ಮುಸ್ಲಿಂ ದೇಶ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್‌ ವಿರುದ್ಧ ಪ್ರತಿಭಟಿಸ್ತಿದ್ದಾರೆ, ಇದು ಅಗತ್ಯ ಆಚರಣೆಯಲ್ಲ: ಎಸ್‌ಜಿ

By Santosh NaikFirst Published Sep 20, 2022, 5:55 PM IST
Highlights

ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಪ್ರಕರಣದ ವಿಚಾರಣೆ ಸತತ 8ನೇ ದಿನ ನಡೆಯುತ್ತಿದೆ. ಮಂಗಳವಾರದಿಂದ ಪ್ರಕರಣದಲ್ಲಿ ಸರ್ಕಾರದ ಪರ ವಕೀಲರ ವಾದ ಆರಂಭವಾಗಲಿದೆ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪಿನ ಪರವಾಗಿ ವಾದ ಮಂಡನೆ ಮಾಡಿದರು.
 

ನವೆಹಲಿ (ಸೆ. 20): ಹಿಜಾಬ್ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಎಂಟನೇ ದಿನಕ್ಕೆ ಕಾಲಿಟ್ಟಿತು. ಹಿಜಾಬ್ ಇಸ್ಲಾಂನ ಕಡ್ಡಾಯ ಭಾಗವಲ್ಲ ಎಂದು ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ವಾದ ಮಾಡಿದ್ದಾರೆ. ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ್ ಅನ್ನು ವಿರೋಧಿಸಲಾಗುತ್ತಿದೆ ಮತ್ತು ಮಹಿಳೆಯರು ಅದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತುಷಾರ್ ಮೆಹ್ತಾ ಹೇಳಿದ ಮಾತಿಗೆ, ಯಾವ ದೇಶದಲ್ಲಿ ಇದರ ಪ್ರತಿಭಟನೆ ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ತುಷಾರ್‌ ಮೆಹ್ತಾ, ಇರಾನ್‌ನಲ್ಲಿ ಹಿಜಾಬ್‌ ವಿರೋಧಿಸಿ ದೊಡ್ಟ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಇದು ಇಸ್ಲಾಂನಲ್ಲಿ ಹಿಜಾಬ್‌ ಧರಿಸುವುದು ಕಡ್ಡಾಯವಲ್ಲ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು. ಇದರ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. ಹಿಜಾಬ್‌ ಅಥವಾ ತಲೆಯನ್ನು ಮುಚ್ಚಿಕೊಳ್ಳದ ಕಾರಣಕ್ಕೆ ಇರಾನ್‌ನಲ್ಲಿ 22 ವರ್ಷದ ಮಹಿಳೆ ಮಹ್ಸಾ ಅಮಿನಿಯನ್ನು ಪೊಲೀಸರು ಬಂಧಿಸಿದ್ದರು. ಮಹ್ಸಾ ಕುರ್ದಿಷ್ ಮೂಲದವರು. ಕಸ್ಟಡಿಯಲ್ಲಿದ್ದಾಗ ಕೋಮಾಕ್ಕೆ ಜಾರಿದ್ದ ಈಕೆ, ಸೆಪ್ಟೆಂಬರ್ 16 ರಂದು ನಿಧನರಾದರು. ಇದಾದ ಬಳಿಕ ಮಹಿಳೆಯರ ಕೋಪ ಇರಾನ್‌ನಲ್ಲಿ ತಾರಕಕ್ಕೇರಿದೆ. ಹಿಜಾಬ್ ಅನ್ನು ಕಡ್ಡಾಯದ ಬದಲು ಐಚ್ಛಿಕವನ್ನಾಗಿ ಮಾಡಬೇಕು ಎಂದು ಮಹಿಳೆಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ಪ್ರಕರಣವನ್ನು ತುಷಾರ್‌ ಮೆಹ್ತಾ ಸುಪ್ರೀಂ ಕೋರ್ಟ್‌ನ ಗಮನಕ್ಕೆ ತಂದಿದ್ದಾರೆ.

ಹಿಜಾಬ್‌ ಧರಿಸದ ಕಾರಣಕ್ಕೆ ವ್ಯಕ್ತಿಯನ್ನು ಯಾಕೆ ಕೊಲ್ಲಬೇಕು ಎಂದು ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ. ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಐವರು ಸಾವು ಕಂಡಿದ್ದರೆ, 80ಕ್ಕೂ ಅಧಿಕ ವ್ಯಕ್ತಿಗಳು ಗಾಯಾಳುವಾಗಿದ್ದಾರೆ. ಇದೇ ರೀತಿ, ವೇದಶಾಲೆ ಅಥವಾ ಪಾಠಶಾಲೆಯಲ್ಲಿ ಧೋತಿಯನ್ನು ಧರಿಸಬಹುದು, ಆದರೆ ಜಾತ್ಯತೀತ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಗುರುತನ್ನು ಧರಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ಮೆಹ್ತಾ ಹೇಳಿದರು. ನಾಳೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ತಿಲಕವಿಡುವುದನ್ನು ನಿಷೇಧಿಸುತ್ತದೆ ಎಂದು ಭಾವಿಸೋಣ, ಅದು ಕಡ್ಡಾಯ ಧಾರ್ಮಿಕ ಆಚರಣೆ ಎಂದು ಯಾರಾದರೂ ಸಾಬೀತುಪಡಿಸುವವರೆಗೆ ಅದು ಮುಂದುವರಿಯುತ್ತದೆ ಎಂದು ಮೆಹ್ತಾ ಹೇಳಿದರು. ತಿಲಕದ ವಿಚಾರದಲ್ಲಿ ಅದು ಧಾರ್ಮಿಕವಾಗಿ ಕಡ್ಡಾಯವಲ್ಲ ಎಂದು ಯಾರಾದರೂ ಹೇಳಬಹುದು ಎಂದರು.

Hijab Case: ಹಿಜಾಬ್‌ ನಿಷೇಧಿಸಿದ್ದಕ್ಕೆ 17000 ಮಂದಿ ಪರೀಕ್ಷೆ ಗೈರು!

2021ರವರೆಗೂ ಈ ಹುಡುಗಿಯರಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ: ಮಾರ್ಚ್ 29, 2013 ರಂದು ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ನಿರ್ಣಯವನ್ನು ಅಂಗೀಕರಿಸಿ ಸಮವಸ್ತ್ರವನ್ನು ನಿಗದಿಪಡಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠಕ್ಕೆ ತಿಳಿಸಿದರು. ನಂತರ ಹಿಜಾಬ್ ಅನ್ನು ಸಮವಸ್ತ್ರದ ಭಾಗವಾಗಿ ಮಾಡಲಾಗಿಲ್ಲ ಮತ್ತು ಆ ಸಮಯದಲ್ಲಿ ಯಾವುದೇ ಹುಡುಗಿಗೆ ಈ ಸಮವಸ್ತ್ರದಿಂದ ಯಾವುದೇ ಸಮಸ್ಯೆ ಇರಲಿಲ್ಲ. ಅರ್ಜಿದಾರರು 2021 ರಲ್ಲಿ ಈ ಕಾಲೇಜಿನಲ್ಲಿ ಪ್ರವೇಶ ಪಡೆದಾಗ, ಅವರು ಸಮವಸ್ತ್ರದ ನಿಯಮಗಳನ್ನು ಸಹ ಅನುಸರಿಸಿದರು.

ಅಲ್ಪ ಸಂಖ್ಯಾತ ಮುಸ್ಲಿಮರ ಧರ್ಮಾಚರಣೆಗೆ ಬೆಲೆ ಕೊಟ್ಟರೇನು ತಪ್ಪು?: ದವೆ ವಾದ

ಪಿಎಫ್‌ಐನಿಂದ ಆರಂಭವಾದ ಅಭಿಯಾನ:
ಹಿಜಾಬ್ ನಿಷೇಧದ ವಿರುದ್ಧ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ತೀವ್ರಗಾಮಿ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. 2022 ರಲ್ಲಿ, ಪಿಎಫ್‌ಐ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪ್ರಚಾರ ನಡೆಸಿತು. ಇದರ ಉದ್ದೇಶವು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮೂಲಕ ಸಮಸ್ಯೆಗಳನ್ನು ಹರಡುವುದು.  ಇದೆಲ್ಲವೂ ಯೋಜಿತ ಷಡ್ಯಂತ್ರದ ಅಡಿಯಲ್ಲಿ ನಡೆದಿದೆ. ಈ ಮಕ್ಕಳು ಪಿಎಫ್‌ಐ ಹೇಳಿದಂತೆ ಮಾಡುತ್ತಿದ್ದಾರಷ್ಟೇ ಎಂದರು.ಹಿಜಾಬ್ ವಿವಾದ ಮುನ್ನೆಲೆಗೆ ಬರುವ ಮುನ್ನ ಕರ್ನಾಟಕದ ವಿದ್ಯಾರ್ಥಿನಿಯರು ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್ ಅನುಸರಿಸುತ್ತಿದ್ದರು ಎಂದು ಅವರು ಹೇಳಿದರು. ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಬಟ್ಟೆಗಳನ್ನು ವಿದ್ಯಾರ್ಥಿನಿಯರು ಧರಿಸದಂತೆ ರಾಜ್ಯ ಸರಕಾರ ಫೆ.5ರಂದು ಅಧಿಸೂಚನೆ ಹೊರಡಿಸದಿದ್ದರೆ ಅದು ಕರ್ತವ್ಯಲೋಪವಾಗುತ್ತಿತ್ತು ಎಂದಿದ್ದಾರೆ.

click me!