Udupi: ಅಯೋಧ್ಯಾ ರಾಮಮಂದಿರ-2024 ಜನವರಿಯಿಂದ ಪ್ರತಿಷ್ಠಾ ಕಾರ್ಯ: ಪೇಜಾವರ ಶ್ರೀ

By Girish GoudarFirst Published Apr 20, 2022, 10:44 AM IST
Highlights

*   ಕರ ಸೇವೆಗೆ ಅವಕಾಶವಿಲ್ಲ ಭಜನೆ ಮಾಡಬಹುದು
*  ಮಂದಿರದ ವೆಚ್ಚ ಹೆಚ್ಚಾಗಬಹುದು
*  2023 ರೊಳಗೆ ಗರ್ಭಗೃಹದಲ್ಲಿ ರಾಮನನ್ನು ಕೂರಿಸುವ ವಿಶ್ವಾಸ

ವರದಿ -ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಏ.20): ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ತೀರ್ಥರು(Vishwa Prasanna Theertha Swamiji) ಅಯೋಧ್ಯೆಯ(Ayodhya) ಪ್ರವಾಸದಲ್ಲಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸಭೆಯಲ್ಲಿ ಪೇಜಾವರ ಸ್ವಾಮೀಜಿ ಭಾಗಿಯಾಗಿದ್ದಾರೆ. ಟ್ರಸ್ಟಿನ ವಿಶ್ವಸ್ತ ರಾಗಿರುವ ಶ್ರೀಗಳು ಮಂಗಳವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ.

ಅದಕ್ಕೂ ಮೊದಲು ತಾತ್ಕಾಲಿಕ ಮಂದಿರದಲ್ಲಿರುವ ರಾಮ‌ಲಲ್ಲಾನ ದರ್ಶನ‌ ಪಡೆದ ಸ್ವಾಮೀಜಿ, ದೇವರಿಗೆ ಚಾಮರಸೇವೆ, ಮಂಗಳಾರತಿ‌ ಬೆಳಗಿ ದೇಶದ ಕ್ಷೇಮ ಸುಭಿಕ್ಷೆ ಶಾಂತಿಗೆ ಪ್ರಾರ್ಥಿಸಿದರು. ಬಳಿಕ ಮಂದಿರ ನಿರ್ಮಾಣ ಸ್ಥಳಕ್ಕೆ ತೆರಳಿ ಕಾರ್ಮಿಕರೊಂದಿಗೆ ಉಭಯಕುಶಲೋಪರಿ ನಡೆಸಿ ಉತ್ಸಾಹ ತುಂಬಿದ್ದಾರೆ. ತಾವೇ ಸ್ವತಹ ಕೆಲಕಾಲ ಕರಸೇವೆ ನಡೆಸಿದರು‌ನಿರ್ಮಾಣ ಕಾಮಗಾರಿ ನಿವೇಶನ ಪೂರ್ತಿ ಸಂಚರಿಸಿ ಅವಲೋಕಿಸಿದ್ದಾರೆ.

ಪೇಜಾವರ ಶ್ರೀಗಳನ್ನು ಭೇಟಿಯಾದ ಮುಸ್ಲಿಂ ನಿಯೋಗ: ಶ್ರೀಗಳ ನಿಲುವು ಬೆಂಬಲಿಸಿದ ಸಂಸದ ಹೆಗಡೆ!

ಅಪೂರ್ವ ವಸ್ತು ಸಂಗ್ರಹಾಲಯ ನಿರ್ಮಾಣ

ಮಹತ್ವದ ಸಭೆಯ ಬಳಿಕ ಮಾತನಾಡಿದ ವಿಶ್ವಪ್ರಸನ್ನ ತೀರ್ಥರು, ಮಂದಿರ ನಿರ್ಮಾಣದ ಬಳಿಕ ನಡೆಯಬೇಕಾಗಿರುವ ಪ್ರತಿಷ್ಠಾ ವಿಧಿಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ.ಆದಿಕಾಲದಿಂದ ರಾಮದೇವರ ಪೂಜಾಕೈಂಕರ್ಯಗಳನ್ನು ರಾಮಾನಂದ ಸಂಪ್ರದಾಯದಂತೆ ನಡೆಸುತ್ತಾ ಬರಲಾಗಿದೆ.ಈ ಸಂಪ್ರದಾಯದ ಪೀಠಾಧಿಪತಿಗಳ ಸಲಹೆ ಸೂಚನೆ ಪಡೆದು ಪ್ರತಿಷ್ಠಾ ವಿಚಾರದಲ್ಲಿ ಮುಂದುವರೆಯಲಾಗುವುದು. ಈ ಕುರಿತು ವಿದ್ವಾಂಸರಾಗಿರುವ ಅರ್ಚಕರನ್ನು ನೇಮಕ ಗೊಳಿಸಬೇಕು.ಅರ್ಚಕರಿಗೆ ಬೇಕಾದ ಪ್ರ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು. ಈ ಎಲ್ಲದರ ಕುರಿತು ತೀರ್ಮಾನ ಮಾಡಲಾಯಿತು ಎಂದರು‌

ಅಯೋಧ್ಯೆಯಲ್ಲಿ ಸಿಕ್ಕಿರುವ ಪುರಾತನ ಅವಶೇಷಗಳನ್ನು ಒಳಗೊಂಡು ವಸ್ತುಸಂಗ್ರಹಾಲಯ(Museum) ಮಾಡಬೇಕು.ಈ ವಸ್ತು ಸಂಗ್ರಹಾಲಯದಲ್ಲಿ ಎಲ್ಲಾ ಪುರಾತನ ವಸ್ತುಗಳನ್ನು ಜೋಡಿಸಬೇಕು.ಪ್ರಧಾನಿಗಳು ಈಗಾಗಲೇ ಒಂದು ಅಪೂರ್ವ ಸಂಗ್ರಹಾಲಯ ಮಾಡಿದ್ದಾರೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಈ ಸಂಗ್ರಹಾಲಯದಲ್ಲಿ ಮಾಜಿ ಪ್ರಧಾನಿಗಳಾದ ನೆಹರು ಅವರಿಂದ ತೊಡಗಿ ಮನಮೋಹನ್ ಸಿಂಗ್ ವರೆಗಿನ ಎಲ್ಲರ ಪೂರ್ಣ ಮಾಹಿತಿಯನ್ನು ಸುಂದರವಾಗಿ ಜೋಡಿಸಿಡಲಾಗಿದೆ. ಇದರ ಅನುಭವದ ಆಧಾರದಲ್ಲಿ ಪ್ರಧಾನಿಗಳ ಆಪ್ತ ಸಲಹೆಗಾರರಾಗಿರುವ ನೃಪೇಂದ್ರ ಮಿಶ್ರಾ ಅವರು ಸಲಹೆ ನೀಡಿದ್ದಾರೆ.ಮಾಜಿ ಪ್ರಧಾನಿಗಳ ಸಂಗ್ರಹಾಲಯ ಮಾದರಿಯಲ್ಲೇ  ಪರಿಷ್ಕರಣೆಗಳ ಸಹಿತ ಅಯೋಧ್ಯೆಯ ಸಂಗ್ರಹಾಲಯ ಮಾಡಲಾಗುವುದು.ಇಂದು ನಡೆದ ಸಭೆಯಲ್ಲಿ ಈ ಕುರಿತು ಪ್ರಧಾನಿಗಳ ಸಲಹೆಗಾರರು ಮಾಹಿತಿ ನೀಡಿದರು ಎಂದು ತಿಳಿಸಿದ್ದಾರೆ.

ಮಂದಿರದ ವೆಚ್ಚ ಹೆಚ್ಚಾಗಬಹುದು

ರಾಮಮಂದಿ(Ram Mandir) ನಿರ್ಮಾಣಕ್ಕೆ ಅಂದಾಜು 400 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜು ಪಟ್ಟಿ ಸಿದ್ದ ಮಾಡಿದ್ದೆವು.ಈಗ ಭೂಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಅನೇಕ ಬದಲಾವಣೆ ಮಾಡಬೇಕಾಗಿದೆ.ಖರ್ಚು ಸ್ವಲ್ಪ ಅಧಿಕವಾಗುವ ಸಾಧ್ಯತೆ ಇದೆ.ಇಂದಿನ ಸಭೆಯಲ್ಲಿ ಅದಕ್ಕೆ ಬೇಕಾದ ಒಪ್ಪಿಗೆ ಪಡೆದಿದ್ದೇವೆ. ಜೊತೆಗೆ ಅನೇಕ ಪ್ರಮುಖ ವಿಚಾರಗಳು ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಮಾಹಿತಿ ನೀಡಿದರು.

ಕರ ಸೇವೆಗೆ ಅವಕಾಶವಿಲ್ಲ ಭಜನೆ ಮಾಡಬಹುದು

ಅನೇಕರು ಅಯೋಧ್ಯೆಗೆ ಬಂದು ಕರಸೇವೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯ ಕಲ್ಲುಬಂಡೆಗಳನ್ನು ಕ್ರೈನ್ ಮೂಲಕವೇ ಸ್ಥಳಾಂತರಿಸಲಾಗುತ್ತಿದೆ.ಹಾಗಾಗಿ ಸದ್ಯ ಕರ ಸೇವೆಗೆ ಅವಕಾಶ ಇಲ್ಲ. ಭಕ್ತರು(Devotees) ಬಂದರೆ ದೂರದಿಂದ ನಮಸ್ಕರಿಸಿ ಮುಂದೆ ಹೋಗಬಹುದು. ಅಖಂಡ ಭಜನೆ ಈಗಾಗಲೇ ಪ್ರಾರಂಭವಾಗಿದೆ. ಯಾವುದೇ ಊರುಗಳಿಂದ ಭಜನೆ ಮಾಡಲು ಭಕ್ತರು ಬರಬಹುದು.ಈ ಬಗ್ಗೆ ಚಂಪತ್ ರಾಯ್ ಜಿ ಗೋಪಾಲ್ ಜಿ ಅವರನ್ನು ಸಂಪರ್ಕಿಸಬಹುದು. ಭಜನೆಗೆ ಬೇಕಾದ ಸ್ಥಳ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

Yogi Adityanath: ಯೋಗಿ ಆದಿತ್ಯನಾಥ್ ಶಪಥಗ್ರಹಣ: ಪೇಜಾವರ ಶ್ರೀ ಭಾಗಿ

ಮಂದಿರ ನಿರ್ಮಾಣದ 70 ಎಕರೆ ಪ್ರದೇಶದಲ್ಲಿ ಯಾವುದೇ ಯಾತ್ರಿ ನಿವಾಸ ಇರುವುದಿಲ್ಲ.ಮಂದಿರಕ್ಕೆ ಸಂಬಂಧಿಸಿದ ನಿರ್ಮಾಣಗಳು ಮಾತ್ರ ಇರುತ್ತವೆ.ಮಂದಿರದ ಎದುರು ಬೃಹತ್ ಗೋಪುರ ನಿರ್ಮಾಣದ ಸಲಹೆ ಬಂದಿದೆ.ಗೋಪುರ ನಿರ್ಮಾಣವನ್ನು ಯಾವ ಸ್ತಪತಿ ಆಧಾರದಲ್ಲಿ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.

2024 ಜನವಯಿಂದ ಪ್ರತಿಷ್ಠಾ ಕಾರ್ಯ

ಇದೇ ವೇಳೆ ರಾಮಮಂದಿರ ನಿರ್ಮಾಣದ ಮೇಲುಸ್ತುವಾರಿ ಹೊತ್ತಿರುವ ಹಿರಿಯ ಮುಖಂಡ ಗೋಪಾಲ್ ಜೀ ಮಾತನಾಡಿ, ಮಂದಿರ ನಿರ್ಮಾಣ ಸ್ಥಳದಲ್ಲಿ ಭೂಮಿ ಪೂಜೆಯಾದ ನಂತರ ಬಲವಾದ ಬುನಾದಿ ಹಾಕುವ ಕೆಲಸ ಮುಗಿದಿದೆ‌ಈಗ ಒಂದು ಕಟ್ಟೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ.ಭೂಮಿಯ ಮಟ್ಟದಿಂದ ಹದಿನಾರುವರೆ ಅಡಿ ಎತ್ತರದವರೆಗೆ ದೇವಸ್ಥಾನ(Temple) ಇರುತ್ತೆ. ಅದಕ್ಕೆ ಬೇಕಾದ ಗ್ರಾನೈಟ್ ಕಲ್ಲು ಬೆಂಗಳೂರಿನಿಂದ(Bengaluru) ಬಂದಿದೆ. ಐದಡಿ, ಮೂರಡಿ, ಎರಡುವರೆ ಅಡಿಯ ಕಲ್ಲುಗಳು ಬಂದಿವೆ. 21 ಅಡಿಯ ಮೇಲಿನವರೆಗೂ ನಿರ್ಮಾಣವಾಗಲಿದೆ. ಇದು ಮೂರು ಮಹಡಿಯ ಮಂದಿರ.

ಜೂನ್ ತಿಂಗಳಿಂದ ಪಿಲ್ಲರ್ ಇತ್ಯಾದಿ ಕಟ್ಟಡದ ಮೇಲಿನ ನಿರ್ಮಾಣ ಆರಂಭವಾಗುತ್ತದೆ. 2023 ರೊಳಗೆ ಗರ್ಭಗೃಹದಲ್ಲಿ ರಾಮನನ್ನು ಕೂರಿಸುವ ವಿಶ್ವಾಸವಿದೆ. 2024 ಜನವರಿಯಿಂದ ಪ್ರತಿಷ್ಠಾಪನಾ ಕಾರ್ಯ ಆರಂಭವಾಗುತ್ತದೆ ಎಂದರು.
 

click me!