Belagavi: ಹಲಾಲ್-ಜಟ್ಕಾ ಮಧ್ಯೆ ಭಾವೈಕ್ಯತೆಯ ಸಂದೇಶ: ಮುಸ್ಲಿಮರಿಂದಲೂ ಕೃಷ್ಣಾ ಪುಣ್ಯ ಸ್ನಾನ

Published : Apr 03, 2022, 12:27 PM ISTUpdated : Apr 03, 2022, 12:35 PM IST
Belagavi: ಹಲಾಲ್-ಜಟ್ಕಾ ಮಧ್ಯೆ ಭಾವೈಕ್ಯತೆಯ ಸಂದೇಶ: ಮುಸ್ಲಿಮರಿಂದಲೂ ಕೃಷ್ಣಾ ಪುಣ್ಯ ಸ್ನಾನ

ಸಾರಾಂಶ

*  ಈ ಗ್ರಾಮದ ಎಲ್ಲಾ ಆಚರಣೆಗಳು ವಿಶೇಷ *  ಗಣೇಶ ಚತುರ್ಥಿ ಹಿಂದೂಗಳಂತೆಯೇ ಆಚರಿಸುವ ಮುಸ್ಲಿಂಮರು *  ದುರ್ಗೆಯನ್ನು ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪಿಸುವ ಮುಸ್ಲಿಮರು  

ವರದಿ: ಮುಷ್ತಾಕ್ ಪೀರಜಾದೇ, ಚಿಕ್ಕೋಡಿ

ಚಿಕ್ಕೋಡಿ(ಏ.03): ಬೆಳಗಾವಿ(Belagavi) ಜಿಲ್ಲೆ ಚಿಕ್ಕೋಡಿ(Chikkodi) ತಾಲೂಕಿನ ಇಂಗಳಿ ಗ್ರಾಮ ಹಲವು ವಿಶೇಷತೆಗಳಿಂದ ಕೂಡಿದ ತಾಲ್ಲೂಕಿನ ಕಟ್ಟ ಕಡೆಯ ಹಾಗೂ ಕೃಷ್ಣಾ ನದಿ ತೀರದ ಒಂದು ಚಿಕ್ಕ ಗ್ರಾಮ. ಈ ಗ್ರಾಮದ ಎಲ್ಲಾ ಆಚರಣೆಗಳು ವಿಶೇಷವಾಗಿರುತ್ತವೆ.

ಇಂಗಳಿ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿ(Yugadi) ಹಬ್ಬದ ಅಮಾವಾಸ್ಯೆಯ ದಿನ ಅಂದರೆ ಯುಗಾದಿ ಹಬ್ಬದ ಮುಂಚಿನ ದಿನ ಎಲ್ಲರ ಮನೆಯಲ್ಲೂ ಹಬ್ಬದ ಸಂಭ್ರಮ. ಆ ದಿನ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಹೋಳಿಗೆ ಜೊತೆಗೆ ಹಲವು ತಿನಿಸುಗಳನ್ನು ಮಾಡುತ್ತಾರೆ. ಬೇರೆ ಬೇರೆ ಊರಿನ ಅವರವರ ಸಂಬಂಧಿಕರು ಆಗಮಿಸಿರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಸಿಹಿ ತಿನಿಸುಗಳನ್ನು ಹೊತ್ತು ಕೃಷ್ಣಾ ನದಿಗೆ ಹೋಗಿ ಬಾಗಿನ ಅರ್ಪಿಸುತ್ತಾರೆ. 

Belagavi: ಕುಂದಾನಗರಿ ಬೆಳಗಾವಿಯಲ್ಲಿ ತಲೆ ಎತ್ತಲಿದೆ 'ಶಿವಚರಿತ್ರೆ ತಾಣ'

ಮುಸ್ಲಿಂರಿಂದಲೂ ಸಹ ಕೃಷ್ಣಾ ಪುಣ್ಯ ಸ್ನಾನ

ಇದು ಹಿಂದೂ(Hindu) ಸಂಪ್ರದಾಯದಲ್ಲಿ ಆಚರಿಸಲಾಗುವ ಹಬ್ಬ. ಆದರೆ ವಿಶೇಷ ಎಂದರೆ ಇಲ್ಲಿ ಇರುವ ಮುಸ್ಲಿಂ ಸಮುದಾಯದವರೂ ಕೂಡ ಹಿಂದೂಗಳಂತೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸುತ್ತಾರೆ. ಅಲ್ಲಿನ ಮುಸ್ಲಿಮರಿಗೆ(Muslims) ಹಿಂದೂ ಮುಸ್ಲಿಮ ಎನ್ನುವ ಭೇದ ಇಲ್ಲ. ಬಾಗಿನ ಅರ್ಪಣೆ ಮಾಡಿದ ಮಾರನೇ ದಿನ ನಸುಕಿನಿಂದಲೇ ಇಲ್ಲಿನ ಜನ ನದಿಗೆ ಹೋಗಿ ಸ್ನಾನ ಮಾಡಿಕೊಂಡು ಬರಬೇಕು ಅನ್ನವುದು ಇನ್ನೊಂದು ಸಂಪ್ರದಾಯ. ಇದರಲ್ಲೂ ಮುಸ್ಲಿಮರೂ ಹಿಂದೂಗಳಂತೆ ನದಿಗೆ ಹೋಗಿ ಸ್ನಾನ ಮಾಡಿಕೊಂಡು ಬರುತ್ತಾರೆ. ತಮ್ಮ ಎಲ್ಲ ಪಾಪಗಳು ಕಳೆದು ಹೋಗುತ್ತವೆ ಎಂಬ ನಂಬಿಕೆ ಅವರಿಗೆ.

ಬಸವಣ್ಣನ ಜಾತ್ರೆಯಲ್ಲಿ ಹಿಂದೂಗಳಂತೆ ಮುಸ್ಲಿಂರೂ ಸಹ ಭಾಗಿ

ಇಷ್ಟೇ ಅಲ್ಲ, ಈ ಊರಿನ ಗ್ರಾಮ ದೇವರು ಬಸವಣ್ಣ(Basavanna). ಪ್ರತಿ ಶ್ರಾವಣ ಮಾಸದ ಕಡೆಯ ಸೋಮವಾರ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲೂ ಮುಸ್ಲಿಮರು ಸಹಭಾಗಿ ಆಗುವುದರೊಂದಿಗೆ ಮಹಾಪ್ರಸಾದದ ಎಲ್ಲ ಕಾರ್ಯಕ್ರಮದ ಜೊತೆಗೆ ಇತರೆ ಕಾರ್ಯಗಳನ್ನು ಹಿಂದೂಗಳೊಟ್ಟಿಗೆ ಸೇರಿ ಮಾಡುತ್ತಾರೆ. 

ದುರ್ಗೆಯನ್ನು ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪಿಸುವ ಮುಸ್ಲಿಮರು

ದಸರಾ(Dasara) ಉತ್ಸವದ ವೇಳೆಯಲ್ಲೂ ಈ ಊರಿನಲ್ಲಿ ವಿಶೇಷ ಉತ್ಸವ ಆಚರಿಸುತ್ತಾರೆ. ದಸರಾ ವೇಳೆಯಲ್ಲಿ ದುರ್ಗಾ ಮಾತಾ ಮೂರ್ತಿ ಅಲ್ಲಲ್ಲಿ ಕೂಡ್ರಿಸುತ್ತಾರೆ. ಒಂಬತ್ತು ದಿನ ಒಂಬತ್ತು ಬಣ್ಣದ ಬಟ್ಟೆಗಳಿಂದ ಅಲಂಕೃತಗೊಂಡ ಒಂಬತ್ತು ರೀತಿಯ ಮೂರ್ತಿಗಳನ್ನು ಕೂಡ್ರಿಸಲಾಗುತ್ತದೆ. ಒಂಬತ್ತು ದಿನ ಪ್ರತಿ ದಿನ ಮುಂಜಾನೆ ಮತ್ತು ಸಂಜೆ ದುರ್ಗಾ ಮಾತೆಯ ಮಂತ್ರ ಸಾಮೂಹಿಕವಾಗಿ ಪಠಣ ಮಾಡಲಾಗುತ್ತದೆ.  ವಿಶೇಷ ಎಂದರೆ ಮುಸ್ಲಿಮ ಸಮುದಾಯದವರು ವಾಸವಿರುವ ಗಲ್ಲಿಯಲ್ಲೂ ಮುಸ್ಲಿಮರು ದುರ್ಗಾ ಮಾತೆಯನ್ನು ಹಿಂದೂಗಳೊಟ್ಟಿಗೆ ಕೂಡಿ ಕೂಡ್ರಿಸುತ್ತಾರೆ. ಹಿಂದೂಗಳಂತೆ ಭಕ್ತಿಯಿಂದ ಈ ಹಬ್ಬ ಆಚರಿಸುತ್ತಾರೆ. ಒಂಬತ್ತು ದಿನಗಳಲ್ಲಿ ಗೊತ್ತು ಪಡಿಸಿದ ದಿನದಂದು ಇಡೀ ಊರಿಗೆ ದೇವಿ ಹೆಸರಲ್ಲಿ ಮಹಾಪ್ರಸಾದ ಹಾಕುತ್ತಾರೆ. 

ಧಾರ್ಮಿಕ ದಿನವಾಗಿ ಯುಗಾದಿ ಆಚರಣೆ: ಸಚಿವೆ ಶಶಿಕಲಾ‌ ಜೊಲ್ಲೆ ಚಾಲನೆ

ಗಣೇಶ ಚತುರ್ಥಿ ಹಿಂದೂಗಳಂತೆಯೇ ಆಚರಿಸುವ ಮುಸ್ಲಿಂಮರು

ಗಣೇಶ ಉತ್ಸವದಲ್ಲೂ(Ganesh Festival) ಮುಸ್ಲಿಮರು ಗಣೇಶ ಮೂರ್ತಿ ಕೂಡ್ರಿಸಿ ಆಚರಿಸುತ್ತಾರೆ. ಅಷ್ಟೇ ಅಲ್ಲದೇ ಅಮಾವಾಸ್ಯೆ ಹುಣ್ಣಿಮೆ  ಹಾಗೂ ಪ್ರತಿ ಸೋಮವಾರ ದಿನದಂದೂ ಕೃಷ್ಣಾ ನದಿಗೆ ಹಿಂದೂಗಳಂತೆ ನೈವೇದ್ಯ ಅರ್ಪಣೆ ಮಾಡುತ್ತಾರೆ. ಇಲ್ಲಿನ ಹಿಂದೂಗಳು ಕೂಡ ಮುಸ್ಲಿಮರ ಹಲವು ರೀತಿಯ ಹಬ್ಬಗಳಲ್ಲಿ ತಮ್ಮ ಮನೆಯ ಹಬ್ಬದಂತೆ ಅವರೊಟ್ಟಿಗೆ ಕೂಡಿ ಆಚರಿಸುತ್ತಾರೆ. 

ಹಿಂದೂಗಳು ತಮ್ಮ ಹಬ್ಬದ ದಿನಗಳಂದು ಮುಸ್ಲಿಂ ಗೆಳೆಯರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅಣ್ಣ ತಮ್ಮಂದಿರಂತೆ ಕೂಡಿಕೊಂಡು ಊಟ ಮಾಡುತ್ತಾರೆ. ಮುಸ್ಲಿಮರು ತಮ್ಮ ಮಕ್ಕಳ ಮದುವೆ ಮಾಡಲು ನಿಶ್ಚಯಿಸುವುದರಿಂದ ಹಿಡಿದು ಮದುವೆ ಆಗುವವರೆಗೂ ಎಲ್ಲದರಲ್ಲೂ  ಹಿಂದೂಗಳು, ಮುಸ್ಲಿಂರ ಅಣ್ಣ ತಮ್ಮ ಅಕ್ಕ ತಂಗಿಯರಂತೆ ಮುಂದೆ ನಿಂತು ಜವಾಬ್ದಾರಿಯಿಂದ ನೆರವೇರಿಸುತ್ತಾರೆ.ಗ್ರಾಮದ ಯುವ ಸಮುದಾಯವು ಸಹಿತ ಅನ್ಯೋನ್ಯತೆಯಿಂದ ಒಬ್ಬರಿಗೆ ಒಬ್ಬರಾಗಿ ಭಾವೈಕ್ಯತೆಯಿಂದ ಬದುಕುತಿದ್ದಾರೆ.
 

PREV
Read more Articles on
click me!

Recommended Stories

LPG Gas Crisis: ರಾಜ್ಯದಲ್ಲಿ ಮತ್ತೆ ಗ್ಯಾಸ್ ಟ್ರಬಲ್: ಏಜೆನ್ಸಿಗಳಿಂದಲೇ ಕಾಳಸಂತೇಲಿ ಮಾರಾಟ, ರಾಯಚೂರು, ಯಾದಗಿರಿ, ಹಾಸನ ಜನರು ಹೈರಾಣು
Anjanadri Temple: ತಾಪಮಾನ ಏರಿದರೂ ಭಕ್ತಿ ಕಡಿಮೆ ಆಗಲಿಲ್ಲ; ಒಂದೇ ದಿನ ಅಂಜನಾದ್ರಿಗೆ 25 ಸಾವಿರ ಭಕ್ತರ ಭೇಟಿ!