ಸರ್ಕಾರಿ ನೌಕರರು ಇನ್ನು ಆರೆಸ್ಸೆಸ್‌ ಸೇರಬಹುದು! ಕೇಂದ್ರದಿಂದ 58 ವರ್ಷಗಳ ನಿಷೇಧ ರದ್ದು!

By Kannadaprabha NewsFirst Published Jul 23, 2024, 10:21 AM IST
Highlights

ಆರೆಸ್ಸೆಸ್‌ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದರ ಮೇಲಿನ 58 ವರ್ಷಗಳ ನಿಷೇಧವನ್ನು ಕಳೆದ ವಾರ ಕೇಂದ್ರ ಸರ್ಕಾರ ತೆಗೆದುಹಾಕಿದೆ.

ನವದೆಹಲಿ :ಆರೆಸ್ಸೆಸ್‌ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದರ ಮೇಲಿನ 58 ವರ್ಷಗಳ ನಿಷೇಧವನ್ನು ಕಳೆದ ವಾರ ಕೇಂದ್ರ ಸರ್ಕಾರ ತೆಗೆದುಹಾಕಿದೆ. ಕೇಂದ್ರ ಸರ್ಕಾರದ ಈ ನಡೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಹೊಸ ಕದನಕ್ಕೆ ನಾಂದಿ ಹಾಡಿದೆ. ಬಿಜೆಪಿ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿದೆ.ಜುಲೈ 9ರಂದು ಕೇಂದ್ರ ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿ, ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ ನಿಷೇಧವನ್ನು ರದ್ದು ಮಾಡಿದೆ. ಆದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ವಕ್ತಾರ ಅಮಿತ್‌ ಮಾಳವೀಯ ಹಾಗೂ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್‌ ಹಂಚಿಕೊಂಡಿದ್ದಾರೆ.

1948ರಲ್ಲಿ ಗಾಂಧೀಜಿ ಹತ್ಯೆ(Ganhiji murder)ಯ ನಂತರ ಸರ್ದಾರ್‌ ಪಟೇಲ್‌ ಅವರು ಆರೆಸ್ಸೆಸ್ಸನ್ನು ನಿಷೇಧಿಸಿದ್ದರು. ನಂತರ ಉತ್ತಮ ನಡವಳಿಕೆ ಕಾರಣ ಆ ನಿಷೇಧವನ್ನು ಹಿಂಪಡೆಯಲಾಗಿತ್ತು. ಈ ನಡುವೆ 1966ರಲ್ಲಿ ಸರ್ಕಾರ ಹೊಸ ಆದೇಶ ಹೊರಡಿಸಿ ಸರ್ಕಾರಿ ನೌಕರರು ಆರೆಸ್ಸೆಸ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ನಿಷೇಧ ಹೇರಿತ್ತು. ಆದರೆ ಜು.9ರ ಆದೇಶದಲ್ಲಿ ನಿಷೇಧ ರದ್ದುಗೊಳಿಸಲಾಗಿದೆ.

Latest Videos

 

ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ: ಭಾಗ್ವತ್‌

ವಿಪಕ್ಷ ಆಕ್ರೋಶ:ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun kharge) ಸರ್ಕಾರದ ನಡೆ ಖಂಡಿಸಿದ್ದು, ‘ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಸರ್ಕಾರಿ ಕಚೇರಿಗಳು ಮತ್ತು ನೌಕರರ ವಿಚಾರದಲ್ಲಿ ಸೈದ್ಧಾಂತಿಕ ಆಧಾರದ ಮೇಲೆ ರಾಜಕೀಯ ಮಾಡಲು ಬಯಸುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸುವ ಅವರ ಪ್ರಯತ್ನವನ್ನು ಸಾರ್ವಜನಿಕರು ವಿಫಲಗೊಳಿಸಿದ್ದರಿಂದ ಕೇಂದ್ರವು ಈ ಕ್ರಮ ಜರುಗಿಸಿದೆ’ ಎಂದು ಆರೋಪಿಸಿದ್ದಾರೆ.ಕಾಂಗ್ರೆಸ್‌ ವಕ್ತಾರರಾದ ಜೈರಾಂ ರಮೇಶ್‌ ಹಾಗೂ ಪವನ್‌ ಖೇರಾ ಮಾತನಾಡಿ, ಅಟಲ್‌ ಬಿಹಾರಿ ವಾಜಪೇಯಿ ಅವಧಿಯಲ್ಲೂ ಆಗದ ನಿಷೇಧ ರದ್ದು ಈಗ ಆಗಿದೆ ಎಂದು ಕಿಡಿಕಾರಿದ್ದಾರೆ. ಬಿಎಸ್ಪಿ ನಾಯಕಿ ಮಾಯಾವತಿ ಪ್ರತಿಕ್ರಿಯಿಸಿ, ‘ಇದು ಆರೆಸ್ಸೆಸ್‌ ತೃಪ್ತಿಪಡಿಸುವ ಯತ್ನ’ ಎಂದು ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನ ಅಜಿತ್ ಹೆಗಲ ಮೇಲೆ ಹಾಕಿದ ಆರ್‌ಎಸ್‌ಎಸ್‌!

ಬಿಜೆಪಿ, ಆರೆಸ್ಸೆಸ್‌ ಸಮರ್ಥನೆ: ಆದೇಶವನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಹಾಗೂ ಬಿಜೆಪಿ ವಕ್ತಾರ ಅಮಿತ್‌ ಮಾಳವೀಯ ‘ರಾಜಕೀಯ ಕಾರಣಕ್ಕೆ ಹೇರಿದ್ದ ನಿಷೇಧವನ್ನು ರದ್ದು ಮಾಡಿದ್ದು ಸರಿ. ಆರ್‌ಎಸ್‌ಎಸ್ ರಾಷ್ಟ್ರೀಯತಾವಾದಿ ಹಾಗೂ ದೇಶಭಕ್ತ ಸಂಘಟನೆ’ ಎಂದಿದ್ದಾರೆ.ಆರೆಸ್ಸೆಸ್‌ ವಕ್ತಾರ ಸುನೀಲ್ ಅಂಬೇಕರ್ ಹೇಳಿಕೆ ನೀಡಿ, ‘ಸರ್ಕಾರದ ಪ್ರಸ್ತುತ ನಿರ್ಧಾರವು ಸೂಕ್ತವಾಗಿದೆ ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ’ ಎಂದಿದ್ದಾರೆ.

click me!