ಭದ್ರಾವತಿ: ಬರಿದಾಗುತ್ತಿದೆ ಭದ್ರಾ ಡ್ಯಾಂ, ರೈತರಲ್ಲಿ ಆತಂಕ

By Kannadaprabha NewsFirst Published Sep 30, 2023, 8:32 AM IST
Highlights

ಪ್ರಸ್ತುತ ಜಲಾಶಯದಲ್ಲಿ 160 ಅಡಿ ಮಾತ್ರ ನೀರಿದ್ದು, ನೀರಾವರಿ ಸಲಹಾ ಸಮಿತಿ ನಿರ್ಧಾರದಂತೆ ನೀರು ಹಂಚಿಕೆ ಮಾಡಲಾಗುತ್ತಿದೆ. ಯಾರು ಸಹ ನಿರೀಕ್ಷಿಸಲು ಆಗದಂತಹ ತೀವ್ರ ಬರಗಾಲ ಇದೀಗ ಎದುರಾಗಿದೆ. ಒಂದೆಡೆ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾದರೇ, ಮತ್ತೊಂದೆಡೆ ಪ್ರಸ್ತುತ ರೈತರು ಬೆಳೆದಿರುವ ಬೆಳೆಗಳಿಗೆ ನೀರು ಪೂರೈಸಬೇಕಾಗದ ಸ್ಥಿತಿ ಎದುರಾಗಿದೆ.

ಅನಂತಕುಮಾರ್

ಭದ್ರಾವತಿ(ಸೆ.30): ಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಕೊರತೆ ಇದ್ದು, ಈ ನಡುವೆ ರೈತರಿಂದ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಮಳೆಯಾಗುವ ಲಕ್ಷಣಗಳು ದೂರವಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ತೀವ್ರವಾಗಿ ಎದುರಾಗಲಿದೆ. ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ದೀರ್ಘಾವಧಿ ತೆಂಗು, ಅಡಕೆ ಬೆಳೆಗಳು ನಾಶವಾಗುವ ಭೀತಿ ರೈತರಿಗೆ ಎದುರಾಗಿದೆ.

ಪ್ರಸ್ತುತ ಜಲಾಶಯದಲ್ಲಿ 160 ಅಡಿ ಮಾತ್ರ ನೀರಿದ್ದು, ನೀರಾವರಿ ಸಲಹಾ ಸಮಿತಿ ನಿರ್ಧಾರದಂತೆ ನೀರು ಹಂಚಿಕೆ ಮಾಡಲಾಗುತ್ತಿದೆ. ಯಾರು ಸಹ ನಿರೀಕ್ಷಿಸಲು ಆಗದಂತಹ ತೀವ್ರ ಬರಗಾಲ ಇದೀಗ ಎದುರಾಗಿದೆ. ಒಂದೆಡೆ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾದರೇ, ಮತ್ತೊಂದೆಡೆ ಪ್ರಸ್ತುತ ರೈತರು ಬೆಳೆದಿರುವ ಬೆಳೆಗಳಿಗೆ ನೀರು ಪೂರೈಸಬೇಕಾಗದ ಸ್ಥಿತಿ ಎದುರಾಗಿದೆ.

ರಕ್ತ ಬೇಕಾದ್ರೆ ಕೊಟ್ಟೇವು, ಕಾವೇರಿ ಕೊಡಲ್ಲ: ನಟ ದೊಡ್ಡಣ್ಣ

ಈ ಹಿಂದೆ ಸರ್ಕಾರ 100 ದಿನ ನೀರು ಪೂರೈಸುವುದಾಗಿ ಭರವಸೆ ನೀಡಿದೆ. ಈ ಹಿನ್ನೆಲೆ ರೈತರು ಭತ್ತದ ಬೆಳೆಗಳನ್ನು ಬೆಳೆದಿದ್ದರು. ಇದೀಗ ಬರಗಾಲ ಎದುರಾಗಿರುವ ಹಿನ್ನೆಲೆ ನೀರು ಪೂರೈಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಈ ನಡುವೆ ದಾವಣಗೆರೆ ಭಾಗದ ರೈತರು ತಕ್ಷಣ ನೀರು ಬಿಡಬೇಕೆಂದು ಹೋರಾಟ ನಡೆಸಿದ ಪರಿಣಾಮ ಸಲಹಾ ಸಮಿತಿ 43 ದಿನ 2 ಹಂತದಲ್ಲಿ ನೀರು ಪೂರೈಸಲು ತೀರ್ಮಾನಿಸಿದೆ.

ಅದರಂತೆ ಬಲದಂಡೆ ನಾಲೆಗೆ ಮಂಗಳವಾರದಿಂದ ಅ.15ರ ವರೆಗೆ ಒಟ್ಟು 20 ದಿನ ಹಾಗೂ ಅ.26 ರಿಂದ ನ.17 ರವರೆಗೆ ಒಟ್ಟು 23 ದಿನ ನೀರು ಪೂರೈಸಲಾಗುತ್ತಿದೆ. ಉಳಿದಂತೆ ಎಡದಂಡೆ ನಾಲೆಗೆ ಈಗಾಗಲೇ ನೀರು ಹರಿಸಲಾಗುತ್ತಿದ್ದು, ಅ.1 ರವರೆಗೆ ಒಟ್ಟು 15 ದಿನಗಳು, ಅ.12ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನ.6 ರಿಂದ 17ರವರೆಗೆ ಒಟ್ಟು 12 ದಿನಗಳು ನೀರು ಪೂರೈಕೆಯಾಗಲಿದೆ.

ಅಧಿಕಾರದಲ್ಲಿದ್ದಾಗ ಕಾವೇರಿ ನೀರು ಬಿಟ್ಟು ಇಂದು ವಿರೋಧಿಸೋದು ತಪ್ಪು: ಸಚಿವ ಮಧು

ಭತ್ತ ನಾಶವಾಗುವ ಭೀತಿ:

ಈ ಬಾರಿ ಮುಂಗಾರು ಮಳೆ ಸಹ ಕೈಕೊಟ್ಟಿದ್ದು, ಈ ನಡುವೆ 100 ದಿನಗಳ ಬದಲು 43 ದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ಭತ್ತದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಬೆಳೆ ನಾಶವಾಗುವ ಭೀತಿ ಎದುರಾಗಿದೆ. ಬೆಳೆ ಕಾಳುಕಟ್ಟುವ ಕೊನೆ ಹಂತದಲ್ಲಿ ನೀರು ಲಭ್ಯವಾಗದೇ ನಾಶವಾಗಲಿವೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

ಶತಮಾನದ ದೊಡ್ಡ ಬರಗಾಲ ಇದಾಗಿದ್ದು, ಇಂತಹ ಸಂದರ್ಭದಲ್ಲಿ ವಿವೇಚನೆ ಇಲ್ಲದವರು 100 ದಿನ ನೀರು ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ನಂಬಿದ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಈ ಹಿನ್ನೆಲೆ ನಷ್ಟವನ್ನು ಸರ್ಕಾರವೇ ತುಂಬಿಕೊಡಬೇಕು. ಬೇಸಿಗೆಯಲ್ಲಿ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹಂಚಿಕೆ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ನೀರನ್ನು ಮಿತವಾಗಿ ಬಳಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ರೈತ ಮುಖಂಡ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ.  

click me!