ಮಲೆನಾಡಿನಲ್ಲಿ ಅಂತರ್ಜಲ ತೀವ್ರ ಕುಸಿತ; ಬರಿದಾಗುತ್ತಿವೆ ಕೊಳವೆ ಬಾವಿಗಳು!

By Kannadaprabha NewsFirst Published May 20, 2023, 6:31 AM IST
Highlights

ಹಿಂಗಾರು ಮಳೆಯ ತೀವ್ರ ಕೊರತೆ, ಬಿಸಿಲಿನ ತಾಪಮಾನ ಏರಿಕೆಯ ಪರಿಣಾಮ ಗಂಭೀರ ಸ್ಥಿತಿ ಎದುರಾಗಿದೆ. ಅಂತರ್ಜಲ ಬತ್ತುತ್ತಿದೆ. ಬಾವಿಗಳಲ್ಲಿನ ನೀರು ತಳ ಕಂಡಿದೆ. ಕೊಳವೆ ಬಾವಿಗಳು ಬರಿದಾಗುತ್ತಿವೆ! ಬಹುತೇಕ ಕೊಳವೆ ಬಾವಿಗಳನ್ನೇ ನಂಬಿಕೊಂಡು ಕೃಷಿ ಮಾಡುತ್ತಿರುವ ರೈತರು ಅಕ್ಷರಶಃ ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಮೇ.20) : ಹಿಂಗಾರು ಮಳೆಯ ತೀವ್ರ ಕೊರತೆ, ಬಿಸಿಲಿನ ತಾಪಮಾನ ಏರಿಕೆಯ ಪರಿಣಾಮ ಗಂಭೀರ ಸ್ಥಿತಿ ಎದುರಾಗಿದೆ. ಅಂತರ್ಜಲ ಬತ್ತುತ್ತಿದೆ. ಬಾವಿಗಳಲ್ಲಿನ ನೀರು ತಳ ಕಂಡಿದೆ. ಕೊಳವೆ ಬಾವಿಗಳು ಬರಿದಾಗುತ್ತಿವೆ! ಬಹುತೇಕ ಕೊಳವೆ ಬಾವಿಗಳನ್ನೇ ನಂಬಿಕೊಂಡು ಕೃಷಿ ಮಾಡುತ್ತಿರುವ ರೈತರು ಅಕ್ಷರಶಃ ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ. ತುಂಗೆ ಸೇರಿದಂತೆ ಜೀವ ನದಿಗಳು ಹರಿವನ್ನು ನಿಲ್ಲಿಸಿವೆ. ಈಗಾಗಲೇ ಹೊಸನಗರ ಪಟ್ಟಣ ಸೇರಿ ಹಲವೆಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೆ, ತುಂಗಾ ತಟದಲ್ಲಿನ ಶಿವಮೊಗ್ಗ ನಗರ ಕೂಡ ಅಪಾಯ ಸ್ಥಿತಿಗೆ ಬಂದು ನಿಂತಿದೆ. ಮಲೆನಾಡಿನ ಬಹುತೇಕ ಜಿಲ್ಲೆಗಳ ಪರಿಸ್ಥಿತಿ ಇದೆ ಆಗಿದೆ.

ತುಂಗಾ ಸೇರಿದಂತೆ ಜೀವ ನದಿಗಳಿಂದ ಕುಡಿಯವ ನೀರು ಪಡೆಯುತ್ತಿದ್ದ ನದಿ ತಟದ ಪೇಟೆ, ಪಟ್ಟಣಗಳಲ್ಲಿ ಕುಡಿಯುವ ನೀರಿನ ತತ್ವಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ತುಂಗೆ ಹರಿವು ನಿಲ್ಲಿಸಿದ್ದರೂ ಶಿವಮೊಗ್ಗ ನಗರಕ್ಕೆ ಗಾಜನೂರು ಜಲಾಶಯದಿಂದ ನೀರು ಪೂರೈಸಲಾಗುತ್ತಿದ್ದು, ಇದೀಗ ಜಲಾಶಯದಲ್ಲಿಯೂ ನೀರಿನ ಸಂಗ್ರಹ ಅಪಾಯದ ಮಟ್ಟದಲ್ಲಿ ಕಡಿಮೆಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಳೆದ ಮೂರು ದಶಕಗಳ ಬಳಿಕ ಎರಡು ದಿನಕ್ಕೊಮ್ಮೆ ನೀರು ಪೂರೈಸುವ ಪರಿಸ್ಥಿತಿ ಎದುರಾಗಲಿದ

 

ಉಡುಪಿ: ಕರಾವಳಿ ತೀರದಲ್ಲಿ ಅಂತರ್ಜಲ ನಿಕ್ಷೇಪಗಳ ಪತ್ತೆ, ಮಣಿಪಾಲ ಸಂಶೋಧಕರಿಂದ ಅನ್ವೇಷಣೆ

ಖಾಲಿಯಾಗುತ್ತಿರುವ ಕೊಳವೆ ಬಾವಿ:

ಎರಡಿಂಚು ನೀರು ಬರುತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಅರ್ಧ ಇಂಚಿಗೆ ಇಳಿದಿದ್ದರೆ, ಕುಡಿಯುವ ನೀರಿನ ಉದ್ದೇಶಕ್ಕೆ ಕೊರೆದ ಬಾವಿಗಳಲ್ಲಿ ನೀರೇ ಇಲ್ಲವಾಗಿದೆ. ಕೊಳವೆ ಬಾವಿಗಳನ್ನೇ ನಂಬಿಕೊಂಡು ಕೃಷಿ ಭೂಮಿ ವಿಸ್ತರಣೆ ಮಾಡುವ ನಡೆ ಕಳೆದ 3 ದಶಕಗಳಿಂದ ಜೋರಾಗಿದ್ದು, 20 ವರ್ಷಗಳ ಬಳಿಕ ಮತ್ತೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ. 90ರ ದಶಕದ ಆರಂಭದಲ್ಲಿ ಚನ್ನಗಿರಿ ಸೇರಿದಂತೆ ಬಯಲು ನಾಡಿನಲ್ಲಿ ಅಡಕೆ ತೋಟ ವಿಸ್ತರಿಸುವ ದೊಡ್ಡ ಪ್ರಯತ್ನ ನಡೆದಿದ್ದು ಇತಿಹಾಸ. ಆ ದಶಕದ ಕೊನೆಯಲ್ಲಿ ಎದುರಾದ ಬರಗಾಲದಲ್ಲಿ ಚನ್ನಗಿರಿ ತಾಲೂಕಿನಲ್ಲಿ 900 ಅಡಿ ಅಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ ಎಂಬ ಸುದ್ದಿ ರಾಜ್ಯಾದ್ಯಂತ ಪ್ರಚಾರವಾಗಿತ್ತು. ಆ ವರ್ಷ ನೂರಾರು ಎಕರೆ ಅಡಕೆ ತೋಟ ನೀರಿಲ್ಲದೆ ಒಣಗಿದ್ದು ಮತ್ತು ಟ್ಯಾಂಕರ್‌ಗಳಲ್ಲಿ ಅಡಕೆ ತೋಟಕ್ಕೆ ನೀರು ಪೂರೈಸುವ ವಿಚಾರ ಕೂಡ ಸುದ್ದಿಯಾಗಿತ್ತು. ಈಗ ಮತ್ತದೇ ಪರಿಸ್ಥಿತಿ ಎದುರಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ಮುಂಗಾರು ಆರಂಭವಾಗಲು 25-30 ದಿನಗಳು ಬೇಕು. ಪರಿಸ್ಥಿತಿ ಕೈ ಕೊಟ್ಟರೆ ಇದು ಇನ್ನೂ 15 ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಆದರೆ ಪರಿಸ್ಥಿತಿ ಇಷ್ಟುದಿನ ಕೂಡ ತಡೆಯಲು ಶಕ್ತವಾಗಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಕಠೋರವಾಗುತ್ತಿದೆ. ತಾಪಮಾನ ಹೆಚ್ಚುತ್ತಿದ್ದು, ಜನರು ಕೂಡ ಇದರ ಪರಿಣಾಮ ಎದುರಿಸುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ ನಗರ ಸೇರಿದಂತೆ ಮನೆ ನಿರ್ಮಾಣದ ವೇಳೆ ಕುಡಿಯುವ ಉದ್ದೇಶಕ್ಕೆ ತೆಗೆದ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ.

ಜನ-ಜಾನುವಾರುಗಳಿಗೆ ನೀರಿಲ್ಲ:

ಕುಡಿಯಲು ಸಹ ನೀರಿಗೆ ಸಮಸ್ಯೆ ಎದುರಾಗುತ್ತಿದೆ. ಈಗಾಗಲೇ ಜಿ.ಪಂ. ಕಡೆಯಿಂದ ಅನೇಕ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಸಣ್ಣಪುಟ್ಟಹಳ್ಳಕೊಳ್ಳಗಳು ಬತ್ತಿರುವುದು ಸಮಸ್ಯೆಯಾಗಿದ್ದು, ಇದೀಗ ಕೊಳವೆ ಬಾವಿಗಳು ಕೂಡ ಬರಿದಾಗುತ್ತಿರುವುದು ಸಮಸ್ಯೆಯನ್ನು ಬಿಗಡಾಯಿಸಿದೆ. ಕಾಡು ಪ್ರಾಣಿಗಳ ಜೊತೆ ಸಾಕು ಪ್ರಾಣಿಗಳು ಕೂಡ ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿವೆ. ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ಇನ್ನು ಕೆಲವು ಸಂಪೂರ್ಣ ಬತ್ತಿ ಹೋಗಿದೆ.

ಅನಧಿಕೃತ ಕೊಳವೆ ಬಾವಿಗಳೇ ಹೆಚ್ಚು

ಜಿಲ್ಲೆಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಬೋರ್‌ವೆಲ್‌ಗಳು ಕೊರೆಯಲಾಗಿದ್ದು, ಇದರಲ್ಲಿ ಅಧಿಕೃತ ಕೊಳವೆ ಬಾವಿಗಳ ಸಂಖ್ಯೆ 10 ಸಾವಿರ ಕೂಡ ದಾಟುವುದಿಲ್ಲ. ಸರ್ಕಾರ ತೆಗೆದಿರುವುದು 3,277 ಸಾರ್ವಜನಿಕ ಕುಡಿಯುವ ನೀರಿನ ಕೊಳವೆ ಬಾವಿಗಳು. ಇದರ ಹೊರತಾಗಿ ಅಲ್ಲಿಲ್ಲೊಂದು ಎರಡಂಕೆಯ ಕೊಳವೆ ಬಾವಿಗಳು ಮಾತ್ರ ಪರವಾನಗಿ ಪಡೆದಿವೆ.

ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು

*ಜಲ ಮರುಪೂರಣದ ಅರಿವಿನ ಕೊರತೆ

ಯಾವುದೇ ನೀತಿ ನಿಯಮ ಇಲ್ಲದೆ ಕೊಳವೆ ಬಾವಿಗಳನ್ನು ತೆರೆದಿರುವುದು ಅಂತರ್ಜಲ ಕುಸಿತಕ್ಕೆ ದೊಡ್ಡ ಕಾರಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತರ್ಜಲ ಮರುಪೂರಣ ಎಂಬ ಚಿಂತನೆಯೇ ಸಮಾಜದಿಂದ, ಕೃಷಿಕರಿಂದ ಮಾಯವಾಗಿರುವುದು ಸಮಸ್ಯೆ ಉಲ್ಬಣವಾಗಲು ಕಾರಣ. ಅನೇಕ ಪ್ರಗತಿಪರ ರೈತರು ತಮ್ಮ ಜಮೀನುಗಳಲ್ಲಿ, ತಮ್ಮ ಹಳ್ಳಿಗಳಲ್ಲಿ ಅಂತರ್ಜಲ ಮರುಪೂರಣ ಮಾಡುತ್ತಾ ತಮ್ಮ ಕೆರೆಗಳಲ್ಲಿ ನೀರಿನ ಮಟ್ಟಏರಿಸಿಕೊಂಡಿದ್ದಾರೆ. ಆದರೆ ಇದೊಂದು ಆಂದೋಲನವಾಗಿ ರೂಪಿತವಾಗಿಲ್ಲ.

click me!