ಅರೆಬಿಕಾ ಕಾಫಿಗೆ ಕಾಯಿ ಕೊರಕ ಕಾಟ: ನಿಯಂತ್ರಣ ಮಾಡೋದು ಹೇಗೆ..?

By Kannadaprabha NewsFirst Published Nov 24, 2019, 10:12 AM IST
Highlights

ಕೊಡಗು ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಹಣ್ಣು ಕೊಯ್ಲು ನಡೆಯುತ್ತಿದ್ದು, ಬೆಳೆಗಾರರಿಗೆ ಕಾಫಿ ಕಾಯಿ ಕೊರಕ ಕಾಟ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಬಿಸಿಲು ಹಾಗೂ ಮಳೆಯ ವಾತಾವರಣ ಇರುವುದರಿಂದ ಕೀಟದ ಬಾಧೆ ಹೆಚ್ಚಾಗುವ ಸಾಧ್ಯತೆಗಳಿವೆ. ಎರಡು ವರ್ಷದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಕೀಟದ ಸಂಖ್ಯೆಕಡಿಮೆಯಾಗಿತ್ತು.

ಮಡಿಕೇರಿ(ನ.24): ಕೊಡಗು ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಹಣ್ಣು ಕೊಯ್ಲು ನಡೆಯುತ್ತಿದ್ದು, ಬೆಳೆಗಾರರಿಗೆ ಕಾಫಿ ಕಾಯಿ ಕೊರಕ ಕಾಟ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಬಿಸಿಲು ಹಾಗೂ ಮಳೆಯ ವಾತಾವರಣ ಇರುವುದರಿಂದ ಕೀಟದ ಬಾಧೆ ಹೆಚ್ಚಾಗುವ ಸಾಧ್ಯತೆಗಳಿವೆ. ಎರಡು ವರ್ಷದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಕೀಟದ ಸಂಖ್ಯೆಕಡಿಮೆಯಾಗಿತ್ತು.

ಆದರೆ ಈ ಕೀಟವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪ್ರಸ್ತುತ ಬಿಸಿಲು ಮತ್ತು ಮಳೆ ಆಗಾಗ ಬರುತ್ತಿರುವುದರಿಂದ ಈ ಕೀಟ ವೃದ್ಧಿಯಾಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಕಾಫಿ ಫಸಲು ತನ್ನ ಗುಣಮಟ್ಟ ಕಳೆದುಕೊಳ್ಳುವುದು ಖಚಿತ. ಕಾಫಿ ಕಾಯಿ ಕೊರಕ ಕೀಟದ ಜೀವಿತಾವಧಿ ಒಂದು ತಿಂಗಳು. ಕಾಫಿ ಹಣ್ಣಾದ ಸಮಯದಲ್ಲಿ ಈ ಕೀಟ ಕೇವಲ 20-25 ದಿನಗಳಲ್ಲಿ ಜೀವನ ಚಕ್ರ ಮುಗಿಸುತ್ತದೆ.

ಕೊಲ್ಲೂರು ಕ್ಷೇತ್ರದ ಹೆಸರಲ್ಲಿ ನಕಲಿ ವೆಬ್‌ಸೈಟ್‌ ತೆರೆದು ವಂಚನೆ

ಈಗ ಅರೇಬಿಕಾ ಕಾಫಿ ಕೊಯ್ಲು ಶುರುವಾಗಿದ್ದು, ಇದು ಜನವರಿ ವರೆಗೆ ಮುಂದುವರಿಯುತ್ತದೆ. ರೋಬಸ್ಟಾ ಕಾಫಿ ಹಣ್ಣು ಕೊಯ್ಲು ಫೆಬ್ರವರಿ ಕೊನೆಯವರೆಗೆ ನಡೆಯುವುದರಿಂದ ಈ ಸಮಯದಲ್ಲಿ ಕಾಫಿ ಕಾಯಿ ಕೊರಕ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಬೆಳೆಗಾರರು ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಬ್ರೋಕೋ ಟ್ರಾಪ್ಸ್ ಅಳವಡಿಕೆ:

ಕಾಫಿ ಕಾಯಿ ಕೊರಕ ಇರುವ ತೋಟಗಳಲ್ಲಿ ಬ್ರೋಕೋ ಟ್ರಾಪ್ಸ್‌ಗಳನ್ನು ಎಕರೆಗೆ ಸುಮಾರು 10 ರಂತೆ ಕಟ್ಟುವುದರಿಂದ ಕಾಫಿ ಕಾಯಿಕೊರಕವನ್ನು ನಿಯಂತ್ರಿಸಬಹುದು. ಕಣದ ಸುತ್ತಲೂ ಬ್ರೋಕೋ ಟ್ರಾಪ್ಸ್‌ಗಳನ್ನು ಸುಮಾರು 10 ಮೀಟರ್ ಅಂತರದಲ್ಲಿ ಕಟ್ಟಬೇಕು. ಇದರಿಂದ ಕಾಫಿ ಕೊರಕ ಮತ್ತೆ ತೋಟಕ್ಕೆ ಹರಡದಂತೆ ನಿಯಂತ್ರಿಸಬಹುದು. ಒಣಗಿದ ಕಾಫಿ ತುಂಬಿಸಲು ಫ್ಯೂಮಿಗೇಟೆಡ್ ಚೀಲಗಳನ್ನೇ ಬಳಸಬೇಕು. ಎಲ್ಲ ಕಾಫಿ ಬೋರ್ಡ್ ಕಚೇರಿಗಳಲ್ಲಿ ಬ್ರೋಕೋ ಟ್ರಾಪ್ಸ್ ಗಳು ಲಭ್ಯವಿದೆ. ಇದನ್ನು ಬೆಳೆಗಾರರು ಪಡೆದುಕೊಳ್ಳಬಹುದು ಎನ್ನುತ್ತಾರೆ ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರ ಕೀಟಶಾಸ್ತ್ರ ವಿಭಾಗದ ತಜ್ಞರು.

ಕೊಡಚಾದ್ರಿ ಬೆಟ್ಟವೇರಿದ ಕುಂದಾಪುರ ಪೊಲೀಸರು!.
ಪ್ರಸ್ತುತ ಕೊಡಗಿನಲ್ಲಿ ಬಿಸಿಲು-ಮಳೆ ವಾತಾವರಣ ಇರುವುದರಿಂದ ಕಾಫಿ ಕಾಯಿ ಕೊರಕ ಬಾಧೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಬೆಳೆಗಾರರು ಕಣದ ಸುತ್ತಲೂ ಬ್ರೋಕೋ ಟ್ರಾಪ್ಸ್‌ಗಳನ್ನು ಸುಮಾರು 10 ಮೀಟರ್ ಅಂತರದಲ್ಲಿ ಕಟ್ಟಬೇಕು. ಇದರಿಂದ ಕಾಫಿ ಕೊರಕ ಮತ್ತೆ ತೋಟಕ್ಕೆ ಹರಡದಂತೆ ನಿಯಂತ್ರಿಸಬಹುದು. ಹೀಗೆ ಮಾಡುವುದರಿಂದ ಹೊಸ ಬೆಳೆಗೆ ಕೀಟ ಬರದಂತೆ ತಡೆಗಟ್ಟಬಹುದು ಎಂದು ಚೆಟ್ಟಳಿ ಕೀಟಶಾಸ್ತ್ರ ವಿಭಾಗ ಕಾಫಿ ಉಪ ಸಂಶೋಧನಾ ಕೇಂದ್ರ ತಜ್ಞರ ತಂಡ ತಿಳಿಸಿದೆ.

ಬೆಳೆಗಾರರು ಏನು ಮಾಡಬೇಕು?

  • ಬ್ರೋಕೋ ಟ್ರಾಪ್ಸ್‌ಗಳನ್ನು ಎಕರೆಗೆ ಸುಮಾರು 10ರಂತೆ ಕಟ್ಟಬೇಕು.
  • ಯಾವುದೇ ರಾಸಾಯಿನಿಕ ಔಷಧಗಳನ್ನು ಸಿಂಪಡನೆ ಮಾಡುವುದು ಈ ಸಮಯದಲ್ಲಿ ಸೂಕ್ತವಲ್ಲ.
  • ಕಾಫಿಯ ಹಣ್ಣು ಕೊಯ್ಲನ್ನು ಸಕಾಲದಲ್ಲಿ ಮತ್ತು ಸಂಪೂರ್ಣವಾಗಿ ಮಾಡಬೇಕು.
  • ತೋಟದಲ್ಲಿ ಕೊಯ್ಲು ಮಾಡದೆ ಬಿಟ್ಟ ಹಣ್ಣುಗಳನ್ನು ಕೊಯ್ಲು ಮಾಡಬೇಕು ಮತ್ತು ಬಿದ್ದ ಕಾಯಿಯನ್ನು ಹೆಕ್ಕಬೇಕು.
  • ಕಾಫಿಯನ್ನು ಸಂಸ್ಕರಣೆ ಮಾಡುವಾಗ ಶೇ.10 ರಿಂದ 11ರಷ್ಟು ತೇವಾಂಶ ಇರುವಂತೆ ಒಣಗಿಸಬೇಕು.
  • ಮರ ಕಾಫಿ ಗಿಡಗಳಲ್ಲಿ ಯಾವುದೇ ಹಣ್ಣು ಉಳಿಯದಂತೆ ಸಂಪೂರ್ಣವಾಗಿ ಕೊಯ್ಲು ಮಾಡಬೇಕು.

ನಮ್ಮ ತೋಟದಲ್ಲಿ ಕಾಫಿ ಕಾಯಿ ಕೊರಕ ಈ ಅವಧಿಯಲ್ಲಿ ಹೆಚ್ಚಾಗಿ ಕಂಡುಬಂದಿದೆ. ಆದರೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದೆ ಬ್ರೋಕೋ ಟ್ರಾಪ್ಸ್‌ಗಳನ್ನು ಅಳವಡಿಸಬೇಕು. ಇದರಿಂದ ಕೀಟ ಬಾಧೆ ಒಂದಿಷ್ಟು ನಿಯಂತ್ರಣಕ್ಕೆ ಬರುತ್ತದೆ ಎಂದು ಕಾಫಿ ಬೆಳೆಗಾರ ಬೋಪಣ್ಣ ಹೇಳಿದ್ದಾರೆ.

-ವಿಘ್ನೇಶ್ ಎಂ. ಭೂತನಕಾಡು

click me!