ಪ್ರಜಾಪ್ರಭುತ್ವದ ಕಗ್ಗೊಲೆ: ಉತ್ತರ ಪ್ರದೇಶ ಸರಕಾರ ವಜಾಕ್ಕೆ ಖಂಡ್ರೆ ಆಗ್ರಹ

By Kannadaprabha NewsFirst Published Oct 2, 2020, 2:22 PM IST
Highlights

ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಖಂಡನೀಯ| ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲದಾಗಿದೆ| ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದ ಈಶ್ವರ್‌ ಖಂಡ್ರೆ| 

ಹೊಸಪೇಟೆ(ಅ.02): ಯುಪಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಯುವತಿ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರವನ್ನು ಈ ಕೂಡಲೇ ರಾಷ್ಟ್ರಪತಿ ವಜಾಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆಗ್ರಹಿಸಿದ್ದಾರೆ. 

ಸ್ಥಳೀಯ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುಪಿಯಲ್ಲಿ ಬಡವರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂಥ ಹೇಯ ಕೃತ್ಯ ಮಾಡಿದವರನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಖಂಡನೀಯ. ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲದಾಗಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.

ಬಳ್ಳಾರಿ: ಹರಪನಹಳ್ಳಿಯಲ್ಲೂ ಗಾಂಧೀಜಿ ಹೆಜ್ಜೆ ಗುರುತು..!

ರಾಜ್ಯದಲ್ಲಿ ಕೋವಿಡ್‌ ಸಲಕರಣೆ ಖರೀದಿಯಲ್ಲೂ ಭಾರೀ ಹಗರಣ ನಡೆದಿದೆ. ಹೀಗಿದ್ದರೂ ಸರಕಾರ ಪ್ರತಿಪಕ್ಷದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಜನರಿಗೆ ಹಂಚಿದ ಆಹಾರ ಕಿಟ್‌ನಲ್ಲೂ ಹಗರಣ ನಡೆದಿದೆ. ರಾಜ್ಯ ಸರಕಾರ ಜನಪರ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸರಕಾರ ಮೀನ-ಮೇಷ ಎಣಿಸುತ್ತಿದೆ. ಈ ವರ್ಷ ಬರೀ . 200 ಕೋಟಿ ಮೊತ್ತದ ಕಾಮಗಾರಿ ನಡೆಸಲಾಗಿದೆ. ಈ ಭಾಗದ ಅಭಿವೃದ್ಧಿಗೆ ಕೂಡಲೇ ಕ್ರಮವಹಿಸಬೇಕು ಎಂದರು. ಕಾಂಗ್ರೆಸ್‌ ಪಕ್ಷ ಶಿರಾ ಹಾಗೂ ಆರ್‌ಆರ್‌ ನಗರ ಉಪಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೀಳಿಸಲಿದೆ. ಗ್ರಾಪಂ ಚುನಾವಣೆಯಲ್ಲೂ ಈ ಬಾರಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದರು.

ಕೊಪ್ಪಳ ಜಿಪಂ ಸದಸ್ಯರು ಕಾಂಗ್ರೆಸ್‌ ಪರವಾಗಿದ್ದು, ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ. ಕಾಂಗ್ರೆಸ್‌ಗೆ ಜಯ ಸಿಗಲಿದೆ ಎಂದು ಈಶ್ವರ್‌ಖಂಡ್ರೆ ತಿಳಿಸಿದರು. ಶಾಸಕರಾದ ಪಿ.ಟಿ. ಪರಮೇಶ್ವರ್‌ನಾಯ್ಕ, ಅಮರೇಗೌಡ ಭಯ್ಯಾಪುರ, ಕಾಂಗ್ರೆಸ್‌ನ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಇಮಾಮ್‌ ನಿಯಾಜಿ, ವಿ. ಸೋಮಪ್ಪ, ಮುಖಂಡರಾದ ವೆಂಕಟರಾವ್‌ ಘೋರ್ಪಡೆ, ಗುಜ್ಜಲ ನಾಗರಾಜ್‌, ಬ್ಲಾಕ್‌ ಕಾಂಗ್ರೆಸ್‌ ಇಮಾಮ್‌ ನಿಯಾಜಿ, ನಿಂಬಗಲ್‌ ರಾಮಕೃಷ್ಣ, ಅಮ್ಜದ್‌ ಮತ್ತಿತರರಿದ್ದರು.
 

click me!