
ನವದೆಹಲಿ(ಅ.28): ಭೂ ಗಡಿಗೆ ಸಂಬಂಧಿಸಿದಂತೆ ನೂತನ ಕಾನೂನು(new land border law) ಜಾರಿಗೆ ತರುತ್ತಿರುವ ಚೀನಾದ(China) ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ನೆಪಮಾತ್ರಕ್ಕೆ ಗಡಿಯಲ್ಲಿ ಅಭಿವೃದ್ಧಿ ಎನ್ನುತ್ತಿರುವ ಚೀನಾ ಈ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ ಎಂದು ಭಾರತ(India) ಟೀಕಿಸಿದೆ.
ಭಾರತದ ಜೊತೆ ಕ್ಯಾತೆ ಬೆನ್ನಲ್ಲೇ ಚೀನಾದ ಹೊಸ ಗಡಿ ಕಾನೂನು!
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಾಮ್ ಬಗ್ಚಿ, ಗಡಿ ಅಭಿವೃದ್ಧಿ ಎಂಬುದು ದ್ವಿಪಕ್ಷೀಯ ಒಪ್ಪಂದದ ಮೇಲೆ ನಡೆಯುವ ಕಾರ್ಯ. ಆದ್ರೆ ಈಗ ಚೀನಾ ಜಾರಿ ಮಾಡುತ್ತಿರುವ ಕಾನೂನು ಏಕಪಕ್ಷೀಯ ನಡೆಯಾಗಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ. ಚೀನಾದ ಏಕಪಕ್ಷೀಯ ನಡೆ ಗಡಿಯಲ್ಲಿ ಎರಡೂ ದೇಶಗಳಿಗೆ ಸಮಸ್ಯೆ ತಂದೊಡುತ್ತದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ವ ಲಡಾಖ್ ಗಡಿಯಲ್ಲಿ ಕಳೆದ 17 ತಿಂಗಳಿನಿಂದ ಸಂಘರ್ಷ ನಡೆಯುತ್ತಲೇ ಇದೆ. ಚೀನಾ ಈ ಬಗ್ಗೆ ಕ್ರಮ ಜರುಗಿಸದೇ ನೆಪ ಮಾತ್ರ ಹೇಳಿಕೊಂಡು ಕಾಲ ತಳ್ಳುತ್ತಿದೆ. ಅದಲ್ಲದೇ ಇದೀಗ ಹೊಸ ಕಾನೂನು ಜಾರಿ ಮಾಡಿ ಮತ್ತಷ್ಟುಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಗಡಿಯಲ್ಲಿ ನಂಬಿಕೆ, ಸೌಹಾರ್ಧತೆ ಅನ್ನೋದು ಎರಡೂ ರಾಷ್ಟ್ರಗಳಿಗೆ ಬಹುಮುಖ್ಯ, ಚೀನಾ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಗ್ಚಿ ತಿಳಿಸಿದ್ದಾರೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ಎರಡೂ ಕಡೆಯ ಸೂಕ್ಷ್ಮ ಪ್ರದೇಶಗಳಲಿ ಸುಮಾರು 50 ರಿಂದ 60 ಸಾವಿರ ಸೈನಿಕರು ಕಾವಲಿರುತ್ತಾರೆ.
ಚೀನಾ ಗಡಿಯಲ್ಲಿ ಭಾರತದ ‘ಯುದ್ಧ ತಾಲೀಮು’!
ಭಾರತದೊಂದಿಗೆ ಸದಾ ಕಿರಿಕ್ ಮಾಡುತ್ತಿರುವ ಚೀನಾ, ಲಡಾಖ್, ಅರುಣಾಚಲ ಪ್ರದೇಶ ನಮ್ಮದು ಎಂದು ಖ್ಯಾತೆ ತೆಗೆಯುತ್ತಿದೆ. ಇದೀಗ ತನ್ನ ಗಡಿಗಳ ಸಂರಕ್ಷಣೆ ಹೆಸರಿನಲ್ಲಿ ಭಾರತವನ್ನು ಕೆದಕುವ ಕಾನೂನಿಗೆ ಅನುಮೋದನೆ ನೀಡಿದೆ.
ಏನಿದು ಚೀನಾ ಭೂ ಗಡಿ ಸಂರಕ್ಷಣೆ ಕಾನೂನು?
ಗಡಿಯಲ್ಲಿ ಚೀನಾ ವಶಪಡಿಸಿಕೊಂಡಿರುವ ಭೂಮಿ ಚೀನಾಗೆ ಸೇರಿದ್ದು. ಇದರಿಂದ ಹಿಂದೆ ಸರಿಯುವಂತಿಲ್ಲ. ಅಂತಾರಾಷ್ಟ್ರೀಯ ಒತ್ತಡ ಸೇರಿದಂತೆ ಯಾವುದೇ ಪರಿಸ್ಥಿತಿಯಲ್ಲೂ ಒಂದಿಂಚು ಭೂಮಿ ಬಿಟ್ಟುಕೊಟ್ಟರೆ ಚೀನಾದ ಸಾರ್ವಭೌಮತ್ವದ ಮೇಲೆ ರಾಜಿ ಮಾಡಿಕೊಂಡಂತೆ. ಇಷ್ಟೇ ಅಲ್ಲ ಇದು ಗಡಿ ಕಾನೂನು ಉಲ್ಲಂಘನೆ ಮಾಡಿದಂತೆ. ಹೀಗಾಗಿ ತನ್ನ ಗಡಿಗಳನ್ನು ಸಂರಕ್ಷಿಸಲು ಚೀನಾ ಹೆಚ್ಚುವರಿ ಸೇನೆ ನಿಯೋಜಿಸುವುದು ತಪ್ಪಲ್ಲ. ಇದಕ್ಕೆ ಇತರ ದೇಶಗಳ ಅಪ್ಪಣೆ ಬೇಕಿಲ್ಲ.
ಹೊಸ ಕಾನೂನು ಚೀನಾದ ಸಮಗ್ರತೆ ಹಾಗೂ ಸಾರ್ವಭೌಮತ್ವವನ್ನು ಸಾರಿ ಹೇಳುತ್ತದೆ. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಹೀಗಾಗಿ ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಗಡಿ ಪ್ರದೇಶದಲ್ಲಿ ಆರ್ಥಿಕ, ಸಾಮಾಜಿಕ ಅಭಿವೃದ್ಧಿ, ಸಾರ್ವಜನಿಕೆ ಸೇವೆಗೆ ಅವಕಾಶ ನೀಡಲು ಕಾನೂನಿನಲ್ಲಿ ಹೇಳಲಾಗಿದೆ. ಈ ಮೂಲಕ ಚೀನಾ ಗಡಿಗಳಲ್ಲಿ ಗ್ರಾಮಗಳನ್ನು ನಿರ್ಮಿಸಿ ಶಾಶ್ವತವಾಗಿ ತನ್ನ ಭೂಭಾಗವೆಂದು ಬೆಂಬಿಸುವ ಯತ್ನಕ್ಕೆ ಕಾನೂನು ಹೆಚ್ಚಿನ ನೆರವು ನೀಡಲಿದೆ.
ಅರುಣಾಚಲ ಸೆಕ್ಟರ್ನಲ್ಲಿ 24 ಗಂಟೆ ಕಣ್ಗಾವಲು ವ್ಯವಸ್ಥೆ!
ತನ್ನ ವಶದಲ್ಲಿರುವ ಗಡಿ ಭೂಮಿ ಮೇಲೆ ಅದೆಷ್ಟೇ ವಿವಾದವಿದ್ದರೂ ಅದ ತನ್ನ ನೆಲ. ಹೀಗಾಗಿ ನೂತನ ಕಾನೂನು ಅಂತಹ ಭೂಮಿಯನ್ನು ಸಂರಕ್ಷಿಸುವ ಹೊಣೆ ಸೇನೆಗಿದೆ. ಹೀಗಾಗಿ ಗಡಿಯಿಂದ ಒಂದಿಂಚು ಹಿಂದೆ ಸರಿಯಬೇಕಾದ, ಒತ್ತಡಕ್ಕೆ ಮಣಿಯಬೇಕಾದ ಅವಶ್ಯತೆಗಳಿಲ್ಲ. ಜೊತೆಗೆ ಈ ಗಡಿ ಸಂರಕ್ಷಣೆಗೆ ಸೇನೆ ಯಾವ ಅಸ್ತ್ರವನ್ನು ಬಳಸಿಕೊಳ್ಳಲು ಅನುಮೋದನೆ ಸಿಕ್ಕಿದೆ. ನೂತನ ನಿಯಮ 2022ರ ಜನವರಿ 1ರಿಂದ ಜಾರಿಗೆ ಬರಲಿದೆ.
ಚೀನಾ ಅನುಮೋದನೆ ನೀಡಿರುವ ನೂತನ ಕಾನೂನಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ತಕ್ಷಣವೇ ಕಾನೂನು ಹಿಂಪಡೆಯಲು ಆಗ್ರಹಿಸಿದೆ. ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಭಾರತದ ಜೊತೆ ಗಡಿ ವಿವಾದ ಬಗೆ ಹರಿಸದೆ ಕಿರಿಕ್ ಮುಂದುವರಿಸಿರುವ ಚೀನಾ ಇದೀಗ ಸದ್ದಿಲ್ಲದೆ ಹೊಸ ಕಾನೂನು ಜಾರಿಗೊಳಿಸಿ ಭಾರತದ ಭೂಭಾಗ ಕಬಳಿಸಲು ಹೊಸ ರಣತಂತ್ರ ಹೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ