‘ಮಾಧ್ಯಮಗಳು ಸಾಕುನಾಯಿ ಆಗದಂತೆ ಎಚ್ಚರಿಕೆ ವಹಿಸಬೇಕು’

Kannadaprabha News   | Asianet News
Published : Feb 08, 2020, 08:46 AM ISTUpdated : Feb 08, 2020, 12:01 PM IST
‘ಮಾಧ್ಯಮಗಳು  ಸಾಕುನಾಯಿ ಆಗದಂತೆ ಎಚ್ಚರಿಕೆ ವಹಿಸಬೇಕು’

ಸಾರಾಂಶ

ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತರ ಒಕ್ಕೊರಲ ಅಭಿಮತ | ಪತ್ರಿಕೆ ಮತ್ತೆ ಕಚ್ಚುವುದು, ಬೊಗಳುವುದನ್ನು ಶುರು ಮಾಡಬೇಕು: ರವೀಂದ್ರ ಭಟ್|

ಕಲಬುರಗಿ[ಫೆ.08]:  ಪತ್ರಿಕಾ ಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಓದುಗರ ನಂಬಿಕೆ ಕಳಕೊಳ್ಳದೇ ಇರುವುದೇ ಮಾಧ್ಯಮದ ಮುಂದಿರುವ ಅತಿದೊಡ್ಡ ಸವಾಲು. ಕಾವಲುನಾಯಿ ಆಗಿರುವ ಮಾಧ್ಯಮ ಸಾಕುನಾಯಿ ಆಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲರ ಕೈಗೂ ಮೊಬೈಲು ಬಂದಿರುವುದು ಪತ್ರಿಕಾ ಮಾಧ್ಯಮಕ್ಕೆ ಕಂಟಕ. ಮುದ್ರಣಮಾಧ್ಯಮ ಕನ್ನಡವನ್ನು ಉಳಿಸದೇ ಹೋದರೆ ಮಾಧ್ಯಮ ಉಳಿಯಲಾರದು. ಪತ್ರಿಕೆ ಕೊಂಡು ಓದಿ ಕಾಪಾಡಬೇಕು. ಮಾಧ್ಯಮ ಮಾಲೀಕರ ಮರ್ಜಿಗೆ ಬಿದ್ದು ವರ್ತಿಸಿದರೆ ನಂಬಿಕೆ ಕಳಕೊ ಳ್ಳುತ್ತದೆ. ಸಮಯದ ಜೊತೆ ಹೋರಾಡುವುದೇ ವಿದ್ಯು ನ್ಮಾನ ಮತ್ತು ಡಿಜಿಟಲ್ ಮಾಧ್ಯಮದ ಸಂಕಟ. ಮಾಧ್ಯಮದ ಮುಂದಿರುವ ಸವಾಲುಗಳು ಗೋಷ್ಠಿಯಲ್ಲಿ ಕೇಳಿಬಂದ ಮಾತುಗಳಿವು. 

ಮುದ್ರಣ, ದೃಶ್ಯ, ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಮುಂದಿರುವ ಸವಾಲುಗಳ ಕುರಿತು ಗೋಷ್ಠಿ ಅನೇಕ ಮೌಲಿಕ ವಿಚಾರಗಳನ್ನು ಮುಕ್ತವಾಗಿ ತೆರೆದಿಟ್ಟಿತು. ನಾವು ಜನಸಾಮಾನ್ಯರು, ರೈತರು ಮತ್ತು ನೊಂದವರ ಬಗ್ಗೆ ಬರೆಯದೇ ಹೋದರೆ ಸಮಸ್ಯೆ ಖಚಿತ. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಿಕೋದ್ಯಮ ಎಂಬ ಕಾವಲುನಾಯಿ ಪರಿಚಿತರನ್ನು ಕಂಡರೆ ಸುಮ್ಮನಿರುತ್ತೆ. ಈಗ ಪತ್ರಿಕೆ ಕಚ್ಚುವುದು ಮತ್ತು ಬೊಗಳುವುದನ್ನು ಶುರುಮಾಡಬೇಕಿದೆ ಎಂದು ಪ್ರಜಾವಾಣಿ ಕಾರ್ಯನಿ ರ್ವಾಹಕ ಸಂಪಾದಕ ರವೀಂದ್ರ ಭಟ್ ಎಂದರು. 

ನುಡಿ ಸಮ್ಮೇಳನದಲ್ಲಿ ಅನ್ನ ದಾಸೋಹ: ಅಡುಗೆಯಲ್ಲೂ ಹೊಸ ದಾಖಲೆ

ಪತ್ರಕರ್ತರಿಗೆ ಸೇವಾ ಭದ್ರತೆ ಇಲ್ಲವೇ ಇಲ್ಲ. ಅಧ್ಯಯನದ ಕೊರತೆ ಕಾಡುತ್ತಿದೆ. ಜಾಹೀರಾತಿನ ಕೊರತೆಯಿಂದ ಪತ್ರಿಕೋದ್ಯಮ ಬಡವಾಗಿದೆ. ಹೊಸ ಜಾಹೀರಾತು ನೀತಿ ಸರ್ಕಾರ ಘೋಷಿಸಬೇಕು ಮತ್ತು ಮುದ್ರಣ ಕಾಗದದ ಮೇಲಿನ ಸುಂಕವನ್ನು ಪೂರ್ತಿಯಾಗಿ ತೆಗೆದುಹಾಕಬೇಕು ಎಂದು ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಪತ್ರಿಕೋದ್ಯಮದ ಸಮಸ್ಯೆ ಬಿಡಿಸಿಟ್ಟರು. 

ದೃಶ್ಯ ಮಾಧ್ಯಮದ ಸಮಸ್ಯೆ ಕುರಿತು ಮಾತಾಡಿದ ಸುವರ್ಣ ವಾಹಿನಿಯ ಎ.ಎಸ್. ರಮಾಕಾಂತ್, ಉದ್ಯಮಪತಿಗಳು ಲಾಭ ಬಯಸುತ್ತಾರೆ. ಟೀವಿ ವಾಹಿನಿ ಆರಂಭಿಸಿದ ಮಾಲೀಕ ಒಂದು ತಿಂಗಳಿಗೆ ಎರಡೂವರೆ ಕೋಟಿ ರು. ಖರ್ಚು ಮಾಡಬೇಕಾಗುತ್ತದೆ. ತಕ್ಷಣವೇ ಆತ ಹಾಕಿದ ಬಂಡವಾಳ ಮರಳಿ ಬರಬೇಕು ಎಂದು ಆಶಿಸುತ್ತಾನೆ. ಕಾಯುವ ತಾಳ್ಮೆ ಟೀವಿ ಉದ್ಯಮಿಗಳಲ್ಲಿ ಇಲ್ಲ ಎಂದರು. 

ಕಲಬುರಗಿ ಅಕ್ಷರ ಜಾತ್ರೆಗೆ ತೆರೆ: 8 ಲಕ್ಷ ಜನ ಸಮ್ಮೇಳನಕ್ಕೆ ಭೇಟಿ

ಟೀವಿ ಪತ್ರಕರ್ತರಿಗೆ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಸಮಯಾವಕಾಶ ಕೊಡುವುದಿಲ್ಲ. ಜನ ಬಯಸಿದ್ದನ್ನು ಕೊಡುವುದೇ ಪತ್ರಿಕೋದ್ಯಮ ಆಗಿದೆ. ಇವತ್ತು ಒಬ್ಬ ಗಾಯಕನ ಕಾರ್ಯಕ್ರಮ ಜನಮೆಚ್ಚುಗೆ ಗಳಿಸುತ್ತಿದೆ. ಒಳ್ಳೆಯ ಕಾರ್ಯಕ್ರಮ ಕೊಟ್ಟರೆ ಅದನ್ನು ನೋಡುವವರೇ ಇರುವುದಿಲ್ಲ. ಮೂವತ್ತು ನಿಮಿಷದ ಸುದ್ದಿಯಲ್ಲಿ ಹನ್ನೆರಡು ನಿಮಿಷ ಜಾಹೀರಾತು ತುರುಕುತ್ತಾರೆ. ಅಲ್ಲದೇ ಜಾಹೀರಾತು ಮತ್ತು ಮಾರುಕಟ್ಟೆ ವಿಭಾಗದಿಂದಲೂ ಒತ್ತಡ ಹೇರುತ್ತಾರೆ. ಈ ಮಧ್ಯೆ ರೋಬೋ ಸುದ್ದಿವಾಚಕ ಮಾರುಕಟ್ಟೆಗೆ ಬರುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳು ದೃಶ್ಯ ಮಾಧ್ಯಮದ ಸುದ್ದಿಗಳನ್ನು ತಿರುಚುವ ಮೂಲಕ ನಿರೂಪಕರನ್ನು ಅವಹೇಳನ ಮಾಡುತ್ತಿದೆ ಎಂದು ರಮಾಕಾಂತ್ ಆರೋಪಿಸಿದರು. 

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಸಾಕುನಾಯಿ ಆಗಿರುವ ಮುದ್ರಣ ಮಾಧ್ಯಮ ಕ್ರಿಯಾತ್ಮಕವಾಗಿ, ಗುಣಾತ್ಮಕ ವಾಗಿ ಮತ್ತು ವಿಷಯಾತ್ಮ ಕವಾಗಿ ಕಚ್ಚುವ ನಾಯಿಯಾ ಗಬೇಕು ಎಂದು ಅಭಿಪ್ರಾಯಪಟ್ಟರು. ಗೋಷ್ಠಿಯಲ್ಲಿ ಕೋಡಿಬೆಟ್ಟು ರಾಜಲಕ್ಷ್ಮಿ ಹಾಗೂ ಲಕ್ಷ್ಮಣ ಹೂಗಾರ್ ತಮ್ಮ ವಿಚಾರಗಳನ್ನು ಮಂಡಿಸಿದರು.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ