗೊಂದು ಜಯಂತಿ ಮಾಡಿ ತಪ್ಪು ಗ್ರಹಿಕೆ ಬೇರೂರುತ್ತಿದೆ: ಶಾಸಕ ಜಿ.ಟಿ.ದೇವೇಗೌಡ

By Kannadaprabha NewsFirst Published Jun 30, 2023, 11:21 PM IST
Highlights

ಇಪ್ಪತ್ತೊಂದನೇ ಶತಮಾನದಲ್ಲಿಯೂ ಜಾತಿಗೊಂದು ಜಯಂತಿ ಮಾಡುತ್ತಿರುವುದರಿಂದ ಬಸವಣ್ಣ ವೀರಶೈವರಿಗೆ, ಕನಕದಾಸ ಕುರುಬರಿಗೆ, ಅಂಬೇಡ್ಕರ್‌ ದಲಿತರಿಗೆ ಎಂಬ ತಪ್ಪು ಗ್ರಹಿಕೆ ಸಮಾಜದಲ್ಲಿ ಗಟ್ಟಿಕೊಳ್ಳುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು (ಜೂ.30): ಇಪ್ಪತ್ತೊಂದನೇ ಶತಮಾನದಲ್ಲಿಯೂ ಜಾತಿಗೊಂದು ಜಯಂತಿ ಮಾಡುತ್ತಿರುವುದರಿಂದ ಬಸವಣ್ಣ ವೀರಶೈವರಿಗೆ, ಕನಕದಾಸ ಕುರುಬರಿಗೆ, ಅಂಬೇಡ್ಕರ್‌ ದಲಿತರಿಗೆ ಎಂಬ ತಪ್ಪು ಗ್ರಹಿಕೆ ಸಮಾಜದಲ್ಲಿ ಗಟ್ಟಿಕೊಳ್ಳುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ನಗರದ ರಾಜೇಂದ್ರ ಭವನದಲ್ಲಿ ಮೈಸೂರು ಶರಣ ಮಂಡಳಿ ಗುರುವಾರ ಆಯೋಜಿಸಿದ್ದ ಬಸವ ಜಯಂತಿ ಮತ್ತು ಬಸವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಬಸವಣ್ಣನವರು ತಾವು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲರಿಗೂ ಸ್ಥಾನ ನೀಡಿ ಸಮಾನತೆಯ ಸಂದೇಶ ಸಾರಿದರು. 

ಅಂತೆಯೇ ಈಗಲೂ ಜಾತಿಗೊಂದು ಜಯಂತಿ ಆಚರಿಸಲಾಗುತ್ತಿದೆ. ಆದರೆ ಇದರಿಂದಾಗಿ ಮಹಾತ್ಮರೆಲ್ಲರೂ ಒಂದೊಂದು ಜಾತಿಗೆ ಸೀಮಿತ ಎಂಬ ಭಾವನೆ ಆಳವಾಗಿ ಬೇರೂರುತ್ತಿದೆ ಎಂದು ಕಳವಳಪಟ್ಟರು. ಹನ್ನೆರಡನೇ ಶತಮಾನದಲ್ಲೇ ಮಹಿಳೆಯರಿಗೆ ಉನ್ನತ ಸ್ಥಾನ ದೊರೆಯಬೇಕು ಎಂದು ಬಸವಣ್ಣನವರು ಧ್ವನಿ ಎತ್ತಿದ್ದರು. ದುರಂತವೆಂದರೆ ಅವರ ವಿಚಾರಗಳನ್ನು ಗುರುತಿಸುವಲ್ಲಿ ಹಾಗೂ ಅರ್ಥ ಮಾಡಿಕೊಳ್ಳುವಲ್ಲಿ ಇಂದಿಗೂ ಸಾಧ್ಯವಾಗಿಲ್ಲ. ದೇಶದ ಕಟ್ಟಕಡೆಯ ವ್ಯಕ್ತಿಯ ಉನ್ನತಿಗಾಗಿ ದುಡಿಯುತ್ತಿದ್ದ ಎಲ್ಲಾ ವರ್ಗದ ಸಾಧಕರನ್ನು ಅನುಭವ ಮಂಟಪ ಎಂಬ ಒಂದೇ ವೇದಿಕೆಯಡಿ ತರುವಲ್ಲಿ ಬಸವಣ್ಣ ಯಶಸ್ವಿಯಾಗಿದ್ದಾಗಿ ಅವರು ಹೇಳಿದರು. 

ರಾಜ್ಯದಲ್ಲಿ ಸಿದ್ದು, ಶಿವಕುಮಾರ್‌ ಮೈತ್ರಿ ಸರ್ಕಾರ: ಅಶೋಕ್‌ ವ್ಯಂಗ್ಯ

ಬಸವ ರತ್ನ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತ ಕೆ. ಶಿವಕುಮಾರ್‌ ಮಾತನಾಡಿ, ನಾನು ಕೆಜಿಎಫ್‌ನಲ್ಲಿ ವಿದ್ಯಾರ್ಥಿ ಆದಾಗಿನಿಂದಲೂ ಎಲ್ಲಾ ಹೋರಾಟಗಳನ್ನು ಹತ್ತಿರದಿಂದ ನೋಡಿದ್ದೇನೆ. ದಲಿತಪರ, ಬಂಡಾಯ, ಕನ್ನಡಪರ ಹೋರಾಟ ಹಾಗೂ ವಚನ ಚಳವಳಿ ಎಂದರೆ ನನಗೆ ಹೆಚ್ಚು ಆಸಕ್ತಿ. ಬಸವಣ್ಣನ ಹೆಸರು ಕೇಳಿದರೆ ಮೈ ರೋಮಾಂಚನ ಆಗುತ್ತದೆ. ಪತ್ರಕರ್ತರ ಕೆಲಸ ಸಾಧಕರ ಬಗ್ಗೆ ಜಗತ್ತಿಗೆ ತಿಳಿಸುವುದು ಅಷ್ಟೇ. ಆದರೆ, ನಂಜಪ್ಪ ಅವರಂತ ಹಿರಿಯರ ಜೊತೆ ಸನ್ಮಾನಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ವಾಟಾಳ್‌ ನಾಗರಾಜು, ಮೂಗೂರು ನಂಜುಂಡಸ್ವಾಮಿ ಅವರಂತ ಅನೇಕ ಹೋರಾಟಗಾರರು ಕನ್ನಡ ಭಾಷೆಗಾಗಿ ಸಾಕಷ್ಟುಹೋರಾಟ ಮಾಡಿದ್ದಾರೆ. 

ಇಂದು ಚಳವಳಿಯನ್ನು ಜನರು ಅಸಹಾಯಕ ಸ್ಥಿತಿಯಲ್ಲಿ ನೋಡುವುದು ಹೆಚ್ಚಾಗಿದೆ. ಆದರೆ, ಗಡಿಭಾಗದಲ್ಲಿ ಕನ್ನಡಿಗರ ಪರಿಸ್ಥಿತಿ ಹೇಗಿದೆ? ಎಂಬುದು ಅನೇಕರಿಗೆ ತಿಳಿದಿಲ್ಲ. ತಮಿಳುನಾಡಿನಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಅಲ್ಲಿನ ತಾಳವಾಡಿಯಲ್ಲಿ ಹೆಚ್ಚಿನ ಜನರಿದ್ದು, ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸದೆ ತಮಿಳು ಸರ್ಕಾರ ಮಕ್ಕಳ ಭವಿಷ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದರು. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರದ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕನ್ನಡಿಗರ ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಬಸವಣ್ಣ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದರೂ ಸಮಾಜದ ಅಸಮಾನತೆ ಅಳಿಸಲು ಶ್ರಮಿಸಿದರು. ಆದರೆ ಇಂದಿಗೂ ನಮ್ಮಲಿ ಜಾತಿ ಮನಸ್ಥಿತಿ ಕಡಿಮೆ ಆಗಿಲ್ಲ. ಇವ ನಮ್ಮವ, ಇವ ನಮ್ಮವ ಎಂದು ಹೇಳುತ್ತಲೇ ಆತ ಯಾವ ಜಾತಿ ಎಂದು ಕೇಳುವ ಪರಿಸ್ಥಿತಿ ಇದೆ ಎಂದರು. ಬೆರಳೆಣಿಕೆ ಮಂದಿ ಮಾತ್ರ ಬಸವಣ್ಣನವರ ತತ್ತ್ವ ಮೈಗೂಡಿಸಿಕೊಂಡಿದ್ದಾರೆ. ಪ್ರಪಂಚಕ್ಕೆ ಬಸವಣ್ಣನ ತತ್ತ$್ವ, ಕಾಣಿಕೆ ಅಮೋಘ. ಜಗಜ್ಯೋತಿ ಬಸವೇಶ್ವರರು, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಅವರಂತ ಕಾಯಕ ಜೀವಿಗಳು ನಮಗೆ ಆದರ್ಶವಾಗಬೇಕು ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ

ಬಸವ ರತ್ನ ಪ್ರಶಸ್ತಿಪಡೆದ ಎಸ್‌. ವೆಂಕಟೇಶ್‌ ಮಾತನಾಡಿ, ನಾವು ಸಮಾಜದಲ್ಲಿ ಯಾರ ಜೋಬಿಗೂ ಕೈಹಾಕದೆ ಬದುಕು ಕಟ್ಟಿಕೊಳ್ಳಬೇಕು. ಸಮಾಜದಲ್ಲಿ ಮಾತನಾಡುವವ ಸಂಖ್ಯೆ ಹೆಚ್ಚಿದೆ, ಆದರೆ, ಕೆಲಸ ಮಾಡುವವರ ಸಂಖ್ಯೆ ಕಡಿಮೆ. ಇಂತಹ ಸನ್ಮಾಗಳು , ಪುರಸ್ಕಾರಗಳು ಅನ್ನದಾತರಿಗೆ ಹೆಚ್ಚು ಗೌರವ ಸಲ್ಲಬೇಕು ಎಂದರು. ಪ್ರಗತಿಪರ ರೈತ ಕೆ.ಎಚ್‌. ನಂಜಪ್ಪ, ಎಪಿಎನ್‌ ಪ್ರಾಪರ್ಟೀಸ್‌ನ ಎ.ಪಿ. ನಾಗೇಶ್‌, ಮೈಸೂರು ಟಾರ್ಪಾಲಿನ್ಸ್‌ನ ವೈ. ವೀರಭದ್ರ ಅವರಿಗೂ ಬಸವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವ ಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಗೆರೆ ಗೋಪಾಲ್‌, ಶರಣ ಮಂಡಳಿ ಗೌರವಾಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಕನ್ನಡ ಕಲಾಕೂಟದ ಎಂ. ಚಂದ್ರಶೇಖರ್‌, ಬಿ ಮಹದೇವಸ್ವಾಮಿ, ಬಸವಣ್ಣ ಮೊದಲಾದವರು ಇದ್ದರು.

click me!