ಕೊಡಗು: ಫೆಬ್ರವರಿಯಲ್ಲೇ ಬರಿದಾದ ಕಾವೇರಿ ನದಿ, ಪುಣ್ಯಸ್ನಾನ, ಪಿಂಡ ಪ್ರದಾನಕ್ಕೂ ನೀರಿಲ್ಲದೆ ಭಕ್ತರ ಪರದಾಟ..!

By Girish GoudarFirst Published Feb 24, 2024, 8:30 PM IST
Highlights

ಭಾಗಮಂಡಲದ ತ್ರಿವೇಣಿ ಸಂಗಮ ಬತ್ತಿಹೋಗಿದೆ. ಕೊಡಗು ಜಿಲ್ಲೆಯಿಂದ ಅಷ್ಟೇ ಅಲ್ಲ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಭಕ್ತರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಬಳಿಕ ಭಗಂಡೇಶ್ವರಿನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ವಿಪರ್ಯಾಸವೆಂದರೆ ಈ ಬಾರಿ ತ್ರಿವೇಣಿ ಸಂಗಮ ಪೂರ್ಣ ಬತ್ತಿಹೋಗಿದ್ದು ಪುಣ್ಯ ಸ್ನಾನ ಮಾಡುವ ಮಾತಿರಲಿ ಕೈಕಾಲು, ಮುಖ ತೊಳೆಯುವುದಕ್ಕೂ ನೀರಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು(ಫೆ.24):  ಬರೋಬ್ಬರಿ ಆರು ತಿಂಗಳ ಕಾಲ ಮಳೆ ಸುರಿಯುವ ಕೊಡಗು ಜಿಲ್ಲೆಯಲ್ಲಿಯೇ ಈ ಬಾರಿ ತೀವ್ರ ಮಳೆ ಕೊರತೆಯಾಗಿದೆ. ಪರಿಣಾಮ ಫೆಬ್ರವರಿ ತಿಂಗಳಿನಲ್ಲಿಯೇ ಅಂದರೆ ಬೇಸಿಗೆ ಆರಂಭಕ್ಕೂ ಮುನ್ನವೇ ಪ್ರಸಿದ್ಧ ಪುಣ್ಯ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಪೂರ್ಣ ಪ್ರಮಾಣದಲ್ಲಿ ಬತ್ತಿಹೋಗುತ್ತಿದೆ. 

ಹೌದು, ಭಾಗಮಂಡಲದ ತ್ರಿವೇಣಿ ಸಂಗಮ ಬತ್ತಿಹೋಗಿದೆ. ಕೊಡಗು ಜಿಲ್ಲೆಯಿಂದ ಅಷ್ಟೇ ಅಲ್ಲ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಭಕ್ತರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಬಳಿಕ ಭಗಂಡೇಶ್ವರಿನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ವಿಪರ್ಯಾಸವೆಂದರೆ ಈ ಬಾರಿ ತ್ರಿವೇಣಿ ಸಂಗಮ ಪೂರ್ಣ ಬತ್ತಿಹೋಗಿದ್ದು ಪುಣ್ಯ ಸ್ನಾನ ಮಾಡುವ ಮಾತಿರಲಿ ಕೈಕಾಲು, ಮುಖ ತೊಳೆಯುವುದಕ್ಕೂ ನೀರಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. 

ಕೊಡಗು ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 25 ವರ್ಷ ಬಹಿಷ್ಕಾರ; ಗಂಡನ ಅಂತ್ಯಕ್ರಿಯೆಗೂ ಅವಕಾಶವಿಲ್ಲ

ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ಈ ಮೂರು ನದಿಗಳು ಸಂಗಮವಾಗುವ ಸ್ಥಳದಲ್ಲಿಯೇ ನೀರಿಲ್ಲದೆ ಭತ್ತಿ ಬಣಗುಡುತ್ತಿದೆ ಎನ್ನುವುದು ಕೊಡಗಿನಲ್ಲಿ ಎಂತಹ ಭೀಕರ ಬರಗಾಲವಿದೆ ಎನ್ನುವುದನ್ನು ಸೂಚಿಸುತ್ತಿದೆ. ಇದು ಒಂದೆಡೆಯಾದರೆ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡುವುದು ವಾಡಿಕೆ. ಇಲ್ಲಿ ಪಿಂಡ ಪ್ರದಾನ ಮಾಡಿದರೆ ಸತ್ತವರು ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವುದು ನಂಬಿಕೆ. ಹೀಗಾಗಿ ಕೊಡಗಿನ ಬಹುತೇಕ ಕುಟುಂಬಗಳು ತಮ್ಮ ಕುಟುಂಬದವರು ಯಾರಾದರೂ ಮೃತಪಟ್ಟರೆ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರಧಾನ ಮಾಡುತ್ತಾರೆ. ಆದರೆ ಈಗ ಪಿಂಡ ಪ್ರದಾನಕ್ಕೂ ಅವಕಾಶ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. 

ಪ್ರತೀ ವರ್ಷ ಭಾಗಮಂಡಲ ಮತ್ತು ಸುತ್ತಮುತ್ತ ಎತೇಚ್ಛವಾಗಿ ಮಳೆ ಸುರಿಯುತಿತ್ತು. ಅಂದರೆ ಬರೋಬ್ಬರಿ 1800 ಮಿಲಿ ಮೀಟರ್ ವರೆಗೆ ಮಳೆ ಸುರಿಯುತಿತ್ತು. ಆದರೆ ಈ ಬಾರಿ ಕೇವಲ 800 ಮಿಲಿ ಮೀಟರ್ ಮಳೆಯಷ್ಟೇ ಸುರಿದಿದೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಬರಿದಾಗಿದೆ. ಸಾಮಾನ್ಯವಾಗಿ ಕೊಡಗಿನಲ್ಲಿ ಮಳೆ ಸುರಿಯಲು ಆರಂಭವಾಯಿತ್ತೆಂದರೆ ಕನಿಷ್ಠ ಬಿಟ್ಟು ಬಿಡದೆ ಸುರಿಯಲಾರಂಭಿಸುತ್ತದೆ. ಇದರಿಂದ ಕಾವೇರಿ ತುಂಬಿ ಹರಿಯಲು ಶುರುವಾಯಿತ್ತೆಂದರೆ ತ್ರಿವೇಣಿ ಸಂಗಮ ಮುಳುಗಡೆಯಾಗುತ್ತಿತ್ತು. ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಭಾಗಮಂಡಲ ಈಗ ಸಂಪೂರ್ಣ ತದ್ವಿರುದ್ಧದ ಪರಿಸ್ಥಿತಿ ಎದುರಿಸುತ್ತಿದೆ. 

ಕೊಡಗು: ಸಂಪರ್ಕವಿಲ್ಲದಿದ್ದರೂ ಬಂತು ಸಾವಿರಾರು ರೂ. ವಿದ್ಯುತ್ ಬಿಲ್‌, ಬೆಳಕು ಯೋಜನೆ ಅಡಿಯಲ್ಲಿ ದೋಖಾ..!

ಈ ಕುರಿತು ಭಾಗಮಂಡಲದ ನಿವಾಸಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಜಯಂತ್ ಅವರನ್ನು ಕೇಳಿದರೆ ಸಾಮಾನ್ಯವಾಗಿ ಭಾಗಮಂಡಲದಲ್ಲಿ ಅತೀ ಹೆಚ್ಚು ಮಳೆ ಅಂದರೆ 350 ರಿಂದ 400 ಇಂಚು ಮಳೆ ಸುರಿಯುತಿತ್ತು. ಆದರೆ ಈ ಬಾರಿ ಕೇವಲ 150 ಇಂಚು ಮಳೆ ಸುರಿದಿದೆ ಅಷ್ಟೇ. ಇದರಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಬರಿದಾಗಿ ಹೋಗಿದೆ. ಬರುವ ಭಕ್ತರು ಸ್ನಾನ ಮಾಡುವುದಕ್ಕೆ ಸಾಧ್ಯವಿಲ್ಲ. ಈಗ ಕೈಕಾಲು ತೊಳೆಯಬಹುದಾದಷ್ಟು ನೀರಿದೆ. ಸಾಮಾನ್ಯವಾಗಿ ನಾವು ಪ್ರತೀ ವರ್ಷ ಬೇಸಿಗೆಯಲ್ಲಿ ಕಟ್ಟೆ ಕಟ್ಟುತ್ತಿದ್ದೆವು. ಇದರಿಂದ ತ್ರಿವೇಣಿ ಸಂಗಮದಲ್ಲಿ ಒಂದಷ್ಟು ನೀರು ನಿಲ್ಲುತಿತ್ತು. ಇದರಲ್ಲಿ ಭಕ್ತರು ಸ್ನಾನ ಮಾಡುತ್ತಿದ್ದರು. 

ಆದರೆ ಈ ಬಾರಿ ಕಟ್ಟೆ ಕಟ್ಟಿದರೂ ನೀರು ನಿಲ್ಲುತ್ತಿಲ್ಲ. ಇದರಿಂದ ಭಕ್ತರಿಗೆ ತುಂಬಾ ಅನಾನುಕೂಲವಾಗಿದೆ. ಜೊತೆಗೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿನ ನೈಸರ್ಗಿಕ ಜಲಮೂಲಗಳೆಲ್ಲಾ ಭತ್ತಿ ಹೋಗಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿಗೂ ತೀವ್ರ ಕೊರತೆ ಎದುರಾಗಲಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

click me!