ಸ್ಥಳೀಯ ಸಂಸ್ಥೆಗಳಿಗೆ ಕೋಟ್ಯಾಂತರ ಬಾಕಿ ವಸೂಲಿ ಸವಾಲು

By Kannadaprabha NewsFirst Published Sep 30, 2020, 1:42 PM IST
Highlights

ರಾಜ್ಯ ಸರ್ಕಾರಗಳು ಅನ್‌ಲಾಕ್‌ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬೆನ್ನಲೇ ನಗರ, ಸ್ಥಳೀಯ ಸಂಸ್ಥೆಗಳು ತನ್ನ ಬಾಕಿ ಕರ ವಸೂಲಿಗೆ ಅಭಿಯಾನ ಆರಂಭಿಸಿದ್ದು ಹಲವು ತಿಂಗಳಿಂದ ಕಚೇರಿಗಳಲ್ಲಿ ಕೂತು ಕಾರ್ಯನಿರ್ವಹಿಸುತ್ತಿದ್ದ ನಗರಸಭೆಗಳ ಕಂದಾಯ ವಸೂಲಿಗಾರರು, ಅಧಿಕಾರಿಗಳು ಬೀದಿಗೆ ಬಂದು ಬಾಕಿ ಕರ ಕೊಡುವಂತೆ ಸಾರ್ವಜನಿಕರ ಬೆನ್ನು ಬಿದ್ದಿದ್ದಾರೆ.
 

ವರದಿ : ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಸೆ30): ಮಹಾಮಾರಿ ಕೊರೋನಾ ಹೊಡೆತ ಜಿಲ್ಲೆಯ ಹಲವು ವಲಯಗಳ ಮೇಲೆ ಭಾರಿ ಹೊಡೆತ ಬಿದ್ದು ಆದಾಯ ಮೂಲಗಳಿಗೆ ಕತ್ತರಿ ಬಿದ್ದಿದೆ. ಇದೀಗ ನಗರ, ಸ್ಥಳೀಯ ಸಂಸ್ಥೆಗಳಿಗೂ ಕೂಡ ಸಾರ್ವಜನಿಕರಿಂದ ಬಾಕಿ ಇರುವ ಕೋಟ್ಯಂತರ ರು. ಕರ ವಸೂಲಿ ಸವಾಲು ಹೆಗಲಿಗೆ ಬಿದ್ದಿದೆ.

ಕೇಂದ್ರ, ರಾಜ್ಯ ಸರ್ಕಾರಗಳು ಅನ್‌ಲಾಕ್‌ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬೆನ್ನಲೇ ನಗರ, ಸ್ಥಳೀಯ ಸಂಸ್ಥೆಗಳು ತನ್ನ ಬಾಕಿ ಕರ ವಸೂಲಿಗೆ ಅಭಿಯಾನ ಆರಂಭಿಸಿದ್ದು ಹಲವು ತಿಂಗಳಿಂದ ಕಚೇರಿಗಳಲ್ಲಿ ಕೂತು ಕಾರ್ಯನಿರ್ವಹಿಸುತ್ತಿದ್ದ ನಗರಸಭೆಗಳ ಕಂದಾಯ ವಸೂಲಿಗಾರರು, ಅಧಿಕಾರಿಗಳು ಬೀದಿಗೆ ಬಂದು ಬಾಕಿ ಕರ ಕೊಡುವಂತೆ ಸಾರ್ವಜನಿಕರ ಬೆನ್ನು ಬಿದ್ದಿದ್ದಾರೆ.

ವಾಹನ ಸವಾರರಿಗೆ ಸಿಹಿ ಸುದ್ದಿ- ತೆರಿಗೆ ಇಳಿಸಿದ ರಾಜ್ಯ ಸರ್ಕಾರ! ...

ಸಹಜವಾಗಿ ಗ್ರಾಪಂಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವಜನಿಕರಿಂದ ಬರುವ ತೆರಿಗೆ ಹಣದಿಂದ ಆಡಳಿತಾತ್ಮಕ ಖರ್ಚು, ವೆಚ್ಚ, ಅಧಿಕಾರಿಗಳ ಹಾಗೂ ಸಿಬ್ಬಂದಿ ವೇತನ ಪಾವತಿ ಆಗಬೇಕು. ಆದರೆ ಕೊರೋನಾ ಸೃಷ್ಠಿಸಿದ ಅವಾಂತರದಿಂದ ಜಿಲ್ಲೆಯಲ್ಲಿ ಬರೋಬ್ಬರಿ ಆರೇಳು ತಿಂಗಳ ಕಾಲ ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ ಸಾರ್ವಜನಿಕರಿಗೂ ಆದಾಯ ಕತ್ತರಿ ಬಿದ್ದು ತಾವು ನಗರ, ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕಿದ್ದ ಆಸ್ತಿ, ಬಾಡಿಗೆ, ಕುಡಿಯುವ ನೀರು, ಒಳಚರಂಡಿ, ಕಲ್ಯಾಣ ಮಂಟಪಗಳ ಸೆಸ್‌ ಹೀಗೆ ಹಲವು ಬಗೆಯ ತೆರಿಗೆ ಪಾವತಿ ಸ್ಥಗಿತಗೊಂಡಿರುವ ಪರಿಣಾಮ ಇದೀಗ ನಗರ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತಿಕೊಂಡು ತೆರಿಗೆ ವಸೂಲಿ ಅಭಿಯಾನ ಶುರು ಮಾಡಿದೆ.

ಕೋಟ್ಯಂತರ ರು. ಬಾಕಿ:

ಜಿಲ್ಲೆಯಲ್ಲಿ ಪ್ರತಿವರ್ಷ ಜಿಲ್ಲೆಯ ಆರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೋಟ್ಯಂತರ ರು. ವಾರ್ಷಿಕ ತೆರಿಗೆ ಸಂಗ್ರಹವಾಗುತ್ತದೆ. ಚಿಂತಾಮಣಿ, ಗೌರಿಬಿದನೂರು, ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರಸಭೆಗಳ ವ್ಯಾಪ್ತಿಯಲ್ಲಿ ಕಂದಾಯ, ನೀರು, ಒಳಚರಂಡಿ ಹೀಗೆ ವಿವಿಧ ರೀತಿಯ ತೆರಿಗೆ ವಾರ್ಷಿಕವಾಗಿ ಕೋಟ್ಯಂತರ ರು. ಸಂಗ್ರಹವಾಗಬೇಕಿದ್ದು, ಆದರೆ ಕೊರೋನಾ ಹೊಡೆತದಿಂದ ಸಾರ್ವಜನಿಕರು ತೆರಿಗೆ ಪಾವತಿಸಲು ಮುಂದಾಗಿರಲಿಲ್ಲ. ಇದೀಗ ನಗರಸಭೆ ಅಧಿಕಾರಿಗಳು ವಾರ್ಡ್‌ವಾರು, ಮನೆವಾರು ಮನೆ ಮಾಲೀಕರನ್ನು ಹುಡಕಿ ತೆರಿಗೆ ಕಟ್ಟುವಂತೆ ಬೆನ್ನು ಬಿದ್ದಿದ್ದಾರೆ. ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳ ವ್ಯಾಪ್ಯಿಯಲ್ಲಿ ಅಂದಾಜು 3 ಆರೇಳು ಕೋಟಿಯಷ್ಟುತೆರಿಗೆ ಬಾಕಿ ವಸೂಲಿ ಆಗಬೇಕಿದೆ.

ಚಿಕ್ಕಬಳ್ಳಾಪುರ ನಗರಸಭೆ ತೆರಿಗೆ ಲೆಕ್ಕಾಚಾರ ಹೀಗಿದೆ

ಜಿಲ್ಲಾ ಕೇಂದ್ರ ಹೊಂದಿರುವ ಚಿಕ್ಕಬಳ್ಳಾಪುರ ನಗರಸಭೆಗೆ ವಾರ್ಷಿಕ ಎಲ್ಲ ರೀತಿಯ ತೆರಿಗೆ ಸೇರಿ ಒಟ್ಟು 593 ಲಕ್ಷ ತೆರಿಗೆ ಸಂಗ್ರಹ ಆಗಬೇಕು. ಆದರೆ ವಸೂಲಿ ಆಗಿರುವುದು ಮಾತ್ರ ಇಲ್ಲಿಯವರೆಗೂ ಬರೀ 260 ಲಕ್ಷ ರು. ಮಾತ್ರ. ಇನ್ನೂ 333 ಲಕ್ಷ ರು. ಕರ ಚಿಕ್ಕಬಳ್ಳಾಪುರ ನಗರಸಭೆಗೆ ಪಾವತಿ ಆಗಬೇಕಿದೆ. ಆ ಪೈಕಿ ಕುಡಿಯುವ ನೀರಿನ ತೆರಿಗೆಯೆ ಒಟ್ಟು ವಾರ್ಷಿಕ 135 ಲಕ್ಷ ರು, ಸಂಗ್ರಹ ಆಗಬೇಕು. ಆದರ ಇಲ್ಲಿಯವರೆಗೂ ಆಗಿರುವುದು ಕೇವಲ 50 ಲಕ್ಷ ರು, ಮಾತ್ರ ವಸೂಲಿ ಆಗಿದೆಯೆಂದು ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಡಿ.ಲೋಹಿತ್‌ ಕುಮಾರ್‌ ಕನ್ನಡಪ್ರಭಗೆ ಮಾಹಿತಿ ನೀಡಿದರು.

click me!