Ahmedabad Bomb Blast ಸರಣಿ ಬಾಂಬ್ ಸ್ಫೋಟದ ಹಿಂದೆ ಮೋದಿ ಹತ್ಯೆ ಸಂಚು, ತೀರ್ಪಿನಲ್ಲಿ ಪ್ರಸ್ತಾಪ!

By Kannadaprabha NewsFirst Published Feb 19, 2022, 3:30 AM IST
Highlights
  • ಮೋದಿ ಆಸ್ಪತ್ರೆ ಭೇಟಿ ವೇಳೆ ಹತ್ಯೆಗೆ ಪ್ಲಾನ್
  • 70 ನಿಮಿಷದಲ್ಲಿ 21 ಸ್ಫೋಟ, ಬೆಚ್ಚಿ ಬಿದ್ದಿತ್ತು ಭಾರತ
  • 49 ಮಂದಿಗೆ ಶಿಕ್ಷೆ ಜತೆಗೆ ಭಾರೀ ದಂಡ

ಅಹಮದಾಬಾದ್‌(ಫೆ.19): 2008ರ ಅಹಮದಾಬಾದ್‌ ಸರಣಿ ಸ್ಫೋಟದ(ahmedabad bomb blast) ಹಿಂದೆ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ(Narendra modi) ಅವರನ್ನು ಹತ್ಯೆಗೈಯುವ ಬಹುದೊಡ್ಡ ಸಂಚು ಅಡಗಿತ್ತು ಎಂಬ ಅಂಶವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ(ahmedabad bomb blast verdict) ಪ್ರಸ್ತಾಪಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

‘ಇತರೆ ಸ್ಥಳಗಳಲ್ಲಿ ನಡೆದ ಸ್ಫೋಟದಲ್ಲಿ ಮಡಿದ ಮತ್ತು ಗಾಯಗೊಂಡವರನ್ನು ನೋಡಲು ಹೇಗಿದ್ದರೂ ಸಿಎಂ ಮೋದಿ ಆಸ್ಪತ್ರೆಗೆ(Hospital) ಭೇಟಿ ನೀಡಿಯೇ ನೀಡುತ್ತಾರೆ. ಹೀಗಾಗಿಯೇ ಮೋದಿ ಹತ್ಯೆಗೆ ಆಸ್ಪತ್ರೆಗಳೇ ಸೂಕ್ತ ಸ್ಥಾನ ಎನ್ನುವ ಕಾರಣಕ್ಕಾಗಿ ಹಲವು ಆಸ್ಪತ್ರೆಗಳಲ್ಲೂ ಸ್ಫೋಟ ನಡೆಸಲಾಗಿತ್ತು.ಇಲ್ಲದೇ ಹೋದಲ್ಲಿ ಸಾಮಾನ್ಯವಾಗಿ ಆಸ್ಪತ್ರೆಗಳನ್ನು ಗುರಿಯಾಗಿಸಿ ಸ್ಫೋಟ ನಡೆಸಲು ಸಾಧ್ಯವೇ ಇಲ್ಲ’ ಎಂಬ ಅಂಶ ತೀರ್ಪಿನಲ್ಲಿ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಕೋರ್ಟ್‌ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದ ಕೆಲವು ಹಿರಿಯ ವಕೀಲರೂ ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ.

Latest Videos

Amedabad Bomb Blast ಮಾಸ್ಟರ್ ಮೈಂಡ್ ಅಬು ಬಶರ್‌ನನ್ನು ಅರೆಸ್ಟ್‌ನಿಂದ ಬಿಡಿಸಲು ಕಾಂಗ್ರೆಸ್ ನಡೆಸಿತ್ತು ಯತ್ನ!

ಘಟನೆ ವಿವರ:
14 ವರ್ಷಗಳ ಹಿಂದೆ ಗುಜರಾತಿನ ಅಹಮದಾಬಾದ್‌ನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಿ 56 ಮಂದಿಯನ್ನು ಬಲಿ ಪಡೆದಿದ್ದ ಪ್ರಕರಣ ಸಂಬಂಧ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಗೆ ಸೇರಿದ 38 ಜನರಿಗೆ ವಿಶೇಷ ನ್ಯಾಯಾಲಯವೊಂದು ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿದೆ. ಇದೇ ವೇಳೆ, 11 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದೆ.

‘ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಬಣ್ಣಿಸಿರುವ ನ್ಯಾಯಾಲಯ, ತನ್ನ 7 ಸಾವಿರ ಪುಟಗಳ ತೀರ್ಪಿನಲ್ಲಿ 38 ಜನರನ್ನು ಸಾಯುವವರೆಗೂ ನೇಣಿಗೇರಿಸಬೇಕು ಮತ್ತು 11 ಜನರು ಅಜೀವ ಜೀವಾವಧಿ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ. ಇದರೊಂದಿಗೆ ಘಟನೆ ನಡೆದ 14 ವರ್ಷಗಳ ಬಳಿಕ ಸಂತ್ರಸ್ತರಿಗೆ ನ್ಯಾಯ ಸಿಕ್ಕಂತಾಗಿದೆ.

Amit Shah : ಆಪ್ ಹಾಗೂ ನಿಷೇಧಿತ SFJ ನಡುವಿನ ಸಂಬಂಧದ ಬಗ್ಗೆ ತನಿಖೆ!

70 ನಿಮಿಷದಲ್ಲಿ 21 ಸ್ಫೋಟ:
ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯ ಉಗ್ರರು 2008ರ ಜು.26ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್‌ ನಗರದ ಸರ್ಕಾರಿ ಆಸ್ಪತ್ರೆ, ಬಸ್‌ ಸೇರಿದಂತೆ 21 ಕಡೆ ಸರಣಿ ಸ್ಫೋಟ ನಡೆಸಿದ್ದರು. ಘಟನೆಯಲ್ಲಿ 56 ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2002ರ ಗೋಧ್ರೋತ್ತರ ದಂಗೆಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿತ್ತು ಎಂದು ಉಗ್ರರು ವಿಚಾರಣೆ ವೇಳೆ ಹೇಳಿಕೊಂಡಿದ್ದರು.

ಅಹಮದಾಬಾದ್‌ ಕ್ರೈಂ ಬ್ರಾಂಚ್‌ನ ಅಧಿಕಾರಿಗಳ ತಂಡ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಿ ದೋಷಾರೋಪ ಪಟ್ಟಿಸಲ್ಲಿಸಿತ್ತು. ನಂತರದ ದಿನಗಳಲ್ಲಿ ಒಟ್ಟು 9 ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದರು. ಈ ಪೈಕಿ 2017ರಲ್ಲಿ ವಿಚಾರಣೆ ಹೊಣೆ ವಹಿಸಿಕೊಂಡ ನ್ಯಾ.ಎ.ಆರ್‌.ಪಟೇಲ್‌ ಇದೀಗ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣ ಸಂಬಂಧ ಒಟ್ಟು ಇಂಡಿಯನ್‌ ಮುಜಾಹಿದೀನ್‌ ಸಂಘಟನೆಗೆ ಸೇರಿದ 77 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಓರ್ವ ಮಾಫಿ ಸಾಕ್ಷಿಯಾಗಿ ಬದಲಾಗಿದ್ದ. ಉಳಿದ 76 ಜನರ ಪೈಕಿ 49 ಜನರನ್ನು ದೋಷಿಗಳೆಂದು ಫೆ.8ರಂದು ನ್ಯಾಯಾಲಯ ಘೋಷಿಸಿತ್ತು. 28 ಜನರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣ ಬಿಡುಗಡೆ ಮಾಡಿತ್ತು.

ಶಿಕ್ಷೆ ಜತೆಗೆ ಭಾರೀ ದಂಡ:
ದೋಷಿಗಳ ಪೈಕಿ 38 ಜನರಿಗೆ ಭಾರತೀಯ ದಂಡ ಸಂಹಿತೆ 302ನೇ ವಿಧಿ (ಹತ್ಯೆ), 120ಬಿ (ಕ್ರಿಮಿನಲ್‌ ಸಂಚು), ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಗಲ್ಲು ಶಿಕ್ಷೆ ವಿಧಿಸಲಾಗಿದ್ದರೆ, 11 ಜನರಿಗೆ ಕ್ರಿಮಿನಲ್‌ ಸಂಚು ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 48 ದೋಷಿಗಳಿಗೆ ಒಟ್ಟು 2.85 ಲಕ್ಷ ಮತ್ತು ಓರ್ವ ದೋಷಿಗೆ 2.88 ಲಕ್ಷ ರು. ದಂಡ ವಿಧಿಸಲಾಗಿದೆ. ಅಲ್ಲದೆ ಘಟನೆಯಲ್ಲಿ ಮಡಿದವರಿಗೆ ತಲಾ 1 ಲಕ್ಷ ರು., ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ರು. ಮತ್ತು ಸಾಮಾನ್ಯ ಗಾಯಕ್ಕೆ ತುತ್ತಾದವರಿಗೆ ತಲಾ 25,000 ರು.ಗಳ ಪರಿಹಾರವನ್ನು ನ್ಯಾಯಾಲಯ ಪ್ರಕಟಿಸಿದೆ.

ಶಿಕ್ಷೆಗೆ ಒಳಗಾದ ಪ್ರಮುಖರು:
ಶಿಕ್ಷೆಗೆ ಒಳಗಾದವರಲ್ಲಿ ಪ್ರಮುಖರೆಂದರೆ ಸಫ್ದಾರ್‌ ನಗೋರಿ, ಖಯಾಮುದ್ದೀನ್‌ ಕಪಾಡಿಯಾ, ಝಾಹಿದ್‌ ಶೇಖ್‌, ಖಮರುದ್ದೀನ್‌ ನಗೋರಿ ಮತ್ತು ಶಂಸುದ್ದೀನ್‌ ಶೇಖ್‌. ಎಲ್ಲಾ ದೋಷಿಗಳು ಗುರುವಾರ ತೀರ್ಪು ಪ್ರಕಟ ವೇಳೆ ಅಹಮದಾಬಾದ್‌, ಬೆಂಗಳೂರು, ದೆಹಲಿ, ಭೋಪಾಲ್‌, ಗಯಾ, ತಿರುವನಂತಪುರ ಮತ್ತು ಮುಂಬೈನ ಜೈಲುಗಳಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದರು.
 

click me!