ಉಡುಪಿ‌ ಜಿಲ್ಲೆಯಲ್ಲಿ ಮತ್ತೆ ಮಳೆ: ಇಲಿ ಜ್ವರ ಭೀತಿ

By Govindaraj SFirst Published Sep 7, 2022, 1:27 PM IST
Highlights

ಜಿಲ್ಲೆಯಲ್ಲಿ ಬಿಸಿಲು ಮತ್ತು ಮಳೆಯ ವಾತಾವರಣ ಇದೆ. ದಿನವಿಡೀ ಬಿಸಿಲಿದ್ದರೆ ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಗುತ್ತಿದೆ. ಕರಾವಳಿಯಲ್ಲಿ ಬದಲಾಗುತ್ತಿರುವ ಹವಾಮಾನದಿಂದಾಗಿ ಸಾಂಕ್ರಾಮಿಕ ರೋಗಬಾಧೆ ಮತ್ತಷ್ಟು ಜನರನ್ನು ಕಾಡುತ್ತಿದೆ. 

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ಸೆ.07): ಜಿಲ್ಲೆಯಲ್ಲಿ ಬಿಸಿಲು ಮತ್ತು ಮಳೆಯ ವಾತಾವರಣ ಇದೆ. ದಿನವಿಡೀ ಬಿಸಿಲಿದ್ದರೆ ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಗುತ್ತಿದೆ. ಕರಾವಳಿಯಲ್ಲಿ ಬದಲಾಗುತ್ತಿರುವ ಹವಾಮಾನದಿಂದಾಗಿ ಸಾಂಕ್ರಾಮಿಕ ರೋಗಬಾಧೆ ಮತ್ತಷ್ಟು ಜನರನ್ನು ಕಾಡುತ್ತಿದೆ. ತೀರಾ ಇತ್ತೀಚೆಗೆ ಶೀತ, ಜ್ವರ, ಕೆಮ್ಮು, ಗಂಟಲು ನೋವು, ವಾಂತಿ, ಅಲರ್ಜಿಯಿಂದ ಬಳಲುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರಲ್ಲೂ ಜ್ವರ ಭಾದೆ ಅತಿಯಾಗಿ ಜನರನ್ನು ಪೀಡಿಸುತ್ತಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ 2022ರ ಜನವರಿಯಿಂದ ಈ ತನಕ ನೂರಾರು ಮಂದಿಯ ರಕ್ತ ಮಾದರಿ ಸಂಗ್ರಹಿಸಿದ್ದು, ಜುಲೈ ಅಂತ್ಯದವರೆಗೆ 158 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. 

ಅಪಾಯಕಾರಿಯದ ಇಲಿ ಜ್ವರ ಕರಾವಳಿಗರ ನಿದ್ದೆಗೆಡಿಸಿದೆ. ಉಡುಪಿ ತಾಲೂಕಿನಲ್ಲಿ 54 ಮಂದಿ, ಕುಂದಾಪುರದಲ್ಲಿ 76 ಮಂದಿ ಹಾಗೂ ಕಾರ್ಕಳದಲ್ಲಿ 28 ಮಂದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ. ಕುಂದಾಪುರ ತಾಲೂಕಿನಲ್ಲಿ ಜುಲೈಯಲ್ಲಿ ಅತೀ ಹೆಚ್ಚು 32 ಕೇಸ್‌ಗಳು ಪತ್ತೆಯಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 305 ಮಂದಿಗೆ ಇಲಿ ಜ್ವರ ಬಾಧಿಸಿದೆ. ಕೊರೋನಾ- ಮಂಕಿ ಫಾಕ್ಸ್ ಆತಂಕ ಕಡಿಮೆಯಾಗುತ್ತಿದ್ದಂತೆ ಇಲಿ ಜ್ವರದ ಭೀತಿ ಹೆಚ್ಚಾಗಿದೆ. ಸಾಮಾನ್ಯ ಜ್ವರದಂತೆ ಕಂಡರೂ ಇಲಿ ಜ್ವರ ಅತ್ಯಂತ ಮಾರಕವಾಗಿದೆ. 

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಅಗ್ನಿಪಥ್‌ ಸೈನಿಕ ಶಾಲೆ: ಸಚಿವ ಕೋಟ

ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಕಿಡ್ನಿ ,ಮೆದುಳು, ಯಕೃತ್ ಹಾನಿಯಾಗುವ ಅಪಾಯವಿದೆ. ಮಳೆ- ನೆರೆ ಬಂದರೆ ಇಲಿ ಜ್ವರ ಭೀತಿ ಹೆಚ್ಚು. ಇಲಿಯ ಮೂತ್ರ ಮಳೆ ನೀರು ಸೇರಿದಾಗ ಇಲಿ ಜ್ವರ ಭೀತಿ ಉಂಟಾಗುತ್ತೆ. ಗದ್ದೆಗಳಲ್ಲಿ ನಿಂತ  ನೀರಿನಿಂದ ಕೃಷಿಕರಿಗೆ ಇಲಿ ಜ್ವರದ ಅಪಾಯ ಹೆಚ್ಚು. ಕಾಲಿನಲ್ಲಿರುವ ಬಿರುಕುಗಳಿಂದ ದೇಹ ಪ್ರವೇಶಿಸುವ ರೋಗಾಣು ಜ್ವರ ಹಬ್ಬಲು ಕಾರಣವಾಗುತ್ತೆ. ಇಲಿ, ಹಸು, ನಾಯಿ, ಹಂದಿ ಮೂಲಕವೂ ಇಲಿ ಜ್ವರ ಹಬ್ಬುತ್ತೆ. ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣ. 

ರೋಗಾಣು ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ತೀವ್ರತರದ ಜ್ಚರ ಕಾಣಿಸಿಕೊಳ್ಳುತ್ತೆ. ಮೈಕೈ ನೋವು, ತಲೆನೋವು , ಕೆಲವೊಮ್ಮೆ ವಾಂತಿ, ಹೊಟ್ಟೆ ನೋವು,  ರಕ್ತಸ್ರಾವ, ಕಾಮಾಲೆ ಕಾಣಿಸಿಕೊಂಡರೆ ದೇಹದ ಎಲ್ಲಾ ಅಂಗಗಳಿಗೂ ರೋಗಾಣು ಪ್ರವೇಶವಾಗಿದೆ ಎಂದರ್ಥ. ಬೇಸಾಯಗಾರರು, ಮೀನುಗಾರರು, ಹಂದಿ ಸಾಕುವವರು, ಚರಂಡಿ ಕೂಲಿ ಕಾರ್ಮಿಕರು, ಮಾಂಸದ ವ್ಯಾಪಾರಿಗಳಿಗೆ ಹೆಚ್ಚಿನ ಜ್ವರ ಭೀತಿ ಹೆಚ್ಚು. ಸಕಾಲದಲ್ಲಿ ಚಿಕಿತ್ಸೆ ದೊರೆತರೆ, ಗುಣಮುಖರಾಗಲಿದ್ದು, ಜ್ವರ, ಮೈ ಕೈ ನೋವು, ತಲೆನೋವು, ವಾಂತಿ, ಹೊಟ್ಟೆ ನೋವು, ಕಣ್ಣು ನೋವು ಇಲಿ ಜ್ವರದ ಲಕ್ಷಣವಾಗಿದೆ. 

Udupi: ರಸ್ತೆ ರಾದ್ದಾಂತಕ್ಕೆ ಮಾರಾಮಾರಿ, ಮಹಿಳೆಯ ಹಣೆಯಿಂದ ಚಿಮ್ಮಿದ ರಕ್ತ

ಹಾಗಂತ ಯಾರೂ ಭಯಭೀತರಾಗಬೇಕಿಲ್ಲ, ರೋಗದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ಬೇಸಾಯಗಾರರು, ಮೀನುಗಾರರು, ಹಂದಿ ಸಾಕಣೆ ಮಾಡುವವರು, ಕೂಲಿ ಕಾರ್ಮಿಕರು, ಮಾಂಸ ವ್ಯಾಪಾರಿಗಳು ಸೇರಿ ದಂತೆ ಅನೇಕರಲ್ಲಿ ಈ ಜ್ವರದ ಭೀತಿ ಎದುರಾಗಿದ್ದು ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕರೆ ಗುಣಮುಖರಾಗುತ್ತಾರೆ. ಕೆಲ ಮರಣಾಂತಿಕ ಕಾಯಿಲೆಯುಳ್ಳವವರು ಈ ರೀತಿಯ ಲಕ್ಷಣವಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನಾ ತಿಳಿಸಿದ್ದಾರೆ.

click me!