Kannada Sahitya Sammelana: ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ 33 ಗೋಷ್ಠಿಗಳು

By Kannadaprabha NewsFirst Published Dec 25, 2022, 8:00 AM IST
Highlights
  • ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ 33 ಗೋಷ್ಠಿಗಳು
  • ಪ್ರಧಾನ ವೇದಿಕೆಗೆ ಕನಕ, ಶರೀಫ, ಸರ್ವಜ್ಞ ಹೆಸರು
  • ಸಮಾನಾಂತರ ವೇದಿಕೆಗಳಲ್ಲಿ ತಲಾ 12 ಗೋಷ್ಠಿ ಆಯೋಜನೆ
  • ಸಮ್ಮೇಳನದಲ್ಲಿ ಸಮಯ ಪಾಲನೆಗೆ ಒತ್ತು

ಹಾವೇರಿ (ಡಿ.25) : ಹಾವೇರಿಯಲ್ಲಿ ಜ.6, 7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆಯಲ್ಲಿ 9 ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ತಲಾ 12ರಂತೆ ಒಟ್ಟು 33 ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಸಮ್ಮೇಳನದ 32 ಪುಟಗಳ ಆಮಂತ್ರಣ ಪತ್ರಿಕೆಯನ್ನು ಶನಿವಾರ ಬಿಡುಗಡೆಗೊಳಿಸಲಾಗಿದೆ. ಸಮ್ಮೇಳನದ ಪ್ರಧಾನ ವೇದಿಕೆಗೆ ಕನಕ, ಶರೀಫ, ಸರ್ವಜ್ಞ ಎಂದು ಹೆಸರಿಡಲಾಗಿದ್ದು, ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಗೆ ಅವಕಾಶ ಇಲ್ಲದಂತೆ ಕಸಾಪ ಜಾಣ್ತನ ಮೆರೆದಿದೆ. ಮೊದಲ ಸಮಾನಾಂತರ ವೇದಿಕೆಗೆ ಪಾಪು-ಚಂಪಾ ಎಂದು ನಾಮಕರಣ ಮಾಡಲಾಗಿದೆ. 3ನೇ ವೇದಿಕೆಗೆ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ವೇದಿಕೆ ಎಂದು ಹೆಸರಿಡಲಾಗಿದೆ.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಪ್ರಧಾನ ವೇದಿಕೆಗೆ ಸಂಬಂಧಿಸಿದಂತೆ ಡಾ.ವಿ.ಕೃ. ಗೋಕಾಕ ಮಹಾಮಂಟಪ, ಮೈಲಾರ ಮಹದೇವಪ್ಪ ಮಹಾದ್ವಾರ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಮಂಪಟ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಪಾಪು- ಚಂಪಾ ಮೊದಲ ಸಮಾನಾಂತರ ವೇದಿಕೆಗೆ ಹೆಳವನಕಟ್ಟೆಗಿರಿಯಮ್ಮ ಮಹಾಮಂಟಪ, ಹುತಾತ್ಮ ಮೆಣಸಿನಹಾಳ ತಿಮ್ಮನಗೌಡ ಸಭಾಂಗಣ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಎರಡನೇ ಸಮಾನಾಂತರ ವೇದಿಕೆಗೆ ಸಂಬಂಧಿಸಿದಂತೆ ಹೊಸಮನಿ ಸಿದ್ದಪ್ಪ, ಮಹದೇವ ಬಣಕಾರ ಮಹಾಮಂಟಪ, ಎಲ್‌.ಜಿ.ಹಾವನೂರ ಸಭಾಂಗಣ ದ್ವಾರ ಎಂಬ ಹೆಸರಿನಲ್ಲಿ ನಿರ್ಮಿಸಲಾಗುತ್ತಿದೆ. ಆ ಮೂಲಕ ಜಿಲ್ಲೆಯ ಸಂತರು, ಮಹಾನ್‌ ಪುರುಷರು, ಸಾಧಕರಿಗೆ ಗೌರವ ಸಲ್ಲಿಸಲಾಗಿದೆ.

ಪ್ರತಿಯೊಂದು ವೇದಿಕೆಯಲ್ಲೂ ನಾಡು ನುಡಿ, ಸಾಹಿತ್ಯ, ಸಂಸ್ಕೃತಿ, ಕೃಷಿ, ಮಹಿಳೆ, ಗಡಿನಾಡ ಕನ್ನಡಿಗರ ಸವಾಲುಗಳು, ರಾಷ್ಟ್ರೀಯ ಶಿಕ್ಷಣ ನೀತಿ, ಕವಿಗೋಷ್ಠಿ ಹೀಗೆ ಅನೇಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಮಯ ಪಾಲನೆಗೆ ಒತ್ತು

ಸಮ್ಮೇಳನದಲ್ಲಿ ಸಮಯ ಪಾಲನೆಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಇದನ್ನು ಆಮಂತ್ರಣ ಪತ್ರಿಕೆಯ ಮುಖಪುಟದಲ್ಲೇ ಈ ಬಗ್ಗೆ ಉಲ್ಲೇಖಿಸಲಾಗಿದೆ. ಸಮ್ಮೇಳನವು ಕನ್ನಡಿಗರೆಲ್ಲರ ಹಬ್ಬ ಆಗಿರುವುದರಿಂದ ಇಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲರೂ ಸಮಾನ ಗೌರವಕ್ಕೆ ಪಾತ್ರರಾಗುತ್ತಾರೆ.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶಬ್ದಮಾಲಿನ್ಯ ತಡೆಯುವ, ಸಾರ್ವಜನಿಕ ಸ್ನೇಹಿ ಆಗುವ ಉದ್ದೇಶದಿಂದ ರಾತ್ರಿ 10 ಗಂಟೆಯೊಳಗೆ ಮುಕ್ತಾಯವಾಗಬೇಕಿದೆ. ನ್ಯಾಯಾಲಯದ ತೀರ್ಪಿಗೆ ಗೌರವ ಕೊಡುವ ಪರಿಷತ್ತು ಸಮಯ ಪಾಲನೆಗೆ ಮಹತ್ವ ನೀಡುತ್ತದೆ. ಎಲ್ಲರೂ ಸಹಕರಿಸಬೇಕು ಎಂದು ಆಮಂತ್ರಣ ಪತ್ರಿಕೆಯಲ್ಲಿ ಕೋರಲಾಗಿದೆ.

33 ಗೋಷ್ಠಿಗಳು

ಪ್ರಧಾನ ವೇದಿಕೆಯಲ್ಲಿ ಸಾಮರಸ್ಯದ ಭಾವ- ಕನ್ನಡದ ಜೀವ, ಕವಿಗೋಷ್ಠಿ, ಕನ್ನಡದಲ್ಲಿ ಕಾನೂನು ಸಾಹಿತ್ಯ, ಯುವ ಕರ್ನಾಟಕ ನಾಡು ನುಡಿ ಚಿಂತನೆ, ಮಾಧ್ಯಮ-ಹೊಸತನ ಮತ್ತು ಆವಿಷ್ಕಾರ, ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ, ಅನ್ನದಾತರ ಅಳಲು- ಅಪೇಕ್ಷೆಗಳು, ವರ್ತಮಾನದಲ್ಲಿ ಮಹಿಳೆ, ದಮನಿತ ಲೋಕದ ಸಬಲೀಕರಣ ಎಂಬ 9 ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಮೊದಲ ಸಮಾನಾಂತರ ವೇದಿಕೆಯಲ್ಲಿ ಹಾವೇರಿ ಜಿಲ್ಲಾ ದರ್ಶನ, ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕರ್ನಾಟಕದ ಕೊಡುಗೆ, ಕನ್ನಡ ದಿಗ್ಗಜರು, ವಚನ ಪರಂಪರೆ, ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ, ಕವಿಗೋಷ್ಠಿ, ಕನ್ನಡ ಸಾಹಿತ್ಯದ ಹೊಸ ಒಲವುಗಳು, ಮಕ್ಕಳ ಸಾಹಿತ್ಯ- ಮನೋವಿಕಾಸ, ವಿದೇಶದಲ್ಲಿ ಕನ್ನಡ ಡಿಂಡಿಮ, ಕನ್ನಡ ಸಾಹಿತ್ಯದಲ್ಲಿ ವಿಷಯ ವೈವಿಧ್ಯ, ವಿಜ್ಞಾನ- ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ, ಜಾನಪದ ಜಗತ್ತು ಎಂಬ 12 ಗೋಷ್ಠಿಗಳು ನಡೆಯಲಿವೆ.

ಮತ್ತೆ ಕೊರೋನಾತಂಕ: ಹೊಸ ವರ್ಷಕ್ಕೆ ಮಾರ್ಗಸೂಚಿ, ಸಿಎಂ ಬೊಮ್ಮಾಯಿ

ಎರಡನೇ ಸಮಾನಾಂತರ ವೇದಿಕೆಯಲ್ಲಿ ಶತಮಾನ-ಪುರುಷರು, ಸಂಕೀರ್ಣ ಗೋಷ್ಠಿ, ಬೆಳ್ಳಿತೆರೆ-ಕಿರುತೆರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ, ಮರೆಯಲಾಗದ ಮಹನೀಯರು, ಕರ್ನಾಟಕ-ಭಾಷಾ ವೈವಿಧ್ಯ, ಕಲಾ ಸಂಗಮ, ಪುಸ್ತಕೋದ್ಯಮದ ಸವಾಲುಗಳು, ಗಡಿನಾಡು ಮತ್ತು ಹೊರನಾಡ ಕನ್ನಡಿಗರ ತಳಮಳಗಳು, ಕವಿಗೋಷ್ಠಿ, ಕನ್ನಡ ಚಳವಳಿ ಪರಿಣಾಮಗಳು, ರಾಷ್ಟ್ರೀಯ ಶಿಕ್ಷಣ ನೀತಿಯ ಒಳನೋಟಗಳು ಎಂಬ 12 ಗೋಷ್ಠಿಗಳನ್ನು ಆಯೋಜಿಸಲಾಗಿದೆ.

click me!