ಕಾಫಿನಾಡಿನಲ್ಲಿ ವರ ಮಹಾಲಕ್ಷ್ಮೇ ಹಬ್ಬಕ್ಕೂ ತಟ್ಟಿದ ಕೊರೋನಾ ಭೀತಿ

By Kannadaprabha NewsFirst Published Jul 31, 2020, 9:21 AM IST
Highlights

ಹಬ್ಬದ ಹಿಂದಿನ ದಿನ ಪೇಟೆಗಳಲ್ಲಿ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿರುತ್ತದೆ. ಆದರೆ, ಈ ಬಾರಿ ಅ ಅಬ್ಬರ ಕಂಡು ಬರಲಿಲ್ಲ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆಯಲ್ಲಿರುವ ಬಸವೇಶ್ವರ ದೇವಾಲಯ, ತೊಗರಿಹಂಕಲ್‌ ವೃತ್ತದಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿರುತ್ತದೆ. ಆದರೆ, ಈ ಬಾರಿ ವ್ಯಾಪಾರಸ್ಥರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.  ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚಿಕ್ಕಮಗಳೂರು(ಜು.31): ಈ ಬಾರಿಯ ಕೋರೋನಾ ಭೀತಿ ವರ ಮಹಾಲಕ್ಷ್ಮೀ ಹಬ್ಬಕ್ಕೂ ತಟ್ಟಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹಬ್ಬದಲ್ಲಿ ಸಡಗರ ಸಂಭ್ರಮ ಕಾಣುತ್ತಿಲ್ಲ. ಇದಕ್ಕೆ ಮಾರುಕಟ್ಟೆಗಳೇ ಸಾಕ್ಷಿಯಾಗಿದ್ದವು.

ಹಬ್ಬದ ಹಿಂದಿನ ದಿನ ಪೇಟೆಗಳಲ್ಲಿ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿರುತ್ತದೆ. ಆದರೆ, ಈ ಬಾರಿ ಅ ಅಬ್ಬರ ಕಂಡು ಬರಲಿಲ್ಲ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆಯಲ್ಲಿರುವ ಬಸವೇಶ್ವರ ದೇವಾಲಯ, ತೊಗರಿಹಂಕಲ್‌ ವೃತ್ತದಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿರುತ್ತದೆ. ಆದರೆ, ಈ ಬಾರಿ ವ್ಯಾಪಾರಸ್ಥರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಇದಕ್ಕೆ ವ್ಯಾಪಾರಸ್ಥರು ನೀಡಿರುವ ಕಾರಣ, ಕೊರೋನಾದಿಂದ ಜನ ಮನೆಗಳಿಂದ ಹೊರಗೆ ಬರುತ್ತಿಲ್ಲ. ಮಾರುಕಟ್ಟೆಖಾಲಿ ಖಾಲಿಯಾಗಿದೆ ಎಂದರು.

ವರವ ಕೊಡೇ ಮಹಾಲಕ್ಷ್ಮೀ... ವರ ಮಹಾಲಕ್ಷ್ಮೀ ವ್ರತದ ಮಹತ್ವ, ಆಚರಣೆ ಬಗ್ಗೆ ಒಂದಷ್ಟು ಮಾಹಿತಿ

ಗ್ರಾಹಕರಾದ ಲಕ್ಷ್ಮಣ್‌ ಮಾತನಾಡಿ, ಶ್ರಾವಣ ಮಾಸದಲ್ಲಿ ಹಬ್ಬಗಳು ಆರಂಭವಾದರೆ 6 ತಿಂಗಳ ಕಾಲ ನಡೆಯುತ್ತವೆ. ಹಬ್ಬದ ಹಿಂದಿನ ದಿನ ಹೂವು, ಹಣ್ಣುಗಳ ಬೆಲೆ ದುಬಾರಿಯಾಗಿರುತ್ತದೆ. ಈ ಬಾರಿಯೂ ಇದೇ ರೀತಿಯಲ್ಲಿ ಬೆಲೆ ಗಗನಕ್ಕೆ ಏರಿದೆ ಎಂದರು.

ಗೃಹಿಣಿ ಲತಾ ಮಾತನಾಡಿ, ನಿನ್ನೆ ಒಂದು ಮಾರಿಗೆ 50 ರು. ಇದ್ದ ಸೇವಂತಿಗೆ ಇಂದು 70 ರುಪಾಯಿ ಆಗಿದೆ. ಮಲ್ಲಿಗೆ 80, ಚೆಂಡು ಹೂವು 50 ರು.ಗೆ ಏರಿದೆ. ಹಣ್ಣುಗಳು ಸಹ ದುಬಾರಿಯಾಗಿವೆ. ಈ ಬೆಲೆಯನ್ನು ನೋಡಿದರೆ ಖರೀದಿ ಮಾಡಬೇಕೋ, ಬೇಡವೋ ಗೊತ್ತಾಗುತ್ತಿಲ್ಲ. ಆದರೂ, ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡಿ ಹಬ್ಬ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು. ಒಟ್ಟಾರೆ, ಜಿಲ್ಲೆಯಲ್ಲಿ ವರ ಮಹಾಲಕ್ಷ್ಮೀ ಹಬ್ಬದ ಮೇಲೆ ಕೊರೋನಾ ದುಷ್ಪರಿಣಾಮ ಬೀರಿದೆ. ಈ ಬಾರಿ ಹಬ್ಬ ದುಬಾರಿಯಾಗಿದೆ.

click me!