ಶಿವಮೊಗ್ಗ : ಪ್ರತಿ ತಾಲೂಕಿನಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಸಿದ್ಧ

By Kannadaprabha NewsFirst Published May 28, 2021, 3:53 PM IST
Highlights
  •  ಆಮ್ಲಜನಕ ಪೂರೈಕೆ ಸಮಸ್ಯೆಗೆ ಜಿಲ್ಲಾಡಳಿತ ಶಾಶ್ವತ ಪರಿಹಾರ
  • ಪ್ರತಿ ತಾಲೂಕಿನಲ್ಲಿ ಆಮ್ಲಜನಕ ಉತ್ಪಾದನಾ ಘಟಕ
  • ಸರ್ಕಾರದ ಅನುಮತಿಗಾಗಿ ಕಾಯುತ್ತಲಿರುವ ಜಿಲ್ಲಾಡಳಿತ

ವರದಿ : ಗೋಪಾಲ್‌ ಯಡಗೆರೆ

 ಶಿವಮೊಗ್ಗ (ಮೇ.28):  ಕೊರೋನಾ ಸೋಂಕು ಮತ್ತದರ ಚಿಕಿತ್ಸೆಯಲ್ಲಿ ಜನರ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಜೀವದುಸಿರಾದ ಆಮ್ಲಜನಕ ಪೂರೈಕೆ ಸಮಸ್ಯೆಗೆ ಜಿಲ್ಲಾಡಳಿತ ಶಾಶ್ವತ ಪರಿಹಾರವೊಂದನ್ನು ಕಂಡುಕೊಂಡಿದೆ. ಪ್ರತಿ ತಾಲೂಕಿನಲ್ಲಿ ಆಮ್ಲಜನಕ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸುವ ಯೋಜನೆಯೊಂದನ್ನು ರೂಪಿಸಿದ್ದು, ಸರ್ಕಾರದ ಅನುಮತಿಗಾಗಿ ಕಾಯುತ್ತಲಿದೆ.

ವಾತಾವರಣದ ಗಾಳಿಯಿಂದ ನೇರವಾಗಿ ಆಮ್ಲಜನಕ ಉತ್ಪಾದಿಸುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದ್ದು, ಇದರಿಂದ ಶೇ.99 ರಷ್ಟುಶುದ್ಧ ಆಮ್ಲಜನಕ ದೊರೆಯಲಿದೆ. ಸುಮಾರು 75-80 ಲಕ್ಷ ರು. ವೆಚ್ಚದಲ್ಲಿನ ‘ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌’ ಘಟಕ ಇದಾಗಿರಲಿದ್ದು, ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆ ಇದಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ತಿಂಗಳಲ್ಲಿ ಇದು ಎಲ್ಲ ತಾಲೂಕುಗಳಲ್ಲಿ ಸ್ಥಾಪನೆಯಾಗಲಿದೆ. ಈಗಾಗಲೇ ರಾಜ್ಯದಲ್ಲಿ ಮೂರ್ನಾಲ್ಕು ತಾಲೂಕುಗಳಲ್ಲಿ ಮಾತ್ರ ಇಂತಹ ಘಟಕ ಇದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸ್ಥಾಪನೆಯಾಗುವ ರಾಜ್ಯದಲ್ಲಿಯೇ ಮೊದಲ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ ಶಿಕಾರಿಪುರದಲ್ಲಿ ಸ್ಥಾಪನೆಯಾಗಿದ್ದು, ಸಾಗರ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಸ್ಥಾಪನೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಉಳಿದ ತಾಲೂಕುಗಳಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ನೀಲನಕ್ಷೆಯೊಂದಿಗೆ ಸರ್ಕಾರಕ್ಕೆ ಕಳುಹಿಸಲಾಗಿದೆ.

ಶಿವಮೊಗ್ಗದಲ್ಲಿ ಆಂಬುಲೆನ್ಸ್ ದುಬಾರಿ ದರಕ್ಕೆ ಬ್ರೇಕ್ : ಪ್ರೀಪೇಯ್ಡ್ ವ್ಯವಸ್ಥೆ ಜಾರಿ

ಪ್ರತಿ ನಿಮಿಷಕ್ಕೆ 400 ಲೀಟರ್‌ ಶುದ್ಧ ಆಮ್ಲಜನಕ ಉತ್ಪಾದಿಸಲಿದ್ದು, ಇದರಿಂದ ಏಕಕಾಲಕ್ಕೆ ಕನಿಷ್ಟ40 ಜನ ರೋಗಿಗಳಿಗೆ ಆಮ್ಲಜನಕ ಪೂರೈಸಬಹುದಾಗಿದೆ. ಇದನ್ನು ಸಂಗ್ರಹಿಸಲು ಟ್ಯಾಂಕ್‌ ಒಂದು ನಿರ್ಮಿಸಲಾಗುತ್ತದೆ. ಈ ಟ್ಯಾಂಕ್‌ನಲ್ಲಿ ಶೇ. 25 ರಷ್ಟುಆಮ್ಲಜನಕ ಖಾಲಿಯಾಗುತ್ತಿದ್ದಂತೆ ಈ ಯಂತ್ರ ಚಾಲನೆಗೊಂಡು ಆಮ್ಲಜನಕ ಉತ್ಪಾದನೆಯಾಗುತ್ತದೆ. ಟ್ಯಾಂಕ್‌ ತುಂಬಿದಾಕ್ಷಣ ಈ ಯಂತ್ರ ತನ್ನ ಉತ್ಪಾದನೆ ನಿಲ್ಲಿಸುತ್ತದೆ. ಈ ಯಂತ್ರಕ್ಕೆ ನಿರಂತರವಾಗಿ ವಿದ್ಯುತ್‌ ಪೂರೈಸುವ ವ್ಯವಸ್ಥೆ ಕೂಡ ಇದ್ದು, ಜೊತೆಗೆ ಜನರೇಟರ್‌ ಕೂಡ ಸ್ಥಾಪನೆಯಾಗಲಿದೆ. ಈ ಸಂಗ್ರಹಕಾರದಿಂದ ಕೊಳವೆ ಮೂಲಕ ರೋಗಿಗಳು ಇರುವ ಬೆಡ್‌ಗಳಿಗೆ ಆಮ್ಲಜನಕ ಪೂರೈಕೆಯಾಗುತ್ತದೆ.

ಶಿವಮೊಗ್ಗದಲ್ಲಿ ವ್ಯಾಕ್ಸಿನ್ ಕೊರತೆ : ಸೆಕೆಂಡ್‌ ಡೋಸ್‌ಗೆ ಆದ್ಯತೆ ..

ಇದನ್ನು ಸ್ಥಾಪಿಸಲಿರುವ ಖಾಸಗಿ ಸಂಸ್ಥೆಯು ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಈ ಯಂತ್ರ ಸ್ಥಾಪನೆಗೆ ಬೇಕಾದ ಹಣವನ್ನು ಸಿಎಸ್‌ಆರ್‌, ಶಾಸಕರ ನಿಧಿ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಹಾಗೂ ಸರ್ಕಾರದ ನೆರವಿನಿಂದ ಪಡೆಯುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಗೆ ಈಗಾಗಲೇ ಬಹುತೇಕ ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ದಿನಗಳಲ್ಲಿ ಯಾವ ತಾಲೂಕಿನಲ್ಲಿ ಕೂಡ ಆಕ್ಸಿಜನ್‌ ಕೊರತೆ ಎಂಬುದು ಇಲ್ಲವಾಗುತ್ತದೆ. ಈ ಯಂತ್ರದಿಂದ ಉತ್ಪಾದನೆಯಾಗುವ ಆಮ್ಲಜನಕ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತ. ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಎಂಬ ಮಾತು ತಿಂಗಳೊಳಗಾಗಿ ಮಾಯವಾಗುತ್ತದೆ.

click me!