
ಭೋಪಾಲ್: ಮೊಘಲರ ಕಾಲದ ಬಹುಶಃ 14 ರಿಂದ 15ನೇ ಶತಮಾನದ್ದು ಎನ್ನಲಾದ, ಚೌಕಾಕಾರದ ನಾಣ್ಯಗಳು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ತಳಪಾಯ ಸಿದ್ಧಪಡಿಸುವ ವೇಳೆ ಈ ಹಳೆ ಕಾಲದ ನಾಣ್ಯಗಳು ಪತ್ತೆಯಾಗಿದ್ದು, ಅದರಲ್ಲಿ ಹಲವನ್ನು ಗ್ರಾಮಸ್ಥರು ಹೆಕ್ಕಿಕೊಂಡಿದ್ದು, ಮನೆಗೆ ಹೊತ್ತೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ತಾಮ್ರ, ಬೆಳ್ಳಿ ಹಾಗೂ ಕಂಚಿನ ನಾಣ್ಯಗಳು ಇವಾಗಿವೆ ಎಂದು ತಿಳಿದು ಬಂದಿದೆ.
ಕೆಲವು ಪುರಾತತ್ವ ಇಲಾಖೆಯ ಅಧಿಕಾರಿಗಳ ಪ್ರಕಾರ ಇದು ಮೊಘಲರ ಕಾಲದ ಮೊಹರ್ ಎಂದು ಕರೆಯಲ್ಪಡುವ ನಾಣ್ಯಗಳು ಎಂದು ತಿಳಿದು ಬಂದಿದೆ. ಹಟ ಜಿಲ್ಲೆಯ ಮಡಿಯಾಡೆ ಪಂಚಾಯತ್ನ ಮಡ ಎಂಬಲ್ಲಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರು ಹೊಂಡ ತೋಡುವ ವೇಳೆ ಈ ನಾಣ್ಯಗಳು ಕಾಣಿಸಿಕೊಂಡಿವೆ. ಈ ವಿಚಾರ ಗ್ರಾಮದಲ್ಲೆಲ್ಲಾ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಬಂದು ಸೇರಿದ ನೂರಾರು ಜನ ಅಲ್ಲಿ ನಾಣ್ಯಕ್ಕಾಗಿ ಶೋಧ ನಡೆಸಲು ಶುರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ: ಬನ್ನಂಜೆಯಲ್ಲಿ ಅಪರೂಪದ ಐತಿಹಾಸಿಕ ಕಲ್ಲಿನ ರಚನೆ ಪತ್ತೆ!
ಪೊಲೀಸರ ಪ್ರಕಾರ, ಮುರಿದ ತಾಮ್ರದ ಹೂದಾನಿಯಂತಹ ಪಾತ್ರದಲ್ಲಿ ಒಬ್ಬನಿಗೆ ಈ ನಾಣ್ಯಗಳು ಸಿಕ್ಕಿದ್ದು, ಅದನ್ನು ಆತ ಮನೆಗೆ ಕೊಂಡೊಯ್ದು ಎಲ್ಲರಿಗೂ ಹಂಚಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕನೂ (JCB Driver) ಕೂಡ ನಾಣ್ಯ ಸಿಕ್ಕಿದ ಬಳಿಕ ಸ್ಥಳದಿಂದ ನಾಪತ್ತೆಯಾಗಿದ್ದು, ಆತ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನೂನಿನ ಪ್ರಕಾರ ಇಂತಹ ಪುರಾತನ ವಸ್ತುಗಳು ಪತ್ತೆಯಾದಲ್ಲಿ ಕೂಡಲೇ ಪುರಾತತ್ವ ಇಲಾಖೆ ( Archaeological department) ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಇಲ್ಲಿ ಪೊಲೀಸರಿಗೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕವಷ್ಟೇ ಗಮನಕ್ಕೆ ಬಂದಿದೆ. ಕೂಡಲೇ ಪೊಲೀಸರು ಕಾರ್ಯಚರಣೆಗೆ ಇಳಿದಿದ್ದು, ಗ್ರಾಮಸ್ಥರಿಗೆ ಸಿಕ್ಕಿದ ನಾಣ್ಯಗಳನ್ನು ಮರಳಿಸಿ ಇಲ್ಲದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ. ಪುರಾತತ್ವ ಇಲಾಖೆಯೂ ಇಂಡಿಯನ್ ಟ್ರೆಷರ್ ಟ್ರೋವ್ ಆಕ್ಟ್ (Indian Treasure Trove Act) ನಡಿ ದೂರು ದಾಖಲಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಳೆಗಾಲದಲ್ಲಿ ಸೋರುವ ಮಧುಕೇಶ್ವರ ದೇಗುಲ; ಪುರಾತತ್ವ ಇಲಾಖೆ ವಿರುದ್ಧ ಆಕ್ರೋಶ
ಕೆಲ ಅಧಿಕೃತ ಮೂಲಗಳ ಪ್ರಕಾರ, ಮಾಡೋ ಗ್ರಾಮ ಪಂಚಾಯತ್ನ ಮಾಜಿ ಸರಪಂಚ್ ಆಗಿದ್ದ ಸುಧಾಮ್ ಸಿಂಗ್ ಲೋಧಿ (Sudham Singh Lodhi) ಎಂಬುವವರ ಜಮೀನಿನಲ್ಲಿ ಮಣ್ಣನ್ನು ಅಗೆಯುವ ಕಾರ್ಯದ ವೇಳೆ ನಾಣ್ಯ ಪತ್ತೆಯಾಗಿದೆ. ಕೇವಲ ನಾಣ್ಯ ಮಾತ್ರವಲ್ಲದೇ ಬೇರೆ ರೀತಿಯ ಹಲವು ಪುರಾತನ ವಸ್ತುಗಳು ಇಲ್ಲಿ ಸಿಕ್ಕಿವೆ ಎಂದು ತಿಳಿದು ಬಂದಿದೆ. ಕೆಲವು ನಾನ್ಯಗಳು ಉರ್ದು ಭಾಷೆಯಲ್ಲಿದ್ದರೆ ಮತ್ತೆ ಕೆಲವು ನಾಣ್ಯಗಳು ಸ್ವಸ್ತಿಕ್ ರೂಪವನ್ನು ಹೊಂದಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ನಾಣ್ಯ ಕಾಣಿಸಿಕೊಂಡ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯೂ ಪ್ರಾಚೀನ ಕಾಲದ ಉತ್ಖನನದ ಹಿಂದಿನ ಸುಧೀರ್ಘ ಇತಿಹಾಸ ಹೊಂದಿದೆ. ಅಲ್ಲದೇ ಮೊಘಲ್ ರಾಜ ಅಕ್ಬರ್ನ ಕಾಲದಲ್ಲಿ ದಾಮೋಹ್ ಮಳವರ ಸಾಮಾಜ್ಯದ ಒಂದು ಭಾಗವಾಗಿತ್ತು. ಇಲ್ಲಿದ್ದ ಅನೇಕ ಹಳೆಯ ದೇಗುಲಗಳನ್ನು ಮೊಘಲರು ಧ್ವಂಸಗೊಳಿಸಿದ್ದರು. ಅಲ್ಲದೇ ದೇಗುಲದಲ್ಲಿದ್ದ ವಸ್ತುಗಳನ್ನು ಬಳಸಿ ಕೋಟೆ ನಿರ್ಮಿಸಿದ್ದರು ಎಂದು ಹೇಳುತ್ತಾರೆ ಇಲ್ಲಿನ ಸ್ಥಳೀಯರು. ಸರ್ಕಾರಿ ದಾಖಲೆಗಳ ಪ್ರಕಾರ, ,ಸಿಂಗರಾಮ್ಪುರ ಕಣಿವೆಯಲ್ಲಿ ದೊರೆತ ಶಿಲಾಯುಗದ ವಸ್ತುಗಳಿಂದ ಈ ಸ್ಥಳವು ಲಕ್ಷಾಂತರ ವರ್ಷಗಳಿಂದ ಮಾನವ ನಾಗರಿಕತೆಯ ತೊಟ್ಟಿಲಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ