ಕಾಫಿ ಬೆಳೆಗಾರರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 20 ದಿನಗಳ ಗಡುವು

By Kannadaprabha NewsFirst Published Jun 11, 2020, 9:03 AM IST
Highlights

ಕಾಫಿ ಉದ್ಯಮ ಸಂಕಷ್ಟದಲ್ಲಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಪ್ರತಿವರ್ಷ ತತ್ತರಿಸುತ್ತಿದೆ. ಹಲವು ಬಾರಿ ಸಮಸ್ಯೆಗಳನ್ನು ಹೇಳಿಕೊಂಡರೂ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಸಂಸದರು ಸ್ಪಂದಿಸಿಲ್ಲ. ಇನ್ನು 20 ದಿನಗಳಲ್ಲಿ ತಮ್ಮ ಬೇಡಿಕೆಗಳನ್ನು ಪೂರೈಸದೇ ಹೋದರೆ ಮೂರು ಜಿಲ್ಲೆಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಜೂ.11): ಕಾಫಿ ಬೆಳೆಗಾರರ ಸಾಲ ಮನ್ನಾ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸದೆ ಹೋದರೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಹೋಬಳಿ ಮಟ್ಟದಿಂದ ಹೋರಾಟವನ್ನು ರೂಪಿಸಲು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 20 ದಿನಗಳ ಗಡುವು ನೀಡಿದೆ.

ಕಾಫಿ ಉದ್ಯಮ ಸಂಕಷ್ಟದಲ್ಲಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಪ್ರತಿವರ್ಷ ತತ್ತರಿಸುತ್ತಿದೆ. ಹಲವು ಬಾರಿ ಸಮಸ್ಯೆಗಳನ್ನು ಹೇಳಿಕೊಂಡರೂ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಸಂಸದರು ಸ್ಪಂದಿಸಿಲ್ಲ ಎಂದು ಕೆಜಿಎಫ್‌ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್‌ ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಬೇಸರ ವ್ಯಕ್ತಪಡಿಸಿದರು.

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಮಹಾಮಾರಿಯು ಕಾಫಿ ಉದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ. ರೋಗ ನಿಯಂತ್ರಣಕ್ಕಾಗಿ ಸರ್ಕಾರವು ತೆಗೆದುಕೊಂಡ ಲಾಕ್‌ಡೌನ್‌ ಜಾರಿಯಿಂದ ಕಾಫಿ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಪ್ರಸ್ತುತ ದಿನಗಳಲ್ಲಿ ಕಾಫಿ ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳನ್ನು 4 ವಿಭಾಗಗಳಾಗಿ ವಿಂಗಡಿಸಿದೆ. ಅದರಲ್ಲಿ ಕಾರ್ಮಿಕರ ಕೊರತೆ, ರಸಗೊಬ್ಬರಗಳ ಬಳಕೆಗೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬಳಕೆಗೆ ಕಚ್ಚಾವಸ್ತುಗಳು ದೊರೆಯುತ್ತಿಲ್ಲ. ಕಾಫಿ ಮತ್ತು ಮೆಣಸು ತೋಟಗಳ ನಿರ್ವಹಣೆ ಕಷ್ಟವಾಗಿದೆ ಎಂದರು.

ಅಯೋಧ್ಯೆ ರಾಮಮಂದಿರಕ್ಕೆ ಅಡಿಗಲ್ಲು ಮುಂದೂಡಿಕೆ: ಕೊನೆ ಕ್ಷಣದಲ್ಲಿ ಆಗಿದ್ದೇನು?

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್‌ ಘೋಷಿಸಿದೆ. ಅದರಲ್ಲಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರನ್ನು ಪರಿಗಣಿಸಿಲ್ಲ. ಹಲವಾರು ಮನವಿ ಪತ್ರಗಳು ಹಾಗೂ ಒಕ್ಕೂಟವು ವಾಣಿಜ್ಯ ಸಚಿವಾಲಯ, ವಿತ್ತಸಚಿವರು, ಸಂಸದರು, ಶಾಸಕರನ್ನು ಭೇಟಿ ಮಾಡಿ, ಸಮಸ್ಯೆ ವಿವರಿಸಿದ್ದರೂ ಅವರಿಗೆ ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಸಚಿವಾಲಯ ಮೂಖ ಪ್ರೇಕ್ಷಕರಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಬೆಳೆ ಸಾಲ ಪಡೆದ ಎಲ್ಲ ಕಾಫಿ ಬೆಳೆಗಾರರ ಅಸಲು ಮತ್ತು ಬಡ್ಡಿಯನ್ನು 2020ರ ಏ.30ಕ್ಕೆ ಪರಿಗಣಿಸಿ ಎನ್‌.ಪಿ.ಎ. ಮತ್ತು ಡಿ.ಆರ್‌.ಟಿ ಆದ ಸಾಲಗಳನ್ನು ಸಹ ಒಳಗೊಂಡಂತೆ ಸಂಪೂರ್ಣ ಮನ್ನಾ ಮಾಡಬೇಕು. ಕಾಫಿ ಬೆಳೆಗಾರರ ಅಲ್ಪಾವಧಿ ಸಾಲಗಳನ್ನು ದೀರ್ಘಾವಧಿ ಸಾಲಗಳನ್ನಾಗಿ ಪುನರ್‌ ರಚಿಸಿ 3 ವರ್ಷಗಳ ನಿಷೇಧದ ಜೊತೆಗೆ ಶೇ.3ರ ಬಡ್ಡಿದರದಲ್ಲಿ ಸಾಲವನ್ನು ಮರುಪಾವತಿ ಮಾಡಲು 10 ವರ್ಷಗಳ ಕಾಲಾವಧಿಯನ್ನು ವಿಸ್ತರಣೆ ಮಾಡಬೇಕು. ಶೇ.3ರ ಬಡ್ಡಿ ದರದಲ್ಲಿ ಹೊಸ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಕಾಫಿತೋಟಗಳಲ್ಲಿ ಮರುನಾಟಿ, ನೀರಾವರಿ ವ್ಯವಸ್ಥೆ, ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಹಾಯಧನ ಹೆಚ್ಚಿಸಬೇಕು. ಪ್ಲಾಂಟೇಷನ್‌ ಕೆಲಸಗಳನ್ನು ಎಂಎನ್‌ಆರ್‌ಇಜಿ ಯೋಜನೆಗಳಿಗೆ ಎಲ್ಲ ಕಾಫಿ ಬೆಳೆಗಾರರನ್ನು ಸೇರಿಸಬೇಕು ಮತ್ತು ಎಂಇಐಎಸ್‌ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಜಿಎಫ್‌ ಪ್ರಧಾನ ಕಾರ್ಯದರ್ಶಿ ಮುರಳೀಧರ್‌ ಎಸ್‌. ಬಕ್ಕರವಳ್ಳಿ, ಮಾಜಿ ಅಧ್ಯಕ್ಷ ಡಾ. ಎಂ.ಕೆ. ಪ್ರದೀಪ್‌, ಪದಾಧಿಕಾರಿಗಳಾದ ಡಿ.ಎಂ. ವಿಜಯ್‌, ಲಿಂಗಪ್ಪಗೌಡ ಹಾಗೂ ರತ್ನಾಕರ್‌ ಉಪಸ್ಥಿತರಿದ್ದರು.
 

click me!