ಮೋದಿ ಮೋಡಿ: ಲೋಕಸಭಾ ಚುನಾವಣಾ ಕಾಳಜಿ, ಸವಾಲು, ಗಿರೀಶ್ ಲಿಂಗಣ್ಣ

By Suvarna NewsFirst Published Apr 19, 2024, 1:56 PM IST
Highlights

ಜಗತ್ತಿನ ಅತ್ಯಂತ ಪ್ರಸಿದ್ಧ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಚುನಾವಣೆಯಲ್ಲಿ ತಮ್ಮ ನೇತೃತ್ವದ ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ) ಸತತವಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ತರುವ ನಿರೀಕ್ಷೆಗಳಿವೆ. 

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಬೆಂಗಳೂರು(ಏ.19): ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ, ತನ್ನ ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಎಪ್ರಿಲ್ 19ರಿಂದ ಜೂನ್ 1ರ ನಡುವೆ ಚುನಾವಣೆ ನಡೆಸುತ್ತಿದೆ. ಈ 543 ಸದಸ್ಯರ ಕೆಳಮನೆ ಯಾವ ಪಕ್ಷ ಅಥವಾ ಒಕ್ಕೂಟ ಪ್ರಧಾನಿಯವರನ್ನು ನೇಮಿಸುತ್ತದೆ, ಸರ್ಕಾರವನ್ನು ನಡೆಸುತ್ತದೆ ಎನ್ನುವುದನ್ನು ನಿರ್ಧರಿಸುವುದರಿಂದ, ಈ ಚುನಾವಣೆ ಅತ್ಯಂತ ಮಹತ್ವದ್ದು. 44 ದಿನಗಳ ಕಾಲ ನಡೆಯುವ ಚುನಾವಣೆಯಲ್ಲಿ, ಬಹುತೇಕ 970 ಮಿಲಿಯನ್ (97 ಕೋಟಿ) ಜನರು ಮತದಾನ ಮಾಡಲಿದ್ದು, ಇದೊಂದು ಜಾಗತಿಕ ದಾಖಲೆಯ ಸಂಖ್ಯೆ. ಈ ಚುನಾವಣಾ ಪ್ರಕ್ರಿಯೆಗಾಗಿ, ಭಾರತದ ಅತ್ಯಂತ ದುರ್ಗಮ ಪ್ರದೇಶಗಳೂ ಸೇರಿ, ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಜಗತ್ತಿನ ಅತ್ಯಂತ ಪ್ರಸಿದ್ಧ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಚುನಾವಣೆಯಲ್ಲಿ ತಮ್ಮ ನೇತೃತ್ವದ ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ) ಸತತವಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ತರುವ ನಿರೀಕ್ಷೆಗಳಿವೆ. ಅಮೆರಿಕದ ಪ್ರಸಿದ್ಧ ಜಿ ಜೀ಼ರೋ ಮೀಡಿಯಾ ಸಂಸ್ಥೆ ವಿವಿಧ ವಿಶ್ಲೇಷಕರೊಡನೆ ನಡೆಸಿದ ವಿಶ್ಲೇಷಣೆಗಳು ಮತ್ತು ಸಂವಾದಗಳ ಹೊಳಹುಗಳನ್ನು ಹಂಚಿಕೊಂಡಿದೆ. ಆ ಮಾಹಿತಿಗಳಲ್ಲಿರುವ ಅಂಶಗಳೇನು?

ಪ್ರಾದೇಶಿಕ ಸ್ಥಿರತೆ ಮತ್ತು ಜನಾಭಿಪ್ರಾಯದ ನಡುವಿನ ಕಾರ್ಯತಂತ್ರದ ಕುಣಿಕೆಯಲ್ಲಿ ಪಾಕಿಸ್ತಾನ: ಗಿರೀಶ್ ಲಿಂಗಣ್ಣ

ಮತದಾರರಿಗಿರುವ ಪ್ರಮುಖ ಕಾಳಜಿಗಳು:

ಭಾರತೀಯ ಮತದಾರರಿಗೆ ಕಳವಳಕಾರಿಯಾಗಿರುವ ಪ್ರಮುಖ ಅಂಶಗಳಲ್ಲಿ ಹಣದುಬ್ಬರ, ಏರುತ್ತಿರುವ ಆಹಾರ ಉತ್ಪನ್ನಗಳ ದರ, ಯುವಜನತೆಯ ನಿರುದ್ಯೋಗಗಳು ಪ್ರಮುಖವಾಗಿವೆ. ಭಾರತದ ಮೂರನೇ ಒಂದಕ್ಕೂ ಹೆಚ್ಚಿನ ಜನರು (33.33%) ಕೋವಿಡ್-19 ಸಾಂಕ್ರಾಮಿಕದ ಲಾಕ್ ಡೌನ್ ಬಳಿಕ ತಮ್ಮ ಪರಿಸ್ಥಿತಿ ಹದಗೆಟ್ಟಿದೆ ಎಂದು ಭಾವಿಸಿದ್ದಾರೆ. ಇನ್ನು ದೇಶದ ಮೂರನೇ ಎರಡರಷ್ಟು ಜನರಿಗೆ (66.67%) ಸೂಕ್ತ ಉದ್ಯೋಗ ಪಡೆಯುವುದೇ ಕಷ್ಟವಾಗಿದೆ. ಚುನಾವಣೆಯಲ್ಲಿ ಧಾರ್ಮಿಕ ಮತ್ತು ರಾಜಕೀಯ ವಿಚಾರಗಳು ಪರಿಗಣನೆಗೆ ಬರುತ್ತವಾದರೂ, ಆರ್ಥಿಕ ವಿಚಾರಗಳು ಮತದಾರರಿಗೆ ಹೆಚ್ಚು ಕಾಳಜಿಯ ಅಂಶಗಳಾಗಿವೆ.

ಆರ್ಥಿಕ ಪರಿಸ್ಥಿತಿ ಹೊರತಾಗಿಯೂ, 75% ದಷ್ಟು ಭಾರತೀಯರು ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರು ವಿವಿಧ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದುದ್ದಕ್ಕೆ, ಭಾರತದ ಮೂಲ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಿರುವುದಕ್ಕೆ, ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಎತ್ತರಿಸಿರುವುದಕ್ಕೆ ದೇಶದಲ್ಲಿ ಅತ್ಯಂತ ಗೌರವ ಪಡೆದು ಕೊಂಡಿದ್ದಾರೆ. ಅದರೊಡನೆ, ಬಿಜೆಪಿಯ ಧಾರ್ಮಿಕ ರಾಜಕಾರಣದ ಗುರಿಗಳನ್ನು ಸಾಧಿಸುವತ್ತ ಮುನ್ನಡೆದಿರುವುದಕ್ಕಾಗಿ ಮೋದಿಯವರು ಶ್ಲಾಘಿಸಲ್ಪಟ್ಟಿದ್ದಾರೆ. ಈ ಗುರಿಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ, ಮುಸ್ಲಿಂ ಬಾಹುಳ್ಯದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ವಾಯತ್ತತೆಯ (ಆರ್ಟಿಕಲ್ 370) ರದ್ದು ಪ್ರಮುಖವಾಗಿವೆ.

ಮೋದಿ ನಾಯಕತ್ವ ಮಾಧ್ಯಮ ಸ್ವಾತಂತ್ರ್ಯದ ಮೇಲೆ ಬೀರಿದ ಪರಿಣಾಮಗಳೇನು?

ಪ್ರಧಾನಿ ಮೋದಿಯವರ ನಾಯಕತ್ವದಡಿ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯಗಳು ಕುಸಿಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು.  ವಿರೋಧ ಪಕ್ಷಗಳು ಪ್ರಧಾನಿ ಮೋದಿಯವರು ವಿಪಕ್ಷ ನಾಯಕರನ್ನು ಗುರಿಯಾಗಿಸಲು ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿದ್ದಾರೆ ಎಂಬ ಆರೋಪಿವಿದ್ದು, ಆ ಮೂಲಕ ವಿಪಕ್ಷಗಳು ಸಂಪೂರ್ಣವಾಗಿ ಚುನಾವಣೆಯನ್ನು ಎದುರಿಸಲು ಸಾಧ್ಯವಾಗದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿವೆ. ಇನ್ನು ಮೋದಿಯವರ ಟೀಕಾಕಾರರು ಸರ್ಕಾರದ ಕ್ರಮಗಳು ಭಾರತದ ಜಾತ್ಯತೀತ ಸಂವಿಧಾನವನ್ನು ಮತ್ತು ಅದರ ಎಲ್ಲರನ್ನೂ ಒಳಗೊಳ್ಳುವ ಮೌಲ್ಯಗಳನ್ನು ಕಡೆಗಣಿಸಿ, ಬಹುಸಂಖ್ಯಾತ ಹಿಂದೂ ಸಮುದಾಯವನ್ನು ಮಾತ್ರ ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಒದಗಿಸುವ ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದಂತೆ, ಪ್ರಧಾನಿ ಮೋದಿಯವರ ವಿಧಾನಗಳು ಪೂರ್ಣ ಬಹುಮತ ಹೊಂದಿದ್ದ‌ು, ಹಿಂದಿನ ಪ್ರಧಾನಿಗಳ ವಿಧಾನಗಳಿಗಿಂತ ಭಿನ್ನವಾಗಿರದಿದ್ದರೂ, ಭಾರತದ ಪ್ರಜಾಪ್ರಭುತ್ವದ ತತ್ವಗಳು ಕುಸಿಯುತ್ತಿವೆ ಎಂಬ ಕಳವಳಗಳು ವ್ಯಕ್ತವಾಗಿವೆ. ಆದರೆ, ಈ ಕಳವಳಗಳು ಕೇವಲ ಸಣ್ಣ ಸಂಖ್ಯೆಯ ನಗರ ಕೇಂದ್ರಿತ ಜನರಿಗೆ ಮಾತ್ರವೇ ಸೀಮಿತವಾಗಿರುವಂತೆ ತೋರುತ್ತಿದ್ದು, ಸಾಮಾನ್ಯ ಭಾರತೀಯ ಮತದಾರರಿಗೆ ಯಾವುದೇ ತೊಂದರೆಯಾದಂತೆ ಕಾಣಿಸುವಿದಿಲ್ಲ.

ಮೋದಿ ಎದುರಿಸಲು ಇಂಡಿ ಕೂಟಕ್ಕೆ ನಾಯಕತ್ವದ ಸವಾಲುಗಳೇನು?

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಬಹುಮತ ಪಡೆದು ಅಧಿಕಾರಕ್ಕೆ ಏರಿದ ಬಳಿಕ, ಭಾರತದ ಮುಖ್ಯ ವಿರೋಧ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಉತ್ತಮ ನಾಯಕತ್ವ ಮತ್ತು ಮತದಾರರನ್ನು ಸೆಳೆಯಲು ಪರ್ಯಾಯ ದೃಷ್ಟಿಕೋನದ ಕೊರತೆಯಿಂದ ಬಹಳಷ್ಟು ಹಿನ್ನಡೆ ಅನುಭವಿಸಿದೆ. ಇತ್ತೀಚೆಗೆ, ಕಾಂಗ್ರೆಸ್ ತನ್ನ ಗಮನವನ್ನು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಸರಿಪಡಿಸುವ ಕುರಿತು ಕೇಂದ್ರೀಕರಿಸುತ್ತಿದ್ದು, ಈ ಕಾರ್ಯತಂತ್ರಗಳು ಮತದಾರರ ಬೆಂಬಲ ಗಳಿಸಲು ಎಷ್ಟರಮಟ್ಟಿಗೆ ಯಶಸ್ವಿಯಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.

ಕಳೆದ ವರ್ಷ ಜುಲೈನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು 25 ಇತರೆ ಸಣ್ಣಪುಟ್ಟ ಪಕ್ಷಗಳು ಜೊತೆಯಾಗಿ, ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲಯನ್ಸ್ ಅಥವಾ ಇಂಡಿಯಾ ಎಂಬ ವಿಶಾಲವಾದ ಒಕ್ಕೂಟವನ್ನು ರಚಿಸಿದವು. ಈ ಒಕ್ಕೂಟದ ಉದ್ದೇಶ ತಮ್ಮೆಲ್ಲ ಪಕ್ಷಗಳ ಮತ ಗಳಿಕೆಯ ಸಾಮರ್ಥ್ಯವನ್ನು ಒಗ್ಗೂಡಿಸಿ, ಬಿಜೆಪಿಗೆ ಹೆಚ್ಚು ಬಲಿಷ್ಠ ವಿರೋಧವನ್ನು ಒಡ್ಡುವುದಾಗಿತ್ತು. ದುರದೃಷ್ಟವಶಾತ್, ಈ ಒಕ್ಕೂಟ ಒಗ್ಗಟ್ಟು ತೋರಿಸುವಲ್ಲಿ ಅಂದುಕೊಂದಷ್ಟು ಯಶಸ್ವಿಯಾಗಿಲ್ಲ. ಹಲವು ಪ್ರಾದೇಶಿಕ ಪಕ್ಷಗಳು ಇಂಡಿಯಾ ಒಕ್ಕೂಟದ ಬದಲಾಗಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಸೇರ್ಪಡೆಯಾದವು. ಕೆಲವು ರಾಜ್ಯಗಳಲ್ಲಿ ಸೀಟು ಹಂಚಿಕೆ ಕುರಿತು ಒಮ್ಮತಕ್ಕೆ ಬರಲಗಾದೇ, ಪ್ರಮುಖ ಪ್ರಾದೇಶಿಕ ಪಕ್ಷಗಳು ಮೈತ್ರಿಕೂಟದ ಭಾಗವಾಗುವ ಬದಲು, ತಮ್ಮ ಪ್ರಾಬಲ್ಯವಿರುವ ಸ್ಥಾನಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದವು. ಇಂತಹ ನಿರ್ಧಾರಗಳು ಇಂಡಿಯಾ ಮೈತ್ರಿಕೂಟದ ಅಸ್ತಿತ್ವದ ಅಗತ್ಯವನ್ನೇ ಪ್ರಶ್ನಿಸುವಂತಾದವು. ಸಾರ್ವಜನಿಕರ ಜನಮತ ಅಭಿಪ್ರಾಯದಲ್ಲಿ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಿಜೆಪಿಗಿಂತ ಸಾಕಷ್ಟು ಹಿಂದುಳಿದಿವೆ. ಬಹುಶಃ ಕಾಂಗ್ರೆಸ್ ಮತ್ತದರ ಮೈತ್ರಿಕೂಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತಲೂ, ತಮ್ಮ ಪ್ರಾದೇಶಿಕ ಪ್ರಭಾವವನ್ನು ಉಳಿಸಿಕೊಳ್ಳುವುದು ಮತ್ತು ಮೋದಿ ನೇತೃತ್ವದ ಬಿಜೆಪಿಗೆ ಭಾರೀ ಬಹುಮತ ಬರದಂತೆ ತಡೆಯುವುದನ್ನೇ ಉದ್ದೇಶವಾಗಿ ಹೊಂದಿರುವಂತೆ ತೋರುತ್ತಿದೆ.

ಪ್ರಧಾನಿ ಮೋದಿರ ಗುರಿಗಳೇನು?

ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ ತಮ್ಮ ಸಂಸತ್ ಸ್ಥಾನಗಳನ್ನು 370ರಿಂದ 400ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದಾರೆ. ಭಾರತದ ಅಭಿವೃದ್ಧಿಗೆ ಕೆಲವು ಸುಧಾರಣೆಗಳು ಅವಶ್ಯಕ ಎಂದವರು ಭಾವಿಸಿದ್ದು, ಅವುಗಳ ಜಾರಿ ವಿವಾದಾತ್ಮಕವಾಗಿ ಪರಿಣಮಿಸಿದರೂ, ಪಟ್ಟಭದ್ರ ಹಿತಾಸಕ್ತಿಗಳಿಗೆ ಅವು ವಿರುದ್ಧವಾಗಿದ್ದರೂ, ಅಂಥ ಸುಧಾರಣೆಗಳನ್ನು ಜಾರಿಗೆ ತರಬೇಕು ಮತ್ತು ಅದಕ್ಕೆ ಬೃಹತ್ ಬಹುಮತ ಬೇಕೆಂದು ಭಾವಿಸಿದ್ದಾರೆ. ಮೋದಿಯವರಿಗೆ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವ ಆಲೋಚನೆ ಇದ್ದು, ಭೂಮಿ, ಕಾರ್ಮಿಕ, ಕೃಷಿ, ಶಿಕ್ಷಣ (Education), ಆರೋಗ್ಯ (Health), ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ (Power Sector) ಸಮಗ್ರ ಸುಧಾರಣೆ ತರಲು ಬಯಸಿದ್ದಾರೆ. ಆದರೆ ಈ ಎಲ್ಲ ಬದಲಾವಣೆಗಳಿಗೆ ರಾಜ್ಯಗಳ ಬೆಂಬಲದ ಅವಶ್ಯಕತೆಯಿದೆ. ಮೋದಿಯವರ ನೇತೃತ್ವದ ಹೊಸ ಸರ್ಕಾರ ರಸ್ತೆಗಳು, ರೈಲ್ವೇ ಮತ್ತು ವಿಮಾನ ನಿಲ್ದಾಣಗಳಂತಹ ಮೂಲ ವ್ಯವಸ್ಥೆಗಳ ಅಭಿವೃದ್ಧಿ ನಡೆಸುವುದನ್ನು ಮುಂದುವರಿಸಬಹುದು. ಮೋದಿಯವರು ಧರ್ಮಾಧಾರಿತವಾದ ಭಾರತೀಯ ವಿವಾಹ ಕಾಯ್ದೆ ಮತ್ತು ಇತರೆ ವಿಚಾರಗಳನ್ನು ಬದಲಾಯಿಸಿ, ಸಮಾನ ನಾಗರಿಕ ಕಾಯ್ದೆ ತರುವ ಗುರಿ ಹೊಂದಿದ್ದಾರೆ. ಈ ಪ್ರಕ್ರಿಯೆ ಈಗಾಗಲೇ ಸರ್ಕಾರಿ ಹಂತದಲ್ಲಿ ಆರಂಭಗೊಂಡಿದೆ.

Iran Israel Conflict: ಇಸ್ರೇಲ್ ಮೇಲೆ ಇರಾನ್ ದಾಳಿಯ ಪರಿಣಾಮಗಳು: ಗಿರೀಶ್ ಲಿಂಗಣ್ಣ

ಬಿಜೆಪಿಯ ಮುಂದಿರುವ ಸವಾಲುಗಳು:

ನರೇಂದ್ರ ಮೋದಿಯವರಿಗೆ ಈಗ 73 ವರ್ಷ ವಯಸ್ಸಾಗಿರುವುದರಿಂದ, ಮುಂದಿನ ಐದು ವರ್ಷಗಳ ಅವಧಿ ಅವರ ಕೊನೆಯ ಅಧಿಕಾರಾವಧಿಯಾಗಿರುತ್ತದೆಯೋ ಎಂಬ ಕುರಿತು ಸ್ಪಷ್ಟತೆಗಳಿಲ್ಲ. ಬಡ ರಾಷ್ಟ್ರ ಎಂಬ ಬದಲು, ಭಾರತ ಒಂದು ಮಧ್ಯಮ ಆದಾಯದ ರಾಷ್ಟ್ರ ಎಂದು ಸ್ಥಾಪಿಸುವುದು ಮೋದಿಯವರ ಗುರಿ. ಭಾರತದ ಜಾಗತಿಕ ಸ್ಥಾನವನ್ನು ಬಲಪಡಿಸಿ, ಹಿಂದೂಗಳ ವಿರುದ್ಧದ ಪಕ್ಷಪಾತ ಎಂದು ಬಿಜೆಪಿ ಭಾವಿಸಿರುವ ಗ್ರಹಿಕೆಗಳನ್ನು ಸರಿಪಡಿಸುವ ಇಚ್ಛೆ ಹೊಂದಿದ್ದಾರೆ. ಮೋದಿಯವರು ತನ್ನ ಅಧಿಕಾರಾವಧಿಯ ಬಳಿಕವೂ ಒಂದು ದೀರ್ಘಕಾಲೀನ ಪರಿಣಾಮ ಮತ್ತು ಧನಾತ್ಮಕ ಪರಂಪರೆಯನ್ನು ಉಳಿಸಬೇಕೆಂಬ ಭಾವನೆ ಹೊಂದಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡರೆ, ಅವರ ಬದಲಿಗೆ ಸೂಕ್ತ ಉತ್ತರಾಧಿಕಾರಿಯನ್ನು ಆರಿಸುವುದು ಬಿಜೆಪಿಗೆ ನಿಜಕ್ಕೂ ಸವಾಲಾಗಲಿದೆ. ಸಮೀಕ್ಷೆಗಳ ಪ್ರಕಾರ, ಮೂವರಲ್ಲಿ ಒಬ್ಬ ಬಿಜೆಪಿ ಮತದಾರ ಪಕ್ಷಕ್ಕಿಂತಲೂ ಮೋದಿಯವರಿಗೆ ಬಿಜೆಪಿಗೆ ಮತ ಹಾಕುವುದಾಗಿ ಹೇಳುತ್ತಾರೆ. ಈ ಕಾರಣಕ್ಕಾಗಿ, 2029ರಲ್ಲಿ ಮೋದಿಯವರು ಅಧಿಕಾರ ತ್ಯಜಿಸುವ ಮುನ್ನ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕೆಂದು ಬಿಜೆಪಿ ನಿರ್ಧರಿಸುವ ಸಾಧ್ಯತೆಗಳಿವೆ. ಪ್ರಸ್ತುತ ಭಾರತದ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ತನ್ನ ಉತ್ತರಾಧಿಕಾರಿ ಎಂದು ಮೋದಿಯವರು ಭಾವಿಸಿದರೂ, ಅಮಿತ್ ಶಾ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಂದ ಸ್ಪರ್ಧೆ ಎದುರಾಗುವ ಸಾಧ್ಯತೆಗಳಿವೆ.

click me!