PFI Ban: ಪಿಎಫ್‌ಐ ಬ್ಯಾನ್‌ ಆಯ್ತು, ಎಸ್‌ಡಿಪಿಐ ಕಥೆ ಏನು?

By Santosh NaikFirst Published Sep 28, 2022, 11:58 AM IST
Highlights

ಭಯೋತ್ಪಾದಕ ಆರೋಪಿ ಅಬ್ದುಲ್ ನಾಜರ್ ಮದನಿ ಸ್ಥಾಪಿಸಿದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಕಾರ್ಯಕರ್ತರನ್ನು ಎಸ್‌ಡಿಪಿಐ ತನ್ನತ್ತ ಸೆಳೆದುಕೊಂಡಿತು. 2008 ರ ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿ ಜೈಲು ಪಾಲಾದ ನಂತರ ಪಿಡಿಪಿ ತನ್ನ ಪ್ರಭಾವ ಕಳೆದುಕೊಂಡಿತು. ಆ ಬಳಿಕ ಈ ಸಂಘಟನೆಯ ಕಾರ್ಯಕರ್ತೆನ್ನು ಎಸ್‌ಡಿಪಿಐ ಸೆಳೆದುಕೊಂಡಿತ್ತು.
 

ನವದೆಹಲಿ (ಸೆ. 28): ಕೇಂದ್ರ ಸರ್ಕಾರವು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಹಾಗೂ ಅದರ ಸಾಕಷ್ಟು ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆದರೆ, ಮೂಲಭೂತವಾದಿಗಳಿಂದಲೇ ತುಂಬಿರುವ ಮುಸ್ಲಿಂ ಸಂಘಟನೆಯ ರಾಜಕೀಯ ವಿಭಾಗವಾದ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಈ ಕ್ರಮದ ವ್ಯಾಪ್ತಿಗೆ ಬಂದಿಲ್ಲ. ಪಿಎಫ್‌ಐ ಮೇಲೆ ತೆಗೆದುಕೊಂಡಿರುವ ಕ್ರಮ ಎಸ್‌ಡಿಪಿಐಗೆ ವ್ಯಾಪಿಸದೇ ಇದ್ದರೂ, ಈ ಸಂಘಟನೆಗೆ ಸ್ವಲ್ಪ ಪ್ರಮಾಣದ ಬಿಸಿಯಂತೂ ಮುಟ್ಟಿದೆ. ಪಿಎಫ್‌ಐ ಹೊರತಾಗಿ, ರಿಹ್ಯಾಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್‌), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಸಿಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್‌ಸಿಎಚ್‌ಆರ್‌ಓ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಕೇರಳದ ಫೌಂಡೇಶನ್ ಕೂಡ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ನಿಷೇಧವನ್ನು ಎದುರಿಸಿದೆ. 2009ರಲ್ಲಿ ಸ್ಥಾಪನೆಯಾಗಿರುವ ಎಸ್‌ಡಿಪಿಐ ಯಾವುದೇ ರೀತಿಯ ಸಂಘಟನೆಯಲ್ಲ ಇದೊಂದು ರಾಜಕೀಯ ಪಕ್ಷ, ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ತಮ್ಮ ಪ್ರಭಾವವನ್ನು ಬೀರಿರುವ ಪಕ್ಷ. ಕೇರಳದ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ನ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ವಿರುದ್ಧ ಹೋರಾಡುವ ದೊಡ್ಡ ಶಕ್ತಿಯನ್ನು ಇದು ಹೊಂದಿದೆ. 

2020 ರಲ್ಲಿ ನಡೆದ ಕೊನೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಎಸ್‌ಡಿಪಿಐ ಕೇರಳದಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಎಸ್‌ಡಿಪಿಐ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ಗೆ ಬೆಂಬಲ ನೀಡಿದೆ.

ಕೇರಳದ ಎಡಪಂಥೀಯರು ಎಸ್‌ಡಿಪಿಐ ಜೊತೆ ರಹಸ್ಯವಾದ ಒಪ್ಪಂದ ಹೊಂದಿದ್ದಾರೆ, ಇದು ಐಯುಎಂಎಲ್ (IUML) ವಿರುದ್ಧ ಇರುವ ಮುಸ್ಲಿಮರನ್ನು ಒಗ್ಗೂಡಿಸುವ ಕೇಂದ್ರವಾಗಿದೆ. ಕೇರಳದಲ್ಲಿ ಸಿಪಿಐ(ಎಂ)ನಿಂದ ಎಸ್‌ಡಿಪಿಐಗೆ ಸಿಗುವ ಬೆಂಬಲವು ಐಯುಎಂಎಲ್ ಅನ್ನು ದುರ್ಬಲಗೊಳಿಸುವ ಎಡಪಕ್ಷಗಳ ರಾಜಕೀಯ ಅಜೆಂಡಾ ಎಂದೇ ಹೇಳಲಾಗಿದೆ. ಭಯೋತ್ಪಾದಕ ಆರೋಪಿ ಅಬ್ದುಲ್ ನಾಜರ್ ಮದನಿ ಸ್ಥಾಪಿಸಿದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯ ಕಾರ್ಯಕರ್ತರನ್ನು ಕೂಡ ದೊಡ್ಡ ಮಟ್ಟದಲ್ಲಿ ಎಸ್‌ಡಿಪಿಐ ತನ್ನ ತೆಕ್ಕೆಗೆ ಹಾಕಿಕೊಂಡಿದೆ. 2008 ರ ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿ ಜೈಲು ಪಾಲಾದ ನಂತರ ಪಿಡಿಪಿ ತನ್ನ ಅಸ್ತಿತ್ವವನ್ನು ಬಹುಪಾಲು ಕಳೆದುಕೊಂಡಿದೆ. ಆದರೆ, ಎಸ್‌ಡಿಪಿಐ,  ಪಿಡಿಪಿ (PDP) ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗುವ ಮೂಲಕ ರಾಜಕೀಯ ಪಕ್ಷವಾಗಿ ಬೆಳೆದುಬಂದಿತು.

ಪಿಎಫ್‌ಐ ಕೇವಲ ಮುಸ್ಲಿಂ ಕಾರ್ಯಕರ್ತರನ್ನು ಹೊಂದಿದ್ದರೆ, ಎಸ್‌ಡಿಪಿಐ ತನ್ನ ಕಾರ್ಯಕರ್ತರಲ್ಲಿ ಮುಸ್ಲಿಮೇತರರನ್ನು, ವಿಶೇಷವಾಗಿ ದಲಿತರನ್ನು ಹೊಂದಿದೆ. ತುಳಸೀಧರನ್ ಪಳ್ಳಿಕಲ್ ಮತ್ತು ರಾಯ್ ಅರಕಲ್ ಎಸ್‌ಡಿಪಿಐನ ರಾಜ್ಯ ನಾಯಕತ್ವದಲ್ಲಿ ಇಬ್ಬರು ಮುಸ್ಲಿಮೇತರ ಮುಖಗಳು.

ಪಿಎಫ್‌ಐನ ದೊಡ್ಡ ಮಟ್ಟದ ಪ್ರಭಾವದಲ್ಲಿದ್ದರೂ, ಎಸ್‌ಡಿಪಿಐ (Social Democratic Party of India) ನಿಷೇಧದಿಂದ ಪಾರಾಗಲು ಇವರಿಬ್ಬರೇ ಪ್ರಮುಖ ಮುಖಗಳು ಎಂದೇ ಹೇಳಲಾಗಿತ್ತು. ಪಿಎಫ್‌ಐನ (PFI) ವ್ಯಕ್ತಿಗಳು ಎಸ್‌ಡಿಪಿಐ ಕಾರ್ಯಕರ್ತರಾಗಿದ್ದರೂ ಎರಡೂ ಸಂಘಟನೆಗಳು ವಿಭಿನ್ನ ಘಟಕಗಳಾಗಿ ಸಾಗುತ್ತಿವೆ. ಎಸ್‌ಡಿಪಿಐ ಜನರು ಅಪರಾಧಗಳು ಮತ್ತು ರಾಜಕೀಯ ಹತ್ಯೆಗಳಲ್ಲಿ ತೊಡಗಿಸಿಕೊಂಡಾಗಲೆಲ್ಲಾ ಎಸ್‌ಡಿಪಿಐಅನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಪಿಎಫ್‌ಐ (Popular Front Of India) ಇಳಿಯುತ್ತಿರಲಿಲ್ಲ. ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳುವಂತೆ ಬಿಡುತ್ತಿದ್ದವು.

ಎಸ್‌ಡಿಪಿಐ ಸಂಘಟನಾ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಸನದಲ್ಲಿ ಬಂಧನ

ಪಿಎಫ್‌ಐ ನಿಷೇಧಕ್ಕೆ ಎಸ್‌ಡಿಪಿಐ ಕಿಡಿ: ದೇಶದಲ್ಲಿ ಪಿಎಫ್‌ಐಅನ್ನು 5 ವರ್ಷ ನಿಷೇಧ ಮಾಡಿರುವ ಕ್ರಮವನ್ನು ಸಂಘಟನೆಯ ರಾಜಕೀಯ ವಿಭಾಗವಾದ ಎಸ್‌ಡಿಪಿಐ (SDPI)ಟೀಕೆ ಮಾಡಿದೆ. ಈ ಕ್ರಮವು ಪ್ರಜಾಪ್ರಭುತ್ವ ಮತ್ತು ಜನರ ಹಕ್ಕುಗಳ ಮೇಲೆ ನೇರವಾದ ದಾಳಿ ಎಂದು ಪ್ರತಿಕ್ರಿಯಿಸಿದೆ. 5 ವರ್ಷಗಳ ನಿಷೇಧವು ಅಘೋಷಿತ ತುರ್ತು ಪರಿಸ್ಥಿತಿಯ ಭಾಗವಾಗಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿ ಹೇಳಿದ್ದಾರೆ, ಇದು ದೇಶದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದಿದ್ದಾರೆ.

PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ; ನಳಿನ್ ಕುಮಾರ ಕಟೀಲ್ ಗಂಭೀರ ಆರೋಪ

ಬಿಜೆಪಿ ಆಡಳಿತದ ತಪ್ಪು ಮತ್ತು ಜನವಿರೋಧಿ ನೀತಿಗಳ ವಿರುದ್ಧ ಮಾತನಾಡಿದವರು ಬಂಧನ ಮತ್ತು ದಾಳಿಯ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಭಾರತೀಯ ಸಂವಿಧಾನದ ಮೂಲ ತತ್ವಗಳ ವಿರುದ್ಧ ಆಡಳಿತವು ವಾಕ್, ಪ್ರತಿಭಟನೆ ಮತ್ತು ಸಂಘಟನೆಯ ಸ್ವಾತಂತ್ರ್ಯವನ್ನು ನಿರ್ದಯವಾಗಿ ಹತ್ತಿಕ್ಕಿದೆ. ವಿರೋಧವನ್ನು ಮೌನಗೊಳಿಸಲು ಮತ್ತು ಭಿನ್ನಾಭಿಪ್ರಾಯದ ಧ್ವನಿಯನ್ನು ವ್ಯಕ್ತಪಡಿಸದಂತೆ ಜನರನ್ನು ಹೆದರಿಸಲು ಆಡಳಿತವು ತನಿಖಾ ಸಂಸ್ಥೆಗಳು ಮತ್ತು ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಸ್‌ಡಿಪಿಐ ನಿಷೇಧಕ್ಕೆ ಬೇರೆ ಮಾರ್ಗಸೂಚಿ: ಎಸ್‌ಡಿಪಿಐ ನಿಷೇಧಕ್ಕೆ ಬೇಡಿಕೆ ಇರೋದು ನಿಜ. ಆದರೆ, ಅದಕ್ಕೆ ಬೇರೆ ರೀತಿಯ ಮಾರ್ಗಸೂಚಿಗಳಿವೆ. ಅಗತ್ಯವಾದರೆ ಮುಂದೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅದಲ್ಲದೆ, ಎಸ್‌ಡಿಪಿಐ ರಾಜಕೀಯ ಪಕ್ಷವಾಗಿರುವ ಕಾರಣ, ಅದನ್ನು ನಿಷೇಧ ಮಾಡುವ ಮುನ್ನ ಚುನಾವಣಾ ಆಯೋಗಕ್ಕೆ ಸೂಕ್ತವಾದ ದಾಖಲೆ, ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ.

 

 

click me!