Latest Videos

ನೀರಿನ ಸಮಸ್ಯೆ ತಲೆದೂರದಂತೆ ನಿಗಾವಹಿಸಿ: ಶಾಸಕ ಲಕ್ಷ್ಮಣ ಸವದಿ ಸೂಚನೆ

By Kannadaprabha NewsFirst Published Jun 29, 2023, 11:59 PM IST
Highlights

ಮಳೆಯಾಗಿ ನದಿಗೆ ನೀರು ಬರುವವರೆಗೆ ಅಥಣಿ ಪಟ್ಟಣದ ಪುರಸಭೆ ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಹೆಚ್ಚಿನ ನಿಗಾ ವಹಿಸಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು. 

ಅಥಣಿ (ಜೂ.29): ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಬತ್ತುವ ಹಂತದಲ್ಲಿದ್ದು, ಹೀಗಾಗಿ ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮಳೆಯಾಗಿ ನದಿಗೆ ನೀರು ಬರುವವರೆಗೆ ಅಥಣಿ ಪಟ್ಟಣದ ಪುರಸಭೆ ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಹೆಚ್ಚಿನ ನಿಗಾ ವಹಿಸಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಸದಸ್ಯರ ಮತ್ತು ಅಧಿಕಾರಿಗಳ ಸಭೆ ನಡೆಸಿ ಸದಸ್ಯರ ಮೂಲಕ ಬಂದ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 

ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿದ್ದು, ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಮಾದರಿ ಪಟ್ಟಣವನ್ನು ರೂಪಿಸುವ ನಿಟ್ಟಿನಲ್ಲಿ ಅಧಿವೇಶನದ ನಂತರ ಇನ್ನೊಂದು ಸಭೆಯಲ್ಲಿ ಚರ್ಚಿಸೋಣ. ಈಗ ಎಲ್ಲಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ವಾರದಲ್ಲಿ ಮೂರು ದಿನ ಮಾತ್ರ ನೀರು ಬಿಡುತ್ತಿರುವುದರಿಂದ ಅನೇಕ ನಿವಾಸಿಗಳಿಗೆ ಸರಿಯಾಗಿ ನೀರು ಲಭ್ಯವಾಗುತ್ತಿಲ್ಲ. 

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ಯಾವ ವಾರ್ಡ್‌ನ ಜನರಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರಿನ ಮೂಲಗಳನ್ನು ಗುರುತಿಸಿ, ಅಗತ್ಯ ಬಿದ್ದರೇ ಬೋರ್‌ವೆಲ್ ಮತ್ತು ಬಾವಿಗಳಿಗೆ ಪಂಪ್‌ಸಟ್‌ ಅಳವಡಿಸಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ತಹಸೀಲ್ದಾರ್‌ ಮತ್ತು ಉಪವಿಭಾಗ ಅಧಿಕಾರಿಗಳಿಗೆ ಈಗಾಗಲೇ ನದಿ ಪಾತ್ರದ ಗ್ರಾಮಗಳಲ್ಲಿ ಬೆಳೆಗಳಿಗೆ ನೀರು ಕೊಡುವುದನ್ನು ನಿಲ್ಲಿಸಿ ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮಳೆ ಆಗುವವರಿಗೆ ಇರುವ ನೀರನ್ನು ಕಾಯ್ದಿರಿಸಿಕೊಂಡು ಪಟ್ಟಣಕ್ಕೆ ನೀರು ಒದಗಿಸಬೇಕು. ಅದರಂತೆ ಚರಂಡಿಗಳನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸದೆ ಇರುವ ದೂರುಗಳು ಬಂದಿವೆ. ಆರೋಗ್ಯದ ಹಿತ ದೃಷ್ಟಿಯಿಂದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟಿನ ಸೂಚನೆ ನೀಡಿದರು.

ಪುರಸಭೆ ಸದಸ್ಯರ ಸಮಸ್ಯೆ ಆಲಿಸಿದ ಶಾಸಕರು: ಅಥಣಿ ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತಿಸುವುದು, ಪೌರಕಾರ್ಮಿಕ ಸಿಬ್ಬಂದಿಯನ್ನು ಹೆಚ್ಚಿಸುವುದು, ಪುರಸಭೆ ಹೊಸ ಕಟ್ಟಡ ನಿರ್ಮಾಣ, ಜೋಡಿ ಕೆರೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ, ಪಟ್ಟಣದಲ್ಲಿ ಪಾರ್ಕಿಂಗ್‌ ಸಮಸ್ಯೆ, ಟ್ರಾಫಿಕ್‌ ಸಮಸ್ಯೆ, ಚರಂಡಿಗಳ ಸಮಸ್ಯೆ, ಶೌಚಾಲಯಗಳ ಸಮಸ್ಯೆ, ಮಾರುಕಟ್ಟೆಯ ಸಮಸ್ಯೆ, ಸ್ಮಶಾನದ ಸಮಸ್ಯೆ, ಉದ್ಯಾನವನ ಮತ್ತು ನಾಗರಿಕ ಸೌಲಭ್ಯಗಳ ಒತ್ತುವರಿ ಮಾಡಿರುವುದು.

ವಾಣಿಜ್ಯ ಮಳಿಗೆಗಳ ಮರು ಟೆಂಡರ್‌ ಆಗದೆ ಇರುವುದು, ತಿಪ್ಪೆ ಗುಂಡಿಗಳ ತೆರವು, ಬೈಪಾಸ್‌ ರಸ್ತೆಯ ನಿರ್ಮಾಣ, ಪಟ್ಟಣದಲ್ಲಿ ಹಾದು ಹೋಗುವ ಹಳ್ಳ ಮತ್ತು ಬ್ರಿಡ್ಜ್‌ಗಳ ಸುಧಾರಣೆ ತೀರಿದಂತೆ ಅನೇಕ ಸಮಸ್ಯೆಗಳ ಕುರಿತು ಶಾಸಕರು ಪುರಸಭೆ ಸದಸ್ಯರಿಂದ ಮಾಹಿತಿ ಪಡೆದುಕೊಂಡರು. ಅಥಣಿ ಅಭಿವೃದ್ಧಿಯ ದೃಷ್ಟಿಕೋನದಿಂದ ಪುರಸಭೆ ಸದಸ್ಯರು ಹೊಸ ಆಲೋಚನೆಗಳನ್ನು ಮಾಡಿಕೊಂಡು ಬನ್ನಿ, ಅಧಿವೇಶನದ ನಂತರ ಮತ್ತೊಮ್ಮೆ ಸಭೆ ಸೇರಿ ಪಟ್ಟಣದ 27 ವಾರ್ಡ್‌ಗಳ ಸರ್ವಾಂಗಿನ ಅಭಿವೃದ್ಧಿಗಾಗಿ ಚರ್ಚಿಸೋಣ ಎಂದು ತಿಳಿಸಿದರು.

ಮರು ಟೆಂಡರ್‌ ಕರೆಯುವಂತೆ ಸೂಚನೆ: ನಗರೋತ್ಥಾನ ಯೋಜನೆಯ .10 ಕೋಟಿ ಅನುದಾನವನ್ನು ಚುನಾಯಿತರಾದ ಪುರಸಭೆಯ ಸದಸ್ಯರ ಗಮನಕ್ಕೆ ತರದೆ ನಿಮಗೆ ಬೇಕಾದವರಿಗೆ ಟೆಂಡರ್‌ ನೀಡಿ ಕೆಲವಡೆ ಕಳಪೆ ಕಾಮಗಾರಿ ಮಾಡಿದ್ದೀರಿ, ಇನ್ನು ಕೆಲವೇ ಸಿ ಸಿ ರಸ್ತೆಗಳು ಚೆನ್ನಾಗಿದ್ದರೂ ಡಾಂಬರೀಕರಣ ಮಾಡಿ ಬಿಲ್ ಪಾಸ್‌ ಮಾಡಿದ್ದೀರಿ. ಇನ್ನು ಅನೇಕ ಕಾಮಗಾರಿಗಳನ್ನ ಅರ್ಧದಲ್ಲಿ ನಿಲ್ಲಿಸಿದ್ದೀರಿ. ಇಲ್ಲಸಲ್ಲದ ನೆಪ ಹೇಳಿದರೆ ನಡಿಯಲ್ಲ. ಇದರಲ್ಲಿ ಭ್ರಷ್ಟಾಚಾರ ಮಾಡಿದ್ದರೇ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. 

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ಕೈ ಬಿಟ್ಟ ಸರ್ಕಾರ: ಆದೇಶ ವಾಪಸ್‌ ಪಡೆದ ಸಹಕಾರ ಇಲಾಖೆ

ಪಟ್ಟಣದ ಅಭಿವೃದ್ಧಿಗೆ ಬಂದಿರುವ 10 ಕೋಟಿ ಸಣ್ಣದಲ್ಲ. ಎಲ್ಲ ವಾರ್ಡ್‌ನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಅನುಗುಣವಾಗಿ 27 ವಾರ್ಡ್‌ ಗಳಿಗೂ ಆದ್ಯತೆ ನೀಡಿ ಅಭಿವೃದ್ಧಿ ಕೈಗೊಳ್ಳಬೇಕು. ಈಗಾಗಿರುವ ಟೆಂಡರ್‌ ಅನ್ನು ರದ್ದುಗೊಳಿಸಿ ಕೂಡಲೇ ಮರು ಟೆಂಡರ್‌ ನಡೆಸಿ ಕಾಮಗಾರಿಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಅಭಿಯಂತರ ಎಸ್‌.ಆರ್‌.ಚೌಗಲಾ, ವರ್ಧಮಾನ ಹುದ್ದಾರ, ಕುಮಾರ ಮಾಳಿ, ಸಹದೇವ ಅವಟಿ, ಪುರಸಭಾ ಪೌರಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

click me!