Covid 19: ದೀಪಾವಳಿ ನಂತರ ದೇಶದ ಅಲ್ಲಲ್ಲಿ ಸೋಂಕು ಏರಿಕೆ, ಮತ್ತೊಂದು ದೊಡ್ಡ ಅಲೆ ? ಏನಂತಾರೆ ತಜ್ಞರು ?

By Kannadaprabha NewsFirst Published Oct 24, 2021, 9:01 AM IST
Highlights
  • ಕೋವಿಡ್‌ ಇನ್ನೂ ಎಂಡೆಮಿಕ್‌ ಹಂತಕ್ಕೆ ಬಂದಿಲ್ಲ: ತಜ್ಞರು
  • Covid 19: ದೇಶದಲ್ಲಿ ಮತ್ತೊಂದು ದೊಡ್ಡ ಅಲೆ ? ಏನಂತಾರೆ ತಜ್ಞರು ?

ನವದೆಹಲಿ(ಅ.24): ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ಕೋವಿಡ್‌ (COVID 19) ಸಾಕಷ್ಟುನಿಯಂತ್ರಣದಲ್ಲಿರುವುದರಿಂದ ಈ ಸೋಂಕು ಪ್ಯಾಂಡೆಮಿಕ್‌ (ಸಾರ್ವತ್ರಿಕ ಸಾಂಕ್ರಾಮಿಕ) ಹಂತದಿಂದ ಎಂಡೆಮಿಕ್‌ (ಸ್ಥಳೀಯ ಸಾಂಕ್ರಾಮಿಕ) ಹಂತಕ್ಕೆ ಬಂದಿದೆ ಎಂಬ ವಾದವನ್ನು ಖ್ಯಾತ ವಿಜ್ಞಾನಿಗಳು ತಳ್ಳಿಹಾಕಿದ್ದಾರೆ. ದೇಶದಲ್ಲಿನ್ನೂ ಕೋವಿಡ್‌ ಸೋಂಕು ಎಂಡೆಮಿಕ್‌ ಹಂತಕ್ಕೆ ಬಂದಿಲ್ಲ, ಆದರೆ ಸದ್ಯಕ್ಕೆ ಸೋಂಕಿನ ಬೃಹತ್‌ ಅಲೆಯ ಭೀತಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ದೇಶದ ಖ್ಯಾತ ವೈರಾಣು ತಜ್ಞ ಶಾಹಿದ್‌ ಜಮೀಲ್‌, ‘ದೇಶದಲ್ಲಿ ಸೋಂಕು ನಿರಂತರವಾಗಿ ಇಳಿಕೆಯಾಗುತ್ತಿದೆ. ಆದರೆ, ಈಗಲೂ ಕೋವಿಡ್‌ನಿಂದ ಸಂಭವಿಸುವ ಸಾವಿನ ದರ ಶೇ.1.2ರಷ್ಟಿದೆ. ಇದು ಆತಂಕಕಾರಿ ಸಂಗತಿ. ಇದನ್ನು ನಿಯಂತ್ರಿಸಲು ಇನ್ನಷ್ಟುವೇಗವಾಗಿ ಲಸಿಕೆ ನೀಡಬೇಕು. ದೇಶದಲ್ಲಿ ಕೋವಿಡ್‌ ಸೋಂಕು ಎಂಡೆಮಿಕ್‌ ಹಂತದೆಡೆಗೆ ಹೋಗುತ್ತಿರುವುದು ನಿಜ, ಆದರೆ ಇನ್ನೂ ಹೋಗಿಲ್ಲ’ ಎಂದು ಹೇಳಿದ್ದಾರೆ.

100 ಕೋಟಿ ಲಸಿಕೆ ವಿತರಣೆಗೆ ಖರ್ಚಾಗಿದ್ದು ಎಷ್ಟು?: ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಭಾರತದ ಕೊರೋನಾ ಪರಿಸ್ಥಿತಿಯನ್ನು ಹತ್ತಿರದಿಂದ ಅವಲೋಕಿಸುತ್ತಿರುವ ಬ್ರಿಟನ್‌ನ ಮಿಡ್ಲ್‌ಸೆಕ್ಸ್‌ ವಿಶ್ವವಿದ್ಯಾಲಯದ ಗಣಿತಜ್ಞ ಮುರದ್‌ ಬನಜಿ, ‘ಕೆಲ ಸಮಯದವರೆಗೆ ಸೋಂಕು ಇಳಿಕೆಯಾಗಿದೆ ಅಂದರೆ ಎಂಡೆಮಿಕ್‌ ಹಂತ ತಲುಪಿದೆ ಎಂದರ್ಥವಲ್ಲ. ಇದನ್ನು ಸಾಬೀತುಪಡಿಸಲು ಸಾಕಷ್ಟುಅಂಕಿಅಂಶಗಳು ಬೇಕು. ಅವು ಸುಲಭವಾಗಿ ಸಿಗುವುದಿಲ್ಲ. ಕೊರೋನಾ ಸ್ಥಿತಿಗತಿ ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇನ್ನಷ್ಟುವರ್ಷಗಳ ಕಾಲ ಕೋವಿಡ್‌ ಹರಡುವುದನ್ನು ನಿಯಂತ್ರಿಸುತ್ತಲೇ ಇರಬೇಕಾಗಿ ಬರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಸೆಂಟರ್‌ ಫಾರ್‌ ಡಿಸೀಸ್‌ ಡೈನಾಮಿಕ್ಸ್‌, ಎಕನಾಮಿಕ್ಸ್‌ ಅಂಡ್‌ ಪಾಲಿಸಿ ಸಂಸ್ಥೆಯ ನಿರ್ದೇಶಕರಾಗಿರುವ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ರಮಣನ್‌ ಲಕ್ಷ್ಮೇನಾರಾಯಣನ್‌, ‘ಭವಿಷ್ಯದಲ್ಲಿ ಭಾರತಕ್ಕೆ ಕೋವಿಡ್‌ ದೊಡ್ಡ ಸಮಸ್ಯೆಯಾಗಿ ಕಾಡಲಿದೆಯೇ ಇಲ್ಲವೇ ಎಂಬುದನ್ನು ಹೇಳಲು ಇನ್ನೂ ಎರಡು ತಿಂಗಳು ಕಾಯಬೇಕು. ಸೋಂಕು ಎಂಡೆಮಿಕ್‌ ಹಂತಕ್ಕೆ ಹೋದಮೇಲೂ ಬ್ರಿಟನ್‌ನಲ್ಲಿ ಆಗುತ್ತಿರುವಂತೆ ಆಗಾಗ ಉಲ್ಬಣಿಸುತ್ತಿರಬಹುದು’ ಎಂದು ತಿಳಿಸಿದ್ದಾರೆ.

100 ಕೋಟಿ ಲಸಿಕೆ ವಿತರಣೆಗೆ ಖರ್ಚಾಗಿದ್ದು ಎಷ್ಟು?: ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಭಾರತದಲ್ಲಿ ಸದ್ಯಕ್ಕಂತೂ ಎರಡನೇ ಅಲೆಯಲ್ಲಿ ಉಂಟಾಗಿದ್ದಂತಹ ಭಾರಿ ಅಪಾಯ ಮರುಕಳಿಸುವ ಆತಂಕವಿಲ್ಲ. ಕೆಲ ಸ್ಥಳಗಳಲ್ಲಿ ಸೀಮಿತವಾಗಿ ಆಗಾಗ ಸೋಂಕು ಹೆಚ್ಚುವುದು ಹಾಗೂ ಕಡಿಮೆಯಾಗುವುದು ಆಗಬಹುದು. ದುರ್ಗಾಪೂಜೆಯ ನಂತರ ಪಶ್ಚಿಮ ಬಂಗಾಳದಲ್ಲಿ ಸೋಂಕು ಹೆಚ್ಚಿದಂತೆ ದೀಪಾವಳಿಯ ನಂತರ ಕೆಲ ಪ್ರದೇಶಗಳಲ್ಲಿ ಸೀಮಿತವಾಗಿ ಸೋಂಕು ಹೆಚ್ಚಬಹುದು ಎಂದು ತಜ್ಞರು ಹೇಳಿದ್ದಾರೆ.

ಎಂಡೆಮಿಕ್‌ ಎಂದರೇನು?

ಯಾವುದೇ ಸಾಂಕ್ರಾಮಿಕ ರೋಗವು ಸಂಪೂರ್ಣ ನಿರ್ಮೂಲನೆಯಾಗದೆ ಸೀಮಿತ ಪ್ರದೇಶದಲ್ಲಿ ಮರುಕಳಿಸುತ್ತಿದ್ದು, ನಿಯಂತ್ರಿಸಬಹುದಾದ ಮಟ್ಟದಲ್ಲಿದ್ದರೆ ಅದನ್ನು ಎಂಡೆಮಿಕ್‌ ಎನ್ನುತ್ತಾರೆ.

click me!