ಚುನಾವಣೆಯ ಮೊದಲ ಹಂತದಲ್ಲೇ ಬಿಜೆಪಿ ವಾಶ್‌ಔಟ್‌, ಉತ್ತರ ಪ್ರದೇಶದಲ್ಲಿ ರಜಪೂತರ ಸಿಟ್ಟು!

By Santosh NaikFirst Published Jun 4, 2024, 7:56 PM IST
Highlights

ಪಶ್ಚಿಮ ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯ ಸುಮಾರು ಶೇ.10 ರಷ್ಟಿರುವ ರಜಪೂತರು ತಮ್ಮ ನಾಯಕರಿಗೆ ಲೋಕಸಭೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿದ್ದರು. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್‌ರ ನಡುವೆಯೂ ಅವರ ಸಿಟ್ಟು ಮುಂದುವರಿದಿದೆ.
 

ನವದೆಹಲಿ (ಜೂ.4): ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿಯೇ ಅತಿದೊಡ್ಡ ಹಿನ್ನಡೆಯನ್ನು ಎದುರಿಸಿತ್ತು ಎನ್ನುವ ಮಾಹಿತಿ ಫಲಿತಾಂಶದ ವೇಳೆಗೆ ಸಿಗುತ್ತಿದೆ. ಮೊದಲ ಹಂತದಲ್ಲಿ ಗರಿಷ್ಠ 101 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇತ್ತೀಚಿನ ಮತ ಎಣಿಕೆಯ ಪ್ರಕಾರ ಈ 101 ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 33 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಹಾದಿಯಲ್ಲಿದ್ದೆ. ಇನ್ನು ಇಂಡಿ ಮೈತ್ರಿಕೂಟ 64 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಹಾದಿಯಲ್ಲಿದೆ. ಇನ್ನು ಇಂಡಿ ಮೈತ್ರಿಗೆ ಶಕ್ತಿ ತುಂಬಿರುವುದು ರಾಜಕೀಯವಾಗಿ ಅತ್ಯಂತ ನಿರ್ಣಾಯಕ ಪ್ರದೇಶವಾಗಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗ.  ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್, ಪ್ರಮುಖ ಕ್ಷೇತ್ರಗಳಾದ ಸಹರಾನ್‌ಪುರ, ಕೈರಾನಾ, ಮೊರಾದಾಬಾದ್, ಮುಜಾಫರ್‌ನಗರ ಮತ್ತು ರಾಮ್‌ಪುರದಲ್ಲಿ ಎನ್‌ಡಿಎಯನ್ನು ಅಕ್ಷರಶಃ ಮಂಡಿಯೂರುವಂತೆ ಮಾಡಿದೆ.  ಪಿಲಿಭಿತ್ ಅಭ್ಯರ್ಥಿ ಜಿತಿನ್ ಪ್ರಸಾದ ಅವರ ಪ್ರಬಲ ಪ್ರದರ್ಶನ ಮತ್ತು ಮಿತ್ರಪಕ್ಷ ಆರ್‌ಎಲ್‌ಡಿ ಬಿಜ್ನೋರ್‌ನಲ್ಲಿ ಮುನ್ನಡೆ ಸಾಧಿಸುವ ಮೂಲಕ ಆಡಳಿತ ಪಕ್ಷವು ಮುಖಭಂಗದಿಂದ ಪಾರಾಗಿದೆ.

ಪಶ್ಚಿಮ ಯುಪಿಯಲ್ಲಿ ಇಂಡಿ ಒಕ್ಕೂಟದ ಶ್ರೇಷ್ಠ ನಿರ್ವಹಣೆ ಮತ್ತು ಬಿಜೆಪಿಯ ದೊಡ್ಡ ಹಿನ್ನಡೆಗೆ ಸ್ಥಳೀಯ ರಜಪೂತ ಸಮುದಾಯದಲ್ಲಿನ ಅಸಮಾಧಾನವೇ ಕಾರಣವಾಗಿದೆ. ಸರ್ಕಾರದಲ್ಲಿ ತಮ್ಮ ಪ್ರಾಬಲ್ಯ ಕಡಿಮೆ ಇದೆ, ಸರ್ಕಾರದಿಂದ ನಾವು ಕಡೆಗಣಿಸಲ್ಪಿಟ್ಟಿದ್ದೇವೆ ಎನ್ನುವುದು ಅವರ ಭಾವನೆಯಾಗಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯ ಸುಮಾರು ಶೇ.10 ರಷ್ಟಿರುವ ರಜಪೂತರು ತಮ್ಮ ನಾಯಕರಿಗೆ ಹೆಚ್ಚಿನ ಲೋಕಸಭೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿದ್ದರು. ಮೊದಲ ಹಂತದಲ್ಲಿ ಮತದಾನ ನಡೆದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಒಬ್ಬ ರಜಪೂತ ಅಭ್ಯರ್ಥಿ ಕುನ್ವರ್ ಸರ್ವೇಶ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು. ಅವರು ಮತದಾನದ ಒಂದು ದಿನ ಬಳಿಕ ನಿಧನರಾಗಿದ್ದರು. ಉಳಿದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ರಜಪೂತ ಅಭ್ಯರ್ಥಿಗಳಿರಲಿಲ್ಲ.

ಕಳೆದ ಏಪ್ರಿಲ್‌ನಲ್ಲಿ ಸಹ್ರಾನ್‌ಪುರದಲ್ಲಿ ಬೃಹತ್‌ ಮಹಾಪಂಚಾಯತ್‌ಅನ್ನು ನಡೆಸಿ ತಮ್ಮ ಅಸಮಾಧಾನದ ಬಗ್ಗೆ ಧ್ವನಿಯೆತ್ತಿದ್ದರು. ರಜಪೂತರು ತಮ್ಮ ಕಾರ್ಮಿಕರು ಎನ್ನುವಂತೆ ಮಾತನಾಡುತ್ತಿದ್ದ ಕೇಂದ್ರ ಸಚಿವ ಹಾಗೂ ಜಾತಿಯಲ್ಲಿ ಜಾಟ್‌ ಆಗಿರುವ ಸಂಜೀವ್‌ ಬಲ್ಯಾನ್‌ ವಿರುದ್ಧ ಇವರು ತೊಡೆತಟ್ಟಿದ್ದರು. ಮುಜಾಫರ್‌ನಗರದ ಹಾಲಿ ಸಂಸದರಾಗಿದ್ದ ಅವರು ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.

Latest Videos

ಘಾಜಿಯಾಬಾದ್‌ನಲ್ಲಿ ಹಾಲಿ ಸಂಸದ ಮತ್ತು ನಿವೃತ್ತ ಆರ್ಮಿ ಜನರಲ್ ಜಾತಿಯಲ್ಲಿ ರಜಪೂತ್‌ ಆಗಿದ್ದ ವಿಕೆ ಸಿಂಗ್ ಅವರ ಬದಲು ಬನಿಯಾ ಸಮುದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಕ್ಕೆ ರಜಪೂತ ಸಮುದಾಯ ದೊಡ್ಡ ಮಟ್ಟದ ಅಸಮಾಧಾನ ಹೊರಹಾಕಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ರ್ಯಾಲಿಗಳು ಮತ್ತು ರೋಡ್‌ಶೋಗಳ ಸಮಯದಲ್ಲಿ ರಜಪೂತರನ್ನು ತಲುಪಲು ಪ್ರಯತ್ನಿಸಿದರೂ, ಅಸಮಾಧಾನವು ಮುಂದುವರಿದಂತೆ ಕಂಡುಬಂದಿತ್ತು. ಅದೀಗ ಫಲಿತಾಂಶದಲ್ಲಿ ಕಾಣುತ್ತಿದೆ. ಪ್ರತಿಪಕ್ಷ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷವು ಈ ಭಾವನೆಯನ್ನು ಲಾಭ ಮಾಡಿಕೊಳ್ಳಲು ಪ್ರಯತ್ನಿಸಿತು. ರಾಲಿಗಳಲ್ಲಿ ರಜಪೂತ ಪರವಾದ ಮಾತುಗಳು ಹಾಗೂ ಪ್ರಮುಖ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯದ ಭವಿಷ್ಯವನ್ನು ನಿರ್ಧರಿಸುವಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶವು ನಿರ್ಣಾಯಕವಾಗಿದೆ, ಅಲ್ಲಿ ಇಂಡಿ ಬಣವು 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

Live Blog: ಸರಕಾರ ರಚಿಸಲು ಇಂಡಿ ಒಕ್ಕೂಟ ಪ್ಲ್ಯಾನ್, ರಾಹುಲ್ ಪ್ರಧಾನಿ ಮಾಡಲು ಶಿವಸೇನೆಗೆ ಓಕೆ

543 ಲೋಕಸಭಾ ಸಂಸದರ ಪೈಕಿ ಉತ್ತರ ಪ್ರದೇಶ ರಾಜ್ಯವೊಂದರಿಂದಲೇ 80 ಸಂಸದರು ಆಯ್ಕೆಯಾಗುತ್ತಾರೆ. 2014 ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಗೆ ಇದೇ ರಾಜ್ಯದಿಂದಲೇ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅಪ್ನಾದಳ ಮೈತ್ರಿ ಇಲ್ಲಿ 80 ಸೀಟ್‌ಗಳ ಪೈಕಿ 64ರಲ್ಲಿ ಗೆಲುವು ಕಂಡಿತ್ತು. ಇನ್ನು ಸಮಾಜವಾದಿ ಪಕ್ಷ 5 ಸೀಟ್‌ ಗೆದ್ದಿದ್ದರೆ, ಕಾಂಗ್ರೆಸ್‌ ಕೇವಲ 1 ಸೀಟ್‌ ಜಯಿಸಿತ್ತು.
 

click me!