ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀ ಹರನ್ ಯಾರು?

By Gowthami KFirst Published Nov 11, 2022, 9:32 PM IST
Highlights

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಳಿನಿ ಶ್ರೀಹರನ್  ವಿದ್ಯಾವಂತ ಮಲೆಯಾಳಂ ಫ್ಯಾಮಿಲಿಯಲ್ಲಿ ಬೆಳೆದ ಯುವತಿ. ತಂದೆ ಕೇರಳದವರು ತಾಯಿ ಚೆನ್ನೈನವರು.  ಈಕೆ ಕೂಡ ವಿದ್ಯಾವಂತೆ ನಳಿನಿ ಶ್ರೀಹರನ್  ಮತ್ತಷ್ಟು ಮಾಹಿತಿ ಇಲ್ಲಿದೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಳಿನಿ ಶ್ರೀಹರನ್ ಮತ್ತು ಆರ್ ಪಿ ರವಿಚಂದ್ರನ್ ಸೇರಿದಂತೆ ಆರು ಮಂದಿಯನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿಂದೆ 2018 ರಲ್ಲಿ ತಮಿಳುನಾಡು ಸರ್ಕಾರ ಕೂಡಾ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.  ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್‌ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಂಡಿತ್ತು. ಈಗ 6 ಮಂದಿಯ ಬಿಡುಗಡೆಗೂ ಇದೇ ಆದೇಶ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೇಳಿದೆ. ನಳಿನಿ ಅವರಲ್ಲದೆ, ಆರ್‌ಪಿ ರವಿಚಂದ್ರನ್, ಸಂತನ್, ಮುರುಗನ್ ಅಕಾ ಶ್ರೀಹರನ್, ರಾಬರ್ಟ್ ಪಯಾಸ್ ಮತ್ತು ಜಯಕುಮಾರ್ ಅವರನ್ನು ಅವಧಿಗೆ ಮುನ್ನ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಯಾರು ಈ ನಳಿನಿ:
ಎಥಿರಾಜ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ ಪದವೀಧರೆಯಾಗಿರುವ ನಳಿನಿ ಮುರುಗನ್ ಶ್ರೀಹರನ್  ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಳು. ಚೆನ್ನೈ ಪೋಲೀಸ್ ಇನ್ಸ್‌ಪೆಕ್ಟರ್‌ ಆಗಿದ್ದ ದಿವಂಗತ ಪಿ ಶಂಕರ ನಾರಾಯಣನ್‌ (ಮೂಲತ ಕೇರಳದವರು) ಮತ್ತು ನರ್ಸ್‌ ಆಗಿದ್ದ ದಿವಂಗತ ಪದ್ಮಾವತಿ (ಚೆನ್ನೈಯವರು) ಅವರಿಗೆ ಜನಿಸಿದ ಮೂವರು ಮಕ್ಕಳಲ್ಲಿ ಈಕೆ ಒಬ್ಬಳು ಮತ್ತು ಮೊದಲನೆಯವಳು ಕೂಡ. ತಂಗಿ ಕಲ್ಯಾಣಿ, ಸಹೋದರ  ಬಾಗ್ಯನಾಥನ್ . ನಳಿನಿಯ ಯಾವುದೇ  ಒಬ್ಬ ಸಂಬಂಧಿಕ ಕೂಡ ಯಾವುದೇ ರೀತಿಯ ರಾಜಕೀಯ ಸಂಬಂಧವನ್ನು ಹೊಂದಿರಲಿಲ್ಲ, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಕೈದಿಯಾಗಿರುವುದು ಈಕೆಯ ಸಂಬಂಧಿಕರಿಗೆ ವಿಲಕ್ಷಣವಾಯ್ತು.   ಆಕೆಯ ಸಹೋದರ ಬಾಗ್ಯನಾಥನ್ ಮತ್ತು ಸ್ನೇಹಿತರ ನಡುವಿನ ಸ್ನೇಹದ ಪರಿಣಾಮವಾಗಿ ಎಲ್‌ಟಿಟಿಇಯ ಕಾರ್ಯಕರ್ತ  ಮುರುಗನ್ ಶ್ರೀಹರನ್ ಪರಿಚಯ ನಳಿನಿಗೆ ಆಗಿತ್ತು. ಈತ ನಳಿನಿ ಎಲ್‌ಟಿಟಿಇ ಸೇರಲು ಪ್ರೇರೇಪಿಸಿದ್ದ.

ರಾಜೀವ್ ಗಾಂಧಿಯವರ ಹತ್ಯೆ ಹಿನ್ನೆಲೆ ಬಂಧಿಸಲ್ಪಟ್ಟ ನಳಿನಿ ಭಾರತದಲ್ಲಿ ದೀರ್ಘಾವಧಿಯವರೆಗೆ ಜೈಲಿನಲ್ಲಿ ಜೀವನ ಕಳೆದ ಮಹಿಳಾ ಕೈದಿಯಾಗಿದ್ದಾಳೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಾಗ ನಳಿನಿ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಅದಾಗಲೇ ಆಕೆ ಎಲ್‌ಟಿಟಿಇ ಕಾರ್ಯಕರ್ತ ಮುರುಗನ್ ಶ್ರೀಹರನ್ ನನ್ನು ವಿವಾಹವಾಗಿದ್ದಳು. ಈತ ಕೂಡ ರಾಜೀವ್ ಹತ್ಯೆಯಲ್ಲಿ ಓರ್ವ ಅಪರಾಧಿಯಾಗಿದ್ದಾನೆ.  ನಳಿನಿ ಮತ್ತು ಆಕೆಯ ಪತಿ ಶ್ರೀಹರನ್ ರಾಜೀವ್ ಹತ್ಯೆಯ ನಂತರ ಚೆನ್ನೈನಿಂದ ಪಲಾಯನಗೈದು ಬಂಧನಕ್ಕೂ ಮುನ್ನ ಒಂದು ತಿಂಗಳ ಕಾಲ ಹಲವಾರು ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದರು. ಇವರಿಗೆ ಹುಟ್ಟಿದ ಮಗಳು 6 ವಯಸ್ಸಿನವರೆಗೆ ಜೈಲಿನಲ್ಲಿ ಬೆಳೆದಳು. ಆಕೆಯ ಹೆಸರು ಹರಿತ್ರಾ. ಸದ್ಯ ಲಂಡನ್ ನಲ್ಲಿ ಮೆಡಿಕಲ್ ಉದ್ಯೋಗಿಯಾಗಿದ್ದಾಳೆ. 

ಆತ್ಮಹತ್ಯಾ ಬಾಂಬ್ ದಾಳಿಗಾಗಿ ಶ್ರೀಲಂಕಾದಿಂದ ಕರೆತರಲಾದ ಇಬ್ಬರು ಮಹಿಳೆಯರಿಗೆ ಇವರಿಬ್ಬರು ಆತಿಥ್ಯ ವಹಿಸಿದ್ದರು.  ಇಬ್ಬರು ಮಹಿಳಾ ಬಾಂಬರ್‌ಗಳು ಹತ್ಯೆಯ ದಿನದಂದು ಅವರು ಧರಿಸಿದ್ದ ಬಟ್ಟೆಗಳನ್ನು ಖರೀದಿಸಲು ಸಹಾಯ ಮಾಡಿದರು ಎಂಬ ಆರೋಪವೂ ನಳಿನಿ ಮೇಲಿತ್ತು. 

ರಾಜೀವ್‌ ಗಾಂಧಿ ಹತ್ಯೆಗೆ ಸಂಬಂಧಿಸಿದ ಮಹತ್ವದ ಮಾಹಿತಿ?

ಇದಲ್ಲದೆ, ಇಂತಹ ಕಾರ್ಯಕ್ರಮಗಳ ಸಮಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೇಗಿರುತ್ತವೆ ಎಂದು ಖಚಿತಪಡಿಸಿಕೊಳ್ಳಲು ಚೆನ್ನೈನಲ್ಲಿ ಮಾಜಿ ಪ್ರಧಾನಿ ವಿಪಿ ಸಿಂಗ್ ಅವರ ರ್ಯಾಲಿಯಲ್ಲಿ ಭಾಗವಹಿಸಲು  ಇಬ್ಬರು ಮಹಿಳೆಯರು ಮತ್ತು ಪ್ರಮುಖ ಆರೋಪಿ ಶಿವರಾಸನ್ ಅವರೊಂದಿಗೆ ನಳಿನಿ ಹೋಗಿದ್ದಳು. 1999 ರಲ್ಲಿ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ನಳಿನಿ ಪಿತೂರಿಯ ಭಾಗವಾಗಿದ್ದಾಳೆಂದು ಸಾಬೀತುಪಡಿಸುವ ಯಾವುದೇ ಪ್ರಮುಖ ಪುರಾವೆಗಳಿಲ್ಲದೆ ವಿಧೇಯವಾಗಿ ಪಾಲ್ಗೊಳ್ಳುತ್ತಿದ್ದಳು ಎಂದು ಹೇಳಿತ್ತು.

ರಾಜೀವ್‌ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಸೇರಿ 6 ಜನರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

2008 ರ ಮಾರ್ಚ್‌ನಲ್ಲಿ ತಮಿಳುನಾಡಿನ ವೆಲ್ಲೂರ್ ಜೈಲಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಳಿನಿ 90 ನಿಮಿಷಗಳ ಸಭೆ ನಡೆಸಿದ್ದಳು . ನಳಿನಿ  2016 ರಲ್ಲಿ ತಮಿಳಿನಲ್ಲಿ 500 ಪುಟಗಳ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದ್ದಳು, ಅದರಲ್ಲಿ ಆಕೆ ತನ್ನ ಬಾಲ್ಯ, ಮದುವೆ, ಬಂಧನ, ಅಪರಾಧ ಮತ್ತು ಜೀವಾವಧಿ ಶಿಕ್ಷೆಯ ಬಗ್ಗೆ ಬರೆದುಕೊಂಡಿದ್ದಾಳೆ. ತನ್ನನ್ನು "ಸಂದರ್ಭಗಳ ಕೈದಿ" ಎಂದು ಕರೆದುಕೊಳ್ಳುವ ನಳಿನಿ, ತನಗಾಗಲಿ ತನ್ನ ಪತಿಗಾಗಲಿ ಹತ್ಯೆಯ ಯೋಜನೆ ಬಗ್ಗೆ ತಿಳಿದಿರಲಿಲ್ಲ ಎಂದು ವಾದ್ರಾಗೆ ಹೇಳಿರುವುದಾಗಿ ಪುಸ್ತಕದಲ್ಲಿ ಉಲ್ಲೇಖವಿದೆ ಎಂದು ವರದಿ ತಿಳಿಸಿದೆ. ಜೈಲಿನಲ್ಲಿ ಇದ್ದುಕೊಂಡೇ ನಳಿನಿ 2009ರಲ್ಲಿ ಇಗ್ನೋ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾಳೆ. ಸದ್ಯ ಈಕೆಗೆ 55 ವರ್ಷ.

click me!