Kodagu ವೃದ್ಧ ದಂಪತಿಯಿಂದ ಮನೆಯಂಗಳದಲ್ಲೇ ಬೆಳೆಯುತ್ತವೆ ತರಕಾರಿಗಳು: ಮಡಹಾಗಲಕ್ಕೆ ಕೃತಕ ಪರಾಗಸ್ಪರ್ಶ

By Govindaraj SFirst Published Dec 3, 2023, 4:25 PM IST
Highlights

ಇಂದು ಯಾವುದೇ ತರಕಾರಿ, ಕಾಳು ಕಡ್ಡಿಗಳು ಬೇಕು ಎಂದರೆ ತಕ್ಷಣವೇ ಮಾರುಕಟ್ಟೆ ಅಥವಾ ತರಕಾರಿ ಅಂಗಡಿಗಳತ್ತ ಮುಖ ಮಾಡಿಬಿಡುತ್ತೇವೆ ಅಲ್ವಾ. ಆದರೆ ಈ ದಂಪತಿ ಇಡೀ ಮನೆಯ ಅಂಗಳವನ್ನೇ ಕೈತೋಟವನ್ನಾಗಿ ಮಾಡಿ ಅಗತ್ಯ ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.03): ಇಂದು ಯಾವುದೇ ತರಕಾರಿ, ಕಾಳು ಕಡ್ಡಿಗಳು ಬೇಕು ಎಂದರೆ ತಕ್ಷಣವೇ ಮಾರುಕಟ್ಟೆ ಅಥವಾ ತರಕಾರಿ ಅಂಗಡಿಗಳತ್ತ ಮುಖ ಮಾಡಿಬಿಡುತ್ತೇವೆ ಅಲ್ವಾ. ಆದರೆ ಈ ದಂಪತಿ ಇಡೀ ಮನೆಯ ಅಂಗಳವನ್ನೇ ಕೈತೋಟವನ್ನಾಗಿ ಮಾಡಿ ಅಗತ್ಯ ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ. ಅದು ಕೂಡ ಸಾವಯವ ಕೃಷಿ ಮೂಲಕ. ಎಲ್ಲಿ ಅಂತಹ ವಿಶೇಷ ನೀವೆ ನೋಡಿ. ಮನೆಯ ಒಂದು ಬದಿಯಲ್ಲಿ ಲೆಕ್ಕವಿಲ್ಲದಷ್ಟು ಬಿಟ್ಟಿರುವ ಬೂದುಗುಂಬಳ, ಮನೆಯ ಹಿಂಭಾಗದಲ್ಲಿ ಉಲುಸಾಗಿ ಬೆಳೆದ ಮಡಹಾಗಲ, ಅಕ್ಕಪಕ್ಕದಲ್ಲೇ ಮೂಲಂಗಿ, ಬೀನ್ಸ್, ಬೀನ್ಸ್ ಕಾಳು, ಅವರೆ, ಚಪ್ಪದವರೆ ತರಕಾರಿ ಕಾಳುಗಳು. ಅಬ್ಬಬ್ಬಾ ಒಂದೆರಡು ತರಕಾರಿಗಳಲ್ಲ.

ತಮ್ಮ ಮನೆಗೆ ಬೇಕಾಗುವಷ್ಟು ತರಕಾರಿ, ಕಾಳುಗಳನ್ನು ಮನೆಯಂಗಳದಲ್ಲೇ ಬೆಳೆದಿದ್ದಾರೆ ಈ ದಂಪತಿ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಸುಬ್ರಹ್ಮಣ್ಯ ನಗರದ ನಿವಾಸಿಗಳಾಗಿರುವ ಮಾದಪ್ಪ ಮೀನಾ ದಂಪತಿ ಮನೆಯಂಗಳವನ್ನು ಕೈತೋಟವನ್ನಾಗಿ ಪರಿವರ್ತಿಸಿರುವವರು. ಹೌದು ನಿವೃತ್ತಿ ಜೀವನ ನಡೆಸುತ್ತಿರುವ ಇವರು ತಮ್ಮ ಮನೆಯ ಸುತ್ತಮುತ್ತ ಇರುವ ಜಾಗವನ್ನು ಅಚ್ಚುಕಟ್ಟಾಗಿ ಬಳಕೆ ಮಾಡಿಕೊಂಡು ತರಕಾರಿ ಬೆಳೆದಿದ್ದಾರೆ. ಮನೆಯ ಎಡಭಾಗಕ್ಕೆ ಮೀನಾ ಅವರು ಕುಂಬಳ ಬೀಜವನ್ನು ಎಸೆದಿದ್ದರಂತೆ. ಅದು ಅಲ್ಲಿಯೇ ಹುಟ್ಟಿ ಬೆಳೆದಿದೆ. ಅದು ಹಬ್ಬಲು ಬೇಕಾಗಿರುವ ಚಪ್ಪರ ಹಾಕಿರುವುದರಿಂದ ಬೃಹತ್ ಪ್ರಮಾಣದಲ್ಲಿ ಹಬ್ಬಿ ಅಪಾರ ಪ್ರಮಾಣದ ಕಾಯಿಬಿಟ್ಟಿದೆ. 

ಭ್ರೂಣ ಹತ್ಯೆ ತಡೆ ಕಾಯ್ದೆ ಇನ್ನಷ್ಟು ಬಿಗಿ: ಸಚಿವ ದಿನೇಶ್ ಗುಂಡೂರಾವ್

ಸಾಮಾನ್ಯವಾಗಿ ಕುಂಬಗಳ ಗಿಡ 8 ರಿಂದ 10 ಕಾಯಿಗಳನ್ನು ಬಿಟ್ಟರೆ ಅದೇ ಹೆಚ್ಚು. ಆದರೆ ಈ ಗಿಡ ಬರೋಬ್ಬರಿ 38 ಕ್ಕೂ ಹೆಚ್ಚು ಕಾಯಿಗಳನ್ನು ಬಿಟ್ಟಿದೆ. ಇನ್ನು ಮನೆಯ ಹಿಂಭಾಗದಲ್ಲಿ ಬೀನ್ಸ್, ಮೂಲಂಗಿ, ಅವರೆ, ಚಪ್ಪರದ ಅವರೆ ಗಿಡಗಳನ್ನು ಹಾಕಿದ್ದು ಅವುಗಳು ಇನ್ನೇನು ಫಸಲು ಬಿಡುವ ಹಂತಕ್ಕೆ ಬೆಳೆದಿವೆ. ಇವುಗಳು ಇಷ್ಟೊಂದು ಹುಲುಸಾಗಿ ಬೆಳೆಯುವುದಕ್ಕೆ ನಾವು ಮುಖ್ಯವಾಗಿ ದನದ ಗೊಬ್ಬರ ಅಷ್ಟೇ ಹಾಕುತ್ತೇವೆ ಎನ್ನುತ್ತಾರೆ ಮೀನಾ. ಅತ್ಯುತ್ತಮ ಪೋಷಕಾಂಶ ಹೊಂದಿರುವ ಮಡಹಾಗಲ ತರಕಾರಿ ಕೂಡ ಕುಂಬಳಕಾಯಿ ಜಾತಿಯದ್ದೇ ಆಗಿರುವ, ಬಳ್ಳಿಯಲ್ಲಿ ಬೆಳೆಯುವ ಮತ್ತೊಂದು ತರಕಾರಿ. 

ಇದು ಉತ್ತರ ಭಾರತದಲ್ಲಿ ಬೆಳೆಯುವ ತರಕಾರಿಯಾಗಿದ್ದು, ಇದನ್ನು ಚೆಟ್ಟಳ್ಳಿಯಲ್ಲಿರುವ ಕೃಷಿ ವಿಜ್ನಾನ ಕೇಂದ್ರದಿಂದ ತಂದು ತೇಲಪಂಡ ಮಾದಪ್ಪ ಅವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದಾರೆ. ವಿಶೇಷ ಎಂದರೆ ಈ ಮಡಹಾಗಲ ಕಾಯಿ ಬಿಡಬೇಕಾದರೆ ಕೃತಕವಾಗಿ ಪರಾಗಪರ್ಶ ಮಾಡಿಸಬೇಕು. ಇಲ್ಲದಿದ್ದರೆ ಇದು ಕಾಯಿ ಬಿಡುವುದಿಲ್ಲ. ಇದು ಹೆಣ್ಣು ಹೂವು ಮತ್ತು ಗಂಡು ಹೂವುಗಳನ್ನು ಒಟ್ಟಿಗೆ ಬಿಡುವುದಿಲ್ಲ. ಗಂಡು ಹೂವು ಬಿಡುವ ಗಿಡಗಳೇ ಬೇರೆಯಾಗಿದ್ದರೆ, ಹೆಣ್ಣು ಹೂಬಿಡುವ ಗಿಡಗಳೇ ಬೇರೆಯಾಗಿರುತ್ತವೆ. 

ಗಾಣಿಗ ಜಾತಿಯ ಪ್ರಧಾನಿ ಮೋದಿಗೆ ಗಾಣಿಗರ ಸಮಸ್ಯೆ ಗೊತ್ತಿಲ್ಲವೇ?: ಸಿದ್ದರಾಮಯ್ಯ

ಹೀಗಾಗಿ ಗಂಡು ಹೂವನ್ನು ಕೊಯ್ದು ಹೆಣ್ಣು ಹೂವಿಗೆ ಸ್ಪರ್ಶಿಸುವ ಮೂಲಕ ಪರಾಗ ಪ್ರಕ್ರಿಯೆ ಮಾಡಿಸುತ್ತಾರೆ. ಆ ಬಳಿಕವೇ ಮಡಹಾಗಲ ಕಾಯಿಕಟ್ಟುತ್ತದೆ. ಇನ್ನು ಮನೆಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಅರಿಶಿಣವನ್ನು ಇವರೇ ಬೆಳೆದುಕೊಳ್ಳುತ್ತಾರೆ ಎನ್ನುವುದು ವಿಶೇಷ. ತರಕಾರಿಗಳು ಅಷ್ಟೇ ಅಲ್ಲ ಮನೆಯ ಸುತ್ತಮುತ್ತಲೂ ವಿವಿಧ ಹೂವಿನ ಗಿಡಗಳನ್ನು ಬೆಳೆದಿದ್ದು ಮನೆಯ ಪರಿಸರವೂ ಸುಂದರವಾಗಿದೆ. ಒಟ್ಟಿನಲ್ಲಿ ಮನೆಗೆ ತರಕಾರಿ, ಕಾಳುಗಳು ಬೇಕೆನಿಸುತ್ತಿದ್ದಂತೆ ಮಾರುಕಟ್ಟೆಗೆ ಮುಖಮಾಡುವ ಪರಿಸ್ಥಿತಿ ಇರುವಾಗ ಈ ಕುಟುಂಬ ಮಾತ್ರ ಮನೆಯಂಗಳದಲ್ಲಿಯೇ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆದುಕೊಳ್ಳುತ್ತಿರುವುದು ವಿಶೇಷ.

click me!