ಉತ್ತರಕನ್ನಡ: ನಿಷೇಧದ ಬಳಿಕ ಮತ್ಸ್ಯ ಬೇಟೆಗೆ ತೆರಳಿದ ಮೀನುಗಾರರು

By Girish GoudarFirst Published Aug 1, 2023, 10:41 PM IST
Highlights

ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಟ್ರಾಲರ್ ಬೋಟುಗಳು ಹೊರಟರೆ ಆ.6ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆಗೆ ಹೊರಡಲಿವೆ. ಕಳೆದ ಎರಡು ವಾರದಿಂದ ಬೋಟು ದುರಸ್ತಿ, ಬಲೆ ಸಿದ್ಧತೆಯಲ್ಲಿ ತೊಡಗಿದ್ದ ಮೀನುಗಾರರು ಎರಡು ಮೂರು ದಿನಗಳಲ್ಲಿ ಬೋಟುಗಳಲ್ಲಿ ಹೋಮ, ಪೂಜೆ ನಡೆಸಿದ ಬಳಿಕ ಮೀನುಗಾರಿಕೆಗೆ ತೆರಳಿದ್ದಾರೆ. 

ಉತ್ತರಕನ್ನಡ(ಆ.01): ಮಳೆಗಾಲದ 60 ದಿನಗಳ ಆಳ ಸಮುದ್ರ ಮೀನುಗಾರಿಕೆ ನಿಷೇಧ ಅವಧಿ ಜು.31ಕ್ಕೆ ಮುಕ್ತಾಯವಾಗಿದ್ದು, ಇಂದಿನಿಂದ ಆಳ ಸಮುದ್ರ ಮೀನುಗಾರಿಕೆ ನಡೆಸಲು ಮೀನುಗಾರರು ಸಜ್ಜಾಗಿದ್ದಾರೆ. ಕರಾವಳಿ ಭಾಗದಲ್ಲಿ ಸದ್ಯ ಮಳೆ ಕೂಡಾ ಕೊಂಚ ವಿರಾಮ ಪಡೆದುಕೊಂಡಿರುವುದರಿಂದ ಮೀನುಗಾರಿಕೆ ಆರಂಭಕ್ಕೆ ವಾತಾವರಣದ ಬೆಂಬಲವೂ ಸಿಕ್ಕಂತಾಗಿದೆ. 

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಟ್ರಾಲರ್ ಬೋಟುಗಳು ಹೊರಟರೆ ಆ.6ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆಗೆ ಹೊರಡಲಿವೆ. ಕಳೆದ ಎರಡು ವಾರದಿಂದ ಬೋಟು ದುರಸ್ತಿ, ಬಲೆ ಸಿದ್ಧತೆಯಲ್ಲಿ ತೊಡಗಿದ್ದ ಮೀನುಗಾರರು ಎರಡು ಮೂರು ದಿನಗಳಲ್ಲಿ ಬೋಟುಗಳಲ್ಲಿ ಹೋಮ, ಪೂಜೆ ನಡೆಸಿದ ಬಳಿಕ ಮೀನುಗಾರಿಕೆಗೆ ತೆರಳಿದ್ದಾರೆ. 

ಮಹಿಳೆ ಹೊಟ್ಟೆಯಲ್ಲಿದ್ದ ಬರೋಬ್ಬರಿ 2.5 ಕೆ.ಜಿ. ತೂಕದ ಗಡ್ಡೆ ಹೊರ ತೆಗೆದ ವೈದ್ಯರು!

ಮೀನುಗಾರಿಕೆ ಸಲುಗಾಗಿ ಓರಿಸ್ಸಾ, ಬಿಹಾರ, ಉತ್ತರಪ್ರದೇಶ ರಾಜ್ಯದಿಂದಲೂ ನೂರಾರು ಕಾರ್ಮಿಕರು ರಾಜ್ಯಕ್ಕೆ ಬಂದಿದ್ದು, ಉತ್ತರಕನ್ನಡ ಸೇರಿ ಕರಾವಳಿ ಜಿಲ್ಲೆಯುದ್ದಕ್ಕೂ ಅವರು ಬೋಟುಗಳಲ್ಲಿ ಕೆಲಸ ಆರಂಭಿಸಿ ಮೀನುಗಾರಿಕೆಗೆ ತೆರಳಿದ್ದಾರೆ. ರಾಜ್ಯದಲ್ಲಿ ಉತ್ತರ ಕನ್ನಡ -1139, ಉಡುಪಿ-2,222, ದಕ್ಷಿಣ ಕನ್ನಡ-1,676 ಜಿಲ್ಲೆ ಸೇರಿ ಒಟ್ಟು 5037 ಯಾಂತ್ರೀಕೃತ ಬೋಟುಗಳಿದ್ದು, 11,061 ಮೋಟಾರೀಕೃತ ದೋಣಿಗಳಿವೆ. ಮಳೆ ಬಿಡುವು ನೀಡಿರುವುದರಿಂದ ಕೆಲವು ಮೋಟಾರೀಕೃತ ದೋಣಿಗಳು ಈಗಾಗಲೇ ಅಲ್ಲಲ್ಲಿ ಮೀನುಗಾರಿಕೆ ಆರಂಭಿಸಿವೆ. 

ಕಳೆದ ವರ್ಷ ರಾಜ್ಯದಲ್ಲಿ ಆಳ ಸಮುದ್ರ ಮೀನುಗಾರಿಕೆಯಿಂದಲೇ ಬರೋಬ್ಬರಿ 7.30 ಲಕ್ಷ ಟನ್ ಮೀನು ಉತ್ಪಾದನೆ ಆಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಪಾದನೆ ಆಗಿರುವುದು 1.31 ಲಕ್ಷ ಟನ್ ಮೀನು ಮಾತ್ರ. ಈ ವರ್ಷ ಅಧಿಕ ಮೀನುಗಾರಿಕೆಯ ನಿರೀಕ್ಷೆ ಹೊಂದಲಾಗಿದ್ದು, ಸರಕಾರ ಡೀಸೆಲ್ ಹಾಗೂ ಸೀಮೆ ಎಣ್ಣೆಯ ಸಬ್ಸಿಡಿ ಹಾಗೂ ಇತರ ಸೌಲಭ್ಯಗಳನ್ನು ಮೀನುಗಾರಿಕೆಗೆ ಸರಿಯಾದ ಸಮಯಕ್ಕೆ ಒದಗಿಸಬೇಕೆಂದು ಮೀನುಗಾರ ಮುಖಂಡ ವಿನಾಯಕ ಹರಿಕಾಂತ್ ಆಗ್ರಹಿಸಿದ್ದಾರೆ.

click me!