
ನವದೆಹಲಿ (ಜೂ.8): ದೇಶದಲ್ಲಿ ಕಳೆದ ವರ್ಷ ಮಳೆ ಕೈಕೊಟ್ಟಿದೆ. ಅದರ ಬೆನ್ನಲ್ಲಿಯೇ ದೇಶಾದ್ಯಂತ ಆವರಿಸಿದ್ದ ಹೀಟ್ವೇವ್ ಕೃಷಿ ಚಟುವಟಿಕೆಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಇದು ಮುಂದಿನ ದಿನಗಳಲ್ಲಿ ದಿನಸಿ ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗುವ ಸಾಧ್ಯತೆ ಇದೆ ಎನ್ನುವ ಸೂಚನೆ ಕೇಂದ್ರ ಸರ್ಕಾರ ನೀಡಿದೆ. ದಿನಸಿ ವಸ್ತುಗಳ ಬೆಲೆಗಳು ಹಾಗೂ ಆಹಾರ ಹಣದುಬ್ಬರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಪ್ರಮುಖ ಅಗತ್ಯ ವಸ್ತುಗಳ ಲಭ್ಯತೆ ಮತ್ತು ಬೆಲೆಗಳ ವಿಚಾರದಲ್ಲಿ ಕೇಂದ್ರ ದೊಡ್ಡ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸುತ್ತಿದೆ. ಸರ್ಕಾರದ ಉನ್ನತ ಅಧಿಕಾರಿಗಳು ಪ್ರತಿ ವಾರ ಈ ವಸ್ತುಗಳ ಸ್ಟಾಕ್ ವರದಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಸಿಎನ್ಬಿಸಿ ವರದಿ ತಿಳಿಸಿದೆ. "ಹಣದುಬ್ಬರವನ್ನು ನಿಭಾಯಿಸಲು ನೀತಿಗಳನ್ನು ರೂಪಿಸಲು ಸಹಾಯ ಮಾಡುವ ನೇರ ಕ್ರಮವಾಗಿ ಬೆಲೆ ಮೇಲ್ವಿಚಾರಣೆಯಲ್ಲಿ ತೊಡಗಿರುವ ಉನ್ನತ ಸರ್ಕಾರಿ ಕಚೇರಿಗಳ ಪ್ರಸ್ತುತ ಪರಿಸ್ಥಿತಿ ಮತ್ತು ವಿಶ್ಲೇಷಣೆಯನ್ನು ಸೂಚಿಸುವ ವಿವರವಾದ ಸಾಪ್ತಾಹಿಕ ವರದಿಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಲಾಗುತ್ತಿದೆ" ಎಂದು ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಕಡಲೆಬೇಳೆ ಹಾಗೂ ತೊಗರಿ ಬೇಳೆಯ ಆಮದನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಇನ್ನೇನು ಇವುಗಳ ಬೆಲೆಗಳು ಏರಿಕೆಯಾಗುವ ಹಂತದಲ್ಲಿ ಎರಡೂ ಬೇಳೆಗಳ ಆಮದನ್ನು ಏರಿಸಿ ದೇಶೀಯ ಮಾರುಕಟ್ಟೆಯಲ್ಲಿ ಇವುಗಳ ನಾಗಾಲೋಟವನ್ನು ತಡೆಯುವ ಗುರಿ ಹೊಂದಿದೆ. "ಸರಕಾರವು ರಿಯಾಯಿತಿ ಮತ್ತು ಸಬ್ಸಿಡಿ ದರಗಳಲ್ಲಿ ಅಗತ್ಯ ವಸ್ತುಗಳ ಮಾರಾಟವನ್ನು ಬೆಂಬಲಿಸಲು ಆಮದುಗಳನ್ನು ಪರಿಗಣಿಸುತ್ತಿದೆ" ಎಂದು ಹೇಳಿದ್ದಾರೆ.
ಕ್ಯಾಬಿನೆಟ್ ಸೆಕ್ರೆಟರಿಯೇಟ್, ಹಣಕಾಸು ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸೇರಿದಂತೆ ಇತರ ಕಚೇರಿಗಳು ಬೆಲೆ ಮಾನಿಟರಿಂಗ್ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ಬೇಳೆಕಾಳುಗಳು, ಅಗತ್ಯ ವಸ್ತುಗಳು, ಈರುಳ್ಳಿ, ಟೊಮ್ಯಾಟೊ, ಆಲೂಗಡ್ಡೆ, ಖಾದ್ಯ ತೈಲ ಇತ್ಯಾದಿಗಳ ಬೆಲೆಗಳು ಮತ್ತು ಲಭ್ಯತೆಯಂತಹ ನಿಯತಾಂಕಗಳ ಮೇಲೆ ವಾರಕ್ಕೊಮ್ಮೆ ಮಾನಿಟರಿಂಗ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ಯಾನ್ ಇಂಡಿಯಾ ಪರಿಸ್ಥಿತಿಯನ್ನು ನಿರ್ಣಯಿಸಲು ದೇಶದ 570 ಸಗಟು ಮತ್ತು ಚಿಲ್ಲರೆ ಕೇಂದ್ರಗಳಲ್ಲಿ ಬೆಲೆಯನ್ನು ನಿಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ಬೆಲೆ ಏರಿಕೆ ಆಗಿತ್ತು? ಇಲ್ಲಿದೆ ನೋಡಿ ಮಾಹಿತಿ
ಅದರೊಂದಿಗೆ, ಸರ್ಕಾರವು ತೊಗರಿ ಮತ್ತು ಉದ್ದಿನ ಬೇಳೆಯ ಉತ್ತಮ ಖಾರಿಫ್ ಬಿತ್ತನೆಯನ್ನು ನಿರೀಕ್ಷೆ ಮಾಡಿದೆ. ಮತ್ತು ಈ ಉದ್ದೇಶಕ್ಕಾಗಿ, ಉತ್ತಮ ಇಳುವರಿಗೆ ಸಹಾಯ ಮಾಡಲು ಬೀಜಗಳ ಉತ್ತಮ ಲಭ್ಯತೆಗಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಮತ್ತು ಈ ರಾಜ್ಯಗಳ ರೈತ ಸಂಘಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈರುಳ್ಳಿ ಲಭ್ಯತೆಯ ಬಗ್ಗೆ, ಸರ್ಕಾರದ ಮೂಲಗಳು "ಇನ್ನೂ ಯಾವುದೇ ಗಂಭೀರ ಕಾಳಜಿ ಇಲ್ಲ" ಎಂದಿದೆ. ಆದರೆ ಈ ಹಿಂದೆ ಈರುಳ್ಳಿಯ ಬೆಲೆ ಏರಿಕೆಯ ಅನುಭವವನ್ನು ಗಮನಿಸಿದರೆ, ಸರ್ಕಾರವು ಈಗಾಗಲೇ ಬಫರ್ ಮಿತಿಗಳನ್ನು ಹೆಚ್ಚಿಸುವ ಕುರಿತು ರೈತರ ಸಂಘಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಿದೆ.
ಬಿರುಬಿಸಿಲು ದೇಹ ಮಾತ್ರವಲ್ಲ,ಜೇಬನ್ನೂ ಸುಡುತ್ತಿದೆ;ಆಹಾರ ಪದಾರ್ಥಗಳ ಬೆಲೆಯೇರಿಕೆಗೆ ಬಿಸಿ ಗಾಳಿಯೇ ಕಾರಣನಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ