ಕನ್ನಡ ಭಾಷೆಗೆ ಕುತ್ತು ತರಲು ಹೊರಟಿದೆಯಾ ಬಳ್ಳಾರಿ ವಿವಿ?

By Web DeskFirst Published Dec 2, 2019, 10:13 AM IST
Highlights

ನಾಲ್ಕನೇ ಸೆಮಿಸ್ಟರ್‌ನಲ್ಲಿ ಕನ್ನಡಕ್ಕೆ ಕೊಕ್‌?| ಕನ್ನಡ ಭಾಷೆಯ ಕಲಿಕೆಗೆ ಕುತ್ತು| ಭಾರಿ ವಿರೋಧದ ನಡುವೆಯೂ ಕೊಕ್‌ ಕೊಡಲು ಮುಂದಾಗ ಶ್ರೀಕೃಷ್ಣದೇವರಾಯ ವಿವಿ| ಇಂಥ ಪ್ರಯತ್ನಕ್ಕೆ ತೀವ್ರ ವಿರೋಧದಿಂದ ಹಿಂದೆ ಸರಿದಿದ್ದ ಕಲಬುರಗಿ ವಿವಿ| 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.02): ಕೌಶಲ್ಯಾಧಾರಿತ ಶಿಕ್ಷಣ ನೀಡುವ ನೆಪದಲ್ಲಿ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕನ್ನಡಕ್ಕೆ ಕುತ್ತು ತರಲು ಹೊರಟಿದೆ. ಪದವಿ ವರ್ಗದ ನಾಲ್ಕನೇ ಸೆಮಿಸ್ಟರ್‌ಗೆ ಕನ್ನಡ ವಿಷಯವನ್ನೇ ತೆಗೆದು ಹಾಕಲು ಮುಂದಾಗಿರುವುದು ಕನ್ನಡ ಪ್ರಾಧ್ಯಾಪಕರು ಮತ್ತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಸಿದ್ಧತೆ ಮಾಡಿಕೊಂಡಿರುವ ವಿಶ್ವವಿದ್ಯಾಲಯ ಅಂತಿಮವಾಗಿ ಚರ್ಚಿಸಲು ಡಿ. 3ರಂದು ಸಭೆ ನಿಗದಿ ಮಾಡಿದೆ. ಸಭೆ ಕೇವಲ ಔಪಚಾರಿಕವಾಗಿದ್ದು, ಈಗಾಗಲೇ ಆಂತರಿಕವಾಗಿ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.
ಪದವಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈಗ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಭಾಷಾ ಅಭ್ಯಾಸ ಮಾಡುತ್ತಾರೆ. ಈಗ ಕೇವಲ ಮೂರು ಸೆಮಿಸ್ಟರ್‌ಗೆ ಮಾತ್ರ ಸೀಮಿತ ಮಾಡುವ ಹುನ್ನಾರವನ್ನು ವಿವಿ ನಡೆಸಿದೆ. ಕನ್ನಡ ಭಾಷಾ ಕೌಶಲ್ಯದಲ್ಲಿ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಪದವಿಯಲ್ಲಿ ಕನ್ನಡ ಭಾಷೆ ಅಭ್ಯಾಸ ಮಾಡಿದರೂ ಅಷ್ಟೊಂದು ನಿರ್ದಿಷ್ಟ ಕನ್ನಡ ಕಲಿಯಲು ಆಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ವಿವರಣಾತ್ಮಕ ಪರೀಕ್ಷೆ ಬರೆದು ತೇರ್ಗಡೆಯಾಗುವಲ್ಲಿ ವಿಫಲವಾಗುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

10 ಸಾವಿರ ಹುದ್ದೆಗೆ ಪರೀಕ್ಷೆ ಬರೆದವರು ವಿವರಣಾತ್ಮಕ ಪರೀಕ್ಷೆಯಲ್ಲಿ ಕೇವಲ 2500 ಅಭ್ಯರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. ಇದರಿಂದ 7500 ಹುದ್ದೆಗಳು ಖಾಲಿ ಉಳಿಯುವಂತೆ ಆಗಿದೆ. ಕನ್ನಡ ಭಾಷೆಯ ಸಾಮರ್ಥ್ಯದ ಸಮಸ್ಯೆ ಇಷ್ಟು ಗಂಭೀರವಾಗಿ ಇದ್ದರೂ ನಾಲ್ಕನೇ ಸೆಮಿಸ್ಟರಿಯಲ್ಲಿ ಇದ್ದ ಕನ್ನಡ ಭಾಷಾ ವಿಷಯವನ್ನು ತೆಗೆದು ಹಾಕುತ್ತಿರುವುದು ಮಾತ್ರ ಕನ್ನಡ ವಿರೋಧಿ ಧೋರಣೆಯೇ ಸರಿ.

ಅಧ್ಯಾಪಕರಿಗೂ ಕುತ್ತು:

ಕನ್ನಡ ಭಾಷಾ ವಿಷಯವನ್ನು ಒಂದು ಸೆಮಿಸ್ಟರಿಗೆ ತೆಗೆದು ಹಾಕುತ್ತಿರುವುದರಿಂದ ಅಧ್ಯಾಪಕ ವೃತ್ತಿಗೂ ಕುತ್ತು ಬರಲಿದೆ. ಈಗಿರುವ ಹುದ್ದೆಗಳನ್ನು ಕಡಿತ ಮಾಡಬೇಕಾಗುತ್ತದೆ. ಅಲ್ಲದೆ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ತೆಗೆದು ಹಾಕಬೇಕಾಗುತ್ತದೆ.

ಹಿಂದೆ ಸರಿದ ಕಲಬುರಗಿ ವಿವಿ:

ಈ ಹಿಂದೆ ಇಂಥ ಪ್ರಯತ್ನಕ್ಕೆ ಕೈ ಹಾಕಿದ್ದ ಕಲಬುರಗಿ ವಿವಿ ತೀವ್ರ ವಿರೋಧ ಮತ್ತು ಪ್ರತಿಭಟನೆಯ ಹಿನ್ನೆಲೆಯಲ್ಲಿ ಇದನ್ನು ಕೈಬಿಟ್ಟಿತ್ತು. ಆದರೆ, ಬಳ್ಳಾರಿ ವಿವಿ ಇಂಥ ಸಾಹಸಕ್ಕೆ ಕೈ ಹಾಕಿದ್ದು, ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
6 ಸೆಮಿಸ್ಟರ್‌ಗಳಲ್ಲಿ ಸೇರಿಸಿ

ಕನ್ನಡ ನಾಡಿನಲ್ಲಿ ಕನ್ನಡವನ್ನು ಎತ್ತಿ ಹಿಡಿಯುವ ಅಗತ್ಯವಿದೆ. ಹಿಂದಿ ಹೇರಿಕೆ ಮತ್ತು ಇಂಗ್ಲಿಷ್‌ ವ್ಯಾಮೋಹದಲ್ಲಿ ಕನ್ನಡ ಸೋರಗುತ್ತಿದೆ. ಈಗ ಪದವಿ ವಿಭಾಗದಲ್ಲಿ ಕೇವಲ ನಾಲ್ಕು ಸೆಮಿಸ್ಟರ್‌ಗಳಿಗೆ ಮಾತ್ರ ಕನ್ನಡ ಭಾಷಾ ಬೋಧನೆ ಮಾಡಲಾಗುತ್ತಿದೆ. ಇದನ್ನು 6 ಸೆಮಿಸ್ಟರ್‌ಗಳಿಗೆ ವಿಸ್ತರಣೆ ಮಾಡುವ ಮೂಲಕ ಕನ್ನಡಕ್ಕಾಗಿ ಕೈ ಎತ್ತಬೇಕಾಗಿದೆ. ಆದರೆ, ಇದನ್ನು ಬಿಟ್ಟಿರುವ ಬಳ್ಳಾರಿ ವಿವಿ ಇರುವ ನಾಲ್ಕು ಸೆಮಿಸ್ಟರ್‌ಗಳಲ್ಲಿ ಒಂದು ಸೆಮಿಸ್ಟರ್‌ಗೆ ಕನ್ನಡಕ್ಕೆ ಕೊಕ್‌ ನೀಡಲು ಮುಂದಾಗಿರುವುದು ಯಾವು ಪುರಷಾರ್ಥಕ್ಕೆ ಎನ್ನುವುದು ಕನ್ನಡಾಭಿಮಾನಿಗಳ ಪ್ರಶ್ನೆ.

ಇದು ಕನ್ನಡಕ್ಕೆ ಕುತ್ತು ತರುವ ಹುನ್ನಾರವೇ ಸರಿ. ಪದವಿಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕನ್ನಡ ಭಾಷೆಯನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಅದರಿಂದ ಸಹಜವಾಗಿಯೇ ಹಿಂದೆ ಸರಿಯುತ್ತಾರೆ ಎಂದು ಸಹೆಸರು ಹೇಳದ ಕನ್ನಡ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. 
 

click me!