ಹೆಣ್ಣು ಭ್ರೂಣಲಿಂಗ ಹತ್ಯೆ ಬೆನ್ನಲ್ಲೇ ಈ ವರ್ಷ 4500 ಗರ್ಭಪಾತ ಮಾತ್ರೆಗಳು ಪೂರೈಕೆ!

By Kannadaprabha NewsFirst Published Dec 9, 2023, 8:33 PM IST
Highlights

ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಒಂದೊಂದಾಗಿ ಅಚ್ಚರಿಯ ಸಂಗತಿಗಳು ಬೆಳಕಿಗೆ ಬರಲಾರಂಭಿಸಿವೆ. ಈ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ನಾಲ್ಕು ಮಾದರಿಯ 4500 ಗರ್ಭಪಾತ ಮಾತ್ರೆಗಳು ಔಷಧ ವಿತರಕರಿಂದ ಔಷಧ ಅಂಗಡಿಗಳಿಗೆ ಪೂರೈಕೆಯಾಗಿರುವುದು ಆತಂಕ ಮತ್ತು ಅಚ್ಚರಿ ಮೂಡಿಸಿದೆ. 
 

ಮಂಡ್ಯ ಮಂಜುನಾಥ

ಮಂಡ್ಯ (ಡಿ.09): ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಒಂದೊಂದಾಗಿ ಅಚ್ಚರಿಯ ಸಂಗತಿಗಳು ಬೆಳಕಿಗೆ ಬರಲಾರಂಭಿಸಿವೆ. ಈ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ನಾಲ್ಕು ಮಾದರಿಯ 4500 ಗರ್ಭಪಾತ ಮಾತ್ರೆಗಳು ಔಷಧ ವಿತರಕರಿಂದ ಔಷಧ ಅಂಗಡಿಗಳಿಗೆ ಪೂರೈಕೆಯಾಗಿರುವುದು ಆತಂಕ ಮತ್ತು ಅಚ್ಚರಿ ಮೂಡಿಸಿದೆ. ಜಿಲ್ಲೆಯ ಏಳು ಔಷಧ ವಿತರಕರ ಅಂಗಡಿಗಳಿಂದ ಈ ಮಾತ್ರೆಗಳು ಔಷಧ ಅಂಗಡಿಗಳಿಗೆ ಪೂರೈಕೆಯಾಗಿವೆ. ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಬಯಲಾದ ನಂತರ ಇಂತಹ ಔಷಧಗಳ ಮಾರಾಟ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಮಾರಾಟ ಮತ್ತು ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ೮ ಔಷಧ ಅಂಗಡಿಗಳಿಗೆ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು ನೋಟಿಸ್ ಜಾರಿಗೊಳಿಸಿದ್ದಾರೆ.

Latest Videos

ಮಾತ್ರೆಗಳಿಗೆ ಬೇಡಿಕೆ ಹೆಚ್ಚು: 1.1.2023 ರಿಂದ 7.12.2023ರವರೆಗೆ ವಿವಿಧ ಕಂಪನಿಯ ಗರ್ಭಪಾತ ಮಾತ್ರೆಗಳನ್ನು ಜಿಲ್ಲೆಯ ವಿವಿಧ ಔಷಧ ಅಂಗಡಿಗಳಿಗೆ ಏಳು ಔಷಧ ವಿತರಕರು ಪೂರೈಕೆ ಮಾಡಿದ್ದಾರೆ. ಇದರಲ್ಲಿ ಎಷ್ಟು ಮಾರಾಟವಾಗಿವೆ, ಎಷ್ಟು ಉಳಿದಿವೆ ಎನ್ನುವುದು ಮಾತ್ರ ಲೆಕ್ಕಕ್ಕೆ ಸಿಗದಂತಾಗಿದೆ. ಈ ಮಾತ್ರೆಗಳು ಇಷ್ಟೊಂದು ಪ್ರಮಾಣದಲ್ಲಿ ಔಷಧ ಅಂಗಡಿಗಳಿಗೆ ಪೂರೈಕೆಯಾಗಿರುವುದನ್ನು ಗಮನಿಸಿದರೆ ಈ ಮಾತ್ರೆಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಿರುವಂತೆ ಕಂಡುಬರುತ್ತಿದೆ. ಆದರೆ, ಈ ಮಾತ್ರೆಗಳು ಆಕಸ್ಮಿಕವಾಗಿ ಗರ್ಭ ಧರಿಸಿದವರಿಗೆ ಬಳಕೆಯಾಗುತ್ತಿದೆಯೋ ಅಥವಾ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿವೆಯೇ ಎನ್ನುವುದು ಯಾರ ಗಮನಕ್ಕೂ ಬರುತ್ತಿಲ್ಲ.

ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು: ಮೊದಲ ಬಾರಿಗೆ ಲೀಲಾವತಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ!

ವೈದ್ಯರ ಚೀಟಿ ಇಲ್ಲದೆಯೂ ಮಾರಾಟ: ಪರವಾನಗಿ ಹೊಂದಿರುವ ಅಧಿಕೃತ ವೈದ್ಯರ ಚೀಟಿ ಇಲ್ಲದೆ ಯಾರಿಗೂ ಈ ಗರ್ಭಪಾತ ಮಾತ್ರೆಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ, ವೈದ್ಯರ ಚೀಟಿ ಇಲ್ಲದೆಯೂ ಇಂತಹ ಮಾತ್ರೆಗಳು ನೇರವಾಗಿ ಔಷಧ ಅಂಗಡಿಯವರಿಂದ ಜನರ ಕೈ ಸೇರುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಇಂತಹ ಪ್ರಕರಣಗಳಲ್ಲಿ ಅನೇಕ ಗರ್ಭಿಣಿಯರು ತೀವ್ರ ರಕ್ತಸ್ರಾವದಿಂದ ಬಳಲಿದ್ದಾರೆ. ಕೊನೆಗೆ ಆಸ್ಪತ್ರೆಗೆ ದಾಖಲಾಗಿ ಪ್ರಾಣ ಉಳಿಸಿಕೊಂಡಿರುವ ನಿದರ್ಶನಗಳೂ ಇವೆ.

ಹೇಗೆ ಬಳಕೆಯಾಗುತ್ತಿವೆ ಎನ್ನುವುದು ನಿಗೂಢ: ಈ ಗರ್ಭಪಾತ ಮಾತ್ರೆಗಳನ್ನು 12 ವಾರಗಳೊಳಗೆ ಉಪಯೋಗಿಸಬಹುದು. ಸಾಮಾನ್ಯವಾಗಿ ಆಕಸ್ಮಿಕವಾಗಿ ಗರ್ಭ ಧರಿಸಿದವರು ವೈದ್ಯರ ಸಲಹೆ ಮೇರೆಗೆ ಗರ್ಭಪಾತ ಮಾಡಿಕೊಳ್ಳುವುದಕ್ಕೆ ಬಳಕೆ ಮಾಡಬಹುದು. ಆದರೆ, ಈ ಮಾತ್ರೆಗಳು ಬೇರೆ ರೂಪದ ಗರ್ಭಪಾತಕ್ಕೆ ಬಳಕೆಯಾಗುತ್ತಿರುವ ಬಗ್ಗೆಯೂ ಸಾಕಷ್ಟು ಅನುಮಾನಗಳು ಮೂಡಿವೆ. ಇವುಗಳನ್ನು ಪತ್ತೆಹಚ್ಚುವುದು ಕಷ್ಟದ ಕೆಲಸ. ಅಲ್ಲದೆ ಈ ಮಾತ್ರೆಗಳು ಜಿಲ್ಲೆಯಷ್ಟೇ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳಿಗೂ ಮಾರಾಟವಾಗುತ್ತಿವೆ. ಹಾಗಾಗಿ ಮಾರಾಟವಾದ ಎಲ್ಲ ಮಾತ್ರೆಗಳ ಮೂಲ ಹುಡುಕಿಕೊಂಡು ಹೋಗುವುದು ಕಷ್ಟವಾಗಿದೆ ಎನ್ನುವುದು ಎನ್ನುವುದು ಅಧಿಕಾರಿಗಳು ಹೇಳುವ ಮಾತಾಗಿದೆ.

8 ಅಂಗಡಿಗಳಿಗೆ ನೋಟಿಸ್ ಜಾರಿ: ಗರ್ಭಪಾತ ಮಾತ್ರೆಗಳ ಮಾರಾಟ ಸಂಬಂಧಿಸಿದಂತೆ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಖಲೀದ್ ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧ ಔಷಧ ಅಂಗಡಿಗಳಿಗೆ ತೆರಳಿ ತಪಾಸಣೆ ನಡೆಸುತ್ತಿದ್ದಾರೆ. ಈ ಗರ್ಭಪಾತ ಮಾತ್ರೆಗಳ ಮಾರಾಟ ಮತ್ತು ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂದಿರುವ ಎಂಟು ಔಷಧ ಅಂಗಡಿಗಳಿಗೆ ನೋಟಿಸ್ ಜಾರಿಗೊಳಿಸಿ ಏಳು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಸಮರ್ಪಕ ಉತ್ತರ ಬರದಿದ್ದರೆ ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ನಾವ್ಯಾರೆಂದು ನಮಗೆ ಅರಿವಾದರೆ, ಬದುಕು ಸಾರ್ಥಕ: ಎಂಟಿಬಿ ನಾಗರಾಜ್

ಗರ್ಭಪಾತ ಮಾತ್ರೆಗಳನ್ನು ವೈದ್ಯರು ಚೀಟಿ ಬರೆದುಕೊಟ್ಟ ಸಮಯದಲ್ಲಿ ಯಾವ ವೈದ್ಯರು ಚೀಟಿ ಬರೆದುಕೊಟ್ಟಿದ್ದಾರೆ. ಅವರು ತಜ್ಞ ವೈದ್ಯರೇ, ಗರ್ಭಿಣಿಗೆ ೧೮ ವರ್ಷ ವಯಸ್ಸಾಗಿದೆಯೇ, ಮಾತ್ರೆ ಪಡೆಯುತ್ತಿರುವವರ ಮೊಬೈಲ್ ನಂಬರ್, ಬಿಲ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು. ಒಮ್ಮೆ ಆಯುಷ್ ವೈದ್ಯರು ಗರ್ಭಪಾತ ಮಾತ್ರೆಗಳನ್ನು ನೀಡಿದರೆ ಅವುಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸದಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

click me!