ಯಬ್ಬೋ, ಯಾರು ಮಾಡುತ್ತಾರೆ, ಸೋಮಾರಿತನಕ್ಕೆ ಇಲ್ಲಿವೆ ಮದ್ದು...

By Suvarna NewsFirst Published Apr 20, 2020, 7:43 PM IST
Highlights

ಕೆಲವು ಮನೋವಿಜ್ಞಾನ ಅಧ್ಯಯನಗಳು ಈ ಸೋಮಾರಿತನ ಓಡಿಸಲು ಏನು ಮಾಡಬಹುದೆಂದು ಟಿಪ್ಸ್ ನೀಡಿವೆ. ಅವೇನೆಂದು ನೋಡೋಣ.

ಸೋಮಾರಿಗಳ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಗುಣಗಳೆಲ್ಲವೂ ನಿಮ್ಮಲ್ಲಿದ್ದು, ಆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲೂ ಸೋಮಾರಿತನ ಬಂದಿದ್ದರೆ ನೀವು ಸ್ವಲ್ಪ ಎಚ್ಚೆತ್ತುಕೊಳ್ಳಲೇಬೇಕು. ಏಕೆಂದರೆ ಉಳಿದೆಲ್ಲ ಚಟಗಳಂತೆಯೇ ಸೋಮಾರಿತನವೂ ಚಟವೇ. ಅದನ್ನು ಓಡಿಸಲು ಸ್ವನಿಯಂತ್ರಣ ಹಾಗೂ ಸ್ವಲ್ಪ ಮನಸ್ಸು ಮಾಡಲಿಲ್ಲವಾದರೆ, ವೇಸ್ಟ್ ಬಾಡಿ ಎಂಬ ಸಂಘಕ್ಕೆ ನಿಮ್ಮ ಸುತ್ತಲಿನವರೇ ತಳ್ಳುತ್ತಾರೆ. ಹೌದು, ಉದಾಸೀನತೆಯನ್ನು, ಸೋಮಾರಿತನವನ್ನು ಓಡಿಸಲು ಏನು ಮಾಡಬಹುದು?   

ಟು ಡು ಲಿಸ್ಟ್ ಮಾಡಿ
ಸಾಮಾನ್ಯವಾಗಿ ಆಗಬೇಕಾದ ಕೆಲಸಗಳು ಮನಸ್ಸಿನಲ್ಲಿ ಪದೇ ಪದೆ ಎದುರಿಗೆ ಬಂದು ಕೊರೆಯುತ್ತಿರುತ್ತವೆ. ಇದನ್ನೇ ಝೈಗಾರ್ನಿಕ್ ಎಫೆಕ್ಟ್ ಎನ್ನುವುದು. ಇದನ್ನು ತಣಿಸಲು ಮೊದಲು ಆಗಬೇಕಾದ ಕೆಲಸಗಳ ಪಟ್ಟಿ ಮಾಡಬೇಕು. ಹೀಗೆ ಪಟ್ಟಿ ಮಾಡುತ್ತ ಆಯಾ ದಿನ ಆಗಬೇಕಾದ ಕೆಲಸಗಳು, ವಾರದಲ್ಲಿ ಆಘಬೇಕಾದವು, ತಿಂಗಳಲ್ಲಿ ಆಗಬೇಕಾದವು ಎಂದು ಪ್ರತ್ಯೇಕ ಪಟ್ಟಿಗಳನ್ನು ಮಾಡಿಕೊಳ್ಳಿ. ಅಷ್ಟು ಸಮಯದಲ್ಲಿ ಇಂಥ ಕೆಲಸ ಮುಗಿಸಬಲ್ಲೆ ಎನಿಸುವಂಥದ್ದನ್ನು ಮಾತ್ರ ಪಟ್ಟಿಯಲ್ಲಿ ಸೇರಿಸಿ. ಇದರಿಂದ ಮನಸ್ಸಿನ ಗೋಜಲು ಬಹಳಷ್ಟು ಕಡಿಮೆಯಾಗುತ್ತದೆ. ಜೊತೆಗೆ ಒಂದೊಂದಾಗಿ ಕೆಲಸ ಮುಗಿಸಲು ಪ್ರೇರಣೆ ಕೂಡಾ ದೊರೆಯುತ್ತದೆ. ಆ ಪಟ್ಟಿಯಲ್ಲಿ ಕೆಲಸ ಮುಗಿದಂತೆಲ್ಲ ಟಿಕ್ ಮಾರ್ಕ್ ಮಾಡುವಾಗ ಸಿಗುವ ಸುಖವಿದೆಯಲ್ಲ, ಅದನ್ನು ಅನುಭವಿಸಿಯೇ ತಿಳಿಯಬೇಕು. 

ಇಂದ್ರಾಸನ ಕೋರಲು ಹೋಗಿ ನಿದ್ರಾಸನ ವರ ಬೇಡಿದ ಕುಂಭಕರ್ಣ!

ಸಣ್ಣ ಸಣ್ಣದಾಗಿ ವಿಂಗಡಿಸಿ
ದೊಡ್ಡ ಕೆಲಸಗಳು ಯಾರಿಗಾದರೂ ಹೆದರಿಸುತ್ತವೆ. ಆಗ ಅವನ್ನು ಆರಂಭಿಸಲೇ ಮನಸ್ಸಾಗುವುದಿಲ್ಲ. ಹಾಗಾಗಿ ದೊಡ್ಡ ಕೆಲಸಗಳನ್ನು ಸಣ್ಣ ಸಣ್ಣವಾಗಿ ವಿಂಗಡಿಸಿಕೊಳ್ಳಿ. ದೊಡ್ಡದೊಂದು ಪ್ರಾಜೆಕ್ಟ್ ಮುಗಿಸಬೇಕು ಎಂದು ಭಯ ಬೀಳುವುದಕ್ಕಿಂತ ಸಧ್ಯದ ಮಟ್ಟಿಗೆ ನಾನು ಇಂತಿಂಥವರಿಗೆ ಇ ಮೇಲ್ ಮಾಡಬೇಕು, ಇಂತಿಂಥವರ ಬಳಿ ಈ ವಿಷಯಗಳನ್ನು ಚರ್ಚಿಸಬೇಕು, ಅದಾದ ನಂತರವಷ್ಟೇ ಡಿಸೈನಿಂಗ್ ಇತ್ಯಾದಿ ಹೀಗೆ ವಿಂಗಡಿಸಿಕೊಂಡರೆ ಇದು ಅಷ್ಟಾಗಿ ಹೆದರಿಸುವುದಿಲ್ಲ. ಒಂದೊಂದಾಗಿ ಕೆಲಸಗಳು ಆಗುತ್ತಾ ಹೋದಂತೆಲ್ಲ ಪ್ರಾಜೆಕ್ಟ್ ಸುಲಭದ್ದಾಗಿ ಕಾಣಿಸತೊಡಗುತ್ತದೆ. 

ನಿಮ್ಮ ಮೇಲೆ ಸ್ವಲ್ಪ ಕರುಣೆ ತೋರಿ
ಸೋಮಾರಿತನ ಓಡಿಸಲು ನಿಮ್ಮ ಬಗ್ಗೆ ನೀವು ಕರುಣೆಯಿಲ್ಲದವರಂತೆ ಸ್ಟ್ರಿಕ್ಟ್ ಆಗಬೇಕು ಎಂದು ನೀವಂದುಕೊಂಡಿದ್ದರೆ ಅದು ತಪ್ಪು ಎನ್ನುತ್ತದೆ ವಿಜ್ಞಾನ. ನಿಮ್ಮ ಬಗ್ಗೆ ನೀವು ಪ್ರೀತಿ ಹೊಂದಿದ್ದರೆ, ಮನಸ್ಸಿಗೆ ಪ್ರೀತಿಯಿಂದಲೇ ಹೇಳಿ ಕೆಲಸ ಮಾಡಿಸಬಹುದುಯ ಯಾರಿಗೇ ಆಗಲಿ, ಬೈದು ಹೇಳುವುದಕ್ಕಿಂತ ಪ್ರೀತಿಯಿಂದ ಒಲಿಸಿದಾಗ ಮಾತ್ರ ಅವರು ಆ ಕೆಲಸವನ್ನು ಖುಷಿಯಿಂದ ಮಾಡುತ್ತಾರೆ ಎಂಬುದು ತಿಳಿದಿರಲಿ. ಇದಕ್ಕೆ ನಮಗೆ ನಾವು ಕೊಟ್ಟುಕೊಳ್ಳುವ ಕಮಾಂಡ್‌ಗಳು ಕೂಡಾ ಹೊರತಲ್ಲ. 

ಮನಸ್ಸಿದ್ದರೆ ಮಾರ್ಗ
ಪರ್ಫೆಕ್ಷನಿಸಂ ಹಾಗೂ ಸೋಲುವ ಭಯ ಸಾಮಾನ್ಯವಾಗಿ ಉದಾಸೀನತೆಗೆ ಕಾರಣವಾಗಿರುತ್ತವೆ. ಇದನ್ನು ನಿಲ್ಲಿಸಲು ನೀವು ನಿಮ್ಮ ಮನಸ್ಸಿಗೆ ಹೇಳಿಕೊಳ್ಳುವ ಮಾತುಗಳಲ್ಲಿ- ಇದು ಹೀಗೇ ಇರಬೇಕು, ಹಾಗೇ ಇರಬೇಕು ಎನ್ನುವುದನ್ನು ಬಿಟ್ಟುಬಿಡಿ. ಬದಲಿಗೆ ಇದು ಪರ್ಫೆಕ್ಟ್ ಆಗದಿದ್ದರೂ ಸರಿ, ಪ್ರಯತ್ನದಲ್ಲಿ ಮೋಸವಿಲ್ಲದಂತೆ ಹಾಕುತ್ತೇನೆ ಎಂದುಕೊಳ್ಳಿ. ಸೋತರೂ ಪರವಾಗಿಲ್ಲ, ಅನುಭವ ಏನಾದರೂ ಕೊಡುತ್ತದೆ ಎಂದು ಹೇಳಿಕೊಳ್ಳಿ. ಕೆಲಸಗಳು ತನ್ನಿಂತಾನೇ ಆಗತೊಡಗುತ್ತವೆ. 

ಜಾತ್ರೆ, ಹಬ್ಬ, ಯಕ್ಷಗಾನಗಳಲ್ಲ ಸದ್ದಿಲ್ಲ... ಆನ್ ಲೈನ್ ಜಾತ್ರೆ ಇದೆಯಲ ...

ಸಮಯವನ್ನು ಕಡೆಗಣಿಸಬೇಡಿ
ಸೋಮಾರಿಗಳು ಸಾಮಾನ್ಯವಾಗಿ ಏನು ಮಾಡುತ್ತಾರೆಂದರೆ 10 ನಿಮಿಷ ಯಾವುದಾದರೂ ಹಾಡುಗಳನ್ನು ಕೇಳುತ್ತೇನೆ ಎಂದುಕೊಳ್ಳುತ್ತಾರೆ, ಅದು ಅರ್ಧ ಗಂಟೆ, ಎರಡು ಗಂಟೆ ಎಂದು ಮುಂದೆ ಹೋಗುತ್ತಲೇ ಇರುತ್ತದೆ. ಒಟ್ಟಿನಲ್ಲಿ ಮಾಡಬೇಕಾದ ಕೆಲಸದಿಂದ ದೂರ ಉಳಿಯಲು ಅವರ ಮಂಗನಂಥ ಮನಸ್ಸು ನೆಪಗಳನ್ನು ಹುಡುಕುತ್ತಲೇ ಇರುತ್ತದೆ. ಹಾಗಾಗಿ, ಇಂತಿಷ್ಟು ಕೆಲಸವಾದ ಮೇಲೆ 15 ನಿಮಿಷ ಬ್ರೇಕ್ ತೆಗೆದುಕೊಳ್ಳುತ್ತೇನೆ, ಮತ್ತೆ ಇಷ್ಟು ಕೆಲಸವಾದ ಮೇಲೆ ಮತ್ತೆ ಬ್ರೇಕ್ ಹೀಗೆ ಮನಸ್ಸಿಗೆ ಬುದ್ಧಿ ಹೇಳಿ. ಒಂದು ವೇಳೆ ಯಾವುದಾದರೂ ಕೆಲಸದ ಡೆಡ್‌ಲೈನ್ 25ಕ್ಕೆ ಇದ್ದರೆ ನೀವು ಮನಸ್ಸಿನಲ್ಲಿ ಅದನ್ನು 23ಕ್ಕೆ ಎಂದುಕೊಳ್ಳಿ. ಆಗ ಕೆಲಸ ಬೇಗ ಮುಗಿಯುತ್ತದೆ. ಉಳಿದ ಎರಡು ದಿನ ನಿಮಗೆ ಸಿಗುತ್ತದೆ. ಆಗ ಯಾವುದೇ ಟೆನ್ಷನ್ ಇಲ್ಲದೆ ಮನರಂಜನೆ ಪಡೆಯಬಹುದು. 

click me!