ಕೊರೋನಾ ಸೋಂಕಿ​ತರ ಪತ್ತೆಗೆ ಬದಲಿ ​ಮಾರ್ಗ: ಇಲ್ಲಿದೆ ಮಾಸ್ಟರ್‌ ಪ್ಲಾನ್‌..!

By Kannadaprabha NewsFirst Published Apr 27, 2020, 10:37 AM IST
Highlights

ಚಿಲ್ಲರೆ ಔಷಧ ಮಾರಾಟಗಾರರ ಮೊರೆ ಹೋದ ಆರೋಗ್ಯ ಇಲಾಖೆ| ಕೋವಿಡ್‌-19ರ ರೋಗಿಗಳ ಪತ್ತೆಗೆ ಔಷಧ ನಿಯಂತ್ರಣ ಇಲಾಖೆಯ ಮೂಲಕ ಔಷಧ ಮಾರಾಟಗಾರರಿಗೆ ಸುತ್ತೋಲೆ ಹೊರಡಿಸಿ ನಿ​ರ್ದಿಷ್ಟ ಔಷಧಗಳ ಮಾರಾಟದ ಕುರಿತು ಮಾಹಿತಿ ನೀಡಲು ಸೂಚಿಸಿದ ಆರೋಗ್ಯ ಇಲಾಖೆ|

ಈಶ್ವರ ಶೆಟ್ಟರ 

ಬಾಗಲಕೋಟೆ(ಏ.27): ಜಿಲ್ಲೆಯ ಕೊರೋನಾ ಶಂಕಿತ ಹಾಗೂ ಸೋಂಕಿತ ರೋಗಿಗಳನ್ನು ಕಂಡು ಹಿಡಿಯಲು ಕೋವಿಡ್‌-19ರ ಮಾರ್ಗಸೂಚಿ ಬಳಸಿ ಸೋಂಕಿತ ರೋಗಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿದ್ದ ಆರೋಗ್ಯ ಇಲಾಖೆ ಇದೀಗ ತನ್ನ ಕಾರ್ಯ ಚಟುವಟಿಕೆಯನ್ನು ಮತ್ತಷ್ಟು ಬದಲಾಯಿಸಿಕೊಂಡಿದ್ದು ಸಂಶಯಾಸ್ಪದ ರೋಗಿಗಳ ಪತ್ತೆಗೆ ಚಿಲ್ಲರೆ ಔಷಧ ಮಾರಾಟ ಮಾಡುವ ಮಾರಾಟಗಾರರ ಮೊರೆ ಹೋಗಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತಮ್ಮ ಕಾರ್ಯ ಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಂಶಯಾಸ್ಪದ ಕೋವಿಡ್‌-19ರ ರೋಗಿಗಳ ಪತ್ತೆಗೆ ಔಷಧ ನಿಯಂತ್ರಣ ಇಲಾಖೆಯ ಮೂಲಕ ಜಿಲ್ಲೆಯ ಔಷಧ ಮಾರಾಟಗಾರರಿಗೆ ಸುತ್ತೋಲೆ ಹೊರಡಿಸಿ ನಿ​ರ್ದಿಷ್ಟ ಔಷಧಗಳ ಮಾರಾಟದ ಕುರಿತು ಮಾಹಿತಿ ನೀಡಲು ಸೂಚಿಸಿದೆ.

ಕೊರೋನಾ ನಿಗ್ರಹಕ್ಕಾಗಿ ದೇವತೆಗೆ ಮೊರೆ ಹೋದ ಗ್ರಾಮಸ್ಥರು: ತಾಯಿಗೆ ದೀರ್ಘದಂಡ ನಮಸ್ಕಾರ ಸೇವೆ

ಯಾರು ಸಂಶಯಾಸ್ಪದ ರೋಗಿಗಳು:

ಕೊರೋನಾ ಸೋಂಕು ಸಂಪೂರ್ಣ ಸಾಂಕ್ರಾಮಿಕವಾಗಿ ಹರಡುವ ರೋಗವಾಗಿದ್ದು, ಕೆಲವೊಮ್ಮೆ ರೋಗ ಲಕ್ಷಣಗಳಿಲ್ಲದೆ ಸೋಂಕಿತ ವ್ಯಕ್ತಿಯ ಸಂಪರ್ಕದ ಕಾರಣಕ್ಕೆ ರೋಗ ಹರಡಿದ್ದರೆ ಪ್ರಮುಖವಾಗಿ ಶೀತ, ಜ್ವರ, ಕೆಮ್ಮು ಇವು ಸಂಶಯಾಸ್ಪದ ಕೋವಿಡ್‌-19ರ ರೋಗ ಲಕ್ಷಣಗಳು, ಇಂತಹ ಸಮಸ್ಯೆಗಳು ಎದುರಾದಾಗ ಸರ್ಕಾರ ನಿಗದಿಪಡಿಸಿರುವ ಫೀವರ್‌ ಕ್ಲಿನಿಕ್‌ಗಳಿಗೆ ತೆರಳದೆ ನೇರವಾಗಿ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸಿ ಸೇವಿಸಿದರೆ ರೋಗ ಗುಣಮುಖವಾಗುತ್ತದೆ ಎಂಬ ಭಾವನೆ ಕೆಲವರಲ್ಲಿ ಇರುವುದೆ ಆರೋಗ್ಯ ಇಲಾಖೆಗೆ ಅದರಲ್ಲೂ ಔಷಧ ನಿಯಂತ್ರಣ ಇಲಾಖೆಗೆ ತಲೆನೋವು ಆಗಿದೆ.

ಇದಕ್ಕೆ ಅವರಲ್ಲಿರುವ ಪ್ರಮುಖ ಆತಂಕ ಎಂದರೆ ಶೀತ, ಜ್ವರ, ಕೆಮ್ಮು ಇರುವ ಸಂಶಯಾಸ್ಪದ ರೋಗಿಗಳನ್ನು ಸೂಕ್ತ ಸಮಯದಲ್ಲಿ ಗುರುತಿಸುವುದು ಅಸಾಧ್ಯವಾಗಿರುವುದರಿಂದ ತಮಗಿರುವ ಅ​ಧಿಕಾರ ಬಳಿಸಿ ಜಿಲ್ಲೆಯಲ್ಲಿರುವ ಔಷಧ ವ್ಯಾಪಾರಿಗಳಿಗೆ ಕಡ್ಡಾಯವಾಗಿ ಹಲವು ಸೂಚನೆಗಳನ್ನು ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ಶ್ರಮ ಪಡುತ್ತಿದ್ದಾರೆ.

ನಿರ್ಧಿಷ್ಟ ಔಷಧಗಳ ಮಾಹಿತಿ ನೀಡಿ:

ಸಂಶಯಾಸ್ಪದ ರೋಗಿಗಳು ಶೀತ, ಕೆಮ್ಮು, ಜ್ವರಕ್ಕೆ ಬಳಸುವ ಔಷಧಗಳಾದ ಪ್ಯಾರಾಸಿಟಾ​ಮ​ಲ್‌, ಸಿಪಿಎಂ, ಐಬುಪ್ರೋಫಿನ್‌, ಸಿಟ್ರಿಜನ್‌, ಟೆರಬುಟೈಲಿನ್‌ ಸೇರಿದಂತೆ ಇತರ ಔಷಧಗಳನ್ನು ಮಾರಾಟ ಮಾಡುವ ಚಿಲ್ಲರೆ ಔಷಧ ಮಾರಾಟಗಾರರು ಕಡ್ಡಾಯವಾಗಿ ಪ್ರತಿದಿನದ ಮಾಹಿತಿಯನ್ನು ಸಲ್ಲಿಸಬೇಕು, ಪ್ರತಿ ತಾಲೂಕಿಗೆ ಒಬ್ಬ ನೋಡಲ್‌ ಅಧಿ​ಕಾರಿ ನೇಮಿಸಿದ್ದು ಅವರಿಗೆ ಈ-ಮೇಲ್‌ ಮುಖಾಂತರ ಅಥವಾ ವಾಟ್ಸಪ್‌ ಮುಖಾಂತರ ನೋಡಲ್‌ ಅಧಿ​ಕಾರಿಗಳಿಗೆ ಸಲ್ಲಿಸಬೇಕು. ಅವರು ಎಲ್ಲ ಮಾಹಿತಿಯನ್ನು ಜಿಲ್ಲಾ​ಧಿಕಾರಿಗೆ ಸಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಠಿಣ ಕ್ರಮದ ಎಚ್ಚರಿಕೆ:

ಇಂತಹ ಔಷಧ ಮಾರಾಟ ಮಾಡಿದ ಮಾಹಿತಿಯನ್ನು ರಜಿಸ್ಟರ್‌ನಲ್ಲಿ ದಾಖಲಿಸಬೇಕು. ಇದನ್ನು ಪರಿಶೀಸಲು ಜಿಲ್ಲಾಡಳಿತ ನೇಮಿಸಿದ ಅ​ಧಿಕಾರಿಗಳ ತಂಡ ಯಾವುದೇ ಸಮಯದಲ್ಲಿ ಪರಿಶೀಲಿಸಬಹುದಾಗಿದೆ. ಇದನ್ನು ಪಾಲಿಸಿದ ಔಷಧ ಮಾರಾಟಗಾರರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ 1997 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ. ಒಟ್ಟಾರೆ ಕೋವಿಡ್‌-19ನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಡೆಸಿರುವ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೇ ಪ್ರಮುಖವಾಗಿದೆ.
 

click me!