India@75: ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ

By Suvarna NewsFirst Published Jul 28, 2022, 5:17 PM IST
Highlights

ವಿಜಯಪುರ ಜಿಲ್ಲೆಯ ಚಡಚಣ ಅಕ್ಷರಶಃ ಸ್ವಾತಂತ್ರ್ಯ ಹೋರಾಟಗಾರರ ಜನ್ಮಭೂಮಿ. ಮಹಾತ್ಮ ಗಾಂಧೀಜಿಯ ಒಡನಾಡಿಯಾಗಿದ್ದ ಜೀವರಾಜ ದೋಶಿ ಅವರ ನೇತೃತ್ವದಲ್ಲಿ ಈ ಊರಿನ 45ಕ್ಕೂ ಅಧಿಕ ಮಂದಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ಅಕ್ಷರಶಃ ಸ್ವಾತಂತ್ರ್ಯ ಹೋರಾಟಗಾರರ ಜನ್ಮಭೂಮಿ. ಮಹಾತ್ಮ ಗಾಂಧೀಜಿಯ ಒಡನಾಡಿಯಾಗಿದ್ದ ಜೀವರಾಜ ದೋಶಿ ಅವರ ನೇತೃತ್ವದಲ್ಲಿ ಈ ಊರಿನ 45ಕ್ಕೂ ಅಧಿಕ ಮಂದಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಗಡಿಭಾಗದಲ್ಲಿರುವ ಈ ಊರಿನ ಸ್ವಾತಂತ್ರ್ಯ ಹೋರಾಟಗಾರರೆಲ್ಲ ಗಾಂಧೀವಾದಿಗಳು, ಶಾಂತಿ ದೂತರು. ಹೋರಾಟದಲ್ಲಿದ್ದ ಪ್ರತಿಯೊಬ್ಬರನ್ನೂ ಕಡು ಬಡತನ ಕಾಡುತ್ತಿತ್ತು. ಕೆಲವರು ನೇಕಾರಿಕೆ ಮಾಡಿದರೆ ಮತ್ತೆ ಕೆಲವರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು. ಯಾವುದನ್ನೂ ಲೆಕ್ಕಿಸದೆ ‘ಇದ್ದರೂ ದೇಶಕ್ಕಾಗಿ ಸತ್ತರೂ ದೇಶಕ್ಕಾಗಿ’ ಎಂಬ ಧ್ಯೇಯದಿಂದ ಹೋರಾಡಿದರು.

India@75:ಹುತಾತ್ಮ ರಾಯಣ್ಣನ ಚರಿತ್ರೆ ಹೇಳುವ ಬೆಳಗಾವಿತ ನಂದಗಡ

ಸ್ವಾತಂತ್ರ್ಯದ ಪಡೆ ರಚಿಸಿದ್ದ ದೋಶಿ:

ಜೀವರಾಜ ದೋಶಿ ಅವರೇ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದವರು. ಅವರು ಚಡಚಣದಲ್ಲಿ ಸ್ವಾತಂತ್ರ್ಯದ ಪಡೆಯನ್ನೇ ರಚಿಸಿಕೊಂಡಿದ್ದರು. ಅಲ್ಲದೇ ಹೋರಾಟಗಾರರು ಜೈಲಿಗೆ ಹೋದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಸಹಾಯ ಮಾಡುತ್ತಿದ್ದರು. ಚಡಚಣ ಹೃದಯ ಭಾಗದಲ್ಲಿರುವ ಅವರ ಮನೆಯಲ್ಲೇ ಸ್ವಾತಂತ್ರ್ಯ ಹೋರಾಟಗಾರರೆಲ್ಲ ಒಟ್ಟು ಸೇರುತ್ತಿದ್ದರು. ಅಲ್ಲೇ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಯುತ್ತಿತ್ತು.

ಜೀವರಾಜ ರಾವಜಿ ದೋಶಿಯ ಜೊತೆ ರಾಮಣ್ಣ ಯಂಕಂಚಿ, ಗಿರಮಲ್ಲ ಚನಬಸಪ್ಪ ಉಮರಾಣಿ, ಮೇಲಗಿರೆಪ್ಪ ಧೋಂಡಪ್ಪ ಉಮರಾಣಿ, ಕಲ್ಲಪ್ಪ ಬಸಪ್ಪ ಜಂಗಮಶೆಟ್ಟಿ, ಗುರುಬಾಳಪ್ಪ ಸಂಗಪ್ಪ ಅಚ್ಚಿಗಾಂವ, ಕಲ್ಲಪ್ಪ ಮಲ್ಲಪ್ಪ ಜವಳಗಿ, ಗುರುಪಾದಪ್ಪ ಸದಾಶಿವಪ್ಪ ಜೀರಂಕಲಗಿ, ಗೋವಿಂದ ಬಾಳಪ್ಪ ನಿರಾಳೆ, ಮಲ್ಲಿಕಾರ್ಜುನ ಸಂಗಪ್ಪ ಕುಸೂರ, ಈರಪ್ಪ ವಿಠೋಬ ಸಾಳಿ, ರಾಚಪ್ಪ ಗುರಪ್ಪ ಸದ್ದಲಗಿ, ರಾಘವಾಚಾರ್ಯ ಮಧ್ವಾಚಾರ್ಯ ಸಂಗಮ, ಕೃಷ್ಣಾಜಿ ಭೀಮಾಜಿ ಕುಲಕರ್ಣಿ, ಇಂದಿರಾಬಾಯಿ ನಾರಾಯಣಾಚಾರ್ಯ, ರೇವಣಸಿದ್ದ ಕಲ್ಲಪ್ಪ, ಸಿದ್ದಪ್ಪ ಶಿವಲಿಂಗಪ್ಪ, ಸಾಹೇಬಲಾಲ ಕರಜಗಿ ಪ್ರಮುಖ ಹೋರಾಟಗಾರರು.

ಗಾಂಧೀಜಿ ಅವರ ಸಂದೇಶದ ಮೇರೆಗೆ ಹೋರಾಟ ಮಾಡುತ್ತಿದ್ದರು. ಜೀವರಾಜ ದೋಸಿ ಹಾಗೂ ಯಂಕಂಚಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಜನರನ್ನು ಒಂದು ಕೂಡಿಸಿಕೊಂಡು ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ ‘ಗಾಂಧೀಜಿ ಕರದಾರ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳೋಣ’ ಎಂದು ಹೇಳಿ ಗ್ರಾಮದ ಪ್ರತಿಯೊಂದು ಓಣಿಯಲ್ಲಿ ಪ್ರಭಾತ ಪೇರಿ, ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತಾ, ಜನರಲ್ಲಿ ಜಾಗೃತಿ ಮೂಡಿಸಿ ಗ್ರಾಮದ ದ್ವಾರ ಬಾಗಿಲ ಮುಂಭಾಗದಲ್ಲಿರುವ ನಾಸಿ ಕಟ್ಟಿಮೇಲೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

India@75:ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ ಬೆಳಗಾವಿ ಹುದಲಿ ರಾಷ್ಟ್ರೀಯ ಶಾಲೆ

ಸ್ಮಾರಕವೇ ಇಲ್ಲ!: ಒಂದೇ ಗ್ರಾಮದ 45 ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೂ ಇಲ್ಲಿಯವರೆಗೆ ಈ ಯಾವುದೇ ಹೋರಾಟಗಾರರ ಸ್ಮರಣೆಗಾಗಿ ಒಂದೇ ಒಂದು ಸ್ಮಾರಕ ಕೂಡ ನಿರ್ಮಾಣವಾಗಿಲ್ಲ. ಇದು ಈ ಭಾಗದ ಜನರ ನೋವಿಗೂ ಕಾರಣವಾಗಿದೆ.

ತಲುಪುವುದು ಹೇಗೆ?

ವಿಜಯಪುರಕ್ಕೆ ಬೆಂಗಳೂರಿನಿಂದ 525 ಕಿ.ಮೀ. ದೂರ ಇದ್ದು, ಬಸ್‌ ಮತ್ತು ರೈಲು ವ್ಯವಸ್ಥೆಯಿದೆ. ವಿಜಯಪುರದಿಂದ ಚಡಚಣ 72 ಕಿ.ಮೀ. ದೂರದಲ್ಲಿದ್ದು ಬಸ್ಸಿನ ಮಾರ್ಗದಿಂದಲೇ ತೆರಳಬೇಕು.

- ಶಂಕರ ಹಾವಿನಾಳ ಚಡಚಣ

 

click me!