Yoga For Concentration: ಏಕಾಗ್ರತೆ ಹೆಚ್ಚಲು ಇಂದಿನಿಂದಲೇ ಶುರು ಮಾಡಿ ಈ ಆಸನ

By Suvarna NewsFirst Published Jan 12, 2022, 4:13 PM IST
Highlights

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯೋಗಾಭ್ಯಾಸ ಮಾಡಲಾಗ್ತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಎಲ್ಲ ಪ್ರಾಚೀನ ಯೋಗಿಗಳು ಯೋಗದಲ್ಲಿ ದೈವಿಕ ಶಕ್ತಿ ಅಡಗಿದೆ ಎಂದು ನಂಬಿದ್ದರು. ದಿನದಲ್ಲಿ 20 ನಿಮಿಷಗಳ ಕಾಲ ಯೋಗ ಅಭ್ಯಾಸ ಮಾಡಿದ ಜನರ ಮೆದುಳಿನಲ್ಲಿ ಅಚ್ಚರಿಯ ಬೆಳವಣಿಗೆಯಾಗಿತ್ತು ಎಂದು ಸಂಶೋಧಕರೇ ಹೇಳಿದ್ದಾರೆ.  

ಪರೀಕ್ಷೆ (Exam)ಗಳು ಹತ್ತಿರ ಬರ್ತಿದ್ದಂತೆ ಮಕ್ಕಳ (Children)ಜೊತೆ ಪಾಲಕರ ಟೆನ್ಷನ್ (Tension) ಜಾಸ್ತಿಯಾಗುತ್ತದೆ. ಓದಿದ್ದು ನೆನಪಿರುವುದಿಲ್ಲ, ಒಂದೇ ವಿಷ್ಯವನ್ನು ತುಂಬಾ ಸಮಯ ಏಕಾಗ್ರತೆ (Concentration)ಯಿಂದ ಓದಲು ಸಾಧ್ಯವಿಲ್ಲ.. ಹೀಗೆ ಮಕ್ಕಳ ಕಂಪ್ಲೆಂಟ್ ಜಾಸ್ತಿಯಾಗುತ್ತದೆ. ಮಕ್ಕಳು ಮಾತ್ರವಲ್ಲ ದೀರ್ಘಕಾಲದವರೆಗೆ ಯಾವುದೇ ಕೆಲಸದ ಮೇಲೆ ಗಮನ ಹರಿಸಲು ದೊಡ್ಡವರಿಗೂ ಕಷ್ಟವಾಗುತ್ತಿದ್ದರೆ, ಕೆಲಸದ ಸಮಯದಲ್ಲಿ ಆಗಾಗ್ಗೆ ವಿಚಲಿತರಾಗುತ್ತಿದ್ದರೆ ನಿಮ್ಮಲ್ಲಿ ಏಕಾಗ್ರತೆಯ ಕೊರತೆಯಿದೆ ಎಂದರ್ಥ.

ದಿನನಿತ್ಯದ ವಿವಿಧ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ನಮಗೆಲ್ಲರಿಗೂ ಏಕಾಗ್ರತೆಯ ಅಗತ್ಯವಿರುತ್ತದೆ. ಏಕಾಗ್ರತೆ ಕಡಿಮೆಯಾದ್ರೆ ಕಾರ್ಯಕ್ಷಮತೆ ಕಳಪೆಯಾಗುತ್ತದೆ. ಮಾನಸಿಕ ಅಥವಾ ದೈಹಿಕ ಆರೋಗ್ಯ ಸಮಸ್ಯೆಗಳು ಕೆಲವೊಮ್ಮೆ ಇದಕ್ಕೆ ಕಾರಣವಾಗುತ್ತವೆ. ಹಾಗಾಗಿ ಇದನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಿ, ಚಿಕಿತ್ಸೆ ಪಡೆಯುವ ಅಗತ್ಯವಿದೆ. ತಜ್ಞರ ಪ್ರಕಾರ, ಯೋಗಾಭ್ಯಾಸ (Yoga)ವು ಇಂತಹ ಸಮಸ್ಯೆಗಳನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ.

ಹಲವಾರು ರೀತಿಯ ಯೋಗಾಭ್ಯಾಸವು ಏಕಾಗ್ರತೆಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಮೆದುಳನ್ನು ಆರೋಗ್ಯಕರವಾಗಿಸಲು ಸಹಕಾರಿಯಾಗುತ್ತದೆ. ಒಂದೆರಡು ದಿನಗಳಲ್ಲಿ ಯಾವುದೇ ಯೋಗದಿಂದ ನಿಮಗೆ ಫಲಿತಾಂಶ ಸಿಗುವುದಿಲ್ಲ. ಯೋಗಾಭ್ಯಾಸವನ್ನು ನಿರಂತರವಾಗಿ ಮಾಡಬೇಕಾಗುತ್ತದೆ. 30ರಿಂದ 40 ದಿನಗಳ ಕಾಲ ನಿರಂತರವಾಗಿ ಯೋಗಾಭ್ಯಾಸ ಮಾಡಿದಲ್ಲಿ ಅದರ ಫಲಿತಾಂಶವನ್ನು ನೀವು ಕಾಣಬಹುದು. ಏಕಾಗ್ರತೆಯ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಪ್ರತಿ ದಿನ ಮಾಡಬಹುದಾದ ಕೆಲವು ಯೋಗಾಭ್ಯಾಸಗಳ ವಿವರ ಇಲ್ಲಿದೆ.

ಏಕಾಗ್ರತೆ ಹೆಚ್ಚಿಸುವ ಯೋಗಗಳು

ನಮಸ್ಕಾರ ಮುದ್ರೆ : ನಮಸ್ಕಾರ ಮುದ್ರೆ, ಗಮನ ಕೇಂದ್ರೀಕರಿಸಲು ನೆರವಾಗುತ್ತದೆ. ಪ್ರತಿ ದಿನ ಇದರ ಅಭ್ಯಾಸ ಮಾಡುವುದು ಒಳ್ಳೆಯದು.  ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಬೆನ್ನುಮೂಳೆಯನ್ನು ನೇರವಾಗಿ ಇರಿಸಬೇಕು. ಕೈಗಳನ್ನು ಜೋಡಿಸಿ,ನಮಸ್ಕಾರ ಮುದ್ರೆಯಲ್ಲಿರಬೇಕು. ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಉಸಿರಾಟದ ಧ್ವನಿಯ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಬೇಕು. ಈ ಯೋಗವನ್ನು ಪ್ರತಿದಿನ 10-15 ನಿಮಿಷಗಳ ಕಾಲ ಅಭ್ಯಾಸ ಮಾಡಬಹುದು. ಮಾನಸಿಕ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ, ಉತ್ತಮ ಏಕಾಗ್ರತೆಗೆ ಇದು ಸಹಾಯಕವಾಗಿದೆ.

Yoga for Health : ಮಾಡಿ ಕುರ್ಚಿ ಭಂಗಿ ಯೋಗ, ಹತ್ತಿರ ಬಾರದು ಈ ರೋಗ

ಪ್ರಾಣಾಯಾಮ ಪ್ರಯೋಜನಕಾರಿ : ಮಾನಸಿಕ ಆರೋಗ್ಯ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಅನೇಕ ರೀತಿಯ ಪ್ರಾಣಾಯಾಮದ ಅಭ್ಯಾಸವು ಪ್ರಯೋಜನಕಾರಿ ಎಂದು ತಜ್ಞರು ಪರಿಗಣಿಸುತ್ತಾರೆ. ಪ್ರಾಣಾಯಾಮ ಮಾಡುವುದ್ರಿಂದ ಆಮ್ಲಜನಕಯುಕ್ತ ರಕ್ತದ ಪರಿಚಲನೆ ಹೆಚ್ಚಾಗುತ್ತದೆ. ಜೊತೆಗೆ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಈ ಯೋಗವನ್ನು ಅಭ್ಯಾಸ ಮಾಡುವುದರಿಂದ ಗಮನವನ್ನು ಕೇಂದ್ರೀಕರಿಸಲು ಮತ್ತು ಎಲ್ಲಾ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಬಹುದು. ಪ್ರಾಣಾಯಾಮದಲ್ಲಿ ಅನೇಕ ವಿಧಾನಗಳಿವೆ. ಇದನ್ನು ತಜ್ಞರ ಸಲಹೆ ಪಡೆದು ಮಾಡುವುದು ಯೋಗ್ಯ. ಪ್ರಾಣಾಯಾಮದಲ್ಲಿ ಉಸಿರಾಟ ಮಹತ್ವ ಪಡೆಯುತ್ತದೆ.ತಪ್ಪು ಭಂಗಿ ಅನಾರೋಗ್ಯಕ್ಕೆ ಕಾರಣವಾಗಬಹುದು.

Yoga As Immunity Booster: ಚಳಿಗಾಲದಲ್ಲಿ ಇಮ್ಯುನಿಟಿ ಹೆಚ್ಚಿಸಲು 5 ಯೋಗ ಭಂಗಿಗಳು!

ಪ್ರತಿ ನಿತ್ಯ ಮಾಡಿ ನಟರಾಜಾಸನ : ಏಕಾಗ್ರತೆ ಹೆಚ್ಚಿಸಲು ನೃತ್ಯ ಭಂಗಿ ಅಥವಾ ನಟರಾಜಾಸನವು ಉತ್ತಮ ಆಯ್ಕೆಯಾಗಿದೆ. ಉತ್ತಮ ಫಲಿತಾಂಶಕ್ಕಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮುದ್ರೆಯನ್ನು ಮಾಡಬೇಕು. ಈ ಯೋಗದ ಅಭ್ಯಾಸವು ಮೆದುಳಿನ ಕಾರ್ಯಗಳನ್ನು ಉತ್ತೇಜಿಸಲು ಮತ್ತು ನರಗಳನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. 

ತಾಡಾಸನ : ತಾಡಾಸನ ಕೂಡ ಏಕಾಗ್ರತೆ ಹೆಚ್ಚಿಸಲು ನೆರವಾಗುತ್ತದೆ. ಇದನ್ನು ದಿನದಲ್ಲಿ ಯಾವಾಗ ಬೇಕಾದರೂ ಮಾಡಬಹುದು. ಆದ್ರೆ ಉಳಿದ ಆಸನಗಳ ಜೊತೆ ನೀವು ಮಾಡುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಊಟದ ಮೂರ್ನಾಲ್ಕು ಗಂಟೆ ನಂತ್ರ ತಾಡಾಸನವನ್ನು ಅಭ್ಯಾಸ ಮಾಡಿ. ಇದನ್ನು ಒಮ್ಮೆಗೆ 10-20 ಸೆಕೆಂಡುಗಳವರೆಗೆ ಅಭ್ಯಾಸ ಮಾಡಬೇಕು. 

ಏಕಾಗ್ರತೆ ಹೆಚ್ಚಿಸಲು ಹೀಗೆ ನೆರವಾಗಲಿದೆ ಯೋಗ
ಯೋಗಾಭ್ಯಾಸದಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ವಿಚಲಿತ ಆಲೋಚನೆಗಳು ದೂರವಾಗುತ್ತವೆ. ಯೋಗವು ನಿಮ್ಮ ಮನಸ್ಸು ಮತ್ತು ಮೆದುಳಿನ ಏರಿಳಿತಗಳನ್ನು ಕಡಿಮೆ ಮಾಡುತ್ತದೆ. ಇದು ಮನಸ್ಸಿನಲ್ಲಿ ನಿರಂತರವಾಗಿ ಅಲೆದಾಡುವ ಮತ್ತು ಅಂಟಿಕೊಂಡಿರುವ ಆಲೋಚನೆಗಳನ್ನು ತೆಗೆದುಹಾಕುತ್ತದೆ. ಉತ್ತಮ ಏಕಾಗ್ರತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.

click me!